Sunday, April 7, 2013

Shri Krishnana Nooraru Geethegalu - 339

ಕಂದನ ಕಂಡಿರಾ

ಕಂದನ ಕಂಡಿರಾ ಶ್ರೀಕೃಷ್ಣನ ಕಂಡಿರಾ
ಗೆಜ್ಜೆ ಕಾಲ್ಗಳ ಗೋಕುಲದೊಡೆಯ ಶ್ರೀಗೋವಿಂದನ ಕಂಡಿರಾ

ಕಮಲ ನಯನನ ಕಸ್ತೂರಿ ತಿಲಕನ
ರಂಗಿನ ಗಲ್ಲದ ಚೆಂದದ ತುಟಿಯೊಳು ಮೆಲ್ಲನೆ ನಗುವನ

ಗರಿಯ ಮುಡಿದನ ಮುರನ ಹರಿದನ
ಪೂತನೆಯ ವಿಷಮೊಲೆಯನುಂಡು ಮಾತೆ ಎಂದವನ

ಪಾಮರ ಸ್ನೇಹನ ರಾಧೆಯ ಪ್ರೇಮನ
ನರನ ಭವವನಳಿದು ಶುಭವ ಕೊಡುವನುಭವನ

ತ್ರೇತೆಯ ರಾಮನ ದ್ವಾಪರ ಶ್ಯಾಮನ
ರಾಯರೂಪದಿ ಧರೆಯ ಕಾಯ್ವ ಶ್ರೀನಿವಾಸ ವಿಠಲ

ಕಂದನ ಕಂಡಿರಾ ಶ್ರೀಕೃಷ್ಣನ ಕಂಡಿರಾ
ಗೆಜ್ಜೆ ಕಾಲ್ಗಳ ಗೋಕುಲದೊಡೆಯ ಶ್ರೀಗೋವಿಂದನ ಕಂಡಿರಾ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೪.೨೦೧೩

Saturday, April 6, 2013

Shri Krishnana Nooraru Geethegalu - 338

ಮೋಹಿ ಎನ್ನದಿರೊ ಶ್ರೀಹರಿಯೆನ್ನ

ಮೋಹಿ ಎನ್ನದಿರೊ ಶ್ರೀಹರಿಯೆನ್ನ ವ್ಯಾಮೋಹಿ ಎನ್ನದಿರೊ
ನಿನ್ನ ಶ್ರೀಚರಣದಾ ಸೇವೆ ಬೇಡುವೀ ನರನ

ಚಿನ್ನವ ಕೇಳೆನೊ ರನ್ನವ ಕೇಳೆನೊ
ಸಕಲ ಸುಖಭೋಗ ಆಯುಷ್ಯವ
ಕೇಡನೆ ಉಂಡುಟ್ಟ ಕುರುಸುತರಂದದೊಳು
ಚರವದು ಸ್ಥಿರವೆನುವ ಅತಿಸ್ವಾರ್ಥವ (೧)

ಅರಸು ತಾವೆಂದು ಅರೆಕ್ಷಣವಿರಲಿಲ್ಲ
ಕಾಸಿನ ಕಿರೀಟ ಮಣ್ಣಾದೊ
ಮೂಜಗ ತಮದೆಂದು ಮೂರುಕ್ಷಣವಿರಲಿಲ್ಲ
ಮುನ್ನೂರು ಶತಕೋಟಿ ಶಿರವಳಿದೊ (೨)

ನಾನು ನಾನೆಂಬುದೆಲ್ಲ ನಿನ್ನ ನಾಮದ ಧೂಳು
ನಾನು ನಾನೆಂಬುವನ ನಾಮವಳಿಯಿತು ನೋಡು
ಧರೆಯೊಳು ನೀ ದೊರೆಯೊ ಶ್ರೀನಿವಾಸ ವಿಠಲಯ್ಯ
ನಿನ್ನ ಶ್ರೀಚರಣದೊಳು ಎನಗೆ ನೆರಳನು ನೀಡು (೩)

ಮೋಹಿ ಎನ್ನದಿರೊ ಶ್ರೀಹರಿಯೆನ್ನ ವ್ಯಾಮೋಹಿ ಎನ್ನದಿರೊ
ನಿನ್ನ ಶ್ರೀಚರಣದಾ ಸೇವೆ ಬೇಡುವೀ ನರನ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೦೪.೨೦೧೩