Tuesday, February 19, 2013

Shri Krishnana Nooraru Geethegalu - 336

ಮಧುರ ನುಡಿಸೊ ಮನದ ಮುರಳಿ

ಮಧುರ ನುಡಿಸೊ ಮನದ ಮುರಳಿ ಎನ್ನ ಮೋಹನ
ಕ್ಲೇಶ ಕಳೆದು ವಿಶೇಷವಾಗಿಸೀ ನರನ ಜೀವನ

ಬದುಕೆಂಬೀ ಮಾಯಾಮೃಗವ ಕಣ್ಣಮುಂದೆಯೆ ಬಿಟ್ಟಿಹೆ
ಬೇಟೆಯಾಡೆ ಆರು ಬಣ್ಣದ ವಿಷಬಾಣವ ಕೊಟ್ಟಿಹೆ
ಮಣ್ಣುಹೊನ್ನು ಎಮ್ಮದಲ್ಲವೊ ಎಮ್ಮದೆನ್ನುವ ಮಾಯೆಯ
ಎಮ್ಮೊಳಿಟ್ಟು ಆಟಕಟ್ಟಿದ ಕೃಷ್ಣ ಎಮ್ಮನು ಕಾಯ್ವೆಯಾ (೧)

ಮಾತೆಯೆಂದಾ ಪೂತನೆಯೊಳು ವಿಷಪಾನವನಿಟ್ಟನೆ
ದಾನಪದದಾ ಸೂರ್ಯಪುತ್ರನ ಕೈಯ್ಯ ಕಟ್ಟಿಬಿಟ್ಟನೆ
ಧರ್ಮಾಧರ್ಮದ ಅಂಬುಧಿಯೊಳು ನಿಜದ ಸತ್ಯಸುಧೆಯನು
ಮಥಿಸಿ ಸುಜನಗೆ ಸವಿಯೆ ನೀಡುವ ಶ್ರೀನಿವಾಸ ವಿಠಲನೆ (೨)

ಮಧುರ ನುಡಿಸೊ ಮನದ ಮುರಳಿ ಎನ್ನ ಮೋಹನ
ಕ್ಲೇಶ ಕಳೆದು ವಿಶೇಷವಾಗಿಸೀ ನರನ ಜೀವನ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೨.೨೦೧೩

Tuesday, February 12, 2013

Shri Krishnana Nooraru Geethegalu - 335

ಶ್ರೀರಾಮ ವಂದೆ

ರಾಮ ವಂದೆ ಶ್ರೀರಾಮ ವಂದೆ
ಅಗಣಿತಾಕ್ಷಯ ಸುಗುಣಧಾಮ ವಂದೆ

ರಘುಕುಲ ಸಿರಿಸೋಮ ಶ್ರೀರಾಮ ವಂದೆ
ರಾಜೀವಲೋಚನ ಜಯರಾಮ ವಂದೆ
ದಶರಥ ಕೌಸಲ್ಯೆ ಪ್ರಿಯರಾಮ ವಂದೆ
ಭವಕಾಮಹರ ರಾಮ ನಿಷ್ಕಾಮ ತಂದೆ (೧)

ಜಯಜಯರಾಮ ವಂದೆ ಜಾನಕಿಪ್ರಾಣ ವಂದೆ
ದಶಶಿರಹರ ರಾಮ ಜಟಾಯುದೇವ ವಂದೆ
ಹನುಮನ ಪಾಲ ವಂದೆ ಮುನಿಜನಲೋಲ ವಂದೆ
ದಶದೊಳು ಧರೆಕಾವ ಶ್ರೀನಿವಾಸ ವಿಠಲ ತಂದೆ (೨)

ರಾಮ ವಂದೆ ಶ್ರೀರಾಮ ವಂದೆ
ಅಗಣಿತಾಕ್ಷಯ ಸುಗುಣಧಾಮ ವಂದೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೩.೦೨.೨೦೧೩

Friday, February 8, 2013

Shri Krishnana Nooraru Geethegalu - 334

ನೀವು ಕಂಡಿರೆ

ಇಂದುವದನ ಕಮಲನಯನ ಚೆಲ್ವನ ಕಂಡಿರೆ ನೀವು
ಯದುನಂದನ ದೇವಕಿಕಂದನ ಕೃಷ್ಣನ ಕಂಡಿರೆ

ಚೆಂದ ಚಂದನ ತಿಲಕವಿಟ್ಟನ ಪುಟ್ಟನ ಕಂಡಿರೆ
ಕದ್ದು ಬೆಣ್ಣೆಯ ಮೆದ್ದು ಒಪ್ಪದ ತುಂಟನ ಕಂಡಿರೆ
ಜಗದ ಕತ್ತಲ ಹೆಡೆಯ ಮೆಟ್ಟಿದ ದಿಟ್ಟನ ಕಂಡಿರೆ
ಜರಾಸಂಧನ ಅಹಂ ಅದನು ತರಿದಿಟ್ಟನ ಕಂಡಿರೆ (೧)

ರಾಧೆಯ ಲೋಲನ ಜಗದಿಕ್ಪಾಲನ ನೀವು ಕಂಡಿರೆ
ಗೋವ್ಗಳ ಕಾಯುತ ಗಾನವಗೈಯ್ಯುವ ಗೊಲ್ಲನ ಕಂಡಿರೆ
ಭವಗೋವರ್ಧನ ಬೆರಳೊಳಗೆತ್ತಿದ ಭವ್ಯನ ಕಂಡಿರೆ
ಇಂದಿರಾಪತಿಯೆಮ್ಮ ಶ್ರೀನಿವಾಸ ವಿಠಲನ ನೀವು ಕಂಡಿರೆ

ಇಂದುವದನ ಕಮಲನಯನ ಚೆಲ್ವನ ಕಂಡಿರೆ ನೀವು
ಯದುನಂದನ ದೇವಕಿಕಂದನ ಕೃಷ್ಣನ ಕಂಡಿರೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೨.೨೦೧೩