Tuesday, December 25, 2012

Shri Krishnana Nooraru Geethegalu - 326

ಚರಣ ತೋರಿಸೊ

ಚರಣ ತೋರಿಸೊ ಶ್ರೀರಾಮನ ಚರಣ ತೋರಿಸೊ
ಚರಣ ತೋರಿಸೊ ಕರುಣ ನಿನ್ನ ಶ್ರೀಚರಣಕೆರಗುವೆ ನಾ

ನಿನ್ನ ದೊರೆ ಶ್ರೀರಘುಪತಿ ರಾಮನ ಮಾತೆ ಜಾನಕಿ ಪ್ರೇಮದ ಪ್ರಾಣನ
ಬಕುತಿಗೆ ಒಲಿದು ತಾನೆದೆಯೊಳು ನಿಂದನ ದಶರಥಸುತ ಶ್ರೀಪುರುಷೋತ್ತಮನ (೧)

ರಾಮರಾಮನ ಶ್ರೀರಾಮಚಂದ್ರನ ಮುನಿಜನವಂದಿತ ಕೌಸಲ್ಯೆ ಕಂದನ
ಸತ್ಯವಚನನ ಪುಣ್ಯಚರಿತನ ಲಂಕೆಯ ಕೇಡದ ಧರ್ಮದಿ ಮುರಿದನ (೨)

ರಾಮನ ಶ್ಯಾಮನ ದಶಮುಖದೇವನ ಆದಿಯಿಂ ಧರಣಿಯ ಸುಖದೊಳು ಕಾದನ
ಕಲಿಯೊಳು ನರನ ಅನ್ಯವ ಕಳೆದು ತಾ ಮುಕುತಿಯ ತೋರೊ ಶ್ರೀನಿವಾಸ ವಿಠಲನ (೩)

ಚರಣ ತೋರಿಸೊ ಶ್ರೀರಾಮನ ಚರಣ ತೋರಿಸೊ
ಚರಣ ತೋರಿಸೊ ಕರುಣ ನಿನ್ನ ಶ್ರೀಚರಣಕೆರಗುವೆ ನಾ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೧೨.೨೦೧೨

Monday, December 24, 2012

Shri Krishnana Nooraru Geethegalu - 325

ಶ್ರೀಕೃಷ್ಣ

ಸರ್ವಾಕರ್ಷಕ ಸಕಲರ ಮೋಹಕ ಜಗದೋದ್ಧಾರಕ ಶ್ರೀಕೃಷ್ಣ
ಸಕಲೈಶ್ವರ್ಯ ಜಗದಾಶ್ಚರ್ಯ ಸಿರಿಸೌಂದರ್ಯ ಶ್ರೀಕೃಷ್ಣ

ಲೀಲಾದೇವನು ಮಾಯಾಜಾಲನು ರಾಧೆಲೋಲನು ಶ್ರೀಕೃಷ್ಣ
ನಂದನ ನಂದನು ದೇವಕಿಕಂದನು ಗೋಪಿ ಆನಂದನು ಶ್ರೀಕೃಷ್ಣ

ಸರ್ವದ ಶಕ್ತನು ಸಕಲದೊಳ್ಯುಕ್ತನು ಭವದ ವಿಮುಕ್ತನು ಶ್ರೀಕೃಷ್ಣ
ಸ್ವಾರ್ಥಕೆ ಶಾಪನು ನಿಸ್ವಾರ್ಥರೂಪನು ಸಮಪದದರ್ಥನು ಶ್ರೀಕೃಷ್ಣ

ಜ್ಞಾನವಿಜ್ಞಾನ ಪರಂಜ್ಯೋತಿ ಪಾವನ ಸತ್ಯ ಸಾಕ್ಷಿ ಚೇತನ ಶ್ರೀಕೃಷ್ಣ
ಪುಣ್ಯದ ದರ್ಶನ ಪಾಪ ವಿನಾಶನ ಅನಂತ ಕರುಣ ಶ್ರೀಕೃಷ್ಣ

ದೇವರದೇವನು ದೀನರ ಕಾವನು ಬಕುತಜೀವನು ಶ್ರೀಕೃಷ್ಣ
ತ್ರೇತೆಯ ರಾಮನು ದ್ವಾಪರ ಶ್ಯಾಮನು ಶ್ರೀನಿವಾಸ ವಿಠಲನು ಶ್ರೀಕೃಷ್ಣ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೧೨.೨೦೧೨

Friday, December 21, 2012

Shri Krishnana Nooraru Geethegalu - 324

ಶ್ರೀಹರಿನಾಮ

ಹರಿನಾಮಾಮೃತವಲ್ಲದೆ ಅನ್ಯವ ನುಡಿದೊಡೆ ಫಲವೇನು
ಹರಿಹರಿಯೆನ್ನದ ನರನಿಗೆ ಇಹದೊಳು ಮುಕುತಿ ದೊರೆವುದೇನು

ಶಬರಿಯು ನುಡಿಯಲು ದರುಶನವಾಯಿತೊ ನಾಮ ಶ್ರೀರಾಮ
ಶಿಲೆಯೊಳ ಶಾಪವ ಕಳೆದು ಕಾಪಾಡಿತೊ ಶ್ರೀರಾಮ ನಾಮ
ಮಾರುತಿರಾಯರ ಎದೆಯೊಳಗುಳಿಯಿತೊ ರಾಮ ಶ್ರೀರಾಮ
ದುರಿತವ ಕಳೆಯಿತೊ ಧರೆಯ ತಾನಾಳಿತೊ ಆ ದಿವ್ಯನಾಮ (೧)

ಮಾತೆ ಯಶೋದೆಯ ಮಡಿಲೊಳಗಾಡಿತೊ ಆ ಪುಣ್ಯನಾಮ
ರಾಧೆಗೆ ಸುಮಧುರ ಒಲುಮೆಯ ತೋರಿತೊ ಶ್ಯಾಮ ಆ ನಾಮ
ಕಂಸನ ಕಳೆದು ತಾನ್ಯದುವಂಶದಿ ಬೆಳಗಿತೊ ಕೃಷ್ಣನ ಶ್ರೀನಾಮ
ಕೊಳಲನು ಉಲಿಯುತಾ ಜಗವನೆ ಮಿಡಿಯಿತೊ ಆ ದಿವ್ಯನಾಮ (೨)

ಹರಿಯೆಂದಜಮಿಳನ ಬಿಡದೆ ತಾ ಸಲಹಿತೊ ನಾರಾಯಣ ನಾಮ
ನಾರಾಯಣನೆಂದ ಕಂದನ ಕಾಯ್ತೋ ಶ್ರೀಹರಿ ನಿಷ್ಕಾಮ
ಹನುಮನ ಭೀಮನ ಶ್ರೀಮಧ್ವರಾಯನ ಹರಸಿದ ಶ್ರೀನೇಮ
ಶ್ರೀನಿವಾಸ ವಿಠಲನ ಪೂಜಿಪ ನರರನು ಕಾಯುವ ಆ ನಾಮ (೩)

ಹರಿನಾಮಾಮೃತವಲ್ಲದೆ ಅನ್ಯವ ನುಡಿದೊಡೆ ಫಲವೇನು
ಹರಿಹರಿಯೆನ್ನದ ನರನಿಗೆ ಇಹದೊಳು ಮುಕುತಿ ದೊರೆವುದೇನು

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೧೨.೨೦೧೨

Monday, December 17, 2012

Shri Krishnana Nooraru Geethegalu - 323

ಬಾರೊ ಮೋಹನ

ಮೋಹನ ಎನ್ನ ಮೋಹನ ಬೇಸರವು ಬೃಂದಾವನ
ಒಲುಮೆ ಮುರಳಿಯ ಉಲಿದು ಬಾರೊ ತೆರೆವೆ ಎದೆಯ ಕದವ ನಾ

ಮೋಹನ ಮನಮೋಹನ ಚಡಪಡಿಸಿದೆ ಈ ಮನ
ವಿರಹವೆನ್ನೊಳು ಮೊರೆದು ಕೇಳಿದೆ ನಿನ್ನ ಮಾಧವ ಬರುವನಾ

ಮೋಹನ ಎನ್ನ ಮೋಹನ ನೀನೀ ಹೃದಯ ಗಾಯನ
ಚಂದ್ರನಿರದ ಬರಿ ಬಾನದು ಸೊಗಸೆ ಹೇಳೊ ಪಾವನ

ಮೋಹನ ಮನಮೋಹನ ರಾಧೆ ಜೀವ ಜೀವನ
ಶ್ರೀನಿವಾಸ ವಿಠಲ ಬಾರೊ ಯುಮುನೆತೀರದೆ ಕಾಯ್ವೆ ನಾ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೧೨.೨೦೧೨

Friday, December 14, 2012

Shri Krishnana Nooraru Geethegalu - 322

ಮೀರೆಯ ಮರೆತೆಯಾ

ಬಾರೆಯಾ ದಯೆ ತೋರೆಯಾ
ಗೋಪಪ್ರಿಯ ಶ್ರೀಗೋಪಾಲಕೃಷ್ಣನೆ
ಈ ಮೀರೆಯ ಮರೆತೆಯಾ

ನಾನು ಎನುವ ಗಂಡನ ಬಿಟ್ಟು
ಆರು ಮನೆಯ ಮೋಹವ ಬಿಟ್ಟು
ಕಾಯುತಿಹೆನೊ ಮಾರಪಿತನೆ
ಎನ್ನ ಜೀವವ ನಿನ್ನೊಳಿಟ್ಟು (೧)

ನಿನ್ನ ಇರುವಿನೊಳೆನ್ನ ಇರುವು
ನಿನ್ನ ಸನಿಹದೆ ಮೀರೆ ಜಗವು
ನೀನೇ ಎನ್ನೊಳ ಪ್ರೀತಿಧಾರೆ
ಶ್ರೀನಿವಾಸ ವಿಠಲ ದೊರೆಯೆ (೨)

ಬಾರೆಯಾ ದಯೆ ತೋರೆಯಾ
ಗೋಪಪ್ರಿಯ ಶ್ರೀಗೋಪಾಲಕೃಷ್ಣನೆ
ಈ ಮೀರೆಯ ಮರೆತೆಯಾ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೧೨.೨೦೧೨

Tuesday, December 11, 2012

Shri Krishnana Nooraru Geethegalu - 321

ರಾಮ ನಿನ್ನ ನಾಮವಲ್ಲದೆ

ರಾಮ ನಿನ್ನ ನಾಮವಲ್ಲದೆ ಅನ್ಯವ ನಾ ಅರಿಯೆನೊ
ಚರಣಮುಕುತಿ ದೊರೆವವರೆಗೆ ನಾಮಸ್ಮರಣೆ ಮರೆಯೆನೊ

ಶಬರಿ ನುಡಿದ ದಿವ್ಯನಾಮ ಹನುಮಗೊಲಿದ ಪುಣ್ಯನಾಮ
ಮುನಿಸತಿಯ ಶಾಪವಳಿದ ಶುಭದ ನಾಮ ರಾಮ (೧)

ಭವವ ಕಳೆಯೊ ಬುವಿಯ ನಾಮ ಬಕುತಗೊಲಿಯೊ ಭವ್ಯಧಾಮ
ರಕ್ಕಸೇಂದ್ರನ ಕೆಡುಕ ಕಡಿದ ಶಕುತ ನಾಮ ರಾಮ (೨)

ತ್ರೇತೆಯೊಳಗೆ ಸುಕೃತ ನಾಮ ದ್ವಾಪರದೆ ಸುಜನ ಕ್ಷೇಮ
ಕಲಿಯ ಪೊರೆವ ಶ್ರೀನಿವಾಸ ವಿಠಲ ರಾಮ ಶ್ಯಾಮ ರಾಮ (೩)

ರಾಮ ನಿನ್ನ ನಾಮವಲ್ಲದೆ ಅನ್ಯವ ನಾ ಅರಿಯೆನೊ
ಚರಣಮುಕುತಿ ದೊರೆವವರೆಗೆ ನಾಮಸ್ಮರಣೆ ಮರೆಯೆನೊ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೨.೧೨.೨೦೧೨

Monday, December 10, 2012

Shri Krishnana Nooraru Geethegalu - 320

ಭಗವಂತ

ಭಗವಂತ ನೀ ಕರುಣದನಂತ
ಸಲಹೊ ಶ್ರೀಪತಿ ಲಕುಮಿಕಾಂತ

ನಿನ್ನನೇ ನಂಬಿಹೆ ನಂಬಿ ನಾ ಬಂದಿಹೆ
ನೀನೇ ಸತ್ಯವು ದೇವ ಸಾಕ್ಷಿ ಚೇತನವು
ನಮಿಪೆನೊ ಜಗಮೂಲ ಕಾಯೆನ್ನ ಕುಶಲವ
ಸುಗುಣದನಂತನೆ ಸಂಪನ್ನ ಕೃಷ್ಣ (೧)

ಪರಮಪಾವನ ನೀನು ಪರಾಮರ್ಶಿಸೊ ಎನ್ನ
ಅನ್ಯಗಳೆಲ್ಲವ ಪಿತನಂದದಿ
ಪಾಪನಾಶನ ನೀನು ಶ್ರೀನಿವಾಸ ವಿಠಲಯ್ಯ
ಕ್ಷಮಿಸೆನ್ನ ನಿನ್ನ ಸುತನಂದದಿ (೨)

ಭಗವಂತ ನೀ ಕರುಣದನಂತ
ಸಲಹೊ ಶ್ರೀಪತಿ ಲಕುಮಿಕಾಂತ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೧೨.೨೦೧೨

Sri Krishnana Nooraru Geethegalu - 319

ಮೀರೆಯ ಮೊರೆಯ

ಮೀರೆಯ ಮೊರೆಯ ಕೇಳೆನ್ನ ದೊರೆಯೆ
ಗೋಕುಲ ಚೆಲುವನೆ  ಮುದ್ದುಕೃಷ್ಣಯ್ಯ

ರವಿ ಬರುವನೊ ತಾ ಮೂಡಣದೊಳಗೆ
ಸಾಸಿರ ಕಿರಣದಿ ನಿನ್ನನು ಮುಗಿಯೆ
ನದಿ ತಾ ಹರಿವುದೊ ಶ್ರೀಚರಣವ ತೊಳೆಯೆ
ಮೊಗ್ಗದು ಅರಳಿ ಹೂ ನಿನ್ನ ಮಾಲೆಯಾಗೆ (೧)

ನಿನ್ನೆದೆಯೊಲುಮೆಯ ಕೊಡೊ ಶ್ರೀಪ್ರಭುವೆ
ಜನುಮಜನುಮಕು ನಾ ನಿನ್ನವಳಾಗುವೆ
ನಿನ್ನಲ್ಲದನ್ಯವೂ ತೃಣವೆನಗೆ ಕೃಷ್ಣಯ್ಯ
ಶ್ರೀನಿವಾಸ ವಿಠಲನೆ ಸೇರೆನ್ನ ಬೇಡುವೆ (೨)

ಮೀರೆಯ ಮೊರೆಯ ಕೇಳೆನ್ನ ದೊರೆಯೆ
ಗೋಕುಲ ಚೆಲುವನೆ  ಮುದ್ದುಕೃಷ್ಣಯ್ಯ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೧೨.೨೦೧೨

Tuesday, December 4, 2012

Shri Krishnana Nooraru Geethegalu - 318

 ಹರಿಭಜನೆ

ಜಾನಕಿ ವಲ್ಲಭ ಜಯತು ಶ್ರೀರಾಮ
ಬಕುತ ಸುಲಭ ಶ್ರೀಕಲ್ಯಾಣಧಾಮ
ಜಯಜಯ ರಾಮ ಜಗದೀಶ ರಾಮ
ದಶರಥಸುತ ವಂದೆ ರಘುಕುಲಸೋಮ

ರಾಧಾಹೃದಯ ಶ್ರೀನೀಲಮೇಘಶ್ಯಾಮ
ಕೃಷ್ಣನ ಜಗದೊಳು ಸಿರಿ ಸುಖ ಕ್ಷೇಮ
ಜಯಜಯ ರಾಮ ದ್ವಾರಕೆ ಶ್ಯಾಮ
ನವನೀತಚೋರನೆ ದೇವಕಿ ಪ್ರೇಮ (೧)

ಹನುಮಯ್ಯಗೊಲಿದನೆ ತ್ರೇತಾ ರಾಮ
ಭೀಮಯ್ಯನಭಯನೆ ಗೋಕುಲ ಶ್ಯಾಮ
ರಾಯರಾಯರಿಗೊಲಿದ ಶ್ರೀನಿವಾಸ ವಿಠಲನೆ
ಸುಖದೊಳು ಸಲಹೊ ನಾನು ಸುಧಾಮ (೨)

ಜಾನಕಿ ವಲ್ಲಭ ಜಯತು ಶ್ರೀರಾಮ
ಬಕುತ ಸುಲಭ ಶ್ರೀಕಲ್ಯಾಣಧಾಮ
ಜಯಜಯ ರಾಮ ಜಗದೀಶ ರಾಮ
ದಶರಥಸುತ ವಂದೆ ರಘುಕುಲಸೋಮ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೫.೧೨.೨೦೧೨

Saturday, December 1, 2012

Shri Krishnana Nooraru Geethegalu - 317

ಹರಿಯೆನುವನೆ ಕನಕ

ಹರಿಯೆನುವನೆ ಕನಕ ಶ್ರೀಹರಿಯೆನಲವ ಧನಿಕ
ಹರಿಹರಿಯೆನುವಗೆ ಹರಿ ತೋರುವ ಬೆಳಕ

ತೊಗಲದ ತೊಳೆವೊಡೆ ತೊನ್ನು ಕಳೆವುದೆ ಜೀವ
ಜನುಮಜನುಮದ ಕರುಮ ಹರಿಲೆಕ್ಕ
ತೊಗಲದು ಕ್ಷಣ ಕಾಣೊ ಮತ್ತೊಳಗದು ಅನುಕ್ಷಣವು
ನಿನ್ನಾತ್ಮಕೆ ಮಾಡಿಸೊ ಹರಿಜಳಕ (೧)

ನರಹೀನ ನಾಲಗೆ ಬಿಗಿಹಿಡಿ ಕಲಿಯೊಳು
ನರಕದೊಳನ್ಯಕೆ ಇಲ್ಲವೋ ಮರುಕ
ಬಿಡದೆ ಸ್ಮರಿಸಲು ಎಮ್ಮ ಶ್ರೀನಿವಾಸ ವಿಠಲ
ನಿತ್ಯದಿ ದೊರೆವುದು ಶ್ರೀಪಾದ ಪುಳಕ (೨)

ಹರಿಯೆನುವನೆ ಕನಕ ಶ್ರೀಹರಿಯೆನಲವ ಧನಿಕ
ಹರಿಹರಿಯೆನುವಗೆ ಹರಿ ತೋರುವ ಬೆಳಕ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೧೨.೨೦೧೨

Thursday, November 29, 2012

Shri Krishnana Nooraru Geethegalu - 316

ರಂಗನ ತೋರೆನಗೆ

ರಂಗನ ತೋರೆನಗೆ ಮುದ್ದುರಂಗನ ತೋರೆನಗೆ
ಮಧುಬನದೊಳು ಎಮ್ಮ ರಾಧೆಸಂಗದೊಳಾಡ್ವ

ಗರಿಮುಡಿ ಕೇಶವನ ನೊಸಲ ಶ್ರೀತಿಲಕನ
ಮದನನು ವಿಹರಿಸೊ ಮೋಹಕ ನಯನನ
ಕಿರುನಗೆಯಧರದೆ ಹೆಣ್ಮನ ಪುಳಕಿಸುವ
ಕಿರುಗೆಜ್ಜೆ ಕಾಲ್ಗಳ ಕೊಳಲಿನ ಪೋರನ (೧)

ಗೋಪಾಲ ಮಾಧವನ ಗಿರಿಯೆತ್ತಿ ಕಾಯ್ದವನ
ಕಾಳಿಂಗಶಿರಮೆಟ್ಟಿ ಬಲಿಯಹಂ ಕುಟ್ಟಿದನ
ಜಾನಕೀ ಹೃದಯನ ಭಾಮೆಗೂ ಒಲಿದವನ
ಕಲಿಯೊಳು ಧರೆಸಲಹೊ ಶ್ರೀನಿವಾಸ ವಿಠಲನ (೨)

ರಂಗನ ತೋರೆನಗೆ ಮುದ್ದುರಂಗನ ತೋರೆನಗೆ
ಮಧುಬನದೊಳು ಎಮ್ಮ ರಾಧೆಸಂಗದೊಳಾಡ್ವ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೧೧.೨೦೧೨

Sunday, November 25, 2012

Shri Krishnana Nooraru Geethegalu - 315

ಮಧುವನದೊಳು

ಮಧುವನದೊಳು ನಾನೊಬ್ಬಳೇ ಶ್ರೀಹರಿ
ಮರೆಯಿತೇ ಕೃಷ್ಣ ಎನ್ನ ದಾರಿ

ನಿನ್ನೆಯ ನೆನಪಿನ ಖುಷಿಯಿದೆ ಎದೆಯೊಳು
ನಾಳೆಯ ನಂಬುಗೆ ಕನಸುಗಳು
ವರ್ತಮಾನಕೆ ಅರ್ಥವೇ ನೀನಿರದೆ
ಹುಣ್ಣಿಮೆ ಅಂದವೇ ಶಶಿಯಿರದೆ (೧)

ವಡಲಿನ ಗಡಿಗೆಯೊಳು ನಿನ್ನೆಡೆ ಒಲುಮೆ
ಹೆಪ್ಪಾಗಿಹುದು ಸಿಹಿಮೊಸರು
ಕಡೆಯುವೆ ಉಣಿಸುವೆ ಶ್ರೀನಿವಾಸ ವಿಠಲನೆ
ನಲುಮೆಯ ನವನೀತ ದಯೆತೋರು (೨)

ಮಧುವನದೊಳು ನಾನೊಬ್ಬಳೇ ಶ್ರೀಹರಿ
ಮರೆಯಿತೇ ಕೃಷ್ಣ ಎನ್ನ ದಾರಿ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೧೧.೨೦೧೨

Friday, November 16, 2012

Shri Krishnana Nooraru Geethegalu - 314

ಪ್ರಣವರೂಪ

ಪಾಲಿಪುದು ಪಾವನನೆ ಪಾಪನಾಶನ ಕೃಷ್ಣ
ಪುರುಷೋತ್ತಮ ವಂದೆ ಪ್ರಣವರೂಪ

ಜಗದಾದಿ ಜಂತುಜನ ಕಲುಷವನು ನಿಮಿಷದೊಳು
ಕಳೆದು ಕಾವನೆ ದೇವ ಪರಮ ಪರುಷ
ಸಕಲ ಸುರಗಣ ವಂದ್ಯ ಮುನಿಜನಾತ್ಮನೆ ಕೃಷ್ಣ
ಸ್ಮರಣೆ ಮಾತ್ರದೆ ನಿನ್ನ ಮೂಜಗದೆ ಹರುಷ (೧)

ಮೂಸೃಷ್ಟಿಯ ಪ್ರಭುವೆ ನೀ ನಾಕುನುಡಿರೂಪ
ಹಲವು ನಿಜದೊಳು ನೀನೆ ಏಕಸ್ವರೂಪ
ಬಿಡದೆನ್ನ ಮಸುಕಿದೀ ಮೌಢ್ಯತೆಯ ತಿಮಿರವನು
ಬಿಡಿಸೆನ್ನ ಸಲಹೊ ನೀ ಶ್ರೀನಿವಾಸ ವಿಠಲ (೨)

ಪಾಲಿಪುದು ಪಾವನನೆ ಪಾಪನಾಶನ ಕೃಷ್ಣ
ಪುರುಷೋತ್ತಮ ವಂದೆ ಪ್ರಣವರೂಪ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೧೧.೨೦೧೨

Friday, November 9, 2012

Shri Krishnana Nooraru Geethegalu - 313

ಪುಳಕಗೊಳುತಿದೆ ಸಂಜೆ

ತೀಡಿಬಹ ತಂಗಾಳಿ ಪೇಳುತಿದೆ ಬಳಿಸಾರಿ ಶ್ಯಾಮ ಬರುವನೆ ರಾಧೆ ಕ್ಷಣದೊಳೆಂದು
ಬೇಸರವ ಕಳೆದಿನ್ನು ಸಿಂಗಾರವಾಗೆಂದು ಆಸೆ ಶರಗಳ ಹೂಡಿ ಎನ್ನೆದೆಗೆ ಇಂದು

ಬೃಂದಾವನದೊಳಗೆ ಚೆಲುವದುವು ನಾಚುತಿದೆ ಚಿಗುರು ಚೈತ್ರದ ನಡುವೆ ಚಿಟ್ಟೆ ಆಡಿ
ಕೋಕಿಲನೆ ಗಾಯಕನು ಚಿಲಿಪಿಲಿಯ ವೈಣಿಕನು ಪುಳಕಗೊಳುತಿದೆ ಸಂಜೆ ಪ್ರೀತಿ ಮೋಡಿ

ಪಡುವಣದ ಕಡಲಿನಲಿ ನಾಚಿ ನೇಸರ ಕೆನ್ನೆ ಓಡಿದನು ಎನ್ನ ಶ್ಯಾಮ ಬರುವನೆಂದು
ಕಾಯುತಿವೆ ಆಗಸದಿ ಚುಕ್ಕಿ ಪ್ರಣತಿಯ ಸಾಲು ರಾಧೆ ಗಲ್ಲಕೆ ಅಧರ ಇಡುವನೆಂದು

ನೊರೆಹಾಲು ಗಡಿಗೆಯದು ಉಣಿಸುವುದು ಶ್ಯಾಮನಿಗೆ ಮೈಮನವ ತಣಿಸೆ ತಾ ಇಹಳು ರಾಧೆ
ರಾಧೆ ಹೃದಯನು ಕೃಷ್ಣ ಶ್ರೀನಿವಾಸ ವಿಠಲಯ್ಯ ಒಲುಮೆವರ್ಷದಿ ಕಳೆವ ಅವಳ ಭಾದೆ

ತೀಡಿಬಹ ತಂಗಾಳಿ ಪೇಳುತಿದೆ ಬಳಿಸಾರಿ ಶ್ಯಾಮ ಬರುವನೆ ರಾಧೆ ಕ್ಷಣದೊಳೆಂದು
ಬೇಸರವ ಕಳೆದಿನ್ನು ಸಿಂಗಾರವಾಗೆಂದು ಆಸೆ ಶರಗಳ ಹೂಡಿ ಎನ್ನೆದೆಗೆ ಇಂದು

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೧೧.೨೦೧೨

Thursday, October 25, 2012

Shri Krishnana Nooraru Geethegalu - 312

ಕರಮುಗಿವೆ ಶ್ರೀಮಾತೆ

ಕರಮುಗಿವೆ ಶ್ರೀಮಾತೆ ಕಾತ್ಯಾಯನಿ
ಸಕಲ ಶುಭಗಳ ನೀಡೆ ನಾರಾಯಣಿ

ಶಿವದೂತೆಯೆ ವಂದೆ ಪರಮೇಶ್ವರಿ
ಸತಿ ಸಾಧ್ವಿ ಶಾಂಭವಿಯೆ ಸುರಸುಂದರಿ
ಕಳೆಯೆಮ್ಮ ಕರುಮಗಳ ಜಗದೀಶ್ವರಿ
ಅನಂತೆ ವರದಾತೆ ಆದಿಶಂಕರಿ (೧)

ಜಯಜಯತು ಜಯದುರ್ಗೆ ಶೂಲಧಾರಿಣಿ
ಶ್ರೀಮಾತೆ  ತ್ರೈನೇತ್ರೆ ಬಕುತಕರುಣಿ
ಶ್ರೀನಿವಾಸ ವಿಠಲಾಂಶೆ ಸುಖದಾಯಿನಿ
ಶರಣೆನುವೆ ಸಲಹೆಮ್ಮ ಶ್ರೀಭವಾನಿ (೨)

ಕರಮುಗಿವೆ ಶ್ರೀಮಾತೆ ಕಾತ್ಯಾಯನಿ
ಸಕಲ ಶುಭಗಳ ನೀಡೆ ನಾರಾಯಣಿ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೧೦.೨೦೧೨

Friday, October 19, 2012

Shri Krishnana Nooraru Geethegalu - 311

ನಡೆಯೆ ಬೇಗ ಬೃಂದಾವನಕೆ

ಏಕೆ ಮೌನ ಹೇಳೆ ರಾಧೆ ಅದ್ಯಾರ ಧ್ಯಾನವೆ
ಹಾಲಗಡಿಗೆ ಹೊತ್ತು ಹೀಗೆ ಎತ್ತ ಪಯಣವೆ

ಕರೆದನೇನೆ ಕೊಳಲಹುಡುಗ ಸರಸವಾಡೆ ಗಿರಿಯಲಿ
ಸನಿಹ ಸೆಳೆದು ಒಲುಮೆಮಾತಿಗೆ ಹರಿವ ಯಮುನೆದಡದಲಿ (೧)

ಕಾಡಮಲ್ಲಿಗೆ ದಂಡೆಯಿಡಿದು ಕಾದು ವಿರಹದ ಎದೆಯಲಿ
ಬಾರೆ ಮುಡಿಸುವೆ ಎಂದನೇನೆ ಬಯಕೆ ಚೆಲ್ಲುತ ಕಣ್ಣಲಿ (೨)

ನಂದಗೋಪನ ಕಂದನವನೆ ಗೋಕುಲದೊಳು ಚೆಲುವನು
ಮುರಳಿಯುಲಿದು ಮುಗುದೆ ಮನವನು ಬೆಣ್ಣೆಯಂದದಿ ಕದಿವನು (೩)

ನಡೆಯೆ ಬೇಗ ಬೃಂದಾವನಕೆ ಸಂಜೆ ಕೃಷ್ಣನು ಬರುವನು
ಶ್ರೀನಿವಾಸ ವಿಠಲ ನಿನ್ನಯ ಅಧರದಮೃತ ಸವಿವನು (೪)

ಏಕೆ ಮೌನ ಹೇಳೆ ರಾಧೆ ಅದ್ಯಾರ ಧ್ಯಾನವೆ
ಹಾಲಗಡಿಗೆ ಹೊತ್ತು ಹೀಗೆ ಎತ್ತ ಪಯಣವೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೧೦.೨೦೧೨

Thursday, October 18, 2012

Shri Krishnana Nooraru Geethegalu - 310

ಆವ ಮೋಹವೊ ತಿಳಿಯೆ ರಾಧೆ

ಆವ ಮೋಹವೊ ತಿಳಿಯೆ ರಾಧೆ ಎನ್ನ ಸೆಳೆದಿದೆ ನಿನ್ನೆಡೆ
ಒಂಟಿ ಬೇಸರ ಭಾರ ತನುವು ಸನಿಹ ಬಯಸಿದೆ ಎನ್ನೆದೆ

ಹೃದಯಬನವಿದು ಖಾಲಿಖೋಲಿಯು ವಿರಹಗಾನವೆ ಎಲ್ಲೆಡೆ
ನುಡಿವ ಮುರಳಿಯು ಮೌನವಾಗಿದೆ ರಾಗವೆದೆಯೊಳು ನಲುಗಿದೆ (೧)

ಬಿರಿದ ಅಧರವು ಜೇನಮಳೆಯನು ಬಯಸಿ ಕಾದಿದೆ ನಿನ್ನನೇ
ಮೌನದೊಳಗಿನ ಪ್ರೇಮಕವಿತೆಯು ಮಾತನಾಡದೆ ಸುಮ್ಮನೆ (೨)

ಅವನು ಬಾರನು ಇವಳು ಕಾವಳು ಜಗವು ಎಮ್ಮೆಡೆ ನಗುತಿದೆ
ಕಾವ ವಿರಹದಿ ಪಕ್ವ ಪ್ರೇಮವು ಎನುವ ಸತ್ಯವ ಮರೆತಿದೆ (೩)

ಆವ ಮೋಹವೊ ತಿಳಿಯೆ ರಾಧೆ ಎನ್ನ ಸೆಳೆದಿದೆ ನಿನ್ನೆಡೆ
ಒಂಟಿ ಬೇಸರ ಭಾರ ತನುವು ಸನಿಹ ಬಯಸಿದೆ ಎನ್ನೆದೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೮.೧೦.೨೦೧೨

Wednesday, October 17, 2012

Shri Krishnana Nooraru Geethegalu - 309

ಎಲ್ಲವ ಬಿಟ್ಟೆನೊ

ಅಲ್ಲದ ಬಿಟ್ಟೆನೊ ಸಲ್ಲದ ಬಿಟ್ಟೆನೊ
ಸಜ್ಜನರೊಲ್ಲದ ಎಲ್ಲವ ಬಿಟ್ಟೆನೊ

ಹರಿಯನು ಕಾಣದ ಕಂಗಳ ಬಿಟ್ಟೆನೊ
ಸ್ಮರಣೆಯ ಕೇಳದ ಕರ್ಣಗಳ
ಹರಿಯನು ನುಡಿಯದ ನಾಲಗೆ ಬಿಟ್ಟೆನೊ
ಅವನೇ ಇಲ್ಲದ ಹೃದಯಗಳ (೧)

ನಾನು ನಾನೆಂಬಾರು ಕೇಡನು ಬಿಟ್ಟೆನೊ
ನೀನು ನೀನೆನ್ನುವ ಬಕುತಿಯೊಳು
ಶುದ್ಧದ ನೊಸಲೆನದ ಶ್ರೀಚರಣದೊಳಿಟ್ಟೆನೊ
ಶ್ರೀನಿವಾಸ ವಿಠಲನೆ ಸಲಹೆನುತ (೨)

ಅಲ್ಲದ ಬಿಟ್ಟೆನೊ ಸಲ್ಲದ ಬಿಟ್ಟೆನೊ
ಸಜ್ಜನರೊಲ್ಲದ ಎಲ್ಲವ ಬಿಟ್ಟೆನೊ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೧೦.೨೦೧೨

Shri Krishnana Nooraru Geethegalu - 308

ದಿವ್ಯಚರಣ

ನಂಬಿಹೆನು ನಾ ನಿನ್ನ ದಿವ್ಯಚರಣವ ಕೃಷ್ಣ
ಬಿಡದೆ ಸಲಹೊ ಹರಿಯೆ ಸಿರಿಲಕುಮಿರಮಣ

ಗಾಳಿಯೊಳು ಮೂಲೋಕ ಜೀವವರಳಿಸಿದವನೆ
ಅಗ್ನಿಜಲದೊಳು ಶುದ್ಧಜಗವದನು
ಮಣ್ಣಿನೊಳು ಮುಕುತಿಯನು ನವದುದಯ ಶಕುತಿಯನು
ಸ್ವಚ್ಛದಿ ಪರಪಂಚ ನಡೆಸುವನೆ (೧)

ಆತ್ಮಂಗೆ ವಿಶ್ವಾತ್ಮ ನಿಷ್ಕ್ರಿಯಗೆ ಸಕ್ರಿಯನು
ಸಕಲ ಚರಾಚರದೆ ಅವತರಿಪ ದಿಟವೆ
ಕನಕಯ್ಯಗೊಲಿದೆಮ್ಮ ಶ್ರೀನಿವಾಸ ವಿಠಲನೆ
ಶರಣು ಬಂದೆನು ಕಾಯೊ ದೇವಭೃದ್ಗುರುವೆ (೨)

ನಂಬಿಹೆನು ನಾ ನಿನ್ನ ದಿವ್ಯಚರಣವ ಕೃಷ್ಣ
ಬಿಡದೆ ಸಲಹೊ ಹರಿಯೆ ಸಿರಿಲಕುಮಿರಮಣ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೧೦.೨೦೧೨

Thursday, October 11, 2012

Shri Krishnana Nooraru Geethegalu - 306

ಒಂಟಿ ಇಹಳು ರಾಧೆ

ಒಂಟಿ ಇಹಳು ರಾಧೆ ಒಲವ ವೃಂದಾವನದೆ
ಪಡುತಿಹಳು ಎದೆಬಾಧೆ ಶ್ಯಾಮನಿರದೆ

ಹೃದಯದಾ ಕೋಕಿಲವು ದಿವ್ಯಮೌನವ ತಳೆದು
ಮುರಳಿ ಮೋಹನಗಾನ ಕಾಯುತಿಹುದು
ವಡಲಿನಾ ಮಣಿವೀಣೆ ನವರಾಗದೊಳು ನಲಿಯೆ
ಬಾರೊ ವೈಣಿಕ ನುಡಿಸೊ ಎನುತಲಿಹುದು (೧)

ಮುಡಿಯೊಳಗೆ ಮಲ್ಲಿಗೆಯು ಘಮದ ಕಂಪನು ಸೂಸಿ
ಬರುವನೇನೆ ಅವನು ಕೇಳುತಿಹಳು
ಹರಿವ ಜುಳುಜುಳು ಯಮುನೆ ಯಾರಿಗೋ ಪಿಸುಪಿಸನೆ
ರಾಧೆ ಪ್ರೇಮದ ವ್ಯಥೆಯ ಪೇಳುತಿಹಳು (೨)

ಇರುಳಿನಾಗಸದಲ್ಲಿ ನಗುವ ಹುಣ್ಣಿಮೆ ಚಂದ್ರ
ಒಲುಮೆ ತಿಂಗಳ ಧರೆಗೆ ಸುರಿಯುತಿಹನು
ಶ್ರೀನಿವಾಸ ವಿಠಲನವ ನಿನ್ನ ಪ್ರಾಣದ ಕೃಷ್ಣ
ಬರುವನೆ ನೋಯದಿರು ಎನುತಲಿಹನು (೩)

ಒಂಟಿ ಇಹಳು ರಾಧೆ ಒಲವ ವೃಂದಾವನದೆ
ಪಡುತಿಹಳು ಎದೆಬಾಧೆ ಶ್ಯಾಮನಿರದೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೧೦.೨೦೧೨

Shri Krishnana Nooraru Geethegalu -305

ಎನ್ನ ಕೃಷ್ಣ

ದಿನಕರನ ಉದಯದೊಳು ಮೂಡಿಬಹ ಕಿರಣದೊಳು
ನಿನ್ನ ನಗುವನೆ ಕಾಣ್ವೆ ಎನ್ನ ಕೃಷ್ಣ

ಹೇ ದಿವ್ಯ ಕಿರಣನೆ ಜಗಜೀವ ಕಾರಣನೆ
ಎನ್ನಾತ್ಮದೊಳು ನೆಲಸೊ ಉಷೆಯ ಹರಸೊ
ಭವದಿ ತಮವನು ಅಳಿಸೊ ಉತ್ತಮನ ಒಳಗುಳಿಸೊ
ಮೂಜಗದ ಸೂತ್ರಕನೆ ಎನ್ನ ಕೃಷ್ಣ (೧)

ಜಗವು ನಿನ್ನದು ಹರಿಯೆ ಈ ಜೀವ ಸೋಜಿಗವು
ನೋಯಿಸದೆ ಕಾಯುವುದು ಎನ್ನ ದೊರೆಯೆ
ಏಳುಬೆಟ್ಟದ ಒಡೆಯ ಶ್ರೀನಿವಾಸ ವಿಠಲಯ್ಯ
ಬೇಡಿದೊಳು ಬಂದೊದಗೊ ಜಗವ ಪೊರೆಯೆ (೨)

ದಿನಕರನ ಉದಯದೊಳು ಮೂಡಿಬಹ ಕಿರಣದೊಳು
ನಿನ್ನ ನಗುವನೆ ಕಾಣ್ವೆ ಎನ್ನ ಕೃಷ್ಣ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೧೦.೨೦೧೨

Monday, October 8, 2012

Shri Krishnana Nooraru Geethegalu - 304

ಶ್ರೀಚರಣ ಕೃಷ್ಣ

ನೀನಲ್ಲದಿನ್ಯಾವ ದೇವರನು ನಾ ಅರಿಯೆ
ಸಿರಿಲಕುಮಿ ದೊರೆಯೆನ್ನ ದಿವ್ಯಚರಣನೆ ಕೃಷ್ಣ

ಧರ್ಮಜಗೆ ಪಗಡೆಯೊಳು ಸೋಲ ಬರೆದವ ನೀನೆ
ಸೋತು ಗೆಲುವುದೆ ಜಗದ ಧರ್ಮವೆಂದರುಹಿದನೆ
ಕುರುಜನಹಂ ಕೇಕೆಗು ಮೂಲಕಾರಣ ನೀನೆ
ರಣದೊಳಗೆ ಜೀವನವ ಮಧ್ಯಮಗೆ ತಿಳುಹಿದನೆ (೧)

ಅಷ್ಟಮಹಿಷಿಯರೊಡೆಯ ನಿಷ್ಠ ರಾಧೆಗು ಹೃದಯ
ಗಿರಿಯೆತ್ತಿ ಗೋಕುಲವ ಸಲುಹಿದವನೆ
ಬಿಂದು ಪದ್ಮದ ಪತ್ರ ಬದುಕೆಂದ ಜಗಸೂತ್ರ
ಶ್ರೀನಿವಾಸ ವಿಠಲ ನಮೊ ಧರಣೀಶನೆ (೨)

ನೀನಲ್ಲದಿನ್ಯಾವ ದೇವರನು ನಾ ಅರಿಯೆ
ಸಿರಿಲಕುಮಿ ದೊರೆಯೆನ್ನ ದಿವ್ಯಚರಣನೆ ಕೃಷ್ಣ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೧೦.೨೦೧೨

Thursday, October 4, 2012

Shri Krishnana Nooraru Geethegalu - 303

ನಿತ್ಯವಾಗಲೊ

ನಿನ್ನ ಮಧುರ ಮುರಳಿಗಾನವು ನಿತ್ಯವಾಗಲೊ
ಕರುಣೆ ನಿನ್ನದು ಸುಜನ ಬಕುತಗೆ ಸತ್ಯವಾಗಲೊ

ಮುಗಿಲ ಮಳೆಹನಿ ಬುವಿಗೆ ಮರಳಿ ಬಸಿರು ಮೊಳೆಯಲೊ
ಚಿಗುರಿ ಹಸಿರೊಳು ತೆನೆಯು ಸಾಸಿರ ಅನ್ನವಾಗಲೊ (೧)

ನೀನೆ ಬೆಳಗಿದೀ ಜೀವ ಹಣತೆಯು ಅಂಧ ಕಳೆಯಲೊ
ರವಿಯು ಮೂಡಲಿ ಚಂದ್ರ ಕಾಡಲಿ ಚಕ್ರವುರುಳಲೊ (೨)

ಯುಗಯುಗದೊಳು ಪ್ರೀತಿಯಮುನೆ ಬಿಡದೆ ಹರಿಯಲೊ
ಶ್ರೀನಿವಾಸ ವಿಠಲ ರಾಧೆಯು ಎನ್ನೊಳಗೆ ನಲಿಯಲೊ (೩)

ನಿನ್ನ ಮಧುರ ಮುರಳಿಗಾನವು ನಿತ್ಯವಾಗಲೊ
ಕರುಣೆ ನಿನ್ನದು ಸುಜನ ಬಕುತಗೆ ಸತ್ಯವಾಗಲೊ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೧೦.೨೦೧೨

Wednesday, October 3, 2012

Shri Krishnana Nooraru Geethegalu - 302

ಅವನೆ ಕಾರಣನೊ ಶ್ರೀಪತಿ

ಅಲ್ಪನೆನ್ನಯ ಹಲ ಜನುಮದ ಕರ್ಮವ ಕಳೆದು ಕಾವನೊ ದೇವ ಶ್ರೀಹರಿ
ಮತಿಗೇಡಿ ನಿನ್ನಯ ಸದ್ಗತಿಯು ಸುಮತಿಗೆ ಅವನೆ ಕಾರಣವರಿಯೊ ಶ್ರೀಪತಿ

ಜಲಬಿಂದು ಆದಿಯೊಳು ಜಗಬಂಧು ದಶದೊಳಗೆ ಮತ್ಸ್ಯನೊ ಸತ್ಯದೊಳು ಧರಣೀಶ್ವರ
ಕೂರ್ಮನೊ ಅಮೃತಕೆ ವರಾಹನವನಿಗೆ ಕಂದ ಕಾಯೆನೆ ಸಿಂಹ ಜಗದೀಶ್ವರ

ಗರ್ವ ಮೆಟ್ಟಿದ ಪುಟ್ಟ ಕೊಡಲಿಯೆತ್ತಿದ ದಿಟ್ಟ ತ್ರೇತೆ ಸದ್ಗುಣ ರಾಮ ಸತ್ಯನಾಮ
ಶ್ರೀನಿವಾಸ ವಿಠಲ ತಾ ದ್ವಾಪರನು ಬಲರಾಮ ಬಿಡದೆ ಎಮ್ಮನು ಕಾವ ನಿತ್ಯಪ್ರೇಮ (೨)

ಅಲ್ಪನೆನ್ನಯ ಹಲ ಜನುಮದ ಕರ್ಮವ ಕಳೆದು ಕಾವನೊ ದೇವ ಶ್ರೀಹರಿ
ಮತಿಗೇಡಿ ನಿನ್ನಯ ಸದ್ಗತಿಯು ಸುಮತಿಗೆ ಅವನೆ ಕಾರಣವರಿಯೊ ಶ್ರೀಪತಿ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೧೦.೨೦೧೨

Sunday, September 30, 2012

Shri Krishnana Nooraru Geethegalu - 301

ಪ್ರೇಮವೆ ರಾಧೆ

ಪ್ರೇಮವೆ ರಾಧೆ ಕೃಷ್ಣನ ಜೊತೆಯೊಳು ಇಲ್ಲ ಎನ್ನದಿರೆ
ಕೆಂಪಿನ ಗಲ್ಲವೆ ಎಲ್ಲವ ಹೇಳಿವೆ ಸುಮ್ಮನೆ ನಾಚದಿರೆ

ಕಂಗಳ ಚಿಗರೆಯು ಗೋಕುಲ ಗೊಲ್ಲನ ಕರೆಯೆ ಓಡುತಿವೆ
ಮುಚ್ಚದ ರೆಪ್ಪೆಯು ಆ ನಿನ್ನ ನಲ್ಲನ ಹಾದಿಯ ಕಾಯುತಿವೆ (೧)

ಹೃದಯದಿ ಢವಢವ ತಾಳಮೃದಂಗ ಭಯವನು ನುಡಿಸುತಿವೆ
ಗೆಜ್ಜೆಯ ಕಾಲ್ಗಳ ನೀಳದ ಬೆರಳು ಚಿತ್ರವ ಬಿಡಿಸುತಿವೆ (೨)

ನಿನ್ನಯ ಸುಂದರ ಒಡಲಿನ ವೀಣೆಯು ಮುರಳಿಯ ಕಾಯುತಿದೆ
ಬಾರೆನ್ನ ದೊರೆಯೆ ಬಿಡಿಸೆನ್ನ ಸೆರೆಯ ಕೃಷ್ಣ ಎನುತಲಿದೆ (೩)

ಪ್ರೇಮವೆ ರಾಧೆ ಕೃಷ್ಣನ ಜೊತೆಯೊಳು ಇಲ್ಲ ಎನ್ನದಿರೆ
ಕೆಂಪಿನ ಗಲ್ಲವೆ ಎಲ್ಲವ ಹೇಳಿವೆ ಸುಮ್ಮನೆ ನಾಚದಿರೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೯.೨೦೧೨

Shri Krishnana Nooraru Geethegalu - 300

ಅವುದೊ ಮೋಹವದು

ಅವುದೊ ಮೋಹವದು ಸೆಳೆಯುತಿದೆ ಎನ್ನನು ಆ ಮುರಳಿಯ ಕರೆಗೆ
ಒಲುಮೆಯ ದಾಹವಿದೆ ಪೋಗುವೆನು ಗೆಳತಿಯೆ ಅವನೆದೆಯಾಸರೆಗೆ

ತೀಡುವ ತಂಗಾಳಿ ಅವ ಬರುವ ಕಚಗುಳಿಯ ಇಡುತಿಹುದೆ ಮೈಯ್ಯ ಒಳಗೆ
ವಿರಹದ ವೀಣೆಯದು ಮೋಹದ ಸರಿಗಮವ ನುಡಿಯುತಿದೆ ಎದೆಯ ಒಳಗೆ (೧)

ಮನಬನದ ಮಾಮರದಿ ಹಾಡುತಿದೆ ಕೋಕಿಲವು ನಲುಮೆಯ ಹೊಸತು ಕಾವ್ಯ
ಅವನೆದೆಯ ಅಪ್ಪುಗೆಯ ಬೆಚ್ಚನೆಯ ಬಂಧನದಿ ಈ ರಾಧೆ ಒಲವೆ ರಮ್ಯ (೨)

ಪ್ರೀತಿಮೋಡದ ಒಡೆಯ ಶ್ರೀನಿವಾಸ ವಿಠಲನೆ ಸುರಿವನು ಸ್ವಾತಿಯ ವರ್ಷವಾಗಿ
ಚಿಗುರಾಗಿ ಹಸಿರಾಗಿ ಗೊನೆಯಾಗಿ ತೆನೆಯಾಗಿ ನಲಿವನೆ ಎನ್ನೊಳಗ ದಾಹ ನೀಗಿ (೩)

ಅವುದೊ ಮೋಹವದು ಸೆಳೆಯುತಿದೆ ಎನ್ನನು ಆ ಮುರಳಿಯ ಕರೆಗೆ
ಒಲುಮೆಯ ದಾಹವಿದೆ ಪೋಗುವೆನು ಗೆಳತಿಯೆ ಅವನೆದೆಯಾಸರೆಗೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೯.೨೦೧೨

Wednesday, September 26, 2012

Shri Krishnana Nooraru Geethegalu - 299

ಕಂಡಿರಾ ಎಮ್ಮ ಕಂದನ

ಕಂಡಿರಾ ಎಮ್ಮ ಕಂದನ ಎಮ್ಮ ಚೆಲುವ ಗೊಲ್ಲನ
ಕೃಷ್ಣನಾಮದ ತುಂಟಬಾಲನ ಗೋಕುಲದ ಪಾಲನ

ಮುಡಿಗೆ ಗರಿಯನಿಟ್ಟನ ಬಲಿಯ ಮೆಟ್ಟಿದ ಪುಟ್ಟನ
ತ್ರೇತೆಯೊಳು ದಶನ ಮುರಿದ ದ್ವಾರಕೆಯ ದಿಟ್ಟನ (೧)

ರಾಧೆ ಪ್ರೀತಿಯ ಪಟ್ಟನ ಭಾಮೆಗು ಹೂವ ಕೊಟ್ಟನ
ಮನಮನದಿ ಮಧುರ ಮುರಳಿಯ ಗಾನ ತೇಲಿಬಿಟ್ಟನ (೨)

ಶುದ್ಧಬಕುತಿಗೆ ಒಲಿವನ ಬಿಡದೆ ಸುಜನರ ಪೊರೆವನ
ಶ್ರೀನಿವಾಸ ವಿಠಲ ಕೃಷ್ಣನ ನವನೀತ ಚೋರನ (೩)

ಕಂಡಿರಾ ಎಮ್ಮ ಕಂದನ ಎಮ್ಮ ಚೆಲುವ ಗೊಲ್ಲನ
ಕೃಷ್ಣನಾಮದ ತುಂಟಬಾಲನ ಗೋಕುಲದ ಪಾಲನ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೯.೨೦೧೨

Tuesday, September 25, 2012

Shri Krishnana Nooraru Geethegalu - 298

ಒಲಿದು ಬಾರೊ ಕೃಷ್ಣನೆ

ಕುಣಿದು ಬಾರೊ ನಲಿದು ಬಾರೊ ಒಲಿದು ಬಾರೊ ಕೃಷ್ಣನೆ
ಎನ್ನ ಎದೆಯೊಳು ಪ್ರೀತಿರಾಗವ ಉಲಿದು ಬಾರೊ ಕೃಷ್ಣನೆ

ಕಾರ್ಯಕಾರಣ ನಿನ್ನದೊ ಕಾವ ಕರುಣೆಯು ನಿನ್ನದೊ
ಕರೆತಂದವ ನೀನೊ ಕೃಷ್ಣ ಪೊರೆವ ಭಾರವು ನಿನ್ನದೊ (೧)

ಜೀವಬಂಧವು ನಿನ್ನದೊ ಈ ಗಾಳಿಗಂಧವು ನಿನ್ನದೊ
ಬಂಧದೊಳಗೆ ಸುಬಂಧವಾದ ಹೂವ ಅಂದವು ನಿನ್ನದೊ (೨)

ಶುದ್ಧಬಕುತಿಯು ಎನ್ನದೊ ಭವದೆ ಮುಕುತಿಯು ನಿನ್ನದೊ
ಶ್ರೀನಿವಾಸ ವಿಠಲ ಕೃಷ್ಣನೆ ಎನ್ನಾತ್ಮ ಶಕುತಿಯು ನಿನ್ನದೊ (೩)

ಕುಣಿದು ಬಾರೊ ನಲಿದು ಬಾರೊ ಒಲಿದು ಬಾರೊ ಕೃಷ್ಣನೆ
ಎನ್ನ ಎದೆಯೊಳು ಪ್ರೀತಿರಾಗವ ಉಲಿದು ಬಾರೊ ಕೃಷ್ಣನೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೯.೨೦೧೨

Shri Krishna Nooraru Geethegalu - 297

ಕಂಡು ಧನ್ಯನಾದೆ

ಕಂಡು ಧನ್ಯನಾದೆ ನಾ ಕಾವೇರಿ ರಂಗನ
ಸ್ಮರಿಸೆ ಸುಖದಿ ಎಮ್ಮ ಕಾವ ಬಕುತಸಂಗನ

ಅಮ್ಮ ಲಕುಮಿಯ ಪ್ರಾಣದೊಡೆಯನ ವೇಂಕಟೇಶನ
ಪರಮ ಪಾವನೆ ಪುಣ್ಯೆಯವಳು ಪಾದ ತೊಳೆವನ
ಆದಿಶೇಷನ ಶಾಂತಶಯನದಿ ಸುಖಿಪ ಶ್ರೀನಿವಾಸನ
ಧರಣಿ ಕಾವ ದಶದ ದೇವನ ದುರಿತ ಭಂಗನ (೧)

ಆದಿರಂಗನ ಭಜಿಸೆ ಶುದ್ಧದಿ ಅಂತರಂಗದಿ ನಲಿವನ
ನಾನು ತೊರೆದು ನೀನೆ ಎನುವನ ಕರೆಗೆ ತಾನೊಲಿವನ
ಜಗದ ದಾಸರು ಹಾಡಿ ಪೊಗಳಿದ ಆದಿ ಅನಂತ ಅಂತ್ಯನ
ದೀನನೆನ್ನನು ಮಾನದಿ ಕಾಯ್ವ ಶ್ರೀನಿವಾಸ ವಿಠಲ

ಕಂಡು ಧನ್ಯನಾದೆ ನಾ ಕಾವೇರಿ ರಂಗನ
ಸ್ಮರಿಸೆ ಸುಖದಿ ಎಮ್ಮ ಕಾವ ಬಕುತಸಂಗನ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೦೯.೨೦೧೨

Saturday, September 22, 2012

Shri Krishnana Nooraru Geethegalu - 296

ಕೊಲದಿರೆ ಹೀಗೆನ್ನ

ಅಗಲದಿರೆ ರಾಧೆ ಕೊಲದಿರೆ ಹೀಗೆನ್ನ
ನೀನಿರದ ಎನ್ನಿರುವು ಶೂನ್ಯ ಕಾಣೆ

ಕಡಲಿನಾಳದ ಚಿಪ್ಪು ರೆಪ್ಪೆಯರಳಿಸೆ ಮುತ್ತು
ಹೊಸಬೆಳಕಿನನುಭವವು ಕಪ್ಪ ಸೀಳಿ
ನಿನ್ನ ಮನದಾಗಸವ ಮುಸುಕಿದಾ ತೆರೆ ಸರಿಸೆ
ಸುಳಿಯಲಿ ತಂಗಾಳಿ ಒಲವ ಕೇಳಿ (೧)

ಸಂಜೆಯ ಇಳಿಬಾನು ನಗುವ ಚಂದಿರಚುಕ್ಕಿ
ಎನ್ನೆದೆಯ ಹೂಹಾಸು ಬಾಡುತಿಹುದೆ
ನಿನ್ನ ಕಂಗಳ ಒಲುಮೆ ಪ್ರಣತಿ ಬೆಳಗಿಸೆ ರಾಧೆ
ಬರುವೆ ಸನಿಹಕೆ ಒಂಟಿ ಕಾಡುತಿಹುದೆ (೨)

ಮಾತುಗಳ ಮೋಡಗಳು ಮಥಿಸಿ ಮಳೆಗರೆಯಲಿ
ಬಿರುಕಾದ ಎದೆದಡೆಗೆ ಬೆಸುಗೆ ಹೊಸೆದು
ಭೋರ್ಗರೆಯಲಿ ಪ್ರೀತಿ ವಿರಹದೆದೆಗಳ ತಣಿಸಿ
ಉಲ್ಲಾಸ ಹೊಸಹಗಲಿನಧರ ಬಿರಿದು (೩)

ಅಗಲದಿರೆ ರಾಧೆ ಕೊಲದಿರೆ ಹೀಗೆನ್ನ
ನೀನಿರದ ಎನ್ನಿರುವು ಶೂನ್ಯ ಕಾಣೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೦೯.೨೦೧೨

Thursday, September 20, 2012

Shri Krishnana Kavya - 003

ಹನಿಗಳು
ತಲೆಬಾಗಿಲೊಳು
ತೋರಣ
ಹೋಳಿಗೆಯೊಳು
ಸಿಹಿ ಹೂರಣ
ಗೌರಿಗೆ ಮಗಳು
ಮನೆಗೆ ಬರುವ
ಕಾರಣ

-೨-

ಗಣಪತಿ
ಬರುವ ಹಾದಿಯಲಿ
ನಾರದರು ಸಿಕ್ಕಿದ್ದರು
ಬೆಂಗಳೂರ ಕಡೆ
ಕುಡಿವ ನೀರಿನ ಸಮಸ್ಯೆ
ಒಂದೆರಡು ಬಾಟಲ್
ಗಂಗಾಜಲ ಕ್ಯಾರಿ
ಮಾಡು ಅಂದರು
ಕೊರಗು

-೩-

ಚೌತಿಚಂದ್ರನ ಎದ್ಯಾಗೊಂದೆ ಕೊರ್ಗು
ಬೆಳದಿಂಗ್ಳ ಪೆನ್ನಾಗ್ ಕವಿತೆ ಬರ್ಯೊ
ಕವ್ಗೋಳು ಕೂಡಾ
ನೋಡ್ತಾಯಿಲ್ಲಾಂತ ತನ್ಕಡೆ ತಿರ್ಗು

-೪-

ಗಂಡಸಿಗ್ಯಾಕ್ರಪ್ಪ
ಗೌರಿ ದು:ಖ
ನಾಳೆ ಹೋದ್ರೆ
ಅತ್ತೆ ಮನೇಲಿ
ಭೂರಿ ಭೋಜನ
ಗಣೇಶ ಸುಖ

Shri Krishnana Kaavya - 002

ಕಿರುತೊರೆ

ಮೂಲವೆಂಬೊ ತಾಯಮಡಿಲ ಜಿಗಿದು
ಅಂಬೆಗಾಲಲ್ಲರಿದು ಜುಳುಜುಳು ಕವಿತೆ
ಅಣುಅಣು ನೀರಾಗುವ ಮಾಯೆ
ಕಿರುತೊರೆಯ ಜೀವದೊರತೆ

ಸುಲಭವಲ್ಲ ಪಯಣ ಮುಂದೆ
ಬಂಡೆಗಲ್ಲಿಗೆ ಮೈ ತರಚಿ ಪೊದರುಗಳಲಿ ಕೈಕಾಲು
ಪರಚಿ ಜಾರು ಜವುಗು ಮಣ್ಣು ಜಿಗಣೆ
ಕಾರಣವಿರದೆ ಕೂಗುವ ಜೀರುಂಡೆ ಸುಂಯ್ಯೆನುವ
ಸೊಳ್ಳೆ ಬೇಡದ ಗಾನ ಜೀವನ

ನಡೆಯಲೇ ಬೇಕು ಇನ್ನು ತೊರೆ
ತೊರೆದಾಗಿದೆ ತಾಯತೊಡೆ
ಆವುದೋ ಊರ ತಿರುವಲಿ ಸೊಂಟ ಬಳುಕಿ
ಬೃಹತ್ ಬಂಡೆಯ ತಲೆಯಿಂದ ಧುಮುಕಿ
ಹರಿದರಿದು ತಿಳಿಯಾಗಿ ನದಿಯಾಗಿ
ಬಣ್ಣದ ಮೀನು, ಸೀಗಡಿ ಮತ್ತು ಕಲ್ಲುಏಡಿಗೂ ತಾಯಾಗಿ
ಜೀವಜೀವದ ದಾಹವಾರಿಸೊ ಗಂಗೆ
ಕೆಲವೊಮ್ಮೆ ಪ್ರೇಮಿಗಳ ಪಾದಕೆ ತಂಪು
ಅವಕಾಶವಿದ್ದಂತೆ ಆಕಾರ ಅದಲುಬದಲು
ತೆಳ್ಳನೆಯ ಸ್ಫಟಿಕದಂತೆ ಒಮ್ಮೆಮ್ಮೆ
ವಜ್ರದಂತೆ ಗಡಸು
ಮರದ ನೆರಳಿದ್ದರೂ ದಂಡೆಯಲಿ
ವಿಶ್ರಮಿಸದಂತೆ
ಕೃಶವಾಗಿ ಸುಡುಬೇಸಿಗೆಗೆ ಮತ್ತೆ
ಮುಖವೊಡ್ಡಿ ಮಳೆಗೆ ಖುಷಿಯಾಗಿ

ನಾನೆಂಬೊ ಪದಕಳೆದು
ಕಡಲ ಗರ್ಭದೊಳ ನಡೆದು
ತೊರೆಯೀಗ ಪರಿಪೂರ್ಣ ಮತ್ತು
ಸ್ಪಷ್ಟ ಹರಿವುದರ ಕಾರಣ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೯.೨೦೧೨

(ಶ್ರೀಪುರುಷೋತ್ತಮ ಬಿಳಿಮಲೆಯವರ ’ಬಂಟಮಲೆಯ ಕಿರುತೊರೆ’ ಓದಿ...)

Tuesday, September 18, 2012

Shri Krishnana Nooraru Geethegalu - 295

ಸ್ನೇಹಿತರೆ, ಗಣೇಶ ಚತುರ್ಥಿಯ ಶುಭಸಂದರ್ಭದಲ್ಲಿ, ಮಹಾಗಾತ್ರನ ಬಗ್ಗೆ ಒಂದು ಲೈಟ್ ಕವಿತೆ.

ನಮ್ಮ ಗಣಪ

ಡೊಳ್ಳು ಹೊಟ್ಟೆ ಬಿಟ್ಟುಕೊಂಡು
ಅಪ್ಪ ಶಿವಂಗ್ ಟಾಟಾ ಮಾಡಿ
ಬತ್ತಾ ಅವ್ನೆ ಅವ್ವನ್ ಜೊತೆ
ನಮ್ಮ ಗಣಪ

ಬಾಗ್ಲೀಗ್ ಮಾವಿನ್ ತೋರ್ಣ ಕಟ್ಟಿ
ಆಡ್ಗೆ ಮನೇಲ್ ಹೋಳ್ಗೆ ತಟ್ಟಿ
ಉಣ್ಣಾಕ್ ಬಾರೊ ಅವ್ವನ್ಜೊತೆ
ಕರ್ಯಾನ್ ಬರ್ರಪ್ಪ

ಮಳೆಪಳೆ ಕೊಡೋನ್ ನೀನು
ಅಕ್ಕಿಅನ್ನ ನೀಡೋನ್ ನೀನು
ಇನ್ನೊಂದ್ ನಾಕ್ದಿನ ಇದ್ದೋಗಂತ
ಕೇಳಿಕೊಳ್ರಪ್ಪ

ಆಗಾಕಿಲ್ಲ ಬಿಲ್ ಕುಲ್ ಅಂತ
ವಂಟೆ ಬಿಟ್ರೆ ನಂ ಗಣಪ
ದಾರೀಗ್ ಕಡ್ಬೀನ್ ಬುತ್ತಿ ಕಟ್ಟಿ
ಕಳ್ಸಿಕೊಡ್ರಪ್ಪ

ಮುಂದಿನ್ವರ್ಸ ಬರ್ಬೇಕಂತ
ಅಲ್ಲಿವರೆಗು ಕಾಯ್ಬೇಕಂತ
ಸಿವ್ನ ಸುಬ್ನ ಕೇಳುದ್ವೀಂತ
ಹೇಳಿ ಕಳುಸ್ರಪ್ಪ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೯.೨೦೧೨

Shri Krishnana Nooraru Geethegalu - 294

ಬಾರೊ ನಮ್ಮ ಮನೆಗೆ

ಚೆಂಡುಬುಗುರಿ ಆಡೊ ಚೆಲುವ ಕೃಷ್ಣಯ್ಯ ಬಾರೊ ನಮ್ಮ ಮನೆಗೆ
ಗೋಪಿ-ನಂದನು ಕಂಡು ಕೋಪಗೊಳ್ಳರೆ ಕೃಷ್ಣ ಬಾರೊ ನಮ್ಮ ಮನೆಗೆ

ನಿನ್ನ ಮುದ್ದಿನ ಮೈಯ್ಯ ಮುದ್ದಾಡಿ ತೊಳೆಯುವೆ ನೊಸಲಿಗೆ ಶ್ರೀತಿಲಕ
ಕಿರುನಗೆ ಸೂಸುವ ನಿನ್ನಯ ಅಧರಕೆ ಸಂಜೆಯ ರವಿವುದಕ
ಪಟ್ಟೆಪೀತಾಂಬರ ಉಡಿಸುವೆ ದೊರೆಯೆ ಕೊರಳಿಗೆ ಮಣಿಪದಕ
ಕೇಶದಿ ಗರಿಯು ಕಾಲೊಳು ಕಿರುಗೆಜ್ಜೆ ನಲಿಯೊ ಜಗಜನಕ (೧)

ಚುಕ್ಕೆಚಂದ್ರನ ತೋರಿ ತೂಗುಮಂಚದಿ ನಿನ್ನ ತೂಗುವೆ ಶ್ರೀಹರಿಯೆ
ತುಪ್ಪದ ಚಕ್ಕುಲಿ ಸಕ್ಕರೆ ನೊರೆಹಾಲ ಸವಿಯೊ ಮನದಣಿಯೆ
ಜಗವ ತೊಟ್ಟಿಲ ಮಾಡಿ ಜೋಗುಳವಾಡುವೆ ಮಲಗೊ ಶ್ರೀಲೋಲ
ಕಣ್ತಣಿಯೆ ನಿನ್ನ ಕಂಡು ಧನ್ಯನಾಗುವೆ ಶ್ರೀನಿವಾಸ ವಿಠಲ (೨)

ಚೆಂಡುಬುಗುರಿ ಆಡೊ ಚೆಲುವ ಕೃಷ್ಣಯ್ಯ ಬಾರೊ ನಮ್ಮ ಮನೆಗೆ
ಗೋಪಿ-ನಂದನು ಕಂಡು ಕೋಪಗೊಳ್ಳರೆ ಕೃಷ್ಣ ಬಾರೊ ನಮ್ಮ ಮನೆಗೆ

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೮.೦೯.೨೦೧೨

Monday, September 17, 2012

Shri Krishnana Nooraru Geethegalu - 293

ಚೆಲುವ ನಾಮದ ಕೃಷ್ಣನ

ಬಾರೆ ಗೆಳತಿ ತಾರೆ ಬಿಂದಿಗೆ ಯಮುನೆಯೆಡೆಗೆ ಪೋಗುವ
ನೀರ ತರುವ ನೆವದಿ ನಗುವ ಚೆಲುವ ಗೊಲ್ಲನ ನೋಡುವ

ಕಂಗಳಲೆ ಕವಿತೆ ಬರೆವನ ಕಿರುನಗೆಯೊಳು ಸನಿಹ ಕರೆವನ
ಮುರಳಿಯುಲಿದು ಮಧುರಗಾನವ ಎದೆಗೆ ಬರೆವನ
ನಿದ್ದೆಗೊಡದ ನೀಲವರ್ಣನ ಆಸೆಯಧರದೆ ಎನ್ನ ಕೊಲುವನ
ಗರಿಯ ಮುಡಿದು ಗಿರಿಯ ತಿರುಗೊ ಎನ್ನ ಕೃಷ್ಣನ (೧)

ಸೆರೆಯೂರನು ತೊರೆದನ ನೆರೆಗೋಕುಲ ಪೊರೆದನ
ದುಷ್ಟವುರಗದ ಹೆಡೆಯ ಮೆಟ್ಟಿ ವಿಶಿಷ್ಟ ನಾಟ್ಯವನಾಡ್ದನ
ಸಂಜೆ ಸುಂದರ ವೃಂದಾವನದಿ ರಾಧೆಯೊಲುಮೆಯ ಗೆಲುವನ
ಶ್ರೀನಿವಾಸ ವಿಠಲನೆಂಬೊ ಚೆಲುವ ನಾಮದ ಕೃಷ್ಣನ (೨)

ಬಾರೆ ಗೆಳತಿ ತಾರೆ ಬಿಂದಿಗೆ ಯಮುನೆಯೆಡೆಗೆ ಪೋಗುವ
ನೀರ ತರುವ ನೆವದಿ ನಗುವ ಚೆಲುವ ಗೊಲ್ಲನ ನೋಡುವ

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೯.೨೦೧೨

Sunday, September 16, 2012

Shri Krishnana Nooraru Geethegalu - 292

ಎಂದು ಬರುವೆಯೊ

ಎಂದು ಬರುವೆಯೊ ಇಂದಿರೆರಮಣ ಎನ್ನ ನೋಡಲು
ಜೀವವೆನದು ಕಾಯುತಿಹುದೊ ನಿನ್ನ ಕಾಣಲು

ರಾಮನಂದದಿ ಬರುವೆನೆಂದರೆ ಶಬರಿಯಾಗಿ ಕಾವೆನು
ನೀನಲ್ಲದೆ ಅರಿವರಾರೊ ಶಿಲೆಯೊಳಗಿನ ನೋವನು
ದಶಶಿರನು ನಾನಾಗುವೆ ಕೊಲುವೆಯೆಂದರೆ ರಾಮನೆ
ಕೊಲುವ ಮೊದಲು ಶ್ರೀಚರಣವ ತೋರೊ ಎನ್ನ ಪ್ರಾಣನೆ (೧)

ಕೃಷ್ಣರೂಪದಿ ಬರುವೆಯಾದರೆ ಕುರುಜನಾಗಿ ನಿಲುವೆನು
ಸಮರಧರೆಯೊಳು ಕಂಡು ದೇವನೆ ಧನ್ಯ ಧನ್ಯ ಎನುವೆನು
ಬೇಡವೆನದಿರೊ ಹನುಮನಾಗಿ ನಿನ್ನ ಚರಣದಿ ಇರುವೆನು
ಶ್ರೀನಿವಾಸ ವಿಠಲನಲ್ಲದೆ ಆವ ದೇವರ ಅರಿಯೆನು (೨)

ಎಂದು ಬರುವೆಯೊ ಇಂದಿರೆರಮಣ ಎನ್ನ ನೋಡಲು
ಜೀವವೆನದು ಕಾಯುತಿಹುದೊ ನಿನ್ನ ಕಾಣಲು

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೯.೨೦೧೨

Saturday, September 15, 2012

Shri Krishnana Nooraru Geethegalu - 291

ವಂದೆ ಗಣನಾಥ

ಗಣನಾಥ ವಂದೆ ಗಣನಾಥ
ವರದ ವಿನಾಯಕ ಗುಣದಾತ

ಕೈಲಾಸಪತಿಯೆಮ್ಮ ಶಿವರಾಯಸುತನೆ
ಮಾತೆಯ ಮೈಯ್ಯ ಉದಕದೊಳುದಿಸಿದನೆ
ಜನುಮ ಕಾರಣರೆ ಜಗವೆನಗೆಂದವನೆ
ಸ್ಕಂದಾಪೂರ್ವಜ ಸುಮುಖ ಶ್ರೀ ದೇವನೆ (೧)

ದೇವದೇವಾದಿಗಳ ದುರಿತವ ಕಳೆದನೆ
ಆದಿಪೂಜೆಯು ನಿನಗೆ ವರವದ ಪಡೆದನೆ
ಕರುಣದಿ ಕಾಯೆಮ್ಮ ಕಪಿಲ ಕವೀಶನೆ
ಶ್ರೀನಿವಾಸ ವಿಠಲ ತಾ ಒಪ್ಪಿ ವಂದಿಪನೆ (೨)

ಗಣನಾಥ ವಂದೆ ಗಣನಾಥ
ವರದ ವಿನಾಯಕ ಗುಣದಾತ

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೯.೨೦೧೨

Friday, September 14, 2012

Shri Krishnana Nooraru Geethegalu - 290

ವಂದಿಪೆ ವರಪ್ರದ

ವಂದಿಪೆ ವರಪ್ರದ ವಿನಾಯಕ
ಚಂದ್ರಕಿರೀಟನೆ ಸುರಗಣವಂದಿತ

ಆನೆ ಅಂದದ ಮೊಗನೆ ಹರಸೆಮ್ಮ ಹೇರಂಬ
ಜಗದೊಳು ಸಕಲವು ನಿನ್ನಿಂದಲಾರಂಭ
ದುರಿತದ ಮೋದಕ ಭಂಜಿಸೊ ಭವಹರ
ಸುಖದೊಳು ಸಲಹೆಮ್ಮ ಶಂಕರಕುವರ (೧)

ಭಾರತ ಬರೆದನೆ ಭವಿತದಿ ಪೊರೆವನೆ
ಅಕ್ಷರದಂಬುಧಿಯೆ ಏಕಾಕ್ಷರನೆ
ದಶದೊಳು ಧರೆಕಾಯ್ವ ಶ್ರೀನಿವಾಸ ವಿಠಲನೆ
ಅದಿಯೊಳು ಪೂಜಿಸುವ ಎಮ್ಮ ರಕ್ಷಕನೆ (೨)

ವಂದಿಪೆ ವರಪ್ರದ ವಿನಾಯಕ
ಚಂದ್ರಕಿರೀಟನೆ ಸುರಗಣವಂದಿತ

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೯.೨೦೧೨

Shri Krishnana Nooraru Geethegalu - 289

ಕಾದಿಹೆನು ನಾ ನಿನ್ನ

ಕಾದಿಹೆನು ನಾ ನಿನ್ನ ಮುದ್ದುಮೋಹನ
ತಡವೇಕೊ ಈ ರಾಧೆ ಬೇಡವಾದೆನ

ನೀನಿರದೆ ಎನ್ನುಳಿವೆ ಪ್ರೀತಿ ಸಂಭ್ರಮ ಸುಖವೆ
ಒಲುಮೆಯೊಡವೆಯ ತಾರೊ ಕೃಷ್ಣ ಪ್ರಭುವೆ
ನೀನಿರದ ಈ ಹೃದಯ ಗಾನವರಿಯದ ಕೊಳಲು
ಶ್ರೀನಿವಾಸ ವಿಠಲನೆ ಬಾರೊ ದೊರೆಯೆ

ಕಾದಿಹೆನು ನಾ ನಿನ್ನ ಮುದ್ದುಮೋಹನ
ತಡವೇಕೊ ಈ ರಾಧೆ ಬೇಡವಾದೆನ

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೪.೦೯.೨೦೧೨

Thursday, September 13, 2012

Shri Krishnana Nooraru Geethegalu - 288

ಶುಭೋದಯಂ

ಶುಭೋದಯಂ ಶುಭದಾಯಕಂ
ಉಮಾಸುತಂ ವಂದೆ ಗಣನಾಯಕಂ

ಆದಿಪೂಜಿತಂ ಅನಂತಚಿದ್ರೂಪಂ
ಭುವನಪತೀಂ ವಂದೆ ಸೋಮಶೋಭಿತಂ (೧)

ಚತುರ್ಭುಜಂ ಮನೋಚಿತ್ತವಿಹಾರಂ
ಬುದ್ಧಿನಾಥಂ ವಂದೆ ಬಾಲಗಣಪತೀಂ (೨)

ಏಕದಂತಂ ಅನೇಕ ವರಪ್ರದ ಶಾಂತಂ
ಈಶಪುತ್ರಂ ವಂದೆ ಏಕಾಕ್ಷರಂ (೩)

ಗಜಾನನಂ ಗಜವಕ್ರದೇವಂ
ಗಣಾಧ್ಯಕ್ಷಂ ವಂದೆ ಗಧಾಧರಂ (೪)

ಸುರೇಶ್ವರಂ ಸಕಲ ಸಿದ್ಧಿಶ್ರೇಯಂ
ನಮೊ ನಮೊ ಶ್ರೀನಿವಾಸ ವಿಠಲ ಪ್ರಿಯಂ (೫)

ಶುಭೋದಯಂ ಶುಭದಾಯಕಂ
ಉಮಾಸುತಂ ವಂದೆ ಗಣನಾಯಕಂ

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೩.೦೯.೨೦೧೨

Tuesday, September 11, 2012

Shri Krishnana Nooraru Geethegalu - 287

ಒಲವ ಮಳೆಯ ಸುರಿಯೊ

ಒಲವ ಮಳೆಯ ಸುರಿಯೊ ಕೃಷ್ಣ ಹದವಿರದೀ ಎದೆಯೊಳು
ಕಣ್ಣ ತೆರೆದು ಬಯಕೆಬೀಜವು ನವೋಲ್ಲಾಸ ಹೊಳೆಯಲು

ಮೊದಲ ಬಸಿರು ಹೊಸತು ಹಗಲು ಚಿಗುರಿ ನಗಲಿ ಹಸಿರೆಲೆ
ಮರೆಯದಿರಲಿ ಬುವಿಯ ತಬ್ಬಿದ ತಾಯಬೇರಿನ ಹಿನ್ನೆಲೆ (೧)

ಕಾರಣವೇ ಇರದೆ ಯಮುನೆ ಹರಿಯುತಿಹಳೆ ಸುಮ್ಮನೆ
ಹರಿಯಬೇಕು ದಿನವು ಜಗವು ತಿಳಿಯಾಗಲು ಒಳಮನೆ (೨)

ಮೌನ ಮೂಡಣದೊಡಲಿನೊಳಗೆ ಮಧುರಮಾತಿನ ಕಿರಣವು
ಚಿಪ್ಪಿನೊಳಗಿನ ಮುತ್ತೆ ಅಂದವು ಇರಲಿ ಹಾಗೆಯೆ ಹೃದಯವು (೩)

ಇರಲಿ ಬೇಸಿಗೆ ಬಿಸಿಲು ಸಹಜವೇ ಸಂಜೆ ಸೋನೆಯ ಮಳೆಹನಿ
ಬೆಳಗೊಳಿರಿಸೊ ಶ್ರೀನಿವಾಸ ವಿಠಲ ಜೀವದಸಿರೊಳು ಇಬ್ಬನಿ (೪)

ಒಲವ ಮಳೆಯ ಸುರಿಯೊ ಕೃಷ್ಣ ಹದವಿರದೀ ಎದೆಯೊಳು
ಕಣ್ಣ ತೆರೆದು ಬಯಕೆಬೀಜವು ನವೋಲ್ಲಾಸ ಹೊಳೆಯಲು

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೨.೦೯.೨೦೧೨

Monday, September 10, 2012

Shri Krishnana Nooraru Geethegalu - 286

ಸನಿಹ ದೂರ ಎನುವುದೇಕೆ

ಸನಿಹ ದೂರ ಎನುವುದೇಕೆ ಎನ್ನವಳು ನೀ ಎಂದ ಮೇಲೆ
ಎದೆಗೆಯೆದೆಯು ಬೆರೆಯೆ ಜೇನು ಸವಿಯೆ ಸಿಹಿ ತಡವೇಕೆ

ನಿನ್ನ ಕಂಗಳ ಕಾಂತಿ ಸಾಕು ಹೊಳೆವ ತಾರೆಯ ಹಂಗೇಕೆ
ಸೋಮಸುಧೆಯು ವ್ಯರ್ಥ ಗೆಳತಿ ನಿನ್ನ ಅಧರವು ಅರಳಿರೆ

ನಿನ್ನ ಮೌನವೆ ಕವಿತೆ ಬರೆದೊಡೆ ಮಾತಿಗೆಲ್ಲಿಯ ಅರ್ಥವೇ
ಮಾತನಾಡಲು ಅರಳಿ ಮಲ್ಲಿಗೆ ಒಲುಮೆಯ ಹೊಸ ಸೂತ್ರವೆ

ಸನಿಹವಿರದಿರೆ ರಾಧೆ ನೀನು ಎನ್ನ ಜೀವಕ್ಕೆಲ್ಲಿಯ ಸಾರವೆ
ಶ್ರೀನಿವಾಸ ವಿಠಲ ನಿನ್ನವ ನೀನೆನ್ನ ಒಲುಮೆ ಆಧಾರವೆ

ಸನಿಹ ದೂರ ಎನುವುದೇಕೆ ಎನ್ನವಳು ನೀ ಎಂದ ಮೇಲೆ
ಎದೆಗೆಯೆದೆಯು ಬೆರೆಯೆ ಜೇನು ಸವಿಯೆ ಸಿಹಿ ತಡವೇಕೆ

                     ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೯.೨೦೧೨

Sunday, September 9, 2012

Shri Krishnana Nooraru Geethegalu - 285

ಬರುವೆ ನಿನ್ನ ಸನಿಹ

ಬೇಸರವು ಏಕೆ ರಾಧೆ ಬರುವೆ ನಿನ್ನ ಸನಿಹ
ಒಲುಮೆ ಹನಿಹನಿ ವರ್ಷಗರೆದು ಕಳೆವೆ ನಿನ್ನ ವಿರಹ

ನಿನ್ನ ವೇದನೆ ಎನಗೆ ಅರಿಯದೇ ನೀನೆ ಎನ್ನ ಪ್ರಾಣವು
ನಿನ್ನ ನಿರ್ಮಲಪ್ರೇಮ ತೊರೆದು ಬದುಕಲುಂಟೆ ತ್ರಾಣವು (೧)

ಸುರಿವ ಸೋನೆಮಳೆಯು ತಾನು ನಿನ್ನ ನೆನಪನೆ ತರುತಿದೆ
ಎನ್ನ ಎದೆಯ ವೇಣು ನಿನ್ನ ವೀಣೆ ಸನಿಹವ ಬಯಸಿದೆ (೨)

ನಿನ್ನ ಕಂಗಳ ಬೆಳಕೆ ಸಾಕು ಪ್ರಣತಿ ಸಾಲು ಏತಕೆ
ಚಂದ್ರ ತಾರೆ ತೂಗುಮಂಚವು ಸಾಕ್ಷಿ ಎಮ್ಮ ಮಿಲನಕೆ (೩)

ದಾಹವೆನುತಿದೆ ಎನ್ನ ಮೈಮನ ರಾಧೆ ನಿನ್ನ ಸೇರಲು
ಶ್ರೀನಿವಾಸ ವಿಠಲ ಬರುವೆನೆ ಸಿಹಿಯಧರವ ಹೀರಲು (೪)

ಬೇಸರವು ಏಕೆ ರಾಧೆ ಬರುವೆ ನಿನ್ನ ಸನಿಹ
ಒಲುಮೆ ಹನಿಹನಿ ವರ್ಷಗರೆದು ಕಳೆವೆ ನಿನ್ನ ವಿರಹ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೦೯.೨೦೧೨

Friday, September 7, 2012

Shri Krishnana Nooraru Geethegalu - 284

ಸಂಜೆಯಾಗಿದೆ ಗೆಳತಿ

ಸಂಜೆಯಾಗಿದೆ ಗೆಳತಿ ಬರಲ್ಲಿಲ್ಲ ಅವನಿನ್ನು
ನೆನಪುಗಳ ಜಾತ್ರೆಯಲಿ ನಾನು ಒಂಟಿ

ಎನ್ನ ನಯನಗಳಲ್ಲಿ ಬಯಕೆ ತಾರೆಗಳರಳಿ
ಕಾತರದ ದೀಪಗಳ ಮೆರವಣಿಗೆಯು
ಬೇಸರದೆ ಸುಡುವೆನ್ನ ಆಸೆಯ ಹಾಳೆಯೊಳು
ಸನಿಹ ಬಾರೋ ಎನುವ ಬರವಣಿಗೆಯು (೧)

ಬೇಗ ಬರುವೆನೆ ಎಂದ ಮಧುರತೆಯ ಪಿಸುಮಾತು
ಎನ್ನ ಹೃದಯದ ಕದವ ತೆರೆಯುತಿಹುದು
ಬಿಗಿದಪ್ಪಿ ಮುದ್ದಿಟ್ಟ ಅವನ ಅಧರದ ಬಿಸಿಯು
ಎನ್ನೊಳಗೆ ದಾಹಾಗ್ನಿ ಮೊರೆಯುತಿಹುದು (೨)

ಗೋಕುಲದೆ ಗೋಧೂಳಿ ತರುತಲಿದೆ ತಂಗಾಳಿ
ಅವನ ಬರುವನು ಮುರಳಿ ಉಲಿಯುತಿಹುದು
ಶ್ರೀನಿವಾಸ ವಿಠಲನವ ಬಂದೇ ಬರುವನು ತಾಳೆ
ಎನ್ನೊಳಗಿನಾ ವೀಣೆ ನುಡಿಯುತಿಹುದು (೩)

ಸಂಜೆಯಾಗಿದೆ ಗೆಳತಿ ಬರಲ್ಲಿಲ್ಲ ಅವನಿನ್ನು
ನೆನಪುಗಳ ಜಾತ್ರೆಯಲಿ ನಾನು ಒಂಟಿ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೯.೨೦೧೨

Shri Krishnana Nooraru Geethegalu - 283

ಮೂಲರೂಪರ ಮುಂದೆ ನಲಿವ

ಮೂಲರೂಪರ ಮುಂದೆ ನಲಿವ ಯತಿಯ ನೋಡಿರೊ
ಭವದ ಭಂಗವ ನೀಗಿ ಸುಕೃತದ ಗತಿಯು ಕಾಣಿರೊ

ಪೂರ್ಣಚಂದಿರ ವದನ ಸುಂದರ ಗುರುಸುಧೀಂದ್ರರ ಶಿಷ್ಯರ
ದ್ವೈತದಂಬುಧಿಯೊಳಗೆ ನಗುವ ಭುವನಗಿರಿಯ ರಾಯರ (೧)

ಮೂಲರಾಮರ ದಿವ್ಯಚರಣವ ನಂಬಿ ಭಜಿಸಿದ ಹನುಮರ
ಕಳೆದು ಕಲಿಯೊಳು ನರರ ಅನ್ಯವ ಮುಕುತಿಯೀಯುವ ದೇವರ (೨)

ತುಂಗಾತೀರದ ವೃಂದಾವನದೊಳು ನಿಂತು ಎಮ್ಮನು ಕಾವರ
ಶ್ರೀನಿವಾಸ ವಿಠಲ ನೇಮಕ ಮಂತ್ರಾಲಯದ ಪೂಜ್ಯರ (೩)

ಮೂಲರೂಪರ ಮುಂದೆ ನಲಿವ ಯತಿಯ ನೋಡಿರೊ
ಭವದ ಭಂಗವ ನೀಗಿ ಸುಕೃತದ ಗತಿಯು ಕಾಣಿರೊ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೯.೨೦೧೨

Wednesday, September 5, 2012

Shri Krishnana Nooraru Geethegalu - 282

ನಿನ್ನ ಸಿರಿಚರಣವನು

ನಿನ್ನ ಸಿರಿಚರಣವನು ಭಜಿಪ ಶ್ರೀದಾಸರ
ದಯೆಯು ಎನಗಿರಲು ನೀನ್ಯಾತಕೊ

ಅರಿಯದೆ ಹರಿಯೆಂದ ಅಜಮಿಳಗೆ ನಮಿಸುವೆನೊ
ನೀನೆ ಗತಿಯೆಂದ ಪ್ರಹ್ಲಾದಗೆ
ಶ್ರೀಹರಿಯೆ ಕಾಯೆಂದ ಕರಿಗೆ ವಂದಿಪೆ ಕೃಷ್ಣ
ನೀನೆನ್ನ ಬಲವೆಂದ ಆ ಭೀಮಗೆ (೧)

ಮೂಢಮತಿ ನಾನಯ್ಯ ದೂರದಕ್ಷರವರಿಯೆ
ಕೃತ ತ್ರೇತೆ ಜಪತಪವ ಕೇಳೊ ದೇವ
ನಿನ್ನುಂಡ ಬಕುತರ ಬಾಗಿಲೊಳು ನಾನಿರುವೆ
ಕಾದಿಹೆನು ಶ್ರೀನಿವಾಸ ವಿಠಲ ಬರುವ (೨)

ನಿನ್ನ ಸಿರಿಚರಣವನು ಭಜಿಪ ಶ್ರೀದಾಸರ
ದಯೆಯು ಎನಗಿರಲು ನೀನ್ಯಾತಕೊ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೫.೦೯.೨೦೧೨

Saturday, September 1, 2012

Shri Krishnana Nooraru Geethegalu - 281

ಕಾಡ ಬಿದಿರಿನ ಕೊರಡೊ

ಕಾಡ ಬಿದಿರಿನ ಕೊರಡೊ ಕಾದಿಹೆ ನಾನವನ
ಈ ಜೀವ ಜೀವನ ಪಾವನನ

ಶಬರಿಯ ಮೊರೆಗೆ ತಾನೊಲಿದವನ
ಶಿಲೆಯೊಳು ಜೀವವ ತುಂಬಿದನ
ಕೇಸರಿಸುತನವನು ನಿನ್ನ ಚರಣವೊ ಎನಲು
ಬಕುತನ ಎದೆಯೊಳು ನಿಂದವನ (೧)

ಗೋಕುಲ ಪುರಜನ ಪೂಜಿಪ ದೇವನ
ರಾಧೆಯು ಹೃದಯದಿ ಪ್ರೇಮಿಪನ
ಜಗದ ಗೋಗಳ ಕಾವ ಶ್ರೀನಿವಾಸನ ವಿಠಲ
ಕೊಳಲಾಗಿಸಿ ಎನ್ನ ನುಡಿಸುವನ (೨)

ಕಾಡ ಬಿದಿರಿನ ಕೊರಡೊ ಕಾದಿಹೆ ನಾನವನ
ಈ ಜೀವ ಜೀವನ ಪಾವನನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೦೯.೨೦೧೨

Wednesday, August 29, 2012

Shri Krishnana Nooraru Geethegalu - 280

ಯಾವುದೀ ಹೊಸರಾಗ

ಯಾವುದೀ ಹೊಸರಾಗ ಸೆಳೆಯುತಿದೆ ಹೀಗೆನ್ನ
ಬೃಂದಾವನದೆದೆಗೆ ಹೇಳೆ ಗೆಳತಿ

ಎನ್ನ ವಿರಹದ ಎದೆಯ ಕದವ ಮೆಲ್ಲನೆ ತೆರೆದು
ಬಯಕೆ ಗಾನದ ಪದವ ಬರೆಯುತಿಹುದು
ಎನ್ನಾಸೆ ಹಸಿರಿನೊಳು ಕನಸ ಮಲ್ಲಿಗೆ ಹರಡಿ
ಒಲುಮೆ ಘಮಘಮವನ್ನು ಚೆಲ್ಲುತಿಹುದು (೧)

ನಿಲ್ಲಗೊಡದೆ ಗೆಳತಿ ಕೂರಬಿಡದೇ ಎನ್ನ
ಮೈಮನವ ತನ್ನೆಡೆಗೆ ಸೆಳೆಯುತಿಹುದು
ಎನಿತೆನಿತೊ ಜನುಮಗಳ ಪ್ರೇಮವೆಮ್ಮದು ಎನುತ
ಮಧುರ ನೆನಪಿನ ಪುಟವ ತೆರೆಯುತಿಹುದು (೨)

ಎನ್ನೊಲವಿನರಮನೆಯ ಮಾತಿನರಗಿಳಿಯು
ಮುದ್ದುಕೃಷ್ಣನ ಕಥೆಯ ಪೇಳುತಿಹುದು
ಶ್ರೀನಿವಾಸ ವಿಠಲನೆ ಆ ನಿನ್ನ ಪ್ರಾಣಸಖ
ಕೊಳಲನೂದುವ ಚೆಲುವನೆನುತಲಿಹುದು (೩)

ಯಾವುದೀ ಹೊಸರಾಗ ಸೆಳೆಯುತಿದೆ ಹೀಗೆನ್ನ
ಬೃಂದಾವನದೆದೆಗೆ ಹೇಳೆ ಗೆಳತಿ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೮.೨೦೧೨

Tuesday, August 28, 2012

Shri Krishnana Nooraru Geethegalu - 279

ಅನುಗಾಲ ನಿನ್ನೊಲುಮೆ

ಅನುಗಾಲ ನಿನ್ನೊಲುಮೆ ಎನಗಿರಿಲೊ ಕೃಷ್ಣ
ನಿನ್ನ ಪಾದದ ಧೂಳೊ ಸಲಹೊ ಸುಖದೊಳಗೆನ್ನ

ಅಣುರೇಣು ತೃಣಕಣಕೆ ನೀನಾದಿಯೊ ತಂದೆ
ಅವನಿಯನು ಉದ್ಧರಿಸೆ ದಶದೊಳಗೆ ಬಂದೆ
ಸರಿತಪ್ಪು ನಿನ್ನ ಚಿತ್ತ ನನಗೇನೊ ಗೊತ್ತು
ಅನ್ಯಗಳ ಕರುಣದೊಳು ಮನ್ನಿಸೊ ಕ್ಷಮೆಯಿತ್ತು (೧)

ನೀನಿಲ್ಲದೀ ಜಗದಿ ನಾನು ನಿರ್ಜೀವ
ನೀನೇ ಸಕಲಕು ಕೃಷ್ಣ ಮೂಜಗವ ಕಾವ
ನೀ ಮಾತೆ ನಾ ಕರುವು ಕರೆದೆಡೆಗೆ ಬರುವೆ
ಶ್ರೀನಿವಾಸ ವಿಠಲ ನೀ ಇರಿಸಿದಂದದಿ ಇರುವೆ (೨)

ಅನುಗಾಲ ನಿನ್ನೊಲುಮೆ ಎನಗಿರಿಲೊ ಕೃಷ್ಣ
ನಿನ್ನ ಪಾದದ ಧೂಳೊ ಸಲಹೊ ಸುಖದೊಳಗೆನ್ನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೮.೨೦೧೨

Sunday, August 26, 2012

Shri Krishnana Nooraru Geethegalu - 278

ಓ ಜೀವ ಮನದನ್ನೆ

ಮೌನ ಮುರಿಯೆ ಗೆಳತಿ ಓ ಜೀವ ಮನದನ್ನೆ
ಇರಿದೆನ್ನ ಕೊಲುತಿಹುದೆ ಕಣ್ಣೀರ ಕೆನ್ನೆ

ಸುಡುವ ಬೇಸಿಗೆ ಧಗೆಗೆ ಯುಮುನೆ ಸೊರಗಿದಳೆಂದು
ಕೊರಗುವವೆ ಇಬ್ಬದಿಯ ಅವಳ ತೀರ
ಮುಂಗಾರು ಮಳೆ ಸುರಿದು ಅವಳೊಳ್ಯವ್ವನವರಳೆ
ಸುಖದ ಸಂಭ್ರಮವವಕೆ ಕಳೆದು ಎದೆಭಾರ (೧)

ನಡುಗುವ ಚಳಿಗಾಲ ಎಲೆಯುದುರೆ ಮಾಮರದಿ
ಕೋಗಿಲೆಯು ಮಾಮರವ ಮರೆವುದೇನೆ
ಚೈತ್ರದೊಳು ಚಿಗುರೊಡೆದ ತಳಿರಿಗೆ ತಾಯಾದ
ಮಾಮರವು ಕೋಗಿಲೆಯ ಕರೆಯದೇನೆ (೨)

ತಡವೆಂಬ ಕಾರಣಕೆ ಹುಸಿಗೋಪ ನೀ ತೋರೆ
ಪ್ರಾಣರಾಧೆಯೆ ನಿನ್ನ ಬಿಡುವೆನೇನೆ
ಹುಸಿಮುನಿಸ ಮೌನವದ ಮರೆತು ಮಾತಾಡೆ
ಶ್ರೀನಿವಾಸ ವಿಠಲನ ತೊರೆವೆಯೇನೆ (೩)

ಮೌನ ಮುರಿಯೆ ಗೆಳತಿ ಓ ಜೀವ ಮನದನ್ನೆ
ಇರಿದೆನ್ನ ಕೊಲುತಿಹುದೆ ಕಣ್ಣೀರ ಕೆನ್ನೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೮.೨೦೧೨

Shri Krishnana Nooraru Geethegalu - 277

ಜಯಜಯ ದುರ್ಗೆ

ಜಯಜಯ ದುರ್ಗೆ ಬಕುತಜನ ಸನ್ಮಾರ್ಗೆ
ಕರಮುಗಿವೆನು ಶ್ರೀದೇವಿ ಸಲಹೇ ಮಾತಂಗೆ

ತ್ರಿನೇತ್ರೆ ದಕ್ಷಪುತ್ರೆ ಪವಿತ್ರೆ ದುರ್ಗೆ
ಶೂಲಧಾರಿಣಿ ಮಾತೆ ಜಯತುಜಯ ದುರ್ಗೆ
ಭವಾನಿ ಭವಮೋಚಿನಿ ನಮೋ ಭಾವಪ್ರೀತೆ
ಶರಣೆನುವೆ ಶಾಂಭವಿಯೆ ಹರಸೆಮ್ಮ ದಾತೆ (೧)

ಶ್ರೀಆದ್ಯೆ ಸಿರಿಆರ್ಯೆ ಅಹಂಕಾರಿಣಿ ದುರ್ಗೆ
ಅಭಯೆ ಅನಂತೆ ಜಯತುಜಯ ದುರ್ಗೆ
ಸರ್ವಮಂತ್ರೇ ದೇವಿ ಸತ್ಯಸ್ವರೂಪಿಣಿಯೆ
ಸರ್ವಾಸ್ತ್ರಧಾರಿಣಿಯೆ ಸಲಹೆ ಸುಂದರಿಯೆ (೨)

ನೀ ಭವ್ಯೆ ನೀ ಭಾಗ್ಯೆ ನೀ ಬುದ್ಧಿಸಿದ್ಧಿಯೆ
ನಮೊ ಘೋರೆ ನೀ ರೌದ್ರೆ ಶ್ರೀರುದ್ರದೂತೆಯೆ
ಶ್ರೀನಿವಾಸ ವಿಠಲಾಂಶೆ ವಿಷ್ಣುಮಯೆ ದೇವಿಯೆ
ಜಯವೆಂಬೆ ಕರುಣದೊಳು ಕಾಯೆಮ್ಮ ವೈಷ್ಣವಿಯೆ (೩)

ಜಯಜಯ ದುರ್ಗೆ ಬಕುತಜನ ಸನ್ಮಾರ್ಗೆ
ಕರಮುಗಿವೆನು ಶ್ರೀದೇವಿ ಸಲಹೇ ಮಾತಂಗೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೦೮.೨೦೧೨

Friday, August 24, 2012

Shri Krishnana Nooraru Geethegalu - 276

ಗೋವುಗಳೆ ಗೋಕುಲಕೆ

ನಡೆಯಿರಿ ಸಾಕಿನ್ನು ಗೋವುಗಳೆ ಗೋಕುಲಕೆ
ಎನ್ನ ಜೀವದ ಒಡತಿ ಕಾಯುತಿಹಳು

ಚೆಲುವಿನ ಖನಿಯವಳು ರತಿಯನೇ ಮೀರುವಳು
ಮೈಮನವು ಚಿಗರೆಯ ಜೀವಸುಧೆಯು
ವಿರಹದೊಳು ಬೇಯುವಳು ಯಮುನೆಯ ತೀರದೊಳು
ತಡವಾಗೆ ನೋಯುವಳು ಆ ರಾಧೆಯು (೧)

ನೊರೆಹಾಲ ಸಿಹಿಯವಳು ಕೆನೆಮೊಸರಿನಂಥವಳು
ನವನೀತದೊಲುಮೆಯನು ಉಣಿಸುವವಳು
ಮಿಲನದೊಳು ದಣಿಯುವಳು ಕೊಳಲುಲಿಗೆ ತಣಿಯುವಳು
ಎನ್ನ ಜೀವದ ಗೆಳತಿ ರಾಧೆಯವಳು (೨)

ಹಾರುತಿಹ ಹಕ್ಕಿಗಳೆ ಬೀಸಿ ಬಹ ತಂಗಾಳಿ
ಸುದ್ದಿ ತಿಳಿಸಿರೆ ಕೃಷ್ಣ ಬರುತಿಹನು ಎಂದು
ನಾನವಳ ಪ್ರಾಣಸಖ ಶ್ರೀನಿವಾಸ ವಿಠಲನೆ
ಎನ್ನೊಲುಮೆ ರಾಧೆಯನು ಮರೆಯೆನೆಂದು (೩)

ನಡೆಯಿರಿ ಸಾಕಿನ್ನು ಗೋವುಗಳೆ ಗೋಕುಲಕೆ
ಎನ್ನ ಜೀವದ ಒಡತಿ ಕಾಯುತಿಹಳು

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೦೮.೨೦೧೨

Thursday, August 23, 2012

Shri Krishnana Nooraru Geethegalu - 275

ಸಗ್ಗದ ಸಡಗರ

ಸಗ್ಗದ ಸಡಗರ ಸುಂದರಿ ರಾಧೆಗೆ
ಚೆಲುವೆಗೆ ಚೆಲುವದೇ ನಾಚುತಿದೆ

ನಯನದಂಗಳದಿ ನಲಿವಾಸೆಯ ಭೃಂಗ
ಹರಸಿದೆ ಅಧರವು ಅವನೆದೆ ಹೂ ಸಿಹಿ
ಕರ್ಣವು ತಣಿಯಲು ಮೋಹನ ಸವಿನಾದ
ಹೃದಯದ ಕಣಕಣ ಒಲುಮೆ ವಿನೋದ (೧)

ಇರುಳಿನ ಬಾನೊಳು ನಗುತಿಹ ಚಂದಿರ
ಚೆಲ್ಲಿದ ಬೆಳಕಿನ ಚಿತ್ರವೇ ಸುಂದರ
ಮುಡಿಯೊಳು ನಲಿದಿಹ ಮೊಲ್ಲೆಯ ತಿಂಗಳು
ಕೊಳಲನು ಹರಸಿವೆ ವೀಣೆಯ ಕಂಗಳು (೨)

ಚಿತ್ರದ ಬಟ್ಟಲ ಒಲುಮೆಯ ಹಾಲನು
ಪ್ರಾಣಕೃಷ್ಣಗೆ ಕೊಡಲು ಕಾದಿಹಳು
ಎನ್ನ ಜೀವದ ಜೀವ ಶ್ರೀನಿವಾಸ ವಿಠಲನೆ
ಬಾರೊ ವೃಂದಾವನಕೆ ಎನುತಿಹಳು (೩)

ಸಗ್ಗದ ಸಡಗರ ಸುಂದರಿ ರಾಧೆಗೆ
ಚೆಲುವೆಗೆ ಚೆಲುವದೇ ನಾಚುತಿದೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೦೮.೨೦೧೨

Wednesday, August 22, 2012

Shri Krishnana Nooraru Geethegalu - 274

ಮಳೆಯಾಗಿ ಬಾರೊ ಎನ್ನ

ಮಳೆಯಾಗಿ ಬಾರೊ ಎನ್ನ ಸುಡುವ ವಿರಹದೆದೆಗೆ
ಕಾಯುತಿಹೆನು ಕಡಲಿನಂದದಿ ನಿನ್ನೊಲವಿನ ಸುಧೆಗೆ

ಎದೆಹೊಲವಿದು ಬಾಯಾರಿದೆ ಮೋಹ ನಿನ್ನೊಳು ಎನುತಿದೆ
ವರ್ಷದೊಳಗಿನ ಹರ್ಷರೂಪನೆ ಬಾರೊ ಕೃಷ್ಣನೆ ಕರೆದಿದೆ
ಎನ್ನ ನಯನದ ಕನಸ ಬಿಲ್ಲಿಗೆ ಸಪ್ತವರ್ಣವ ಬಳಿವನೆ
ಜೀವಬುವಿಯೊಳ ಮೊಗ್ಗನರಳಿಸೊ ನಲುಮೆಚಿತ್ರವ ಬರೆವನೆ (೧)

ನಿನ್ನ ಮುರಳಿಯ ರಾಗದೊಳು ಯಮುನೆಯಂದದಿ ವೇಗದೊಳು
ಗೋಪಮಿತ್ರರ ಕಣ್ಣ ಮರೆಸಿ ಬೃಂದಾವನದ ಹಾದಿಯೊಳು
ಸುರಿದುಬಾರೊ ಮೊರೆದುಬಾರೊ ಶ್ರೀನಿವಾಸ ವಿಠಲ ಬಾರೊ
ಕೊನೆಯಿರದ ಒಲುಮೆಮೋಡವ ಎನ್ನೊಡಲಿಗೆ ಹೊತ್ತು ತಾರೊ (೨)

ಮಳೆಯಾಗಿ ಬಾರೊ ಎನ್ನ ಸುಡುವ ವಿರಹದೆದೆಗೆ
ಕಾಯುತಿಹೆನು ಕಡಲಿನಂದದಿ ನಿನ್ನೊಲವಿನ ಸುಧೆಗೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೦೮.೨೦೧೨

Monday, August 20, 2012

Shri Krishnana Nooraru Geethegalu - 273

ಇಳಿಸಂಜೆಯೊಡಲಿನಲಿ

ಇಳಿಸಂಜೆಯೊಡಲಿನಲಿ ನಾನೊಬ್ಬಳೇ ಇಲ್ಲಿ
ಎನ್ನ ಪ್ರೇಮದ ಅರಸ ಬರುವನೇನೆ...ಸಖಿ

ಯಮುನೆಯ ತೀರದಲಿ ಅವನ ಎದೆಯೊರಗಿನಲಿ
ಮಧುರ ಮುರಳಿಯ ಗಾನ ಕೇಳಬೇಕು
ನಾಚುತಿಹ ಕೆಂಮೊಗದ ಚಂದಿರನ ತಾರೆಯರ
ಅವನೊಲುಮೆ ಆಗಸದಿ ನೋಡಬೇಕು (೧)

ಸರಸದ ಸರಿಗಮವ ನುಡಿಸೆನ್ನ ಮೈಮನದಿ
ವೀಣೆಯಂದದಿ ಕೃಷ್ಣ ಎನ್ನಬೇಕು
ವಿರಹದ ಕಣಕಣವು ತಣಿದವನ ಮಿಲನದೊಳು
ಜೀವದುಸಿರದು ಅವನ ಸೇರಬೇಕು (೨)

ಎನ್ನ ತೋಳೊಳು ಬಳಸಿ ಗಲ್ಲಕಧರವನಿರಿಸಿ
ನಯನದೊಳು ನುಡಿದನೇ ಬೇಗ ಬರುವೆನೆಂದು
ಎನ್ನೊಡೆಯ ಗೋಕುಲದ ಶ್ರೀನಿವಾಸ ವಿಠಲನೇ
ಮಲ್ಲಿಗೆಯ ಮುಡಿಗಿಡಲು ತರುವೆನೆಂದು (೩)

ಇಳಿಸಂಜೆಯೊಡಲಿನಲಿ ನಾನೊಬ್ಬಳೇ ಇಲ್ಲಿ
ಎನ್ನ ಪ್ರೇಮದ ಅರಸ ಬರುವನೇನೆ...ಸಖಿ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೮.೨೦೧೨

Sunday, August 19, 2012

Shri Krishnana Nooraru Geethegalu - 272

ಏನ ಬೇಡಲೊ ದೇವ

ಏನ ಬೇಡಲೊ ದೇವ ನಿನ್ನೊಳು ಕರಮುಗಿದು
ಆ ನಿನ್ನ ಶ್ರೀಚರಣ ಸನಿಹ ಸುಖವಲ್ಲದೇ

ಅರಸುತನ ಬೇಡೆನಗೆ ಹರಸುವವ ನೀನಿರಲು
ಅಳಿಸಿ ಪೋದನು ಅಬ್ಬರಿಸಿದಾ ಕುರುಜನು
ಅವನಿ ಐಶ್ವರ್ಯವದ ಹಂಬಲಿಸಿದಸುರನ
ಶಿರಮೆಟ್ಟಿ ಸುತಳದೊಳು ಸಲಹಿದನೆ ಕೃಷ್ಣ (೧)

ಪರಮೋಹವಿಲ್ಲೆನಗೆ ಪರಮಪುಣ್ಯನೆ ಕೃಷ್ಣ
ಸುಧಾಮನಂದದೊಳು ಸಖ್ಯವಿರಿಸೊ
ಶಬರಿಯಂದದಿ ಕಾಯ್ವೆ ಜನುಮಜನುಮಗಳಲ್ಲಿ
ಶ್ರೀರಾಮಮೂರುತಿಯೆ ನೀ ಕರುಣಿಸೊ (೨)

ಧನಕನಕ ಬೇಡೆನಗೆ ಧನಿಕ ಎನ್ನವ ನೀನೊ
ವೈಕುಂಠಪುರದೊಡೆಯ ಲಕುಮಿಲೋಲ
ದಿವ್ಯದಾ ಚರಣಗಳೆ ಸಕಲ ಸಂಪದ ಎನಗೆ
ಮತ್ತೆಲ್ಲ ಕ್ಷಣಿಕವೊ ಶ್ರೀನಿವಾಸ ವಿಠಲ (೩)

ಏನ ಬೇಡಲೊ ದೇವ ನಿನ್ನೊಳು ಕರಮುಗಿದು
ಆ ನಿನ್ನ ಶ್ರೀಚರಣ ಸನಿಹ ಸುಖವಲ್ಲದೇ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೮.೨೦೧೨

Friday, August 17, 2012

Shri Krishna Kavya - 001

ಒಂಟಿಮರ..ಬುದ್ಧ ಮತ್ತು ನಾವು

ವಿಶಾಲದೊಳಗೊಂದು ಒಂಟಿ ಮರ
ಬಯಲು ಆಲಯವೆರಡು ತನ್ನೊಳಗೆ ಎನುವಂತೆ

ಹಠಯೋಗಿ ಅನ್ನಿಸೊಲ್ಲ ಕಾರಣ ಮರ
ಮಧ್ಯಾಹ್ನದ ಬಿಡುವಿನಲ್ಲಿ ಧ್ಯಾನಿಸುತ್ತೆ
ಸಂಭ್ರಮಿಸುತ್ತೆ ಕೊಳಲ ಹುಡುಗನ ತುಂಟಾಟಕೆ
ಮತ್ತು ಮಿಡಿಯುತ್ತೆ ಋತುಚಕ್ರದಾಟಕ್ಕೂ...

ಮತ್ತದರಡಿಯಲ್ಲಿ ಆರೋ ನಡೆದುಹೋದ ಪಾದದೆಳೆ
ಶುದ್ಧನಾದ ಬುದ್ಧನವೇ.. ಮರ ಮೌನ ಮತ್ತು ನೆರಳು
ದೂರದಲ್ಲಿ ಕಿತ್ತ ಸಂಕೋಲೆಗೆ ಯಶೋಧರೆಯ ಅಳು

ಸಂಜೆ ಮರದೆದೆಗೆ ಹಿಂತಿರುಗೆ ಹಕ್ಕಿ-ಪಕ್ಕಿ ಮಿಲನ
ಮಾತುಕತೆ ಮಿಥುನ ಮರಿ ಚಿಗುರಿ ಯಾ ಗರಿಯುದುರಿ

ಧ್ಯಾನದಿಂದೆದ್ದು ಮರ ಕಣ್ಣರಳಿಸುತ್ತೆ
ಸಂಜೆ ಸೂರ್ಯನ ಬಣ್ಣಕ್ಕೆ ಮೈಮರೆಯುತ್ತೆ
ಎದೆಗೂಡಿನೊಳಗೆ ಎಷ್ಟೊಂದು ಜೀವಕ್ಕೆ ತಾಯಿಯಾಗುತ್ತೆ
ತನ್ನೊಳಗೆ ತಾನೇ ಅಚ್ಚರಿಯಂಬಂತೆ...

ಮರಕ್ಕೀಗ ಜ್ಞಾನೋದಯ

ಯಾರೋ ಅದರೆಡೆಗೆ ಬರುತ್ತಿರುವಂತೆ
ಬುದ್ಧನೇ...ಇರಬಹುದು ಮರ ಜೀವನ್ಮುಖಿ
ಯಶೋಧರೆ ಶಾಪವಳಿದು ಸುಖಿ...!

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೮.೨೦೧೨

Thursday, August 16, 2012

Shri Krishnana Nooraru Geethegalu - 271

ರಾಮನಾಮ ನುಡಿಯದವಗೆ

ಪಾಪ ಕಳೆವುದೆ ನಿನ್ನ ಪುಣ್ಯ ಬೆಳೆವುದೆ
ರಾಮನಾಮವ ನುಡಿಯದವಗೆ ಮುಕುತಿ ದೊರೆವುದೆ ಇಹದಿ

ಹಲವು ಆಲಯ ಅಲೆದರೇನು ಹರಕೆಕಾಯನು ಹೊಡೆಯಲೇನು
ಅನ್ಯದ್ರವ್ಯವ ದಾನವೆರೆದು ಧನ್ಯನೆಂದು ಮೆರೆದರೇನು (೧)

ಹಲವು ಗಿರಿಗಳ ಸುತ್ತಲೇನು ಹಣೆಗೆ ಮೃತಿಕೆಯ ಮೆತ್ತಲೇನು
ಮನದ ಕ್ಲೇಶವ ತೊಳೆಯದೇಳು ಪುಣ್ಯಜಲದಿ ಮುಳುಗಲೇನು (೨)

ತ್ರೇತೆ ಕಥೆಯ ಹಾಡಲೇನು ಸೀತೆ ವ್ಯಥೆಯ ಪಾಡಲೇನು
ಧರ್ಮದಾದಿ ಅರಿಯದವಗೆ ಅವನ ಚರಣ ದೊರೆವುದೇನು (೩)

ಹಲವು ದೈವವ ಭಜಿಸಲೇನು ಅವನೀಶನ ಮರೆವುದೇನು
ಶ್ರೀನಿವಾಸ ವಿಠಲನೆನಲು ಎಮ್ಮ ಕರ್ಮ ಕಳೆಯನೇನು (೪)

ಪಾಪ ಕಳೆವುದೆ ನಿನ್ನ ಪುಣ್ಯ ಬೆಳೆವುದೆ
ರಾಮನಾಮವ ನುಡಿಯದವಗೆ ಮುಕುತಿ ದೊರೆವುದೆ ಇಹದಿ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೮.೨೦೧೨

Wednesday, August 15, 2012

Shri Krishnana Nooraru Geethegalu - 271

ಕೊಳಲನೂದುತ ಬಂದ

ಕೊಳಲನೂದುತ ಬಂದ ರಾಧೆ ಸನಿಹಕೆ ಗೋವಿಂದ
ಉಲಿಯುತ ನಲುಮೆಯ ನವವಿಧರಾಗವ ಹೃದಯದೊಳು ನಿಂದ

ವೇದನೆ ವಿರಹದಾ ಅಂಬುಧಿ ಎದೆಯೊಳು ಪ್ರೀತಿ ಚಂದ್ರ ಬಿಂಬ
ಹೊರಗನು ನಲಿಸಿದ ಒಳಗನು ತಣಿಸಿದ ಧಾರೆ ಮೈಯ್ಯ ತುಂಬ (೧)

ಮೆದುವಿನ ಎದೆಮಣ್ಣು ಬೀಜದ ಕಣ್ಣು ಪ್ರೇಮದ ಸಿರಿಚಿಗುರು
ಒಲುಮೆಯ ಉಣಿಸಿದ ದಳದಳ ತೆರೆಸಿದ ಜೀವದ ಮೊದಲುಸಿರು (೨)

ಸಂಜೆಯ ಶ್ರಾವಣವು ಸುರಿಯುವ ನೆನಪಮಳೆ ಕಾಡುವ ಏಕಾಂತ
ಅಪ್ಪುಗೆ ಹೊದಿಸಿದ ತೋಳೊಳು ಬಳಸಿದ ಸುಖವದು ದಿಗಂತ (೩)

ಕಳೆಯದ ಸಂಜೆಯ ಕರಗದ ಇರುಳೊಳು ನಿರುತವು ಈ ಒಲವು
ಶ್ರೀನಿವಾಸ ವಿಠಲನ ಮಿಲನದಿ ರಾಧೆಯು ವೃಂದಾವನ ಚೆಲುವು (೪)

ಕೊಳಲನೂದುತ ಬಂದ ರಾಧೆ ಸನಿಹಕೆ ಗೋವಿಂದ
ಉಲಿಯುತ ನಲುಮೆಯ ನವವಿಧರಾಗವ ಹೃದಯದೊಳು ನಿಂದ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೮.೨೦೧೨

Shri Krishnana Nooraru Geethegalu - 270

ಮತಿಯನಿವುದು ಗಣಪ

ಮತಿಯನಿವುದು ಗಣಪ ಶಿವಸತಿಸುತ ತಂದೆ
ಮಂಗಳ ಕರುಣಿಸೊ ತಿಂಗಳಧರ ವಂದೆ

ಶುದ್ಧದೊಳಾದಿ ಶುದ್ಧ ಪ್ರಬುದ್ಧ
ದೇವಾದಿದೇವ ಶ್ರೀ ದುರಿತನಿಷಿದ್ಧ
ಶ್ರೀಕಾರದಾಕಾರ ಸಿರಿಗೌರಿ ಮಮಕಾರ
ನಮಿಪೆನು ಹರಿದ್ರ ಕಾಯೊ ನೀ ಕ್ಷಿಪ್ರ (೧)

ವರದಾಯಕ ಪ್ರಭುವೆ ಶುಭದಾಯಕರೂಪ
ಓಂಕಾರದೇವ ಶ್ರೀ ಸಿದ್ಧಿಬುದ್ಧಿಭೂಪ
ಅವನಿಯೊಳಣುವೊ ನಾ ಚರಣಕೆ ಬಂದಿಹೆ
ಶ್ರೀನಿವಾಸ ವಿಠಲನ ಪ್ರಿಯ ನೀ ಹರಸೊ (೨)

ಮತಿಯನಿವುದು ಗಣಪ ಶಿವಸತಿಸುತ ತಂದೆ
ಮಂಗಳ ಕರುಣಿಸೊ ತಿಂಗಳಧರ ವಂದೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೮.೨೦೧೨

Sunday, August 12, 2012

Shri Krishnana Nooraru Geethegalu - 269

ಏಕೊ ಕಾಡುತಲಿರುವೆ

ಏಕೊ ಕಾಡುತಲಿರುವೆ ಹೀಗೆ ನೆರಳಿನ ಹಾಗೆ
ನಗುತಿಹರೊ ಕಂಡವರು ಎನ್ನ ಕೃಷ್ಣ

ಎನ್ನ ಕೈಯ್ಯೊಳ ಕಡೆಗೋಲು ಜಾರುತಿದೆ
ನಿನ್ನ ಧ್ಯಾನದಿ ನನ್ನೇ ನಾನು ಮರೆತು
ಗೋಡೆಯೊಳಗಿನ ಚಿತ್ರ ನಗುತೆನೋ ಗುನುಗುತಿವೆ
ಮೈಮರೆತ ಈ ರಾಧೆಯನ್ನೆ ಕುರಿತು (೧)

ಎನ್ನೆದೆಯ ವೀಣೆಯದು ನಿನ್ನೆ ನಮ್ಮೀರ್ವರ
ಮಿಲನಗಾನದ ನೆನಪ ಮೀಟುತಿಹುದು
ಬೇಡುವೆನು ಕಡೆಗೋಲೆ ನೀಡೆ ಬೆಣ್ಣೆಯ ಮುದ್ದೆ
ಎನ್ನ ಜೀವವದಲ್ಲಿ ಕಾಯುತಿಹುದು (೨)

ಗೋಕುಲದ ಗಾಳಿಯೊಳು ಗಾನವಾಗಿದೆ ಕೃಷ್ಣ
ಎಮ್ಮ ಒಲವಿನ ಪ್ರೇಮ ಸಲ್ಲಾಪವು
ಹೀಗೆನ್ನ ಕಾಡುತಿರೆ ಶ್ರೀನಿವಾಸ ವಿಠಲ ನೀ
ತುಂಟ ಕೃಷ್ಣ ಎನದೆ ಈ ಲೋಕವು (೩)

ಏಕೊ ಕಾಡುತಲಿರುವೆ ಹೀಗೆ ನೆರಳಿನ ಹಾಗೆ
ನಗುತಿಹರೊ ಕಂಡವರು ಎನ್ನ ಕೃಷ್ಣ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೨.೦೮.೨೦೧೨

Saturday, August 11, 2012

Shri Krishnana Nooraru Geethegalu - 268

ಕ್ಷಣವೊಂದು ಯುಗ

ಕ್ಷಣವೊಂದು ಯುಗವಹುದು ನಿನ್ನಗಲಿಕೆಯು ಕೃಷ್ಣ
ಸಂಭ್ರಮದ ಸನಿಹದೊಳು ಯುಗವೆ ಕ್ಷಣವು

ನೀನಿರದ ಇರುವಿನೊಳು ನಾನು ನಾನಲ್ಲವೊ
ನಯನದೊಳು ನೋಟವದೆ ಇಲ್ಲದಂತೆ
ಇರುಳಿನೊಳು ಬರಿಬಾನು ಸೊಬಗೇನೊ ಶ್ರೀಕೃಷ್ಣ
ನಿನ್ನಾತ್ಮವಿರದೆನ್ನ ದೇಹದಂತೆ (೧)

ಎನ್ನೆದೆಯ ಸರಿಗಮವ ನುಡಿಸೊ ನಿನ್ನೆದೆ ಮುರಳಿ
ಮೌನವಿದೆ ರಾಗವೇ ತಿಳಿಯದಂತೆ
ಬೀಸುತಿಹ ತಂಗಾಳಿ ಸುದ್ದಿ ತಂದಿತೆ ಕೃಷ್ಣ
ಹೇಳೆಂದೆ ರಾಧೆಗೆ ನಿನದೆ ಚಿಂತೆ (೨)

ಬಾರೆನ್ನ ನೇಸರನೆ ಬೇಸರವು ಎನ್ನೊಳಗೆ
ಕಮಲದಂದದಿ ಕಾಯ್ವೆ ಕ್ಷಣವು ನಿನ್ನ
ಶ್ರೀನಿವಾಸ ವಿಠಲನೆ ಗೋಕುಲದ ಕೃಷ್ಣಯ್ಯ
ನಿನ್ನ ಒಲವಿನಯೆದೆಯು ಒರಗೆ ಚೆನ್ನ (೩)

ಕ್ಷಣವೊಂದು ಯುಗವಹುದು ನಿನ್ನಗಲಿಕೆಯು ಕೃಷ್ಣ
ಸಂಭ್ರಮದ ಸನಿಹದೊಳು ಯುಗವೆ ಕ್ಷಣವು

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೮.೨೦೧೨

Thursday, August 9, 2012

Shri Krishnana Nooraru Geethegalu - 267

ಕಾಡದಿರೊ ಹೀಗೆನ್ನ

ಕಾಡದಿರೊ ಹೀಗೆನ್ನ ಕಮಲನಯನನೆ ಕೃಷ್ಣ
ಕಾಯುತಿಹೆ ನಾ ನಿನ್ನ ಬೃಂದಾವನದಿ

ಕಾನನದ ನಡುವಿನೊಳು ಹರಿವ ತೊರೆ ತೀರದೊಳು
ಮುರಳಿಯುಲಿಯುತ ಎನ್ನ ಮರೆತೆಯೆನೊ
ಗೋವುಗಳ ಗಮನಿಸುತ ಗೋಪಜನ ಸಂಗದೊಳು
ಎನ್ನ ಹೃದಯದ ಮೊರೆಯು ಕೇಳದೆನೊ (೧)

ಮುಡಿಯೊಳಗೆ ಮಲ್ಲಿಗೆಯು ಅರಳಿ ಘಮಘಮ ಸುಖವು
ಈ ರಾಧೆ ನಿನಗಾಗಿ ಬಲ್ಲೆಯೆನೊ
ವನಮಾಲೆ ಧರಿಸಿದಾ ಸಂಭ್ರಮದ ಸಡಗರದಿ
ಎನ್ನ ತುಳಸಿಮಾಲೆ ಒಲ್ಲೆಯೆನೊ (೨)

ನೆರೆಹೊರೆಯೊಳೆನ್ನವರು ಗೋಕುಲದಿ ನಗುತಿಹರೊ
ನಿನಗೆಲ್ಲೊ ಭ್ರಾಂತು ಅವ ಬಾರನೆಂದು
ಹುಸಿಯಾಗಲವರ ನುಡಿ ಶ್ರೀನಿವಾಸ ವಿಠಲಯ್ಯ
ತೋರೊ ಜಗಕೆ ಎಮದು ನಿಜಪ್ರೇಮವೆಂದು (೩)

ಕಾಡದಿರೊ ಹೀಗೆನ್ನ ಕಮಲನಯನನೆ ಕೃಷ್ಣ
ಕಾಯುತಿಹೆ ನಾ ನಿನ್ನ ಬೃಂದಾವನದಿ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೦೮.೨೦೧೨

Wednesday, August 8, 2012

Shri Krishnana Nooraru Geethegalu - 266

ಕುಣಿದು ಬಾ ಕೃಷ್ಣ

ಥಕಧಿಮಿತ ಥಕಧಿಮಿತ ಕುಣಿದು ಬಾರೊ ಕೃಷ್ಣ
ಕೊಳಲೂದುತ ಕಿರುನಗೆಯೊಳು ನಲಿದು ಬಾರೊ ಕೃಷ್ಣ

ಮಥುರೆಯ ಸೆರೆಯಿಂದ ಯಮುನೆಯ ನಡೆ ತಡೆದು
ಗೋವಿಂದ ಗೋಕುಲಕೆ ನೀನೊಲಿದು ಬಾರೊ
ಕಳೆಯೊ ಕಂಸನ ನಿಶೆಯ ತೋರೊ ಸುಜನಗೆ ಉಷೆಯ
ಕಾಳಿಂದಿ ಮದದೆಡೆಯ ನೀ ತುಳಿದು ಬಾರೊ (೧)

ಮೂಲೋಕದೊಡೆಯನೆ ಮೂಲರಾಮನೆ ಕೃಷ್ಣ
ಜಗದೋದ್ಧಾರಕನೆ ಜಯತು ನೀ ಬಾರೊ
ಧರ್ಮದಾ ಪಾಂಡವರ ಧರಣಿಯೊಳು ಸಲಹಿದನೆ
ದ್ವಾರಕಾಧೀಶನೆ ಜಯತು ನೀ ಬಾರೊ (೨)

ನೊರಹಾಲ ನಿನಗಿಡುವೆ ಸವಿದು ಸಲಹೊ ಎನ್ನ
ನವನೀತಚೋರನೆ ನಗುನಗುತ ಬಾರೊ
ಮುದ್ದುರಾಧೆಯ ಪ್ರಿಯನೆ ಶ್ರೀನಿವಾಸ ವಿಠಲಯ್ಯ
ಅವಳೊಲವ ಒಂದಣುವ ಎನಗೆ ನೀ ತೋರೊ (೩)

ಥಕಧಿಮಿತ ಥಕಧಿಮಿತ ಕುಣಿದು ಬಾರೊ ಕೃಷ್ಣ
ಕೊಳಲೂದುತ ಕಿರುನಗೆಯೊಳು ನಲಿದು ಬಾರೊ ಕೃಷ್ಣ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೮.೨೦೧೨

Tuesday, August 7, 2012

Shri Krishnana Nooraru Geethegalu - 265

ಬಾರೆ ಎನ್ನ ಸನಿಹಕೆ

ಮೌನ ಧರಿಸಿ ಕೊಲುವೆಯೇಕೆ ಮಾತನಾಡೆ ರಾಧೆ
ಮುನಿಸ ಬಿಡೆ ಮನಸ ಕೊಡೆ ಬಾರೆ ಎನ್ನ ಸನಿಹಕೆ

ಕಾಡಮಲ್ಲಿಗೆ ಮೊಗ್ಗಮಾಲೆಯ ಮುಡಿಗೇರಿಸೆ ತಂದಿಹೆ
ಮುರಳಿಯೆದೆಗೆ ಹೊಸ ಒಲವಿನ ರಾಗ ಬರೆದು ತುಂಬಿಹೆ
ನಿನ್ನ ಚೆಲುವಿನ ಚಿತ್ರಬರೆಯೆ ಹೃದಯದಾಳೆಯ ತೆರೆದಿಹೆ
ಅಧರದಂಚಿಗೆ ಮಧುರ ಕುಂಚವ ತಾರೆ ನಾನು ಕಾದಿಹೆ (೧)

ಇರುಳ ಬಾನೊಳು ನಗುವ ಚಂದಿರ ನಾಚಿವೋಡಿದ ದೂರಕೆ
ಚುಕ್ಕೆ ತಾರೆ ಪ್ರಣತಿ ಸಾಲು ಕಾದು ಎಮ್ಮ ಮಿಲನಕೆ
ತ್ರೇತೆಯಿಂದ ಪ್ರೀತಿಯೆಮದು ಮರೆತೆಯೇನೆ ಜಾನಕಿ
ಶ್ರೀನಿವಾಸ ವಿಠಲ ನಿನ್ನವ ನಿನ್ನೊಲವೊಳು ನಾ ಸುಖಿ (೨)

ಮೌನ ಧರಿಸಿ ಕೊಲುವೆಯೇಕೆ ಮಾತನಾಡೆ ರಾಧೆ
ಮುನಿಸ ಬಿಡೆ ಮನಸ ಕೊಡೆ ಬಾರೆ ಎನ್ನ ಸನಿಹಕೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೮.೨೦೧೨

Monday, August 6, 2012

Shri Krishnana Nooraru Geethegalu - 264

ಲಾಲಿ ಗೋವಿಂದ

ಲಾಲಿ ಗೋವಿಂದ ಕೃಷ್ಣ ಗೋವಿಂದ  ಜೋ ಜೋ ಜೋ ಲಾಲಿ ಕಾಯೊ ಮುಕುಂದ

ಕಂಸನ ಅನುಜೆಯ ಅಷ್ಟಗರ್ಭದಿಂ ಸೆರೆಯೊಳು ಉದಿತನೆ ಗೋವಿಂದ
ರಭಸದ ಯಮುನೆಯ ಪಿತಶಿರವೇರಿ ಗೋಕುಲ ನಡೆದನೆ ಗೋವಿಂದ (ಲಾಲಿ ೧)

ನಂದಗೋಪನ ಮುದ್ದುಮಡದಿಯ ಮಡಿಲೊಳಗಾಡ್ದನೆ ಗೋವಿಂದ
ಶಕಟ ಪೂತನೆ ದುರಿತರ ಹರಿದು ಗೋಕುಲ ಕಾಯ್ದನೆ ಗೋವಿಂದ (ಲಾಲಿ ೨)

ಕಮಲನಯನ ಶ್ರೀಪೂರ್ಣೇಂದುವದನೆನೆ ಮೂನಾಮತಿಲಕ ಶ್ರೀಗೋವಿಂದ
ಮಧುರೇಂದ್ರ ವಸುದೇವಸುತ ಶ್ರೀಕೃಷ್ಣನೆ ರಾಧಾಹೃದಯ ಶ್ರೀಗೋವಿಂದ (ಲಾಲಿ ೩)

ಮುರಳಿಧರನೆ ನವನೀತಪ್ರಿಯನೆ ಶ್ರೀನಿವಾಸ ವಿಠಲನೆ ಗೋವಿಂದ
ನಿನ್ನ ಶ್ರೀಪಾದವ ಭಜಿಸುವ ಸುಜನರ ಧರೆಯೊಳು ಪೊರೆಯೊ ಗೋವಿಂದ (ಲಾಲಿ ೪)

ಲಾಲಿ ಗೋವಿಂದ ಕೃಷ್ಣ ಗೋವಿಂದ  ಜೋ ಜೋ ಜೋ ಲಾಲಿ ಕಾಯೊ ಮುಕುಂದ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೮.೨೦೧೨

Sunday, August 5, 2012

Shri Krishnana Nooraru Geethegalu - 263

ನಿಂದಿಹ ನೇಸರನು

ವೃಂದಾವನದ ಪಡುಜಗಲಿಯೊಳು ನಿಂದಿಹ ನೇಸರನು
ಬರುವನೆ ಕೆಂಪಿನ ಗಲ್ಲದ ರಾಧೆಯ ಸನಿಹಕೆ ಮೋಹನನು

ನಿನ್ನೆಯ ಸಂಜೆಯ ಸವಿಸವಿ ನೆನಪೊಳು ತೂಗಿದೆ ಉಯ್ಯಾಲೆ
ರಾಧೆಯ ಹೃದಯದ ವೀಣೆಯು ಕೃಷ್ಣಗೆ ಬರೆದಿದೆ ಕರೆಯೋಲೆ (೧)

ಬಯಕೆಯ ಪ್ರಣತಿಯ ದೀಪ್ತಿಯ ಕಾಂತಿಯು ರಾಧೆಯ ಕಂಗಳಲಿ
ಸುಂದರ ಚಂದಿರ ತಾರೆಯ ಜಾತ್ರೆಯು ಅವಳೆದೆಯೂರಿನಲಿ (೨)

ಬಿಡುಬಿಡುಯೆಂದರು ಬಿಡದೀ ಮುರಳಿಯ ಮೋಹವು ರಾಧೆಯನು
ವಿರಹದೊಳುರಿಸಿ ಮಿಲನದಿ ತಣಿಸಿ ಉಣಿಸಿದೆ ಪ್ರೀತಿಯನು (೩)

ರಾಧೆ-ಮಾಧವರ ಒಲುಮೆಯ ಯಮುನೆಯು ಹರಿದಿದೆ ಯುಗದಿಂದ
ಮರೆವನೆ ಶ್ರೀನಿವಾಸ ವಿಠಲನು ಅವಳ ಬರುವನು ಮುದದಿಂದ (೪)

ವೃಂದಾವನದ ಪಡುಜಗಲಿಯೊಳು ನಿಂದಿಹ ನೇಸರನು
ಬರುವನೆ ಕೆಂಪಿನ ಗಲ್ಲದ ರಾಧೆಯ ಸನಿಹಕೆ ಮೋಹನನು

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೫.೦೮.೨೦೧೨

Saturday, August 4, 2012

Shri Krishnana Nooraru Geethegalu - 262

ಭುವನದಿ ಭವ ಅಳಿಸೊ

ಭುವನದಿ ಭವ ಅಳಿಸೊ ಶ್ರೀಕೃಷ್ಣಯ್ಯ
ಜಗದೊಳು ಸುಖವಿರಿಸೊ ಸುಜನಗೆ

ಹಲವನ್ಯ ಎಸಗಿದೀ ಆರರ ದೇಹವು
ಪರುಷವಾಗುವುದೆ ಹರಿಸ್ಪರ್ಶವಿಲ್ಲದೆ
ಚಕ್ರದೀ ಜಗವಿದು ನಿನ್ನ ಸೃಷ್ಟಿಯೊ ದೇವ
ಬದುಕದು ಬದುಕೆನೊ ಚರಣಕೆ ಬಾಗದೆ (೧)

ಜಡಬಂಡೆಯೊ ನಾನು ಚಳಿಮಳೆಯರಿಯದ
ಹೊಡೆದೆನ್ನ ಒಳಗನು ಮೂರುತಿ ಮೂಡಿಸೊ
ಧರಣಿ ಸೂತ್ರಕ ದೇವ ಶ್ರೀನಿವಾಸ ವಿಠಲಯ್ಯ
ನಿನ್ನ ಕೈಯ್ಯೊಳ ಬೊಂಬೆ ಸುಖದೊಳಗಾಡಿಸೊ (೨)

ಭುವನದಿ ಭವ ಅಳಿಸೊ ಶ್ರೀಕೃಷ್ಣಯ್ಯ
ಜಗದೊಳು ಸುಖವಿರಿಸೊ ಸುಜನಗೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೮.೨೦೧೨

Friday, August 3, 2012

Shri Krishnana Nooraru Geethegalu - 261

ದರ್ಪಣದ ಬಿಂಬದೊಳು

ದರ್ಪಣದ ಬಿಂಬದೊಳು ಎಮ್ಮ ಚೆಲುವೆ ರಾಧೆ
ತನ್ನ ಚೆಲುವಿಗೆ ತಾನೆ ನಾಚುತಿಹಳು

ಶ್ಯಾಮನನು ಕಾತರಿಸೊ ಚಿಗರೆ ಕಣ್ಣಂಚಿಗೆ
ಕಸ್ತೂರಿ ಕಾಡಿಗೆಯ ತೀಡುತಿಹಳು

ಮೋಹನನ ಅಧರಕ್ಕೆ ತುಡಿವ ತುಟಿ ಗಲ್ಲಕ್ಕೆ
ಪಡುವಣದ ರವಿರಂಗ ಬಳಿಯುತಿಹಳು

ಮುಂಗುರುಳು ನರ್ತಿಸೊ ನೊಸಲ ನಡುವೊಳು
ಸಿಂಧೂರ ಚಂದಿರನ ಧರಿಸುತಿಹಳು

ಬಿಗಿವ ಎದೆ ಹಿಡಿನಡುವ ಸೆಳೆವ ಮೈಮಾಟಕೆ
ಆ ರಾಧೆ ತಂತಾನೆ ಬೀಗುತಿಹಳು

ಮನದಾಸೆ ತಡೆಮೀರಿ ಹರಿವ ವಿರಹದ ನದಿಗೆ
ಬರುವನವ ತಾಳೆಂದು ಹೇಳುತಿಹಳು

ಅರ್ಪಿಸುವೆ ನಿನಗೆನ್ನ ಶ್ರೀನಿವಾಸ ವಿಠಲನೆ
ಎನುತ ವೃಂದಾವನದಿ ಕಾಯುತಿಹಳು

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೭.೨೦೧೨

Thursday, August 2, 2012

Shri Krishnana Nooraru Geethegalu - 260

ನಿನ್ನೊಲವ ಬೃಂದಾವನ

ನಿನ್ನ ಸನಿಹದ ಸುಖಕೆ ಕಾತರಿಸುತಿಹೆ ಕೃಷ್ಣ
ಎನ್ನಂತೆ ನಿನ್ನೊಲವ ಬೃಂದಾವನ

ಢವಢವಿಸುವೀ ಎದೆಯು ಕೇಳಿಸದೆ ಮದನಪಿತ
ಮೊದಲ ಅಪ್ಪುಗೆ ಭಯವು ಮೃದುಕಂಪನ
ಬಿಸಿಲ ಬುವಿಯೊ ನಾನು ಸುರಿದು ಬಾರೊ ನೀನು
ಎಮ್ಮ ಮಿಲನದ ಹೆಸರೆ ರೋಮಾಂಚನ (೧)

ಕಾದಿಹೆನು ಬೇಡುವೆನು ನಿನ್ನ ರಾಧೆಯೊ ನಾನು
ಎನ್ನ ಹೃದಯದ ಮೊರೆಯ ನೀ ಕೇಳೆಯ
ಮಳೆಯಾಗಿ ಭೋರ್ಗರೆಯೊ ಎನ್ನ ಪ್ರೀತಿಗೆ ತುಡಿಯೊ
ತಣಿಸು ಸುಡುವೆನ್ನ ವಿರಹಾಗ್ನಿ ಇಳೆಯ (೨)

ಯುಗಯುಗದ ಪ್ರೇಮವದು ಎಮ್ಮದೈ ಮೋಹನ
ಒಲುಮೆ ನಲುಮೆಯ ಚಿಲುಮೆ ಹರಿವ ಯಮುನೆ
ತ್ರೇತೆಯರಸನೆ ರಾಮ ಜಾನಕಿಯೊ ನಾ ನಿನ್ನ
ಕಲಿಯ ಲಕುಮಿಯೊ ಮುಂದೆ ಶ್ರೀನಿವಾಸ ವಿಠಲನೆ (೩)

ನಿನ್ನ ಸನಿಹದ ಸುಖಕೆ ಕಾತರಿಸುತಿಹೆ ಕೃಷ್ಣ
ಎನ್ನಂತೆ ನಿನ್ನೊಲವ ಬೃಂದಾವನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೨.೦೭.೨೦೧೨

Sunday, July 29, 2012

Shri Krishnana Nooraru Geethegalu - 259

ಬಾರೊ ಬೇಗನೆ ಬೃಂದಾವನಕೆ

ಬಾರೊ ಬೇಗನೆ ಬೃಂದಾವನಕೆ ಚೆಲುವ ಮೇಘಶ್ಯಾಮ
ಉಲಿದು ಮುರಳಿಯ ಅರಳಿಸಿನ್ನು ರಾಧೆಯೆದೆಯೊಳು ಪ್ರೇಮ

ರಾಧೆ ಕಂಗಳು ಖಾಲಿ ಪ್ರಣತಿಯೊ ನೀನೆ ಜೀವದ ಕಾಂತಿಯೊ
ಬಿಸಿಲು ಹೂಮಳೆ ನಡುವೆ ನಗುವ ಬಣ್ಣಬಿಲ್ಲಿನ ರೀತಿಯೊ
ಗರಿಗೆದರಿಸಿ ಬಯಕೆ ನವಿಲನು ಅವಳ ಒಡಲೊಳು ಕೃಷ್ಣನೆ
ತರವೆ ಹೀಗೆ ಬಾರದಿರುವುದು ಕಳೆಯೆ ರಾಧೆಯ ವೇದನೆ (೧)

ದೇಹವವಳೊ ಪ್ರಾಣ ನೀನೊ ಅವಳೊಲಮೆಯ ತಾಣವೊ
ನೀನೇ ಇರದ ವೃಂದಾವನದೊಳು ರಾಧೆಗೆಲ್ಲಿಯ ಪ್ರೇಮವೊ
ತೂಗುಮಂಚದಿ ನಲಿವ ವೀಣೆಯ ನಾದಯಮುನೆಯು ಮೌನವು
ಶ್ರೀನಿವಾಸ ವಿಠಲ ನೀನಿರೆ ರಾಧೆ ಪ್ರೇಮದ ಯಾನವು (೨)

ಬಾರೊ ಬೇಗನೆ ಬೃಂದಾವನಕೆ ಚೆಲುವ ಮೇಘಶ್ಯಾಮ
ಉಲಿದು ಮುರಳಿಯ ಅರಳಿಸಿನ್ನು ರಾಧೆಯೆದೆಯೊಳು ಪ್ರೇಮ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೭.೨೦೧೨

Saturday, July 28, 2012

Shri Krishnana Nooraru Geethegalu - 258

ಶ್ಯಾಮನೀಗ ಬರುವನೆ

ಹೇಳೆ ಸಖಿ ಹೇಳೆ ಸಖಿ ಶ್ಯಾಮನೀಗ ಬರುವನೆ
ಶ್ರಾವಣಿಯ ವಿರಹದೊಡಲಿಗೆ ಪ್ರೀತಿಹೂಮಳೆ ತರುವನೆ

ತೇಲಿಬರುತಿಹ ತಿಳಿಗಾಳಿಯೆ ರಾಧೆ ಮೊರೆಯನು ಕೇಳೆಯ
ಕೊಳಲನೂದುವ ಗೊಲ್ಲಚೆಲ್ವನ ಹಾದಿಯೊಳು ನೀ ಕಂಡೆಯ
ಬರುವೆನೆಂದ ಬರೆವೆನೆಂದ ಎನ್ನ ಹೃದಯದ ಪಟದೊಳು
ಮಧುರಕಾವ್ಯದ ನವಪಲ್ಲವಿ ಎನ್ನ ಮೈಮನ ವನದೊಳು(೧)

ಏನೊ ತಿಳಿಯೆ ಎನ್ನ ಶ್ಯಾಮನ ಮುರಳಿ ಮೌನವ ತಾಳಿದೆ
ಒಂಟಿಯಾಗಿಹ ರಾಧೆಯೆದೆಯನು ಮೌನಶರವದು ಕೊಲುತಿದೆ
ಜಗದ ಮಾತಿಗೆ ಏಕೊ ಬೇಸರ ಬಾರೊ ಪ್ರಾಣ ಶ್ರೀಕೃಷ್ಣನೆ
ಶ್ರೀನಿವಾಸ ವಿಠಲ ನೀನು ನಿಜದಿ ಭಾಮೆಗು ನಲ್ಲನೆ (೨)

ಹೇಳೆ ಸಖಿ ಹೇಳೆ ಸಖಿ ಶ್ಯಾಮನೀಗ ಬರುವನೆ
ಶ್ರಾವಣಿಯ ವಿರಹದೊಡಲಿಗೆ ಪ್ರೀತಿಹೂಮಳೆ ತರುವನೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೭.೨೦೧೨

Thursday, July 26, 2012

Shri Krishnana Nooraru Geethegalu - 257

ವಂದೆ ಶ್ರೀ ನಾರಾಯಣಿ

ವಂದೆ ಶ್ರೀ ನಾರಾಯಣಿ ವೈಕುಂಠವಾಸಿನಿ
ಸುಖದಿ ಕಾಯೆ ಕಲಿಯೊಳೆಮ್ಮ ಕರಿವರದನ ರಾಣಿ

ಮೂಢರೆಮಗೆ ಮತಿಯನೀಯೆ ಮಂಗಳದ ಬದುಕನು
ಮಾತೆ ನೀನು ಮೂಜಗಕೆ ನಿನ್ನ ಮಮತೆ ಮಡಿಲನು
ದುರಿತ ದಾರಿದ್ರ್ಯ ಕಳೆಯೆ ಧರಣೀಶನ ಒಡತಿಯೆ
ಧನಧಾನ್ಯೆ ಮಾನ್ಯೆ ನಮೊ ಗೋವಿಂದನ ಮಡದಿಯೆ (೧)

ಶಕ್ತಿಸಂಪದ ಸಿರಿಯು ನೀನು ನೆಲಸೆ ಕಲಿಯ ಬುವಿಯೊಳು
ಭಾಗ್ಯಲಕುಮಿ ಸೌಭಾಗ್ಯದಾತೆ ಸದಾ ಎಮ್ಮ ಬಲದೊಳು
ವಿಜಯವಿತ್ತು ರಾಜ್ಯ ಪೊರೆಯೆ ಪದುಮನಾಭವಲ್ಲಭೆ
ಶ್ರೀನಿವಾಸ ವಿಠಲ ಹೃದಯೆ ನೀನಿರುವೆಡೆ ಶ್ರೀ ಶುಭೆ (೨)

ವಂದೆ ಶ್ರೀ ನಾರಾಯಣಿ ವೈಕುಂಠವಾಸಿನಿ
ಸುಖದಿ ಕಾಯೆ ಕಲಿಯೊಳೆಮ್ಮ ಕರಿವರದನ ರಾಣಿ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೭.೨೦೧೨

Shri Krishnana Nooraru Geethegalu - 256

ಕಾಯುತಿಹೆನು ಹೇಳೆ ಸಖಿ

ಗೋಕುಲದಾ ಚೆಲುವ ಕೃಷ್ಣ ಎನ್ನ ಗೆಳೆಯನೆ
ಕಾಯುತಿಹೆನು ಹೇಳೆ ಸಖಿ ಎಂದು ಬರುವನೆ ಅವ

ಸುಮ್ಮನಿದ್ದ ಎನ್ನ ಎದೆಗೆ ಸುಮಬಾಣವ ಹೂಡಿದ
ಸನಿಹ ಕರೆದು ಅಧರಗಳಲಿ ಅಕ್ಕರೆಯನು ಬರೆದ
ಮುಂಜುಹನಿ ಮುಸುಕಿದೆನ್ನ ಮೊಗ್ಗಿನಂಥ ಹೃದಯದಿ
ಒಲುಮೆಹೂವ್ವ ವರ್ಣ ಚೆಲ್ಲಿ ಚಿತ್ತಾರವ ಬಿಡಿಸಿದ (೧)

ನಿದಿರೆ ಕಸಿದ ಕನಸ ಹೊಸೆದ ಬಯಕೆ ಚಾದರ ಹೊದಿಸಿದ
ಕೊಳಲನೂದಿ ನಲುಮೆರಾಗವೆನ್ನ ಮೈಮನ ತುಂಬಿದ
ನಡುವ ಬಳಸಿದ ಜಗವ ಮರೆಸಿದ ಪ್ರಾಣವೆನ್ನ ಲೋಲ
ಬರುವನೆಂದೇ ಬೃಂದಾವನಕೆ ಶ್ರೀನಿವಾಸ ವಿಠಲ (೨)

ಗೋಕುಲದಾ ಚೆಲುವ ಕೃಷ್ಣ ಎನ್ನ ಗೆಳೆಯನೆ
ಕಾಯುತಿಹೆನು ಹೇಳೆ ಸಖಿ ಎಂದು ಬರುವನೆ ಅವ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೭.೨೦೧೨

Wednesday, July 25, 2012

Shri Krishnana Nooraru Geethegalu - 255

ಓಡಿ ಪೋಗದಿರೆಲೊ ರಂಗ

ಓಡಿ ಪೋಗದಿರೆಲೊ ರಂಗ ನೀ ಮೊಸರಗಡಿಗೆಯ ಹೊಡೆದು
ನಂದನಸುತನಿಗೆ ಅಂಕೆಯೆಂಬುವುದಿಲ್ಲ ಎಂದು ದೂರುವರೊ ಗೋಕುಲಜನ

ಸಾಸಿರ ಸುಳ್ಳ ನೀ ಪೇಳಬಹುದೊ ನವನೀತಚೋರ ನೀನಲ್ಲವೆಂದು
ಅಂಗೈ ಹುಣ್ಣಿಗೆ ಕನ್ನಡಿ ಏಕೊ ನೋಡಿಕೊ ನಿನ್ನ ಕೈಬಾಯನ್ನ (೧)

ಕಂಡೋರ ಮನೆಗೋಗಿ ತಿಂದುಣ್ಣುವುದ ಕೃಷ್ಣಯ್ಯ ಕದಿಯದಿರೊ
ಗೋಕುಲದೆಜಮಾನ ಆ ನಿನ್ನ ಅಪ್ಪಯ್ಯ ತಪ್ಪನು ಮಾಡದಿರೊ (೨)

ಸಕ್ಕರೆ ಸಿಹಿತಿಂಡಿ ಕೊಡುವೆನೊ ನಿನಗೆ ರುಚಿರುಚಿ ಹಾಲಬಟ್ಟಲ
ಸಕಲದಾಯಕ ನೀನು ಕದಿವುದು ಸರಿಯೆನೊ ಶ್ರೀನಿವಾಸ ವಿಠಲ (೩)

ಓಡಿ ಪೋಗದಿರೆಲೊ ರಂಗ ನೀ ಮೊಸರಗಡಿಗೆಯ ಹೊಡೆದು
ನಂದನಸುತನಿಗೆ ಅಂಕೆಯೆಂಬುವುದಿಲ್ಲ ಎಂದು ದೂರುವರೊ ಗೋಕುಲಜನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೦೭.೨೦೧೨

Shri Krishnana Nooraru Geethegalu - 254

ಶ್ರಾವಣದ ಇಳಿಸಂಜೆ

ಶ್ರಾವಣದ ಇಳಿಸಂಜೆ ಸುರಿವ ಮಳೆ ಚಳಿ ಗಾಳಿ
ಬೇಡುತಿದೆ ಮೈಮನವು ಶ್ಯಾಮನೊಲುಮೆ

ಎನ್ನೆದೆಯ ಬನದೊಳಗೆ ಆಸೆ ತರುಲತೆ ಚಿಗುರು
ಶ್ಯಾಮನೆದೆಯನು ತಬ್ಬೆ ತವಕಿಸುತಿದೆ
ಒಳವುರಿವ ವಿರಹಾಗ್ನಿ ನಾಚಿಕೆಯ ಗೆರೆ ಮೀರಿ
ತಣಿಸೊ ಶ್ಯಾಮ ಎನುತ ಧಗಧಗಿಸಿದೆ (೧)

ಎನ್ನೆದೆಯ ಬಾನಿನೊಳು ಗಾಳಿಮಳೆ ಹೊಯ್ದಾಟ
ನೀನಿರದೆ ನಾ ಒಂಟಿ ನೋವ ಕವಿತೆ
ಕತ್ತಲೊಳು ನಾನಿಹೆನು ಒಲುಮೆ ಬೆಳಕನು ತಾರೊ
ಶ್ರೀನಿವಾಸ ವಿಠಲ ನೀ ಜೀವ ಹಣತೆ (೨)

ಶ್ರಾವಣದ ಇಳಿಸಂಜೆ ಸುರಿವ ಮಳೆ ಚಳಿ ಗಾಳಿ
ಬೇಡುತಿದೆ ಮೈಮನವು ಶ್ಯಾಮನೊಲುಮೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೦೭.೨೦೧೨

Monday, July 23, 2012

Shri Krishnana Nooraru Geethegalu - 253

ಯಾರೆ ಆ ಚೆಲುವನಾರೆ

ಯಾರೆ ಆ ಚೆಲುವನಾರೆ ಹೇಳೆ ಗೆಳತಿ ಎನಗೆ
ವೃಂದಾವನದ ನೆರೆಯವಳೆ ಪರಿಚಯವೆ ನಿನಗೆ

ಎನ್ನ ನಯನದಿ ನಗುತ ನಿಲುವ ಸವಿಸಕ್ಕರೆ ನಿದಿರೆ ಕದಿವ
ಬಾರೊ ಎನ್ನ ಸನಿಹವೆನಲು ರೆಪ್ಪೆಕದವ ತೆರೆದೋಡುವ (೧)

ಬಯಕೆ ಕಂಗಳ ಕಣಜವವನು ಒಲುಮೆ ಹೂವಿನ ಹೃದಯನೆ
ಸೆಳೆದು ಎನ್ನನು ಪ್ರೀತಿಸುಳಿಯೊಳು ಒಂಟಿಯಾಗಿಸಿ ಹೋದನೆ (೨)

ಉಲಿದು ಮುರಳಿಯ ಮೋಹರಾಗವ ಪ್ರೇಮವರ್ಷವ ಸುರಿದನೆ
ವಿರಹದಗ್ನಿಯ ಉರಿಸಿ ಎನ್ನೊಳು ತಣಿಸಲಾರದೆ ಹೋದನೆ (೩)

ಬೇಸರವ ಮರೆಯೆ ರಾಧೆ ಅವನು ಗೋಕುಲ ಚೆಲುವನೆ
ಶ್ರೀನಿವಾಸ ವಿಠಲ ಕೃಷ್ಣನೆ ನಿನ್ನ ಪ್ರೇಮಕೆ ಒಲಿವನೆ (೪)

ಯಾರೆ ಆ ಚೆಲುವನಾರೆ ಹೇಳೆ ಗೆಳತಿ ಎನಗೆ
ವೃಂದಾವನದ ನೆರೆಯವಳೆ ಪರಿಚಯವೆ ನಿನಗೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೦೭.೨೦೧೨

Saturday, July 21, 2012

Shri Krishnana Nooraru Geethegalu - 252

ಶ್ರೀಗಣಪ

ಶಿವಹೃದಯೆ ಪಾರ್ವತಿಯುದರನೆ ಕಾವುದು ಎಮ್ಮನು ಶ್ರೀಗಣಪ
ಮೊರಕರ್ಣನೆ ಎಮ್ಮ ಮೊರೆಯನಾಲಿಸಿ ಸಲಹುವುದೆಮ್ಮ ಶ್ರೀಗಣಪ

ವಿಘ್ನಗಳೆಮ್ಮವ ಭಗ್ನವಗೊಳಿಸೊ ಮೋದಕಪ್ರಿಯನೆ ಶ್ರೀಗಣಪ
ಗರಿಕೆಯನಿರಿಸಿ ಹರಕೆಯು ನಿನ್ನೊಳು ಸುಖದಿಂ ಪೊರೆಯೊ ಶ್ರೀಗಣಪ (೧)

ಸಿರಿಮತಿಯೊಡೆಯನೆ ಸುಮತಿಯ ನೀಡೊ ಮಂಗಳಮೂರುತಿ ಶ್ರೀಗಣಪ
ಕ್ಷಿಪ್ರ ಕೃಪಾಳು ಸುಗತಿಯ ಕರುಣಿಸೊ ನಿಟಿಲಾಕ್ಷಸುತನೆಮ್ಮ ಶ್ರೀಗಣಪ (೨)

ಓಂಕಾರರೂಪನೆ ಉರಗಭೂಷಣನೆ ಮೂಷಕವಾಹನ ಶ್ರೀಗಣಪ
ಶ್ರೀನಿವಾಸ ವಿಠಲನೆ ಆದಿಯೊಳ್ಪೂಜಿಪ ಶ್ರೀಆದಿದೇವನೆ ಶ್ರೀಗಣಪ (೩)

ಶಿವಹೃದಯೆ ಪಾರ್ವತಿಯುದರನೆ ಕಾವುದು ಎಮ್ಮನು ಶ್ರೀಗಣಪ
ಮೊರಕರ್ಣನೆ ಎಮ್ಮ ಮೊರೆಯನಾಲಿಸಿ ಸಲಹುವುದೆಮ್ಮ ಶ್ರೀಗಣಪ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೧.೦೭.೨೦೧೨

Friday, July 20, 2012

Shri Krishnana Nooraru Geethegalu - 251

ಯಾವಾಗಲೂ ಹೀಗೇ ಅವನು

ಯಾವಾಗಲೂ ಹೀಗೇ ಅವನು ಎನ್ನ ಪ್ರಾಣ ಶ್ಯಾಮನು
ಇಗೋ ಬಂದೆ ಎನುತ ಬರದೆ ಬೇಸರವನು ತರುವನು

ತಲೆಬಾಗಿಲ ಮಾವು ತೋರಣ ಶ್ಯಾಮನೆಲ್ಲಿ ಎನುತಿದೆ
ಅಂಗಳದ ರಂಗವಲ್ಲಿ ಬರುವನೆನೇ ಕೇಳಿದೆ
ಹೊಸ್ತಿಲೊಳು ಬೆಳಗೊ ಪ್ರಣತಿ ಹಾದಿಬೆಳಕ ಚೆಲ್ಲಿವೆ
ಪಾದತೊಳೆಯೆ ನೀರತಂಬಿಗೆ ಶ್ಯಾಮನವನ ಕಾದಿದೆ (೧)

ತೂಗಲೇನೆ ಎನುವ ಮಂಚಕೆ ಶ್ಯಾಮನಿಲ್ಲ ಎನ್ನಲೇ
ನುಡಿಯಲೇನೆ ಎನುವ ವೀಣೆಗೆ ಮೌನಧರಿಸು ಎನ್ನಲೇ
ಗೋಡೆಯೊಳಗಿನ ಮಿಲನಚಿತ್ರಕೆ ನಾನು ಒಂಟಿ ಎನ್ನಲೇ
ವಿರಹದೆದೆಯ ಭೋರ್ಗರೆತವ ಕೊಂಚ ತಾಳು ಎನ್ನಲೇ (೨)

ಶೃಂಗಾರದ ಶಯನಗೃಹದಿ ಗಂಧಚಂದನ ಘಮಘಮ
ಬಿಸಿಹಾಲಿನ ತಂಬಿಗೆಯೊಳು ಸಿಹಿಸಕ್ಕರೆ ಸಂಗಮ
ಮಿಲನ ಸುಖಕೆ ಅವನೇ ಇಲ್ಲ ಶ್ರೀನಿವಾಸ ವಿಠಲ
ಎನ್ನಂತೆಯೆ ಕಾಯುತಿಹುದು ಅವನ ಪ್ರೀತಿಗೋಕುಲ (೩)

ಯಾವಾಗಲೂ ಹೀಗೇ ಅವನು ಎನ್ನ ಪ್ರಾಣ ಶ್ಯಾಮನು
ಇಗೋ ಬಂದೆ ಎನುತ ಬರದೆ ಬೇಸರವನು ತರುವನು

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೭.೨೦೧೨

Thursday, July 19, 2012

Shri Krishnana Nooraru Geethegalu - 250

ಏಕೆ ಹೀಗೆ ಮೌನ ರಾಧೆ

ಏಕೆ ಹೀಗೆ ಮೌನ ರಾಧೆ ಮನವ ತೆರೆದು ಹೇಳೆ
ಗೋಧೂಳಿಯ ಘಮಘಮವಿದೆ ಬರುವ ಶ್ಯಾಮ ತಾಳೆ

ಗೋಕುಲದೆ ಮುದ್ದುಕರುಗಳು ಮಾತೆಮೊಲೆಯ ಮರೆತಿವೆ
ಪುಟ್ಟ ಕಾಲ್ಗಳ ಕಿರುಗೆಜ್ಜೆಯು ದಿವ್ಯಮೌನ ತಳೆದಿವೆ (೧)

ಯುಮುನೆಯೆದೆಯೊಳು ಚಡಪಡಿಕೆಯು ವೃಂದಾವನದಿ ಬೇಸರ
ನಲಿಯುತಿರಲು ಶ್ಯಾಮ ನಿನ್ನೊಡ ಚುಕ್ಕೆಯಾಗಸ ಸುಂದರ (೨)

ಚಿತ್ರಗಡಿಗೆಯ ನೊರೆಯ ಹಾಲು ಬಾರೊ ಕೃಷ್ಣ ಎನುತಿದೆ
ಒಲುಮೆರಾಗವ ನುಡಿಯೆ ವೀಣೆಯು ತೂಗುಮಂಚದಿ ಕಾದಿದೆ (೩)

ಮೌನ ಮುರಿಯೆ ನೋವ ತೊರೆಯೆ ಶ್ಯಾಮ ಬಂದೇ ಬರುವನು
ಶ್ರೀನಿವಾಸ ವಿಠಲ ಕೃಷ್ಣನು ಪ್ರೀತಿಧಾರೆಯ ಎರೆವನು (೪)

ಏಕೆ ಹೀಗೆ ಮೌನ ರಾಧೆ ಮನವ ತೆರೆದು ಹೇಳೆ
ಗೋಧೂಳಿಯ ಘಮಘಮವಿದೆ ಬರುವ ಶ್ಯಾಮ ತಾಳೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೭.೨೦೧೨


Wednesday, July 18, 2012

Shri Krishnana Nooraru Geethegalu - 249

ರಾಮನ ತೋರೆನಗೆ

ರಾಮನ ತೋರೆನಗೆ ಹನುಮ ಶ್ರೀರಾಮನ ತೋರೆನಗೆ
ರಾಮನ ದಿವ್ಯನಾಮನ ಮೂಜಗಕ್ಷೇಮನ

ಕಮಲನಯನ ಶ್ರೀಕೌಸಲ್ಯೆಕಂದನ
ಕಲಿಯುಗವರದ ಶ್ರೀಕೋದಂಡರಾಮನ
ಪಿತವಾಕ್ಯಪರಿಪಾಲ ರಾಮ ಪುರುಷೋತ್ತಮನ
ಅಕ್ಷಯಗುಣಧಾಮ ತ್ರೇತಾದೇವನ (೧)

ಭವರೋಗಹರ ಶ್ರೀಬಕುತ ಸುಲಭನ
ಜಗದೋದ್ಧಾರ ಶ್ರೀಜಾನಕಿವಲ್ಲಭನ
ಶಬರಿಯ ಕರುಣನ ನಿನ್ನಾತ್ಮ ಪ್ರಾಣನ
ದಿವ್ಯಚರಣವ ತೋರೊ ದಶಶಿರಹರನ (೨)

ವಾಯುರೂಪದೊಳು ನೀ ಸೇವೆಗೈದನ
ಬಲವಂತ ನೀನಾಗೆ ಜಯವ ತಂದಿತ್ತನ
ಧರೆಯೊಳು ನೀ ನೆಲೆಸೆ ಶ್ರೀಮಧ್ವರಾಯನಾಗಿ
ಶ್ರೀನಿವಾಸ ವಿಠಲನೆ ತಾನಾಗಿ ಪೊರೆದನ (೩)

ರಾಮನ ತೋರೆನಗೆ ಹನುಮ ಶ್ರೀರಾಮನ ತೋರೆನಗೆ
ರಾಮನ ದಿವ್ಯನಾಮನ ಮೂಜಗಕ್ಷೇಮನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೭.೨೦೧೨

Shri Krishnana Nooraru Geethegalu - 248

ಸಡಗರ

ಸುಂದರ ಶ್ಯಾಮ ಸುಂದರ ರಾಧೆ ವದನವು ಚಂದಿರ
ರಾಧೆ-ಮಾಧವ ಮಿಲನ ಕ್ಷಣವು ಬೃಂದಾವನದೆ ಸಡಗರ

ಕೃಷ್ಣ ನಯನವು ಸಂಜೆಯಾಗಸ ಬಯಕೆ ತಾರೆ ಹೊಳಪು
ರಾಧೆ ನಡುವದು ಬಳುಕೊ ಯಮುನೆ ಆಹಾ ಎಂಥ ಒನಪು (೧)

ಕೃಷ್ಣನೆದೆಯದು ಮತ್ತಿನಶ್ವವೊ ವೇಗೋನ್ಮಾದದೋಟ
ರಾಧೆ ಚೆಲುವದಾ ರಸಿಕನೊಡಲಿಗೆ ಒಲುಮೆ ಬೆರೆತ ಊಟ (೨)

ಕೃಷ್ಣ ಮೈಮನ ಜೀವಕಣಕಣ ಮೋಹ ಮೋಹನ ಗಾನ
ರಾಧೆ ನುಡಿವ ಜೀವವೀಣೆಯು ಹರ್ಷದಲೆಯಲೆ ಯಾನ (೩)

ಕೃಷ್ಣ ಚೆಲುವನು ಚೆಲುವ ಚೋರನು ಶ್ರೀನಿವಾಸ ವಿಠಲ
ದಿನವೂ ಸವಿವನು ಸವಿದು ತಣಿವನು ರಾಧೆ ಪ್ರೇಮದ ಬಟ್ಟಲ(೪)

ಸುಂದರ ಶ್ಯಾಮ ಸುಂದರ ರಾಧೆ ವದನವು ಚಂದಿರ
ರಾಧೆ-ಮಾಧವ ಮಿಲನ ಕ್ಷಣವು ಬೃಂದಾವನದೆ ಸಡಗರ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೮.೦೭.೨೦೧೨

Saturday, July 14, 2012

Shri Krishnana Nooraru Geethegalu - 247

ಕೃಷ್ಣ ತ್ರಿಜಗವಂದಿತ

ಕೃಷ್ಣ ತ್ರಿಜಗವಂದಿತ ಶ್ರೀಕೃಷ್ಣ
ಸುಚರಿತ ಶುಭದಾತ ಸುಜನ ಸಂಪ್ರೀತ

ಮಥುರಾ ಸೆರೆಯುದಯ ಗೋಕುಲಪುರನಿಲಯ
ದ್ವಾಪರದ ಮೂಡಣದ ಅರುಣೋದಯ
ಶ್ರೀಪಾದ ಶರಣಂಗೆ ಸರ್ವಮಂಗಳ ಪುಣ್ಯ
ವಂದೆ ದೇವಕಿ ಕಂದ ತ್ರೈಲೋಕಜನ್ಯ (೧)

ಕಂಸ ಸಂಹಾರ ಶ್ರೀ ಕಾಳಿಂಗ ಮರ್ದನನೆ
ಗೋವರ್ಧನ ಎತ್ತಿ ಇಂದ್ರನಹಂ ಇಳುಹಿದನೆ
ಪೂತನೆಯ ಪ್ರಿಯಸುತನೆ ಪಾಂಡವರ ಪೊರೆದವನೆ
ಯದುಕುಲಜ ಪ್ರಿಯದೇವ ರಾಧೆಹೃದಯ (೨)

ಸೃಷ್ಟಿಶಕ್ತಿಯು ಕೃಷ್ಣ ಕರ್ಮಮುಕ್ತಿಯು ಕೃಷ್ಣ
ಜಯದೇವ ರಸಗೀತದುದ್ಗೀತ ಕೃಷ್ಣ
ಸಕಲವನು ಸಕಲರನು ಸಲಹುವನೆ ಶ್ರೀಕೃಷ್ಣ
ಶ್ರೀನಿವಾಸ ವಿಠಲ ಶ್ರೀದಶದೇವ ಕೃಷ್ಣ (೩)

ಕೃಷ್ಣ ತ್ರಿಜಗವಂದಿತ ಶ್ರೀಕೃಷ್ಣ
ಸುಚರಿತ ಶುಭದಾತ ಸುಜನ ಸಂಪ್ರೀತ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೭.೨೦೧೨

Monday, July 9, 2012

Shri Krishnana Nooraru Geethegalu - 246

ನಿನ್ನೊಲುಮೆ ಇರದೆನ್ನ

ನಿನ್ನೊಲುಮೆ ಇರದೆನ್ನ ಬದುಕುಂಟೆ ಮಾಧವ
ನಾ ಬರಿಯ ಬೊಂಬೆಯೊ ನೀನೆನ್ನ ಜೀವ

ಮೂಜಗದ ಅಣುಕಣದ ಜೀವ ಜೀವನ ನೀನೊ
ಚರಣದೊಳು ಶರಣಾದೆ ಕರುಣ ಹರಸು
ನೀನಿತ್ತ ಬದುಕಿದುವು ನೀ ದಿವ್ಯ ಬೆಳಕಯ್ಯ
ನಿಶೆ ಹರಿದು ಉಷೆಯೆಡೆಗೆ ಎನ್ನ ನಡೆಸು (೧)

ಧರೆ-ಧರ್ಮವನು ಪೊರೆದ ದಶರೂಪನೊ ನೀನು
ಎನ್ನೊಳಗಿನಂಧಕನ ತೊಲಗಿಸಿನ್ನು
ಪಂಚಾಬ್ಧಿ ದೇಹದೀ ಶುದ್ಧಾತ್ಮದಾಲಯದೆ
ಶ್ರೀನಿವಾಸ ವಿಠಲಯ್ಯ ನೆಲೆಸೊ ಇನ್ನು (೨)

ನಿನ್ನೊಲುಮೆ ಇರದೆನ್ನ ಬದುಕುಂಟೆ ಮಾಧವ
ನಾ ಬರಿಯ ಬೊಂಬೆಯೊ ನೀನೆನ್ನ ಜೀವ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೦೭.೨೦೧೨

Saturday, July 7, 2012

Shri Krishnana Nooraru Geethegalu - 245

ಆಗಮನ

ರಾಧೆಯೆದೆಯೊಳು ಮೌನಯಾನ ಕಾಯುತಿದೆ ಬೃಂದಾವನ
ಗೋಧೂಳಿಯ ಸಂಭ್ರಮದೊಳು ಬರುವ ಎಮ್ಮ ಶ್ಯಾಮನ

ಯಮುನೆಯೊಡಲೊಳು ಚಿಂತಾಲಹರಿ ಬರುವನೆ ಬಾರದಿರುವನೆ
ಕಾಯಿಸದಿರೊ ವಿರಹಿ ರಾಧೆಯ ಎನುವುದದರ ಪ್ರಾರ್ಥನೆ (೧)

ಚುಕ್ಕೆ ಬಾನೊಳು ಚಂದ್ರ ಬೇಸರ ಬರುವನೆ ಬಾರದಿರುವನೆ
ನಡುವ ಬಳಸಿ ರಾಧೆಯಧರಕೆ ಸಿಹಿಯೊಲುಮೆಯ ಸುರಿವನೆ (೨)

ತೂಗುಮಂಚವು ಕೇಳುತಿಹುದು ಬರುವನೆ ಬಾರದಿರುವನೆ
ರಾಧೆ ಸನಿಹದ ಸಂಗಸುಖದೊಳು ಹರ್ಷೋದ್ಘಾರಗರೆವನೆ (೩)

ಮುದ್ದುವೀಣೆಯು ಮೌನವಾಗಿದೆ ಬರುವನೆ ಬಾರದಿರುವನೆ
ರಾಧೆ ಹೃದಯದ ಜೀವತಂತಿಯ ಮಿಡಿವನೆ ರಾಗ ನುಡಿವನೆ (೪)

ಯುಗದ ಸಾಕ್ಷಿಯ ಬೃಂದಾವನವಿದು ರಾಧೆ-ಮಾಧವ ಮಿಲನಕೆ
ಎಂಬ ನಿಜವದ ಶ್ರೀನಿವಾಸ ವಿಠಲನವನು ಮರೆವನೆ (೫)

ರಾಧೆಯೆದೆಯೊಳು ಮೌನಯಾನ ಕಾಯುತಿದೆ ಬೃಂದಾವನ
ಗೋಧೂಳಿಯ ಸಂಭ್ರಮದೊಳು ಬರುವ ಎಮ್ಮ ಶ್ಯಾಮನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೭.೨೦೧೨

Wednesday, July 4, 2012

Shri Krishnana Nooraru Geethegalu - 244

ನಂಬಲು ಕೆಡುಕಿಲ್ಲವೊ

ನಂಬಲು ಕೆಡುಕಿಲ್ಲವೊ ಶ್ರೀರಾಮನ
ನಂಬದೆ ಬದುಕಿಲ್ಲವೊ ಶ್ರೀಶ್ಯಾಮನ (ಪಲ್ಲವಿ)

ನಂಬದೆ ನಂಬಿದೆನೆನುವ ನರಜನುಮವು
ಬವಣೆಯ ಬಣವೆಯೊ ನರಮನುಜ (ಅನುಪಲ್ಲವಿ)

ಧನ್ಯನಾದನೊ ಹನುಮ ದಿವ್ಯಚರಣವ ನಂಬಿ
ದರುಶನ ಮಾತ್ರದೊಳಾ ಶಬರಿ
ನಂಬದೆ ಉಳಿದಸುರ ಧರೆಯೊಳಗಳಿದನೊ
ಶರಣರ ಪೊರೆವನೊ ಶ್ರೀಹರಿ (೧)

ಮಾತೆ ಯಶೋದೆಯ ಮಡಿಲೊಳಗಾಡುತ
ಗೋಕುಲ ಸಲಹಿದ ಗೋವಿಂದ
ಹಿಂಸಕ ಕಂಸನ ಧ್ವಂಸವಗೈದನೊ
ದ್ವಾರಕಾಧೀಶ ಶ್ರೀಅರವಿಂದ (೨)

ಕೃತದಿಂ ಕಲಿವರೆಗು ಆರರ ನಿಶೆ ಕಳೆದು
ಕಾಯುತಲಿರುವನೊ ಶ್ರೀಲೋಲ
ನಂಬಿದ ಸುಜನರ ಸುಖದೊಳು ಪಾಲಿಸುತ
ಮಂಗಳವೀವನೊ ಶ್ರೀನಿವಾಸ ವಿಠಲ (೩)

ನಂಬಲು ಕೆಡುಕಿಲ್ಲವೊ ಶ್ರೀರಾಮನ
ನಂಬದೆ ಬದುಕಿಲ್ಲವೊ ಶ್ರೀಶ್ಯಾಮನ (ಪಲ್ಲವಿ)

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೭.೨೦೧೨

Shri Krishnana Nooraru Geethegalu - 243

ಸುಮಧುರ ಮುರಳಿಗಾನ

ಮಧುರ ಸುಮಧುರ ಮುರಳಿಗಾನವು ಕರ್ಣಾನಂದವ ತರುತಲಿದೆ
ರಾಧೆಯೊಲವಿನ ಬೃಂದಾವನದೊಳು ಗೋಕುಲಕೃಷ್ಣನ ನಾದವಿದೆ

ಜುಳುಜುಳು ಜುಳುಜುಳು ಕಿರುಗೆಜ್ಜೆ ಕಾಲ್ಗಳ ಯಮುನೆಯು ನಲುಮೆಯಿಂದೋಡುತಿದೆ
ತೀರದ ಹಸುರಿನ ಚಿಗುರಿನ ಎದೆಯೊಳು ನವಪುಷ್ಪಾಂಕುರವಾಗುತಿದೆ
ಮಾಮರದೆದೆಯಲಿ ಕೋಕಿಲ ತಾನು ನವರಸಗಾನವ ಬರೆಯುತಿದೆ
ರಂಗಿನ ಬಾನೊಳು ಚುಕ್ಕಿಯ ಸಿಂಗಾರ ತಿಂಗಳು ಚೆಂದದಿ ನಗುತಲಿದೆ (೧)

ಚಿನ್ನದ ಚಿತ್ರದ ಉಯ್ಯಾಲೆಯು ತಾ ರಾಧೆ-ಮಾಧವರ ಕರೆಯುತಿದೆ
ಶೃಂಗಾರ ನುಡಿಸೊ ವಿರಹದ ವೀಣೆಯು ಒಂಟಿಯೆಂದೊಳಗೇ ನೋಯುತಿದೆ
ಮೋಹನನಿಲ್ಲದ ರಾಧೆಯ ಲೋಕದಿ ಪ್ರೇಮಕೆ ಅರ್ಥವೇ ಶೂನ್ಯವಿದೆ
ರಾಧೆಯ ಜೀವನ ಶ್ರೀನಿವಾಸ ವಿಠಲನ ಬೃಂದಾವನವದು ಕಾಯುತಿದೆ (೨)

ಮಧುರ ಸುಮಧುರ ಮುರಳಿಗಾನವು ಕರ್ಣಾನಂದವ ತರುತಲಿದೆ
ರಾಧೆಯೊಲವಿನ ಬೃಂದಾವನದೊಳು ಗೋಕುಲಕೃಷ್ಣನ ನಾದವಿದೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೭.೨೦೧೨

Thursday, June 28, 2012

Shri Krishnana Nooraru Geethegalu - 242

ಏನೊ ತಳಮಳ ಇವಳಿಗೆ

ಏನೊ ತಳಮಳ ಇವಳಿಗೆ ಗೋಕುಲದ ಸಿರಿ ಚೆಲುವೆಗೆ
ನಯನದಂಚೊಳು ಬಯಕೆ ನವಿಲು ಕಾಯುತಿಹಳಾ ಚೆಲುವಗೆ

ಬೃಂದಾವನಕವ ಬರುವನೊ ಒಲುಮೆ ಹೂಮಳೆಗರೆವನೊ
ಬಳ್ಳಿ ತೆರದೊಳು ಬಳಸಿ ನಡುವನು ನಲುಮೆಚಿತ್ರ ಬರೆವನೊ (೧)

ನಯನ ನಯನವ ಸೆಳೆವನೊ ಅಧರಕಧರವ ಬೆಸೆವನೊ
ವಿರಹದೊಡಲ ವೀಣೆ ಮೀಟಿ ಕಡಲಿನಂದದಿ ಮೊರೆವನೊ (೨)

ಚೆಲುವರೊಳಗೆ ಚೆಲುವನೊ ಜಗದ ಪ್ರೀತಿಗೆ ಮಿಡಿವನೊ
ಶ್ರೀನಿವಾಸ ವಿಠಲ ಕೃಷ್ಣ ಅದಾರ ಮಿಲನದೊಳಿರುವನೊ (೩)

ಏನೊ ತಳಮಳ ಇವಳಿಗೆ ಗೋಕುಲದ ಸಿರಿ ಚೆಲುವೆಗೆ
ನಯನದಂಚೊಳು ಬಯಕೆ ನವಿಲು ಕಾಯುತಿಹಳಾ ಚೆಲುವಗೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೬.೨೦೧೨

Wednesday, June 27, 2012

Shri Krishnana Nooraru Geethegalu - 241

ತುಂಗಾತೀರನಿವಾಸ

ತುಂಗಾತೀರ ನಿವಾಸ ಶ್ರೀಗುರು ರಾಯವಿಶೇಷ
ಮುದ್ದು ಗೋವಿಂದನ ಶ್ರೀಪಾದ ದಾಸ

ನೀ ಇರುವೆಡೆಯೊಳೆ ಎನ್ನಿರುವೊ ತಂದೆ
ಗತಿ ಎನಗಾರೊ ಓಡೋಡಿ ಬಂದೆ
ನರಬೊಂಬೆಯೊ ನಾನು ಅನ್ಯಗಳಾಗರ
ಸೂತ್ರಕ ನೀನೊ ಶುದ್ಧದಿ ಸಲಯೆನ್ನ (೧)

ಬಲ್ಲೆನೊ ಕೃತದಿಂದ ನೀನೆನ್ನ ಪೊರೆದವನು
ಕಲಿಯುಗ ವರದನು ಅಕ್ಷಯ ಕಾಮಧೇನು
ಶ್ರೀನಿವಾಸ ವಿಠಲನೆ ಒಲಿದೆಮ್ಮ ಕಲ್ಪವೃಕ್ಷ
ವಾಯು ಬಲದೇವ ಮಧ್ವಶ್ರೀ ಜಗರಕ್ಷ (೨)

ತುಂಗಾತೀರ ನಿವಾಸ ಶ್ರೀಗುರು ರಾಯವಿಶೇಷ
ಮುದ್ದು ಗೋವಿಂದನ ಶ್ರೀಪಾದ ದಾಸ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೬.೨೦೧೨

Tuesday, June 26, 2012

Shri Krishnana Nooraru Geethegalu - 240

ನಿನ್ನ ಕರದೊಳ ವೇಣು

ನಿನ್ನ ಕರದೊಳ ವೇಣು ನುಡಿಯಲೊ ನವರಾಗ
ಜಗದಾದಿ ಜೀವಗಳು ಕೇಳಿ ನಲಿಯೆ ಕೃಷ್ಣ

ನಾದತರಂಗವದು ನೂರ್ಕಾಲ ನೂರ್ಮಡಿಸಿ
ಎಮ್ಮ ಚೇತನದೊಳು ರಿಂಗಣಿಸಲೊ ಸದಾ

ಶುದ್ಧವಾಗಿಸೆ ಆತ್ಮ ಅಸುರರಾರ್ವರ ಮಡುಹೆ
ನಾದಾಂಬುಧಿಯದು ಅಬ್ಬರಿಪಲೊ ಕೃಷ್ಣ

ಜನುಮಜನುಮಗಳಲ್ಲಿ ನಿನ್ನಿರುವ ದಿಟವದನು
ಸುಜನರೊಳು ಸಾರಲೈ ಶ್ರೀನಿವಾಸ ವಿಠಲ

ನಿನ್ನ ಕರದೊಳ ವೇಣು ನುಡಿಯಲೊ ನವರಾಗ
ಜಗದಾದಿ ಜೀವಗಳು ಕೇಳಿ ನಲಿಯೆ ಕೃಷ್ಣ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೬.೨೦೧೨

Friday, June 15, 2012

Shri Krishnana Nooraru Geethegalu - 239

ನಾಚುತಿಹಳು ರಾಧೆ

ನಾಚುತಿಹಳೊ ಎಮ್ಮ ರಾಧೆ ಮೌನದೊಡವೆ ಧರಿಸಿ
ಸಂಜೆಯಾಯ್ತು ಬರುವನೆಂದು ಕೃಷ್ಣನವಳ ಅರಸಿ

ಹೊಳೆವ ತಂಬಿಗೆಯೊಳಗೆ ನಗುವ ಯುಮುನೆಗೆಂಥ ಪುಳಕ
ಬರುವ ಹರಿಯ ಪಾದ ತೊಳೆಯಲವಳ ಬದುಕೇ ಸಾರ್ಥಕ (೧)

ಹಕ್ಕಿಕೊರಳೊಳು ರಾಗಬಂಧಿಯು ಶೃಂಗಾರ ಸಂಭ್ರಮ ನರ್ತನ
ರಾಧೆಯೊಡಲಿನ ವಿರಹಿ ವೀಣೆಯು ಕಾತರಿಸಿದೆ ಮದನನ (೨)

ಚಿಗುರು ತುಳಸಿಯ ಮಾಲೆ ದಳದೊಳು ತೀರದಾವುದೊ ತವಕ
ಮುದ್ದುಕೃಷ್ಣನ ಕೊರಳ ಸಿರಿಯನು ತಬ್ಬಿಕೊಳ್ಳುವ ತನಕ (೩)

ಹಸಿರು ತೋರಣ ಚುಕ್ಕಿ ಚಿತ್ರಣ ನಳನಳಿಸಿದೆ ಬೃಂದಾವನ
ಶ್ರೀನಿವಾಸ ವಿಠಲ ರಾಧೆಗೆ ಚಂದ್ರ ಸಾಕ್ಷಿಯು ಮಿಲನ (೪)

ನಾಚುತಿಹಳೊ ಎಮ್ಮ ರಾಧೆ ಮೌನದೊಡವೆ ಧರಿಸಿ
ಸಂಜೆಯಾಯ್ತು ಬರುವನೆಂದು ಕೃಷ್ಣನವಳ ಅರಸಿ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೪.೦೬.೨೦೧೨

Sunday, June 10, 2012

Shri Krishnana Nooraru Geethegalu - 238

ನೀನೆ ಕರುಣಾಕರನೊ

ನೀನೆ ಕರುಣಾಕರನೊ ಕೃಷ್ಣ ಕೃಷ್ಣ
ನೀನೆ ಸಲಹುವುದೆನ್ನ ಕೃಷ್ಣ ಶ್ರೀಕೃಷ್ಣ

ನೀನೆ ಕೃತದೊಳು ನಿಜವು ಮತ್ಸ್ಯಾದಿ ಸೋಜಿಗವು
ನೀನಯ್ಯ ಮೂಜಗವು ಸುಜನ ಸುಖವು
ನೀನೆ ನರಕೇಸರಿಯು ಬಲಿಯ ಮೆಟ್ಟಿದ ಹರಿಯು
ನೀನಯ್ಯ ಧರೆ ದುರಿತವಳಿದ ದೊರೆಯು (೧)

ನೀನೆ ಗೋಕುಲ ಗೊಲ್ಲ ಮುದ್ದುರಾಧೆಯ ನಲ್ಲ
ನರನೆಂಬಿ ಗೋವುಗಳ ಕಾವ ಗೋಪಾಲ
ಕರವ ಮುಗಿವೆನೊ ತಂದೆ ನಾಮ ನಂಬಿಹೆ ಮುಂದೆ
ಕಾಯೆಮ್ಮ ಅನವರತ ಶ್ರೀನಿವಾಸ ವಿಠಲ (೨)

ನೀನೆ ಕರುಣಾಕರನೊ ಕೃಷ್ಣ ಕೃಷ್ಣ
ನೀನೆ ಸಲಹುವುದೆನ್ನ ಕೃಷ್ಣ ಶ್ರೀಕೃಷ್ಣ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೬.೨೦೧೨

Wednesday, May 30, 2012

Shri Krishnana Nooraru Geethegalu - 237

ಶ್ರೀಪಾದರಾಜ

ರಾಜ ಗುರುರಾಜ ಮಧ್ವಾಷ್ಟಮ ತೇಜ
ಯತಿಕುಲೋತ್ತಮ ನಮೊ ಶ್ರೀಪಾದರಾಜ

ಸುಜನವಂದಿತ ಸಿರಿಯೆ ವ್ಯಾಸರಾಜ ಸದ್ಗುರುವೆ
ನರಸಿಂಹತೀರ್ಥ ಪುರವಾಸ ಪ್ರಭುವೆ
ವಾಗ್ವಜ್ರಕೋವಿದ ಶ್ರೀಧ್ರುವರಾಜ ಪ್ರತಿರೂಪ
ಶ್ರೀರಂಗವಿಠಲನ ಚರಣಸುಖ ಸಂಪದರೆ (೧)

ಸುಜ್ಞಾನದಂಬರವೆ ವೈರಾಗ್ಯದಂಬುಧಿಯೆ
ಸಕಲಶುಭಕಲ್ಯಾಣ ಸುಗುಣಸುಧೆಯೆ
ಕಂಬವನು ಸೀಳಿ ತಾ ಕಂದನ ಪೊರೆದವನ
ಶ್ರೀನಿವಾಸ ವಿಠಲನ ಶ್ರೀಪಾದನಿಧಿಯೆ (೨)

ರಾಜ ಗುರುರಾಜ ಮಧ್ವಾಷ್ಟಮ ತೇಜ
ಯತಿಕುಲೋತ್ತಮ ನಮೊ ಶ್ರೀಪಾದರಾಜ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೧.೦೫.೨೦೧೨

Saturday, May 26, 2012

Shri Krishnana Nooraru Geethegalu - 236

ಕಂಡಿರೇನಯ್ಯ ಎಮ್ಮ ಕಂದನ

ಕಂಡಿರೇನಯ್ಯ ಎಮ್ಮ ಕಂದನ
ಕಂದನ ಗೋವಿಂದನ ಗೋಕುಲದ ಅರವಿಂದನ

ಕಟ್ಟು ಮುಡಿಯ ದಿಟ್ಟನ ಮುಡಿಗೆ ಗರಿಯ ಇಟ್ಟನ
ರತ್ನಮುಕುಟವ ತೊಟ್ಟನ ಜಟ್ಟಿಯ ಸಮಮಟ್ಟನ (೧)

ಮೂಚಂದನ ನಾಮನ ಅಧರ ಕೆಂಪಿನ ಶ್ಯಾಮನ
ಪುಟ್ಟಪುಟ್ಟ ಹೆಜ್ಜೆಯಿಟ್ಟು ಗೆಜ್ಜೆ ಸಪ್ಪಳ ಮಾಳ್ಪನ (೨)

ವೇಣುಮುರಳಿಯ ನುಡಿವನ ಭಾಮೆ ಪ್ರೇಮಕು ತುಡಿವನ
ಚೆಲುವ ಗೋಪಗೊಲ್ಲನ ಚೆಲುವೆ ರಾಧೆ ನಲ್ಲನ (೩)

ಮಾವ ಕಂಸನ ಕೊಂದನ ಅಸುರೆಯ ಮೊಲೆವುಂಡನ
ದುರುಳ ಕುರುಜನ ಹರಿದ ಶ್ರೀಪಾದನೆಮ್ಮ ಮಲ್ಲನ (೪)

ತ್ರೇತೆಯೊಳು ಶ್ರೀರಾಮನ ದ್ವಾಪರದ ಶ್ರೀಕೃಷ್ಣನ
ಸೃಷ್ಟಿಯೊಳಗೆ ಸುಜನ ಪೂಜಿಪ ಶ್ರೀನಿವಾಸ ವಿಠಲನ (೫)

ಕಂಡಿರೇನಯ್ಯ ಎಮ್ಮ ಕಂದನ
ಕಂದನ ಗೋವಿಂದನ ಗೋಕುಲದ ಅರವಿಂದನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೫.೨೦೧೨

Wednesday, May 23, 2012

Shri Krishnana Nooraru Geethegalu - 235

ಸಂಜೆಯಾಗುತಿದೆ ಗೋಕುಲದೆ

ಸಂಜೆಯಾಗುತಿದೆ ಗೋಕುಲದೆ ಪ್ರಾಣಸಖಿ
ಜೀವ ಮಾಧವನವನು ಎಲ್ಲಿಹನು ಪೇಳೆ

ಎನ್ನ ವಿರಹದ ಎದೆಗೆ ಅವನೆ ಜುಳುಜುಳು ಯಮುನೆ
ಎನ್ನಾಸೆ ತೀರದೊಳು ನಗುವ ಹಸಿರು
ಗೋಕುಲದ ಸಿರಿಚೆಲುವ ಗೋವಿಂದ ಗೋಪಾಲ
ಎನ್ನೊಲವ ಪ್ರತಿಮಿಡಿತ ಪ್ರಾಣ ಉಸಿರು (೧)

ಎನ್ನೆದೆಯ ಮಣಿವೀಣೆ ನುಡಿಸೊ ವೈಣಿಕ ಕೃಷ್ಣ
ಶೃಂಗಾರ ರಸ ಹರಿಸಿ ತಣಿಸೊ ಜೀವ
ಈ ರಾಧೆ ಪ್ರಿಯಕರನೆ ಶ್ರೀನಿವಾಸ ವಿಠಲಯ್ಯ
ಬಾರೊ ತಾಳೆನೊ ನೀನು ಸನಿಹವಿರದಿಹ ನೋವ (೨)

ಸಂಜೆಯಾಗುತಿದೆ ಗೋಕುಲದೆ ಪ್ರಾಣಸಖಿ
ಜೀವ ಮಾಧವನವನು ಎಲ್ಲಿಹನು ಪೇಳೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೦೫.೨೦೧೨

Saturday, May 19, 2012

Shri Krishnana Nooraru Geethegalu - 234

ಶ್ರೀಶಾರದಾ ಮಾತೆ

ಶ್ರೀಶಾರದಾ ಮಾತೆ ಸುಜ್ಞಾನದಾತೆ
ಶೃಂಗೇರಿಪುರವಾಸಿನಿ ತ್ರೈಲೋಕ ಪ್ರೀತೆ

ಬ್ರಹ್ಮಹೃದಯವಿಹಾರಿಣಿ ಶ್ರೀವಾಣಿ ಕಲ್ಯಾಣಿ
ಶ್ವೇತಕಮಲಸ್ಥಿತೇ ದೇವಿ ಸನ್ಮಂಗಳದಾಯಿನಿ
ಶುಭ್ರೆ ಸುಮುಖೆ ಸುಮಾಂಗಲ್ಯೆ ಓಂಕಾರರೂಪಿಣಿ
ಮತಿಯನರಸಿ ಸಲಹೆಯೆಮ್ಮ ಮೂಲೋಕ ಪಾವನಿ (೧)

ಶಿವಸುತೆಯೆ ಶ್ರೀಶಾರದೆ ಸಕಲಕಲಾವಲ್ಲಭೆ
ವೀಣಾಪಾಣಿ ವರದಾಯಿನಿ ಸಿರಿಲಕುಮಿಸೋದರಿ
ಸೋಮಸುಂದರವದನೆ ದೇವಿ ಕಾಯೆ ಹಂಸವಾಹಿನಿ
ಶ್ರೀನಿವಾಸ ವಿಠಲಾತ್ಮಿಕೆ ತಾಯೆ ಬೊಮ್ಮನರಾಣಿ (೨)

ಶ್ರೀಶಾರದಾ ಮಾತೆ ಸುಜ್ಞಾನದಾತೆ
ಶೃಂಗೇರಿಪುರವಾಸಿನಿ ತ್ರೈಲೋಕ ಪ್ರೀತೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೫.೨೦೧೨

Friday, May 11, 2012

Shri Krishnana Nooraru Geethegalu - 233

ನಿನ್ನ ಶ್ರೀಚರಣದೊಳು

ನಿನ್ನ ಶ್ರೀಚರಣದೊಳು ಮುಗಿದು ನಿಂತಿಹೆ ಪ್ರಭುವೆ
ತೋರಯ್ಯ ಶ್ರೀಪಾದನ ಯತಿರಾಯ
ತೋರಯ್ಯ ಮಹನೀಯನ ಗುರುರಾಯ

ವಾಯುಸುತ ಬಕುತಿಯಿಂ ಪ್ರೇರಿತನ ಸ್ಥಾಪಿತನ
ಜಗಮಾನ್ಯ ಬಹುಮಾನ್ಯ ಶ್ರೀರಾಮನ
ದಶಶಿರನ ದುರಿತವನು ದಹಿಸಿ ತಾ ಧರೆಯೊಳಗೆ
ಧರ್ಮದುನ್ನತಿ ಮೆರೆದ ಶ್ರೀತ್ರೇತನ (೧)

ತೋರಯ್ಯ ಶ್ರೀಪಾದನ ಯತಿರಾಯ
ತೋರಯ್ಯ ಮಹನೀಯನ ಗುರುರಾಯ

ಮಥುರೆಮಾವನ ಸೀಳಿ ದ್ವಾಪರದಿ ಜಯಕೇಳಿ
ಧರ್ಮದೈವರ ಪೊರೆದ ಶ್ರೀಕೃಷ್ಣನ
ಕುರುಸುತರ ಎದೆಯೇರಿ ರಣದೊಳಗೆ ಜಯಭೇರಿ
ಶರಣ ಸುಜನರ ಕಾಯ್ದ ಶ್ರೀದೇವನ (೨)

ತೋರಯ್ಯ ಶ್ರೀಪಾದನ ಯತಿರಾಯ
ತೋರಯ್ಯ ಮಹನೀಯನ ಗುರುರಾಯ

ನಿನ್ನ ಗಾನದ ಸುಧೆಗೆ ತುಂಗೆತೀರದೊಳಾಡ್ವ
ರಾಯರಾಯರ ರಾಯ ಶ್ರೀಪಾದನ
ವೈಕುಂಠಪುರದೊಳಗೆ ಸಿರಿಲಕುಮಿಯೊಡನಾಡ್ವ
ಶ್ರೀನಿವಾಸ ವಿಠಲ ಶ್ರೀಕಲಿವರದನ (೩)

ತೋರಯ್ಯ ಶ್ರೀಪಾದನ ಯತಿರಾಯ
ತೋರಯ್ಯ ಮಹನೀಯನ ಗುರುರಾಯ

ನಿನ್ನ ಶ್ರೀಚರಣದೊಳು ಮುಗಿದು ನಿಂತಿಹೆ ಪ್ರಭುವೆ
ತೋರಯ್ಯ ಶ್ರೀಪಾದನ ಯತಿರಾಯ
ತೋರಯ್ಯ ಮಹನೀಯನ ಗುರುರಾಯ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೫.೨೦೧೨

Thursday, May 10, 2012

Shri Krishnana Nooraru Geethegalu - 232

ನಾರಾಯಣ ಕೃಷ್ಣ

ನಾರಾಯಣ ಕೃಷ್ಣ ವಾಸುದೇವ
ರಾಮ ಶ್ರೀರಾಮ ನಮೋ ದೇವಾದಿದೇವ

ಕಮಲನಯನ ರಾಮ ಸೋಮವದನ
ದುರಿತಹರಣ ನಮೋ ಜಾನಕೀರಮಣ (೧)

ಯದುನಂದನ ಕೃಷ್ಣ ಮನಮೋಹನ
ನಿಜ ನಿರ್ಗುಣ ನಮೋ ಧರ್ಮಕಾರಣ (೨)

ದಶದೇವನ ಹರಿ ಎಮ್ಮ ಕಾವನ
ಶ್ರೀನಿವಾಸ ವಿಠಲ ನಮೋ ಲಕುಮಿರಮಣ (೩)

ನಾರಾಯಣ ಕೃಷ್ಣ ವಾಸುದೇವ
ರಾಮ ಶ್ರೀರಾಮ ನಮೋ ದೇವಾದಿದೇವ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೫.೨೦೧೨

Tuesday, May 1, 2012

Shri Krishnana Nooraru Geethegalu - 231

ಯಶವಂತ

ಸಕಲ ಸುಗುಣಚರಿತ ಶ್ರೀರಾಮದೂತ
ಶ್ರೀಪತಿ ಪಾದಸೇವಿತ ಪವನಸುತ

ಅಂಜನಾಸಂಭೂತ ಶ್ರೀರಾಮಪ್ರೀತ
ವಾನರಸಂಜಾತ ಹನುಮಂತ ದಾಂತ
ಯಶವಂತ ಧೀಮಂತ ಜಯಜಯ ಬಲವಂತ
ಶ್ರೀನಿವಾಸ ವಿಠಲನೊಲಿದ ಶ್ರೀಗುಣವಂತ

ಸಕಲ ಸುಗುಣಚರಿತ ಶ್ರೀರಾಮದೂತ
ಶ್ರೀಪತಿ ಪಾದಸೇವಿತ ಪವನಸುತ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೦೫.೨೦೧೨

Monday, April 30, 2012

Shri Krishnana Nooraru Geethegalu - 230

ಕರ ಮುಗಿವೆನೊ

ಕರ ಮುಗಿವೆನೊ ಜೀಯ ರಾಘವೇಂದ್ರ ರಾಯ
ತಪ್ಪುನೆಪ್ಪು ಎನ್ನವೊಪ್ಪಿ ಕರುಣೆ ತೋರಿಸಯ್ಯ

ತುಂಗಾತೀರದ ಯತಿಯೆ ಸನ್ಮಂಗಳ ನಿಧಿಯೆ
ಪ್ರಹ್ಲಾದ ದಿವ್ಯರೂಪ ಅಮಿತ ಪುಣ್ಯಗಣಿಯೆ
ಮಂದಮತಿ ನಾ ಗತಿಯನರಿಯೆನೊ ಸುಗತಿ ತೋರೊ ಹರಿಯೆ
ಸಕಲ ಸುಗುಣ ಸಂಪನ್ನ ರಾಘವೇಂದ್ರ ದೊರೆಯೆ (೧)

ಭುವನಗಿರಿಯ ಭಾಗ್ಯವೆಮ್ಮ ವೇಂಕಟಾದಿ ನಾಮವೆ
ಗುರುಸುಧೀಂದ್ರ ಶಿಷ್ಯೋತ್ತಮ ದ್ವೈತಧರ್ಮ ದೀಪವೆ
ಸಕಲಭಾಷ್ಯರಾಯ ಗುರುವೆ ನ್ಯಾಯಸುಧಾಮೂರ್ತಿಯೆ
ಸಮ್ಮತದೊಳು ಸಲಹೆಮ್ಮನು ವ್ಯಾಸತೀರ್ಥರೂಪನೆ (೨)

ಶಾರದಾ ಸುಪುತ್ರನೆ ನ್ಯಾಯಪರಿಮಳಸೂತ್ರನೆ
ಕಲಿಯೊಳಗೆ ನರರ ಕಾಯೊ ರಾಯರಾಯರ ರಾಯನೆ
ನವನೀತಚೋರನೆಮ್ಮ ಶ್ರೀನಿವಾಸ ವಿಠಲರಾಯ
ಪುಣ್ಯಚರಣವ ಬಿಡದೆ ಪೂಜಿಪ ಕಶ್ಯಪನ ಕಂದನೆ (೩)

ಕರ ಮುಗಿವೆನೊ ಜೀಯ ರಾಘವೇಂದ್ರ ರಾಯ
ತಪ್ಪುನೆಪ್ಪು ಎನ್ನವೊಪ್ಪಿ ಕರುಣೆ ತೋರಿಸಯ್ಯ
       
 ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೪.೨೦೧೨

Shri Krishnana Nooraru Geethegalu - 229

ಮಾರುತಿರಾಯ

ನೀನಲ್ಲದಿನ್ನನ್ಯ ಆರೊ ಕಾಯುವರೆನ್ನ
ಮೂಲರಾಮರೇ ಒಲಿದ ಮಾರುತಿರಾಯ

ಇನಿತೆನ್ನ ಜನುಮಗಳ ಕರ್ಮಕಶ್ಮಲವಳಿದು
ಶ್ರೀರಾಮ ಚರಣವನು ತೋರಿಸೆನಗೆ
ಮಾತೆ ಸೀತಾದೇವಿ ಶೋಕಮಡು ಕೆಡುಹಿದನೆ
ನಿನ್ನೊಡೆಯ ರಘುಪತಿಯ ತೋರಿಸೆನಗೆ (೧)

ದ್ವಾಪರದೆ ಬಲವಂತ ಕುರುಗರ್ವ ಭಂಗಿತನೆ
ನಿನ್ನ ದೇವ ಕೃಷ್ಣನನು ತೋರಿಸೆನಗೆ
ಪ್ರಹ್ಲಾದರಾಯರ ಪ್ರತಿರೂಪ ಭೀಮಯ್ಯ
ನಿನ್ನ ನಾರಾಯಣನ ತೋರಿಸೆನಗೆ (೨)

ನೆಚ್ಚಿಬಂದ ನರರ ಮೆಚ್ಚಿ ಸಲಹುವೆನೆಂದ
ರಾಘವೇಂದ್ರರ ನೀನು ತೋರಿಸೆನಗೆ
ದಾಸಸೇವೆಯ ಮೆಚ್ಚಿ ನಿನ್ನೊಳಗೆ ನೆಲೆಯಾದ
ಶ್ರೀನಿವಾಸ ವಿಠಲನ್ನ ತೋರಿಸೆನಗೆ (೩)

ನೀನಲ್ಲದಿನ್ನನ್ಯ ಆರೊ ಕಾಯುವರೆನ್ನ
ಮೂಲರಾಮರೇ ಒಲಿದ ಮಾರುತಿರಾಯ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೪.೨೦೧೨

Shri Krishnana Nooraru Geethegalu - 228

ಗೋವಿಂದ ಎನ್ನಿರೊ

ಗೋವಿಂದ ಎನ್ನಿರೊ ಗೋವಿಂದ ಗೋವಿಂದ
ಗೋವಿಂದ ಸ್ಮರಣೆಯೆ ಮೂಜಗದಾನಂದ

ಮೂಡಣ ಮೂಡುವ ಅರುಣನ ಕಿರಣವು
ಚಿಮ್ಮುವ ಹೊನ್ನಿನ ಒಡಲೊಳು ಗೋವಿಂದ
ಹಕ್ಕಿಯ ಕೊರಳಿನ ಇನಿದನಿ ಚಿಲಿಪಿಲಿ
ಗಾನದ ಸುಧೆಯೊಳು ಗೋವಿಂದ ಗೋವಿಂದ (೧)

ಹರಿಯುವ ಯಮುನೆಯ ಅಂತರಂಗದೊಳು
ಜುಳುಜುಳುಯೆನುವ ಜೋಗುಳ ಗೋವಿಂದ
ಅರಳಿದ ಮೊಗ್ಗಿನ ವರ್ಣದ ಹೂವ್ವಿಗೆ
ದುಂಬಿಯು ಹಾಡಿದೆ ಗೋವಿಂದ ಗೋವಿಂದ (೨)

ತ್ರೈಲೋಕ ಸುಜನರು ಪ್ರೀತಿಯಿಂ ಭಜಿಸುತ
ಸಲಹೊ ನೀನೆನ್ನುವ ಪುಣ್ಯನು ಗೋವಿಂದ
ಬಲ-ವಾಯು-ಮಧ್ವಗೊಲಿದ ಶ್ರೀನಿವಾಸ ವಿಠಲಯ್ಯ
ದಶದೊಳು ಧರೆಕಾವ ಗೋವಿಂದ ಗೋವಿಂದ (೩)

ಗೋವಿಂದ ಎನ್ನಿರೊ ಗೋವಿಂದ ಗೋವಿಂದ
ಗೋವಿಂದ ಸ್ಮರಣೆಯೆ ಮೂಜಗದಾನಂದ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೪.೨೦೧೨

Thursday, April 26, 2012

Shri Krishnana Nooraru Geethegalu - 227

ವಾಸುದೇವ ಕೃಷ್ಣ

ವಾಸುದೇವ ಕೃಷ್ಣ ದಿವ್ಯಚರಣ
ರಾಮ ಲಕುಮಿರಮಣ ಶೇಷಶಯನ

ಕಾಯೋ ಸುಂದರ ಶ್ಯಾಮ ಶೂರ ಶ್ರೀರಾಮ
ರಘುವಂಶ ಕುಲತಿಲಕ ಕೌಸಲ್ಯೆ ಪ್ರೇಮ
ಸುಗುಣಸಾಗರನಿಧಯೆ ಶಬರಿ ಬಕುತಿಯ ದೊರೆಯೆ
ಕಾಯೋ ಜಾನಕಿ ಹೃದಯ ಹನುಮ ಸಿರಿಯೆ (೧)

ಕಾಯೋ ದೇವಕಿಕಂದ ಆನಂದ ಗೋವಿಂದ
ಯದುವಂಶದುದ್ಧಾರ ಯಶೋದೆ ನಂದ
ಚಾಣಾಕ್ಷ ನಿಜಪಕ್ಷ ಧರ್ಮಪಾಂಡವ ರಕ್ಷ
ಕಾಯೋ ರಾಧೆರಮಣ ಮೂಲೋಕ ದಕ್ಷ (೨)

ಕಾಯೋ ವೈಕುಂಠಪುರವಾಸ ಜಗದೀಶ
ಭೂದೇವಿ-ಶ್ರೀದೇವಿ ಹೃದಯ ಪರಮೇಶ
ಧರಣಿಯೊಳು ದೀನಜನ ದುರಿತಹರ ಪರಿಪಾಲ
ಕಾಯೋ ಶ್ರೀಕಲಿವರದ ಶ್ರೀನಿವಾಸ ವಿಠಲ (೩)

ವಾಸುದೇವ ಕೃಷ್ಣ ದಿವ್ಯಚರಣ
ರಾಮ ಲಕುಮಿರಮಣ ಶೇಷಶಯನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೪.೨೦೧೨

Tuesday, April 24, 2012

Shri Krishnana Nooraru Geethegalu - 226

ಎನ್ನಾಣೆ ರಂಗ

ಆಣೆ ರಂಗ ಎನ್ನಾಣೆ ರಂಗ
ನಿನ್ನಂಥ ದೇವರನು ಕಾಣೆ ರಂಗ

ಜಲಬಿಂದು ನೀನಾದೆ ಬಿಂದು ಅಂಬುಧಿಯಾದೆ
ಮತ್ಸ್ಯ ವರಾಹ ಅವನೀಪತಿಯಾದೆ
ಅಮೃತದ ಮಥನದೊಳು ಮಂದಾರಧರನಾದೆ
ಬಲಿಯಹಂ ಶಿರಮೆಟ್ಟಿ ಶ್ರೀಪಾದನಾದೆ (೧)

ಕೃತದಿ ಸತ್ಯದ ಸತುವು ಶ್ರೀರಾಮ ತ್ರೇತೆಯೊಳು
ಕಂದಗೆ ಕರುಣೆಯೊಳು ಕೇಸರಿನರನಾದೆ
ಧರ್ಮದಾ ಪಾಂಡವಗೆ ಗರಿಕೇಶದವನಾದೆ
ಕಲಿಯೊಳೆಮ್ಮನು ಸಲಹೊ ಶ್ರೀನಿವಾಸ ವಿಠಲ (೨)

ಆಣೆ ರಂಗ ಎನ್ನಾಣೆ ರಂಗ
ನಿನ್ನಂಥ ದೇವರನು ಕಾಣೆ ರಂಗ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೦೪.೨೦೧೨

Friday, April 20, 2012

Shri Krishnana Nooraru Geethegalu - 225

ಸಿರಿಲಕುಮಿರಮಣ

ಶ್ರೀಹರಿಯೆ ಪಾಲಿಸೊ ಸಿರಿಲಕುಮಿರಮಣ
ಅಣುರೇಣುತೃಣಂಗಳ ಆದಿಯಿಂ ಸಲಹುವ

ಹರಿಯೆನಲು ಅಜಮಿಳನು ಅಕ್ಕರದಿ ಹರಸಿದನೆ
ಕರಿಯದುವು ಮೊರೆಯಿಡಲು ಕ್ಷಣದಿ ಒದಗಿದನೆ
ನಾರಾಯಣ ನೀನೆ ಗತಿಯೆನಲು ಪ್ರಹ್ಲಾದ
ಕಂಬವನು ಸೀಳಿ ತಾ ನರಸಿಂಹನಾದವನೆ (೧)

ರಾವಣನ ಶಿರಮುರಿದು ಶಬರಿಗೂ ಒಲಿದವನೆ
ದ್ವಾಪರದೆ ದುರುಹರಿದು ಧರ್ಮಜನ ಗೆಲಿಸಿದನೆ
ಕಲಿಯೊಳಗೆ ಸುಜನಂಗೆ ಸಕಲ ಮಂಗಳವೀವ
ವೈಕುಂಠಪತಿಯೆಮ್ಮ ಶ್ರೀನಿವಾಸ ವಿಠಲನೆ (೨)

ಶ್ರೀಹರಿಯೆ ಪಾಲಿಸೊ ಸಿರಿಲಕುಮಿರಮಣ
ಅಣುರೇಣುತೃಣಂಗಳ ಆದಿಯಿಂ ಸಲಹುವ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೪.೨೦೧೨

Monday, April 16, 2012

Shri Krishnana Nooraru Geethegalu - 224

ಮಂಗಳ ಕೃಷ್ಣ

ಮಂಗಳ ಕೃಷ್ಣ ಮಂಗಳ ಪೂರ್ಣವದನ ತಿಂಗಳ
ಮಂಗಳ ಕೃಷ್ಣ ಮಂಗಳ ಮಂಗಳ ಶುಭಮಂಗಳ

ರಘುವಂಶದುದ್ಧಾರ ಸತ್ಯಗುಣ ಸರದಾರ
ಪುರುಷೋತ್ತಮ ರಾಮ ಜಯಮಂಗಳ
ಜಾನಕೀ ಹೃದಯ ಶ್ರೀದುರಿತಸಂಹಾರ
ಹನುಮ ದೇವನೆ ರಾಮ ಜಯಮಂಗಳ (೧)

ಯದುಕುಲೋತ್ತಮ ಕೃಷ್ಣ ಶ್ರೀಕೇಶಗರಿಮುಕುಟ
ಜಯತು ದೇವಕಿ ಕಂದ ಜಯಮಂಗಳ
ಮುರಿದು ಕೆಡುಕರ್ಮಗಳ ಧರೆಧರ್ಮ ಪೊರೆದವನೆ
ಜಯತು ರಾಧೆಯ ದೇವ ಜಯಮಂಗಳ (೨)

ಶ್ರೀರಾಮ ಮಂಗಳ ಶ್ರೀಶ್ಯಾಮ ಮಂಗಳ
ದಶರೂಪದೊಡೆಯನೆ ಜಯಮಂಗಳ
ಎಮ್ಮಮ್ಮ ಸಿರಿಲಕುಮಿಯೊಪ್ಪಿದ ಚೆಲುವನೆ
ಶ್ರೀನಿವಾಸ ವಿಠಲಯ್ಯ ಜಯಮಂಗಳ (೩)

ಮಂಗಳ ಕೃಷ್ಣ ಮಂಗಳ ಪೂರ್ಣವದನ ತಿಂಗಳ
ಮಂಗಳ ಕೃಷ್ಣ ಮಂಗಳ ಮಂಗಳ ಶುಭಮಂಗಳ
\
       ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೪.೨೦೧೨

Thursday, April 12, 2012

Shri Krishnana Nooraru Geethegalu - 223

ಪಾಮರ ಜನುಮ

ಪಾವನವಾಗಿಸೊ ಪಾಮರ ಜನುಮ
ಹನುಮನಿಗೊಲಿದನೆ ದೊರೆಯೆನ್ನ ಶ್ರೀರಾಮ

ನುಡಿಯಲಿಲ್ಲವೊ ಎನ್ನ ನಾಲಗೆಯು ರಾಮನೆಂದು
ನೋಡಲಿಲ್ಲವೊ ನಯನ ಆ ದಿವ್ಯರೂಪವನ್ನು
ಕರ್ಣ ಮರೆತವೊ ದೇವ ಶ್ರೀನಾಮ ಶ್ರವಣವನು
ಆದಿದೇವಗೆ ಕರವು ಮುಗಿವುದು ಪುಣ್ಯವೆಂದು (೧)

ನೀ ತಂದೆ ನಾ ಬಂದೆ ದಶರಥಸುತ ರಾಮ
ನಿನ್ನಿಂದಲೆ ಸಕಲ ಅರಿವಾಯ್ತೊ ಜಗಕ್ಷೇಮ
ಮಂದಮತಿಯನು ಕ್ಷಮಿಸೊ ಶ್ರೀನಿವಾಸ ವಿಠಲಯ್ಯ
ಕರ್ಮ ಕಶ್ಮಲವಳಿದು ನೀ ಕಾಯೊ ಎನ್ನಯ್ಯ (೨)

ಪಾವನವಾಗಿಸೊ ಪಾಮರ ಜನುಮ
ಹನುಮನಿಗೊಲಿದನೆ ದೊರೆಯೆನ್ನ ಶ್ರೀರಾಮ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೨.೦೪.೨೦೧೨

Friday, April 6, 2012

Shri Krishnana Nooraru Geethegalu - 222

ಗುರುರಾಯ ವರದಾಯ

ಗುರುರಾಯರ ವರದಾಯರ ಸ್ಮರಣೆ ಮಾಡಿರೊ
ಶ್ರೀಹರಿಯ ಪದತಲದಿ ನಿಂತು ನರರ ಕಾವ ಎಮ್ಮ

ತುಂಗೆಯಂದದಿ ಸ್ಫಟಿಕ ಶುದ್ಧ ಆತ್ಮವೆಮ್ಮ ರಾಘವೇಂದ್ರ
ದೇವರೂಪಿ ಶಂಖುಕರ್ಣ ಪ್ರಹ್ಲಾದ ವ್ಯಾಸರಾಯ
ಮಂದಮತಿಗೆ ಸುಮತೀಂದ್ರರೊ ಅಕ್ಷಯ ಸಿರಿಸುಖದಾಯ
ಕಲಿವರದ ಕಲ್ಪವೃಕ್ಷ ಕಾಮಧೇನು ಮಂತ್ರಾಲಯದ (೧)

ಭುವನಗಿರಿಯ ಭಾಗ್ಯವಯ್ಯ ಮೂಲರಾಮರೊಲಿದ ಜೀಯ
ಕರುಣಾನಿಧಿ ಸುಗುಣ ಶರಧಿ ಎಮ್ಮ ಪುಣ್ಯ ರಾಘವೇಂದ್ರ
ಮೇಲುಕೋಟೆಯ ಚೆಲುವನೆಮ್ಮ ಶ್ರೀನಿವಾಸ ವಿಠಲರಾಯನ
ಹನುಮ-ಭೀಮ-ಮಧ್ವ ರಾಯ ರೂಪದಿಂದ ಸೇವೆಗೈದ (೨)

ಗುರುರಾಯರ ವರದಾಯರ ಸ್ಮರಣೆ ಮಾಡಿರೊ
ಶ್ರೀಹರಿಯ ಪದತಲದಿ ನಿಂತು ನರರ ಕಾವ ಎಮ್ಮ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೦೪.೨೦೧೨

Tuesday, April 3, 2012

Shri Krishnana Nooraru Geethegalu - 221

ಭಜಿಸೊ ಶ್ರೀರಾಮನ

ಭಜಿಸೊ ಶ್ರೀರಾಮನ ಲೋಕಪಾವನನ
ಮಾತೆಯಂದದೊಳು ತ್ರಿಜಗವ ಪೊರೆವವನ

ರಾಮರಾಮಯೆನಲು ಭವಬವಣೆಯನಳಿದು
ಇಹದೀ ಬದುಕೊಳು ಬೆಳಕಾಗುವ
ನರನೀ ಜನುಮದ ನೂರು ಕರ್ಮವ ಕಳೆದು
ಪರಮದ ಮುಕುತಿಗೆ ಹಾದಿಯಾಗುವ (೧)

ರಾಮರಾಮಯೆನಲು ದುರಿತವ ಸಂಹರಿಸಿ
ಧರೆಯೊಳು ಸುಜನಂಗೆ ಸುಖವಾಗುವ
ಕೇಸರಿಸುತನಂತೆ ಪಾದಸೇವೆಯಗೈಯೆ
ಬಕುತರ ಎದೆಯೊಳು ಸ್ಥಿರವಾಗುವ (೨)

ರಾಮನೆಂದರು ಇವನೆ ಶ್ಯಾಮನೆಂದರು ಇವನೆ
ರಘುವಂಶಜ ಶ್ರೀಗೋಕುಲ ಗೋಪಾಲ
ದಶದೊಳು ಧರಣಿಯ ಕಾವ ಪಾಲಕನಿವನೆ
ಸಿರಿಲಕುಮಿಯ ದೇವ ಶ್ರೀನಿವಾಸ ವಿಠಲ (೩)

ಭಜಿಸೊ ಶ್ರೀರಾಮನ ಲೋಕಪಾವನನ
ಮಾತೆಯಂದದೊಳು ತ್ರಿಜಗವ ಪೊರೆವವನ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೪.೨೦೧೨

Sunday, April 1, 2012

Shri Krishnana Nooraru Geethegalu - 220

ಶ್ರೀರಾಮನಾಮ

ಸ್ಮರಣೆಯೆ ಪುಣ್ಯವೊ ಶ್ರೀರಾಮ ನಾಮ
ಪಾದಸೇವೆಯಗೈದು ಧನ್ಯನಾದನೊ ಹನುಮ

ನಯನವು ನೋಡುವ ದಿವ್ಯರೂಪವು ರಾಮ
ಕರ್ಣವು ಕೇಳುವ ಮಧುರಗಾನವು ರಾಮ
ನಾಸಿಕ ಉಸುರಿಸುವ ಪುಣ್ಯಗಂಧನು ರಾಮ
ನಾಲಗೆ ನುಡಿಯುವ ದಿವ್ಯನಾಮ ರಾಮ (೧)

ಇರುಳ ಕಳೆವನು ರಾಮ ದುರುಳ ತೊಳೆವನು ರಾಮ
ಪಿತವಾಕ್ಯ ಪರಿಪಾಲ ಪುರುಷೋತ್ತಮ ರಾಮ
ಶಬರಿಯ ಪ್ರಿಯರಾಮ ಶಿಲೆಗೊಲಿದವ ರಾಮ
ಶ್ರೀನಿವಾಸ ವಿಠಲ ತಾ ಶ್ಯಾಮ ಶ್ರೀರಾಮ (೨)

ಸ್ಮರಣೆಯೆ ಪುಣ್ಯವೊ ಶ್ರೀರಾಮ ನಾಮ
ಪಾದಸೇವೆಯಗೈದು ಧನ್ಯನಾದನೊ ಹನುಮ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೨.೦೪.೨೦೧೨

Shri Krishnana Nooraru Geethegalu - 219

ಮೋಹನ ಮನಮೋಹನ

ಮೋಹನ ಮನಮೋಹನ ಬಾರೊ ಎನ್ನ ಮೋಹನ
ಎಲ್ಲಿರುವೆಯೊ ಸಖನೆ ಕೃಷ್ಣ ರಾಧೆ ಜೀವ ಜೀವನ

ಎದೆಯ ಬನದೊಳು ಬಯಕೆ ಸುಮಗಳ ವರ್ಷ ಸುರಿಸುತ
ಪ್ರೇಮ ವೇಣುವ ನುಡಿಸಿ ಎನ್ನೊಳು ಹರುಷ ಹರಿಸುತ
ವಿರಹದೆನ್ನ ಹೃದಯ ವೀಣೆಯ ಜೀವ ಮಿಡಿಸುತ
ಒಲುಮೆ ಯಮುನೆಯ ಹರಿಸೊ ಎನ್ನೊಳು ದೇವಕಿಸುತ (೧)

ಮನದ ಮಾಮರ ಚಿಗುರು ಹಸಿರೊ ಗಾನಗೈದಿವೆ ಕೋಗಿಲೆ
ಬೃಂದಾವನದಿ ಸಿಂಗಾರ ಚೈತ್ರವೊ ಬಂದು ಸೇರೊ ಈಗಲೆ
ಯುಗಯುಗಗಳ ಪ್ರೇಮವೆಮ್ಮದು ಮರೆತೆಯೆನೊ ಮಾಧವ
ಶ್ರೀನಿವಾಸ ವಿಠಲ ದೇವನೆ ಸನಿಹ ಬಾರೊ ಕೇಶವ (೨)

ಮೋಹನ ಮನಮೋಹನ ಬಾರೊ ಎನ್ನ ಮೋಹನ
ಎಲ್ಲಿರುವೆಯೊ ಸಖನೆ ಕೃಷ್ಣ ರಾಧೆ ಜೀವ ಜೀವನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೧.೦೩.೨೦೧೨

Wednesday, March 28, 2012

Shri Krishnana Nooraru Geethegalu - 218

ತ್ರಿಜಗಪಾಲಕ ಕೃಷ್ಣ

ತ್ರಿಜಗಪಾಲಕ ಕೃಷ್ಣ ವಿಶ್ವಮೋಹಕ

ಶುಭದಿಗಂತ ಜಗದನಂತ
ಸಿರಿಲಕುಮಿಕಾಂತ

ಸುಜನಸಂಪ್ರೀತ ಸಕಲಸುದಾತ
ರಾಧಾಮನಮೋಹಿತ

ಯದುಕುಲತಿಲಕ ಶ್ರೀನಿವಾಸ ವಿಠಲ
ದಶರೂಪ ದಿಕ್ಪಾಲಕ

ತ್ರಿಜಗಪಾಲಕ ಕೃಷ್ಣ ವಿಶ್ವಮೋಹಕ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೩.೨೦೧೨

Tuesday, March 27, 2012

Shri Krishnana Nooraru Geethegalu - 217

ನಿನ್ನ ಶ್ರೀಚರಣದೊಳು

ನಿನ್ನ ಶ್ರೀಚರಣದೊಳು ನಿಂತಿಹೆನು ಶ್ರೀಹರಿಯೆ
ಮಾತು ಮರೆತವೊ ದೇವ ಬೇಡಲೇನ

ತೀಡುವ ತಂಗಾಳಿ ತಿಳಿಯ ಹೇಳಿತೊ ಹರಿಯೆ
ಜೀವ ಜೀವದ ಉಸಿರು ನೀನೆ ಎಂದು
ತಿಳಿಹರಿವ ಜಲರಾಶಿ ನಕ್ಕು ನುಡಿಯಿತೊ ತಾನು
ಹರಿಯ ಶ್ರೀಪಾದವನು ತೊಳೆವೆನೆಂದು (೧)

ಮಲ್ಲಿಗೆಯು ಜಾಜಿ ಶ್ರೀತುಳಸಿದಳಮಾಲೆ
ಕಾದಿಹವೊ ನೀ ಧರಿಸಿ ನಲಿಯಲೆಂದು
ನಿತ್ಯ ಸತ್ಯದ ಸ್ಮರಣೆ ಜಯಮಂತ್ರಘೋಷಗಳು
ಶ್ರೀಹರಿಯು ಈ ಧರೆಯ ಸಲಹಲೆಂದು (೨)

ನಾನೆಂಬೊ ನಾನಲ್ಲ ನೀನೆ ಎಲ್ಲವು ಹರಿಯೆ
ಆ ನಾನು ನೀನಾಗೆ ದಣಿಯಲೆಂದು
ಜನನ ಮರಣದ ನಡುವೆ ಮೂಚಣದ ಜೀವನದಿ
ಶ್ರೀನಿವಾಸ ವಿಠಲ ನೀ ಒಲಿಯಲೆಂದು

ನಿನ್ನ ಶ್ರೀಚರಣದೊಳು ನಿಂತಿಹೆನು ಶ್ರೀಹರಿಯೆ
ಮಾತು ಮರೆತವೊ ದೇವ ಬೇಡಲೇನ


        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೩.೨೦೧೨

Monday, March 19, 2012

Shri Krishnana Nooraru Geethegalu - 216

ಭಕ್ತಿ ಹನಿಗಳು

ಬೂಟಕವ ಓದುವನ ನಾಟಕವ ಆಡುವನ
ಬೂಟಕದ ನಾಟಕದ ಪಾತಕದವನ
ಶುದ್ಧ ಸೂತಕದವನಂತೆ ಕಾಣ್ವ
ಎಮ್ಮ ಸೂತ್ರಕ ಶ್ರೀನಿವಾಸ ವಿಠಲ (೧)

ಕುಲಕುಲ ಎನುವನ ಅಡಿಗಡಿಗೆ ಹಾರುವನ
ಮೈಲಿಗೆಯ ಮೈಲುಗಳ ಮಲೀನನ
ಕೆಸರರಾಡಿಯೊಳಾಡ್ವ ಮಹಿಷವಿದು ಎನುವ
ಎಮ್ಮ ನಿರ್ಮಲ ಶ್ರೀನಿವಾಸ ವಿಠಲ (೨)

ದೇಹದಾ ದೇಗುಲದಿ ಆತ್ಮದಾ ಹಣತೆಯಿದೆ
ತುಂಬಿರೊ ಸತ್ಯದಾ ಸತ್ವ ತೈಲ
ಸುಡುಬತ್ತಿ ನೀವಾಗಿ ಶ್ರೀಹರಿಯೆ ಬೆಳಕೆನಲು
ಒಲಿನೆಮ್ಮೆಯ ದೇವ ಶ್ರೀನಿವಾಸ ವಿಠಲ (೩)

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೩.೨೦೧೨

Thursday, March 15, 2012

Shri Krishnana Nooraru Geethegalu - 215

ಏನೊ ದುಗುಡವು

ಏನೊ ದುಗುಡವು ಮನಕೆ ನೀನಿರದೆ ಮಾಧವ
ನೀರ ತೊರೆದಿಹ ಮೀನೊ ಸನಿಹವಿರದಿರೆ ನೀನು

ಇಳಿಸಂಜೆಯೊಡಲಿನೊಳು ಯಮುನೆ ಜುಳುಜುಳು ಹರಿದು
ಗೋಕುಲದ ಹಾದಿಯೊಳು ಗೋವು ಕೆಂಧೂಳಿ
ಕರುಗಳ ಕೊರಳುಲಿವ ಕಿರುಗೆಜ್ಜೆ ಗಾನದೊಡ
ತೇಲಿ ಬರಲಿಹ ನಿನ್ನ ಮುರಳಿನಾದವದಿರದೆ (೧)

ಒಲವ ಬೃಂದಾವನದಿ ಚೆಲುವ ಚಂದಿರರಾಯ
ಸುರಿದು ಬೆಳದಿಂಗಳಿನ ಸುಮಗಳರಳಿ
ಎನ್ನೆದೆಯ ಬನದೊಳಗೆ ನಿನ್ನ ಬಯಕೆಯ ಜಾತ್ರೆ
ಬರುವೆನೆಂದವ ಬರದೆ ನಾನು ಒಂಟಿ (೨)

ತುಳಸಿದಳಮಾಲೆಯನು ಪಿಡಿದು ಕಾದಿಹೆ ಕೃಷ್ಣ
ನಿನ್ನ ಪ್ರೇಮದ ಪಾದ ಸೇವೆಯರಸಿ
ನೊರೆಹಾಲು ನವನೀತ ನವಬಗೆಯ ಸಿಹಿ ಕೊಡುವೆ
ಶ್ರೀನಿವಾಸ ವಿಠಲ ನೀ ದಯಮಾಡಿಸೊ (೩)

ಏನೊ ದುಗುಡವು ಮನಕೆ ನೀನಿರದೆ ಮಾಧವ
ನೀರ ತೊರೆದಿಹ ಮೀನೊ ಸನಿಹವಿರದಿರೆ ನೀನು

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೩.೨೦೧೨

Sunday, March 11, 2012

Shri Krishnana Nooraru Geethegalu - 214

ಪಾವನ ವನಮಾಲ

ತುಳಸೀ ದಳಮಾಲೆ ತಂದೆ ದೇವ ಅರ್ಪಿಸೆ ನಿನಗೆಂದೆ ಕೃಷ್ಣ
ಪೂಜಿಸೆ ನಿನ್ನಯ ಶ್ರೀಪಾದ ಕೃಷ್ಣ
ಜೀವನವೆನ್ನದು ಪಾವನ ವನಮಾಲ

ನಿನ್ನಯ ಕರದೊಳು ಮುರಳಿಯು ನಾನಯ್ಯ
ನವರಾಗ ನುಡಿಸೆನ್ನ ಶ್ರೀಮಾಧವ
ಎನ್ನ ಹೃದಯದ ಮಣಿವೀಣೆಯ ಮೀಟೆ
ಉಲಿವುದು ನಿನ್ನಯ ಶ್ರೀನಾಮನಾದ (೧)

ನವನೀತಚೋರನೆ ಗೋಕುಲ ಕೃಷ್ಣಯ್ಯ
ಎನ್ನ ಮನಚೋರನು ನೀನೆ ಕಾಣಯ್ಯ
ಎನ್ನ ಪ್ರಾಣವು ನೀನೊ ಶ್ರೀನಿವಾಸ ವಿಠಲಯ್ಯ
ಪ್ರೇಮದೀ ತುಳಸಿಮಾಲೆಯ ಧರಿಸಯ್ಯ (೨)

ತುಳಸೀ ದಳಮಾಲೆ ತಂದೆ ದೇವ ಅರ್ಪಿಸೆ ನಿನಗೆಂದೆ ಕೃಷ್ಣ
ಪೂಜಿಸೆ ನಿನ್ನಯ ಶ್ರೀಪಾದ ಕೃಷ್ಣ
ಜೀವನವೆನ್ನದು ಪಾವನ ವನಮಾಲ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೩.೨೦೧೨

Wednesday, March 7, 2012

Shri Krishnana Nooraru Geethegalu - 213

ಸ್ಮರಣೆ ಮಾಡಿರೊ ಶ್ರೀರಾಯರ

ಸ್ಮರಣೆ ಮಾಡಿರೊ ಶ್ರೀರಾಯರ ಕರುಣೆ ಕಾಣಿರೊ
ಹಲವು ರೂಪಗಳಲಿ ಹರಿಯ ಸೇವೆಗೈದ ಪುಣ್ಯಯತಿಯ

ಶಂಖಕರ್ಣ ಬಾಹ್ಲಿಕ ಪ್ರಹ್ಲಾದರಾದಿ ವ್ಯಾಸರಾಜ
ಭುವನಗಿರಿಯ ಭಾಗ್ಯವೆಮ್ಮ ರಾಘವೇಂದ್ರರಾಯರ (೧)

ಯತಿಗಳಲಿ ಸುಯತೀಂದ್ರ ಮತಿಯೊಳು ತಾ ಸುಮತೀಂದ್ರ
ನಿರ್ಗತಿಗೆ ಸುಗತಿಯೆಮ್ಮ ರಾಘವೇಂದ್ರರಾಯರ (೨)

ಶರಣ ಕಾಮಧೇನುವ ಸುಜನ ಕಲ್ಪವೃಕ್ಷವ
ಒಲಿದ ನರಗೆ ಸನ್ಮಂಗಳವೀವ ರಾಘವೇಂದ್ರರಾಯರ (೩)

ತುಂಗಾತೀರದೊಡೆಯನ ಮುಖ್ಯಪ್ರಾಣರೊಲಿದನ
ಶ್ರೀನಿವಾಸ ವಿಠಲ ಪ್ರಿಯನ ರಾಘವೇಂದ್ರರಾಯರ (೪)

ಸ್ಮರಣೆ ಮಾಡಿರೊ ಶ್ರೀರಾಯರ ಕರುಣೆ ಕಾಣಿರೊ
ಹಲವು ರೂಪಗಳಲಿ ಹರಿಯ ಸೇವೆಗೈದ ಪುಣ್ಯಯತಿಯ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೩.೨೦೧೨

Sunday, March 4, 2012

Shri Krishnana Nooraru Geethegalu - 212

ಕೃಷ್ಣನಿರದೆ ರಾಧೆಯಿಲ್ಲ

ಕೃಷ್ಣನಿರದೆ ರಾಧೆಯಿಲ್ಲ ರಾಧೆಗೋ ಇವನೆ ನಲ್ಲ
ಗೋಕುಲದ ಗೋಪಾಲ ಗೊಲ್ಲ ಇರದೆ ರಾಧೆ ಜಗವೆ ಇಲ್ಲ

ನಯನವವಳು ನೋಟವಿವನು ಹೃದಯವವಳ ಬಡಿತವು
ಕರ್ಣಗಳಿಗೆ ವೇಣುಯಿವನು ರಾಧೆ ಜೀವಮಿಡಿತವು
ರಾಧೆ ಮೈಯ್ಯ ಕಣಕಣದೊಳು ಮುರಳಿಯವನ ಮೋಹವು
ಅವನಿಲ್ಲದೆ ರಾಧೆಯವಳು ಆತ್ಮವಿರದ ದೇಹವು (೧)

ಬರುವೆನೆಂದು ಪೇಳಿದವನು ಬರದಿದ್ದೊಡೆ ನೋವಳು
ಸಂಜೆಯಲಿ ಸಿಂಗಾರದೊಡತಿ ತೂಗುಮಂಚದಿ ಕಾವಳು
ಬಯಕೆ ಬಾಗಿಲ ಹೊಸ್ತಿಲಲ್ಲಿ ಒಲುಮೆ ತೋರಣ ಬಿಗಿವಳು
ಪ್ರಣತಿಯೊಡಲಿನ ದೀಪ್ತಿಯಂದದಿ ಕಾತರಿಸುವ ಕಂಗಳು (೨)

ಮೂಲೋಕದಿ ಚೆಲುವನವನು ತಡವಾದರು ಬರುವನು
ಗಲ್ಲ ರಮಿಸಿ ರಾಜಕಾರಣ ತಡವಾಯಿತು ಎನುವನು
ಶ್ರೀನಿವಾಸ ವಿಠಲನವನು ರಾಧೆ ವಿರಹವ ಬಲ್ಲನು
ತೋಳಬಳಸಿ ಪ್ರೇಮವುಣಿಸಿ ಅವಳ ಗೆಲುವ ಜಾಣನು (೩)

ಕೃಷ್ಣನಿರದೆ ರಾಧೆಯಿಲ್ಲ ರಾಧೆಗೋ ಇವನೆ ನಲ್ಲ
ಗೋಕುಲದ ಗೋಪಾಲ ಗೊಲ್ಲ ಇರದೆ ರಾಧೆ ಜಗವೆ ಇಲ್ಲ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೩.೨೦೧೨

Shri Krishnana Nooraru Geethegalu - 211

ನೀನಿರದೆ ಮಾಧವ

ಬೇಸರವೀ ಸಂಜೆಯು ನೀನಿರದೆ ಮಾಧವ
ಎಲ್ಲಿರುವೆಯೊ ಸಖನೆ ತಾಳೆನೀ ವಿರಹವ

ಹರಿವ ಯಮುನೆಯೆ ಪೇಳೆ ಗಾನ ಕಾಜಾಣವೆ
ಚಿಗುರು ಹಸಿರಿನ ನಡುವೆ ನಗುವ ಸುಮವೆ
ಗೋಪಾಲನೆಲ್ಲಿಹನು ಹೇಳಿ ಗೋ-ಕರುಗಳೆ
ಕಂಡರವ ಬರಲೇಳಿ ಕಾದಿಹೆನು ಈಗಲೆ (೧)

ಎನ್ನೊಡಲ ವೀಣೆಯದು ಮೌನ ವೈಣಿಕನಿರದೆ
ನುಡಿಸು ಬಾರೆಲೊ ಕೃಷ್ಣ ಶೃಂಗಾರ ರಾಗ
ಚೆಲುವರೊಳು ಚೆಲುವ ನೀ ಶ್ರೀನಿವಾಸ ವಿಠಲನೆ
ನಿನ್ನವಳೊ ಈ ರಾಧೆ ನಂಬೊ ನನ್ನಾಣೆ (೨)

ಬೇಸರವೀ ಸಂಜೆಯು ನೀನಿರದೆ ಮಾಧವ
ಎಲ್ಲಿರುವೆಯೊ ಸಖನೆ ತಾಳೆನೀ ವಿರಹವ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೩.೨೦೧೨

Friday, March 2, 2012

Shri Krishnana Nooraru Geethegalu - 210

ಮತ್ತೆ ಸಂಜೆಯಾಗಿದೆ

ಮತ್ತೆ ಸಂಜೆಯಾಗಿದೆ ನಿನ್ನ ನೆನಪೆ ಕಾಡಿದೆ
ಬೃಂದಾವನದ ಎದೆಬನದೊಳು ಮರಳಿ ಬಂದು ಯೌವ್ವನ

ತೂಗುತಿರುವ ಉಯ್ಯಾಲೆಯಲಿ ಆವುದೊ ಹೊಸ ಸಂಭ್ರಮ
ನುಡಿಸೆ ವೀಣೆ ಕಾಯುತಿಹುದು ಶೃಂಗಾರದ ಸರಿಗಮ

ನಾಚಿ ಯಮುನೆ ದೂರ ಸರಿದು ಹಕ್ಕಿ ಕೊರಳೊಲು ಗಾನ ಬರೆದು
ವಿರಹಿ ರಾಧೆಯ ಒಡಲ ಕಡಲೊಳು ಬಯಕೆ ವರ್ಣವ ಸುರಿದು

ಬಾರೊ ಪ್ರಾಣಸಖನೆ ಸನಿಹ ಶ್ರೀನಿವಾಸ ವಿಠಲ
ಕೊಡುವೆ ಒಲುಮೆ ಸಕ್ಕರೆ ಬೆರೆತ ನೊರೆಹಾಲಿನ ಬಟ್ಟಲ

ಮತ್ತೆ ಸಂಜೆಯಾಗಿದೆ ನಿನ್ನ ನೆನಪೆ ಕಾಡಿದೆ
ಬೃಂದಾವನದ ಎದೆಬನದೊಳು ಮರಳಿ ಬಂದು ಯೌವ್ವನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೨.೦೩.೨೦೧೨

Wednesday, February 29, 2012

Shri Krishnana Nooraru Geethegalu - 209

ಎನಗಿರಲೊ ರಂಗ

ನಿನ್ನ ಕರುಣೆಯ ಸಿರಿಯು ಎನಗಿರಲೊ ರಂಗ
ಅನವರತ ಶ್ರೀಹರಿಯೆ ನಿನ್ನ ಪಾದ ಸಂಗ

ತ್ರೇತೆ ರಾಮನ ಅರಿಯೆ ದ್ವಾಪರದ ಕೃಷ್ಣನನು
ದಶರೂಪದೊಳು ದುರಿತವಳಿದ ನಿನ್ನ
ನರ ನಾನೊ ಕಲಿಯೊಳಗೆ ಅನ್ಯಗಳ ಮನ್ನಿಪುದು
ಶ್ರೀನಿವಾಸ ವಿಠಲನೆ ನಂಬಿದೆನೊ ನಿನ್ನ

ನಿನ್ನ ಕರುಣೆಯ ಸಿರಿಯು ಎನಗಿರಲೊ ರಂಗ
ಅನವರತ ಶ್ರೀಹರಿಯೆ ನಿನ್ನ ಪಾದ ಸಂಗ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೨.೨೦೧೨

Monday, February 27, 2012

Shri Krishnana Nooraru Geethegalu - 208

ರಘುಕುಲಸೋಮ

ರಘುಕುಲಸೋಮ ಶ್ರೀರಾಮ ಶ್ರೀರಾಮ
ಸಕಲ ಸುಗುಣಧಾಮ ಶ್ರೀರಾಮ

ಕೌಸಲ್ಯೆ ತನಯ ದಶರಥ ನುಡಿಯ
ಪಾಲಿಸೆ ತೊರೆದನೊ ಅಯೋಧ್ಯೆಯ
ದುರಿತವ ಸಂಹರಿಸಿ ಸುಜನರ ಹರಸಿ
ಪೊರೆದನೊ ಧರೆ-ಧರ್ಮವ (೧)

ಅಂಜನಾತನಯ ಬೇಡಲೀ ದೊರೆಯ
ನೆಲೆಸಿದನೆದೆಯೊಳು ನಗುನಗುತ
ಶ್ರೀರಾಮ ಜಯರಾಮ ನೀನೆನ್ನ ಗತಿಯೆನಲು
ಪಾದಸೇವೆಯನಿತ್ತ ಅನವರತ (೨)

ಆದಿ-ಅನಂತ-ಅಖಿಲಾಂಡನಿವನೊ
ಶಬರಿಯ ಸಲಹಿದ ಸಿರಿವಂತ
ರಾಮನೊ ಶ್ಯಾಮನೊ ಶ್ರೀನಿವಾಸ ವಿಠಲನೊ
ರಾಯರಿಗೊಲಿದ ಭಗವಂತ (೩)

ರಘುಕುಲಸೋಮ ಶ್ರೀರಾಮ ಶ್ರೀರಾಮ
ಸಕಲ ಸುಗುಣಧಾಮ ಶ್ರೀರಾಮ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೨.೨೦೧೨

Thursday, February 23, 2012

Shri Krishnana Nooraru Geethegalu - 207

ನಾನು ನಾನೆನದಿರೊ

ನಾನು ನಾನೆನದಿರೊ ನರಮನುಜ ನೀನು
ನಾನೆಂದ ಕೆಡುಕುಲದ ಕುರುಹಿಲ್ಲ ಕಾಣ

ಹಲಶಿರದಸುರ ತಾ ಅವನಿಸುತೆಯನು ಬಯಸೆ
ಪಟ್ಟವದು ಚಟ್ಟವಾಯ್ತು ಬಲ್ಲೆಯೆನೊ
ನೀನಯ್ಯ ರಾಮಯ್ಯ ನೀಯೆನ್ನ ಗತಿಯೆನಲು
ಎದೆಯೊಳು ಪುಟ್ಟಿದನ ಬಲ್ಲೆಯೆನೊ (೧)

ನಾನೆ ಈಶ್ವರನೆಂದ ನಶ್ವರನ ಕೇಕೆಯದ
ಮಥುರೆಯೊಳು ಮಡುಹಿದನ ಬಲ್ಲೆಯೆನೊ
ಶ್ರೀಹರಿಯೆ ಶರಣೆನಲು ಕುಂತಿಸುತರೈವರನು
ದ್ವಾಪರದಿ ಸಲಹಿದನ ಬಲ್ಲೆಯೆನೊ (೨)

ನಾನು ನಾನಲ್ಲವೊ ನೀನು ನೀನಲ್ಲವೊ
ನಾ-ನೀನು ಅವನೊಳಗೆ ಬಲ್ಲೆಯೆನೊ
ನಾನೆನದೆ ನೀನೆ ಎಲ್ಲವೆನುವರ ಕಾವ
ಶ್ರೀನಿವಾಸ ವಿಠಲ ತಾ ಬಲ್ಲೆಯೆನೊ (೩)

ನಾನು ನಾನೆನದಿರೊ ನರಮನುಜ ನೀನು
ನಾನೆಂದ ಕೆಡುಕುಲದ ಕುರುಹಿಲ್ಲ ಕಾಣ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೨.೨೦೧೨

Wednesday, February 15, 2012

Shri Krishnana Nooraru Geethegalu - 206

ಹೇಳಿ ಪೋಗೆಲೊ

ಹೇಳಿ ಪೋಗೆಲೊ ಮುದ್ದುರಂಗ
ಪೋಗುವೆ ಎಲ್ಲಿಗೆ ಅದಾರ ಸಂಗ

ಪೇಳಲಾರೆನೊ ರಂಗ ತಾಳಲಾರೆನೊ ಕೃಷ್ಣ
ಗೋಕುಲ ನೆರೆಯಾಡೊ ಗುಸುಗುಸು ಪಿಸುಮಾತ

ಮಾಯಾವಿ ನೀನಂತೆ ಮಾವನ ಕೊಂದೆಯಂತೆ
ಮಥುರೆಯ ಸೆರೆಯೊಳು ಜನಿಸಿದೆಯಂತೆ
ಮೊಲೆಯೊಳೆ ಹೈನವ ಹೀರುವ ಚೋರನಂತೆ
ಮುಗುದೆಯ ಮನಕದಿವ ಮಾರನಂತೆ (೧)

ಪಾಂಡವ ಪ್ರಿಯನಂತೆ ಪಾದ ಪದುಮನಂತೆ
ರವಿಶಶಿ ನೇತ್ರನು ನೀನಂತೆ
ಮಾತೆಗೆ ಮೂಜಗವ ಬಾಯೊಳು ತೋರಿದ
ಅಖಿಲಾಂಡ ಅದ್ಭುತ ನೀನಂತೆ (೨)

ರಾಮನಾಗಿದ್ದೆಯಂತೆ ರಘುಕುಲಸೋಮನಂತೆ
ದ್ವಾರಕೆಯೊಳು ಧರ್ಮ ದೇವನಂತೆ
ದಶದೊಳು ಧರೆಕಾವ ಶ್ರೀನಿವಾಸ ವಿಠಲನಂತೆ
ಶರಣಾಗತ ಜನರ ಕಾವೆಯಂತೆ (೩)

ಹೇಳಿ ಪೋಗೆಲೊ ಮುದ್ದುರಂಗ
ಪೋಗುವೆ ಎಲ್ಲಿಗೆ ಅದಾರ ಸಂಗ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೨.೨೦೧೨

Saturday, February 4, 2012

Shri Krishnana Nooraru Geethegalu - 205

ಶ್ರೀಚರಣ ಸೇವೆ

ಹರಿ ನಿನ್ನ ಸಕಲವನು ಚರಾಚರಗಳಿಗಿರಿಸೊ
ಶ್ರೀಚರಣ ಸೇವೆಯದ ಎನಗೊದಗಿಸೊ

ಬೇಡುವೆನು ಕಾಮನೆಯು ನೆರವೇರಿಸೈ ಹರಿಯೆ
ನಾಮಸ್ಮರಣೆಯ ಸಿರಿಯ ಎನ್ನೊಳುಳಿಸೊ (೧)

ಖಡ್ಗ ಕಾಂಚಾಣಗಳ ಅವರಿವರಿಗಿಟ್ಟುಬಿಡೊ
ಶ್ರೀಪಾದದರಮನೆಯ ಎನಗೆ ಹರಸೊ (೨)

ಎನ್ನಾರು ಅಸುರರನು ತೊಲಗಿಸೊ ಶ್ರೀಹರಿಯೆ
ಶುದ್ಧಾತ್ಮದಿ ಕರೆವೆ ಬಂದು ನೆಲೆಸೊ (೩)

ಕಾವೇರಿಪಟ್ಟಣದ ಶ್ರೀನಿವಾಸ ವಿಠಲಯ್ಯ
ಹನುಮನ ಪೊರೆದಂತೆ ಧರೆಯ ಸಲಹೊ (೪)

ಹರಿ ನಿನ್ನ ಸಕಲವನು ಚರಾಚರಗಳಿಗಿರಿಸೊ
ಶ್ರೀಚರಣ ಸೇವೆಯದ ಎನಗೊದಗಿಸೊ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೨.೨೦೧೨

Wednesday, February 1, 2012

Shri Krishnana Nooraru Geethegalu - 204

ಕೃಷ್ಣ ಹೃದಯೆ

ಏನೊ ಸಡಗರ ಇವಳಿಗೆ ಚೆಲುವೆ ಕೃಷ್ಣ ಹೃದಯೆಗೆ
ಮುದ್ದು ಶ್ಯಾಮನ ತೋಳ ಬಳಸಿ ನಾಚಿ ನಿಂತಿಹ ರಾಧೆಗೆ

ಚಿಗರೆ ಚಿತ್ತವು ನಯನದಂಗಳ ನಡುಗುವಧರವು ವದನ ಸುಂದರ
ಹೊಳೆವ ನತ್ತೊಳು ನಗುವ ಚಂದಿರ ರಂಗುಗಲ್ಲದಿ ಸುರಿದು ತಿಂಗಳ (೧)

ಎದೆಯ ಗುಡಿಯೊಳು ಬಯಕೆ ಢವಢವ ವಿರಹ ಯಮುನೆಯ ಮೊರೆತವು
ತೂಗುಮಂಚದಿ ಶೃಂಗಾರ ವೀಣೆಗೆ ಮುರಳಿ ಗಾನದ ಸೆಳೆತವು (೨)

ಎಲ್ಲೋ ಇರಲು ಇವಳ ಮೋಹನ ಎಲ್ಲ ಹೇಳುವ ಕಾತುರ
ಸನಿಹ ಬರಲು ಮೌನ ಕಣಿವೆಯು ಒಲವ ಮಿಲನದ ಆತುರ (೩)

ಎಲ್ಲ ಬಲ್ಲನು ಜಗದ ನಲ್ಲನು ಬರಿದೇ ನಗುವನು ಕೃಷ್ಣನು
ಶ್ರೀನಿವಾಸ ವಿಠಲ ಗೊಲ್ಲನು ರಾಧೆ ಪ್ರಣಯಕೆ ಒಲಿವನು (೪)

ಏನೊ ಸಡಗರ ಇವಳಿಗೆ ಚೆಲುವೆ ಕೃಷ್ಣ ಹೃದಯೆಗೆ
ಮುದ್ದು ಶ್ಯಾಮನ ತೋಳ ಬಳಸಿ ನಾಚಿ ನಿಂತಿಹ ರಾಧೆಗೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೧.೨೦೧೨


Shri Krishnana Nooraru Geethegalu - 203

ಪುಣ್ಯಪಾದ ಕೃಷ್ಣ

ಕೃಷ್ಣ ಮುರಳಿ ಮೋಹನ
ಪಾಲಿಸೆಮ್ಮ ಪಾವನ
ಅಣುರೇಣುತೃಣಮೂಲನೆ
ಸುಖದೊಳಿರಿಸೊ ಜೀವನ

ದುರಿತಗಳನು ಅಳಿಸೊ ಎಮ್ಮ
ಸುಪಥದೊಳು ನಡೆಸೊ
ಸುಕೃತಗಳನು ಹರಸಿ ಕೃಷ್ಣ
ಅಂತರಂಗದಿ ನೆಲೆಸೊ (೧)

ಆದಿ ಯುಗಗಳಿಂದ ಜಗವ
ಪೊರೆದ ಪುಣ್ಯ ಪಾದ ಕೃಷ್ಣ
ಬೇಡುವೆನೊ ಬಿನ್ನಹವು ಎನ್ನದು
ಶ್ರೀನಿವಾಸ ವಿಠಲ ಕಾಯೊ (೨)

ಕೃಷ್ಣ ಮುರಳಿ ಮೋಹನ
ಪಾಲಿಸೆಮ್ಮ ಪಾವನ
ಅಣುರೇಣುತೃಣ ಮೂಲನೆ
ಸುಖದೊಳಿರಿಸೊ ಜೀವನ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೧.೨೦೧೨

Shri Krishnana Nooraru Geethegalu - 202

ಚೆಲುವ ಬೃಂದಾವನದಿ

ಚೆಲುವ ಬೃಂದಾವನದಿ ಒಲವ ರಾಧೆಕೃಷ್ಣ
ನಾಚಿ ಸರಿಯುತಲಿಹಳು ದೂರ ಯಮುನೆ

ಮೇವ ಮರೆತವು ಗೋವು ಕೆಚ್ಚಲನು ಕರುವು
ಕೊರಳ ಕಿರುಗಂಟೆಯೊಳು ದಿವ್ಯಮೌನ
ಗಾನದೊಳು ಲೀನವಿಹ ಗೋಕುಲದ ತಂಗಾಳಿ
ಚಿಗುರುಹೂಗರಿಕೆಗೂ ನವಯೌವ್ವನ (೧)

ರಾಗ ಮರೆತಿದೆ ಮುರಳಿ ಪ್ರೇಮ ನೈದಿಲೆಯರಳಿ
ಒಂಟಿಯಾಗಿದೆ ವೀಣೆ ತೂಗುಮಂಚ
ನಯನ ನಯನವು ಬೆರೆತ ಒಲವ ಹೃದಯದ ಬೆಸೆತ
ಮುಗುದೆ-ಮಾಧವರೊಳಗೆ ಪ್ರೇಮಕ್ರೌಂಚ (೨)

ರಾಧೆ ವಿರಹದ ಕರೆಗೆ ಕೃಷ್ಣ ಮೊರೆಯುತಲಿರಲಿ
ಚೆಲುವ ಬೃಂದಾವನದಿ ಒಲವ ಮಿಲನ
ಅಷ್ಟಮಹಿಷಿರೊಡೆಯ ಶ್ರೀನಿವಾಸ ವಿಠಲಯ್ಯ
ಇರುವಡೆಯೆ ಸುಖಸರಸ ಪ್ರೀತಿಚಲನ (೩)

ಚೆಲುವ ಬೃಂದಾವನದಿ ಒಲವ ರಾಧೆಕೃಷ್ಣ
ನಾಚಿ ಸರಿಯುತಲಿಹಳು ದೂರ ಯಮುನೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೦೧.೨೦೧೨

Saturday, January 14, 2012

Shri Krishnana Nooraru Geethegalu - 201

ಶ್ರೀಪಾದ ಸನ್ಮಾನ

ಹರಿ ನಿನ್ನ ಸ್ತುತಿಯೆನಗೆ ಮಾನ ಬಹುಮಾನ
ನೆಚ್ಚಿದೊಳು ಇಹಪರದಿ ಶ್ರೀಪಾದ ಸನ್ಮಾನ

ಮೆಚ್ಚಲವ ಪವಮಾನ ಪರಮಾತ್ಮ ಪಾವನನ
ಪಾದಸೇವೆಯನಿತ್ತು ದಾಸನೊಳು ನೆಲೆಸಿದನ
ಶ್ರೀನಾಮ ನುಡಿದವನ ಕರುಣದೊಳು ಪೊರೆದವನ
ಹರಿ ನೀನೆ ಗತಿಯೆನಲು ದಶದೊಳಗೆ ಒದಗಿದನ (೧)

ಮಾವನ ಮುರಿದವನ ಕಾಮನ ಸುರಪಿತನ
ದ್ರೌಪದಿಯ ಕೇಶವನು ಕಟ್ಟಿಸಿದನ
ಕುಲಕುಲ ಕುಲವೆನದೆ ಗೋಕುಲವ ಸಲಹಿದನ
ಶ್ರೀನಿವಾಸ ವಿಠಲ ಶ್ರೀದೇವಕಿಪ್ರಿಯಸುತನ (೩)

ಹರಿ ನಿನ್ನ ಸ್ತುತಿಯೆನಗೆ ಮಾನ ಬಹುಮಾನ
ನೆಚ್ಚಿದೊಳು ಇಹಪರದಿ ಶ್ರೀಪಾದ ಸನ್ಮಾನ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೪.೦೧.೨೦೧೨

Monday, January 9, 2012

Shri Krishnana Nooraru Geethegalu - 200

ದಾಸನಾಗೊ ಹರಿದಾಸನಾಗೊ

ದಾಸನಾಗೊ ಹರಿದಾಸನಾಗೊ ನೀ
ದಾಸದಾಸರ ಪುಣ್ಯ ಪಾದಪದುಮನ ದಾಸ

ಇಹದಾರು ವಿಷಯದ ಮೋಹವ ನೀಗೊ
ಹರಿದಾರಿ ಸರಿಯೆನುವ ಪಥದೊಳು ಸಾಗೊ
ಪ್ರಹ್ಲಾದ ಪಾಂಡವರ ಪೊರೆದ ಶ್ರೀಪಾವನನ
ದಶಮುಖ ರೂಪನ ಶ್ರೀವಾಸುದೇವನ (೧)

ಮದ-ಮೋಹವನಳಿದು ಶುದ್ಧದಿ ಶಿರಬಾಗೊ
ಕಾಮ-ಕ್ರೋಧವ ಕಳೆದು ಪರಿಶುದ್ಧನಾಗೊ
ಲೋಭ-ಮತ್ಸರ ಮರೆತು ನಯವಂತನಾಗೊ
ಹರಿವಾಯುಗುರುವಿಗೆ ವಿನಯವಂತನಾಗೊ (೨)

ದಾಸನ ಬಕುತಿಯ ಶೇಷಶಯನ ಮೆಚ್ಚಿ
ಶೇಷಕ್ಲೇಶಂಗಳೆಂಬೊ ಬಲಿಶಿರ ಮೆಟ್ಟಿ
ವಿಶೇಷ ಫಲವೀವ ಶ್ರೀಕಲಿಯ ವರದ
ಶ್ರೀನಿವಾಸ ವಿಠಲನ ಚರಣದಿ ಮುಗಿದು (೩)

ದಾಸನಾಗೊ ಹರಿದಾಸನಾಗೊ ನೀ
ದಾಸದಾಸರ ಪುಣ್ಯ ಪಾದಪದುಮನ ದಾಸ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೦೧.೨೦೧೨

Wednesday, January 4, 2012

Shri Krishnana Nooraru Geethegalu - 199

ವಂದಿಪೆ ಹನುಮ

ವಂದಿಪೆ ಹನುಮ ನರಕುಲ ಕ್ಷೇಮ
ಪಾವನ ಪವನ ಶುಭಕಲ್ಯಾಣ

ವಾನರ ಸಂಜಾತ ಅಂಜನಾಸುತ ಶೂರ
ದೈತ್ಯಕುಲಾಂತಕ ದಶಬಾಹವೆ
ಭೀಮಸಹಾಯಕ ಭಜರಂಗಿ ಬಲದೇವ
ಧೀರಾತಿಧೀರ ಶ್ರೀದೀನಬಂಧವೆ (೧)

ಶ್ರೀರಾಮದೂತ ರಾಮನಾಮ ಪ್ರೀತ
ಸೀತಾರಾಘವ ಶ್ರೀಪಾದಸೇವಿತ
ಸಂಜೀವರಾಯನೆ ಲಕ್ಷ್ಮಣ ಪ್ರಾಣದಾತ
ಸಂಕಟಮೋಚಕ ಸುರಗಣವಂದಿತ (೨)

ಮುಗಿವೆನೊ ಕರಗಳ ಹರಿಸೆನ್ನ ಕರ್ಮವ
ಪಾಲಿಸೊ ಕಲಿಯೊಳು ಗುಣವಂತ
ಶ್ರೀನಿವಾಸ ವಿಠಲನ ಧ್ಯಾನವೆ ಜಯವೆಂಬ
ಸೂತ್ರವ ಅರಿತನೆ ಹನುಮಂತ (೩)

ವಂದಿಪೆ ಹನುಮ ನರಕುಲ ಕ್ಷೇಮ
ಪಾವನ ಪವನ ಶುಭಕಲ್ಯಾಣ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೧.೨೦೧೨