Monday, November 11, 2013

Shri Krishnana Nooraru Geethegalu - 353

ನೀನಲ್ಲದಿನ್ನಾರು

ನೀನಲ್ಲದಿನ್ನಾರು ಗತಿಯೆನಗೆ ಹನುಮ
ನೀನೊಲಿದರವನೊಲಿವ ಶ್ರೀರಾಮ ರಾಮ

ತ್ರೇತೆಯೊಳು ಆ ದಿವ್ಯ ಚರಣಸೇವಕನಾಗಿ
ಮಾತೆ ಸೀತೆಯ ಶೋಕ ಕಳೆದ ಗುಣವಂತ
ನುಡಿದಂತೆ ನಡೆದವನ ನುಡಿಯಂತೆ ನಡೆದು ನಿ
ನ್ನೊಳಗವನ ಇರಗೊಂಡೆ ಹೇ ಪುಣ್ಯವಂತ (೧)

ನೀ ಅವಗೆ ದಾಸನು ನಾ ನಿನಗೆ ದಾಸನು
ದಾಸಾದಿದಾಸರೊಳು ನೀನೇ ವಿಶೇಷನು
ದ್ವಾಪರದೆ ಬಲನಾಗಿ ಕಲಿಯೊಳಗೆ ಮಧ್ವನಾಗಿ
ಶ್ರೀನಿವಾಸ ವಿಠಲನ್ನ ಸೇವೆಗೈದನೆ ತಂದೆ (೨)

ನೀನಲ್ಲದಿನ್ನಾರು ಗತಿಯೆನಗೆ ಹನುಮ
ನೀನೊಲಿದರವನೊಲಿವ ಶ್ರೀರಾಮ ರಾಮ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೧೧.೨೦೧೩

Saturday, October 26, 2013

Shri Krishna Nooraru Geethegalu - 352

ನಿನ್ನ ದಿವ್ಯ ಚರಣತಲದಿ

ನಿನ್ನ ದಿವ್ಯ ಚರಣತಲದಿ ಶಿರವ ಬಾಗುವೆ ಹರಿಯೆ
ಸಕಲ ಜೀವ ಚರಾಚರವ ಪೊರೆಯೊ ಬೇಡುವೆ

ಪುಟ್ಟಪಾದದ ದಿಟ್ಟದೊರೆಯೆ ಬಲಿಯ ಇಳೆಗೆ ಮೆಟ್ಟಿದಂದದಿ
ಕಲಿಯೊಳಡಗಿಹ ಅಹಂನಸುರನ ಶಿರವ ಕೆಡವಿ ನಿಶೆಯ ಕಳೆಯೊ (೧)

ಕಂದಗೊಲಿದನೆ ನಾರಸಿಂಹನೆ ನರನ ದೇಹದೀ ಕಂಭ ಸೀಳಿ
ಅಬ್ಬರಿಸಿಹ ಆರರಸುರರ ಕರುಳ ಕಡಿದು ದೂರಕಟ್ಟೋ (೨)

ಶಬರಿಗೊಲಿದನೆ ಸೀತಾರಾಮನೆ ರಾವಣನ ದುರುಮುರಿದನೆ
ಧರಣಿಯೊಳಗೆ ಕಾಮಕಪಟವ ಕಳೆದು ಸಲಹೊ ನಿಷ್ಕಾಮನೆ (೩)

ಮತ್ಸ್ಯನಾದನೆ ಕೂರ್ಮರೂಪನೆ ಪರುಶುರಾಮ ವರಾಹನೆ
ದ್ವಾಪರದೊಳು ಸುಜನಗೊಲಿದನೆ ಶ್ರೀನಿವಾಸ ವಿಠಲನೆ (೪)

ನಿನ್ನ ದಿವ್ಯ ಚರಣತಲದಿ ಶಿರವ ಬಾಗುವೆ ಹರಿಯೆ
ಸಕಲ ಜೀವ ಚರಾಚರವ ಪೊರೆಯೊ ಬೇಡುವೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೧೦.೨೦೧೩

Wednesday, October 2, 2013

Shri Krishnana Nooraru Geethegalu - 351

ಹರಿಸ್ಮರಣೆ

ಸರಳ ಅತಿಸರಳ ನಿರಾಳ
ಅಂತಿಮವರಿಯದ ಅನಂತ ಹರಿಸ್ಮರಣೆ

ಶುದ್ಧನಾಗಿರಬೇಕು ಪರಿಶುದ್ಧನೊಲಿಯಲು
ಅಶುದ್ಧರಾರರ ಪೊರೆ ಕಳೆದು
ನಾನು ನಾನೆನುವ ಇಹದೀ ಮೋಹದ
ಭ್ರಮೆಯೊಳಗಾಡುವ ನರಮನುಜನೆ ಕೇಳು (೧)

ಇಟ್ಟಂತಿರಬೇಕು ಇಲ್ಲದಂತಿರಬೇಕು
ಬಾಡಿಗೆಮನೆಯಿದು ತಿಳಿಬೇಕು
ಕೋಟೆಬೆಟ್ಟದ ವಾಸ ಶ್ರೀನಿವಾಸ ವಿಠಲ
ಚರಣದಿ ನೊಸಲಿಟ್ಟು ಸ್ಮರಿಸೋ ನೀ ಮನುಜ (೨)

ಸರಳ ಅತಿಸರಳ ನಿರಾಳ
ಅಂತಿಮವರಿಯದ ಅನಂತ ಹರಿಸ್ಮರಣೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೨.೧೦.೨೦೧೩

Friday, August 30, 2013

Shri Krishnana Nooraru Geethegalu - 350

ಹೇ ಮುದ್ದುರಂಗ

ಇರಲೆನಗೆ ಅನುದಿನವು ಹರಿ ನಿನ್ನ ಸಂಗ
ಭವದ ಬಂಧವ ಕಳೆಯೊ ಹೇ ಮುದ್ದುರಂಗ

ಮಾನದೊಳು ಬಹುಮಾನ ಮೇಘಶ್ಯಾಮನ ಧ್ಯಾನ
ಮಾಳ್ಪರಿಗೆ ಧರಣಿಯೊಳು ಸಕಲ ಸಮ್ಮಾನ
ಕಲಿನರನ ನಾಲಗೆಯ ನುಡಿನುಡಿಯು ಹರಿಯೆನಲು
ಇಹದೆ ದುರ್ಗತಿಯಳಿದು ಮುಕುತಿ ಸೋಪಾನ (೧)

ತ್ರೇತೆಯೊಳು ಪವಮಾನ ದ್ವಾಪರದಿ ಬಲವಾನ
ನಂಬಿ ನೆಚ್ಚಲು ಶಬರಿ ಪಡೆದ ಮಾನ
ನಾನೆಂಬೊ ನಶ್ವರದಿ ಶ್ರೀಹರಿಯೆ ಗತಿಯೆನಲು
ಕಾಯುವುದು ಶ್ರೀನಿವಾಸ ವಿಠಲ ಚರಣ (೨)

ಇರಲೆನಗೆ ಅನುದಿನವು ಹರಿ ನಿನ್ನ ಸಂಗ
ಭವದ ಬಂಧವ ಕಳೆಯೊ ಹೇ ಮುದ್ದುರಂಗ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೮.೨೦೧೩

Shri Krishnana Nooraru Geethegalu - 349

ಬಂದ ಗೋವಿಂದ

ಬಂದ ಗೋವಿಂದ ಜಗದಾನಂದ
ಗೋಕುಲದ ಎಮ್ಮ ನಂದ-ಗೋಪಿಯ ಮನೆಗೆ

ಪುಟಪುಟ ಪುಟ್ಟಪುಟ್ಟ ಹೆಜ್ಜೆಯನಿಟ್ಟು
ಘಲುಘಲು ಘಲುಘಲು ಕಿರುಗೆಜ್ಜೆ ತೊಟ್ಟು
ಪಟ್ಟೆ ಪೀತಾಂಬರ ನವರತ್ನವನುಟ್ಟು
ನೊಸಲೊಳು ಚಂದನ ತಿಲಕವನಿಟ್ಟು (೧)

ಕಾಡಿಗೆ ತೀಡಿದ ಕಂಗಳ ಮಿಟುಕಿಸುತ
ಕೆಂಪನೆ ಅಧರದಿ ಹೂನಗೆ ಅರಳಿಸುತ
ಚಿನ್ನದ ಕೊಳಲೊಳು ಗಾನವನುಲಿಯುತ
ಶ್ರೀನಿವಾಸ ವಿಠಲ ತಾ ಮೂಜಗ ಹರಸುತ (೨)

ಬಂದ ಗೋವಿಂದ ಜಗದಾನಂದ
ಗೋಕುಲದ ಎಮ್ಮ ನಂದ-ಗೋಪಿಯ ಮನೆಗೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೮.೨೦೧೩

Wednesday, August 21, 2013

Shri Krishnana Nooraru Geethegalu - 348

ಭಜಿಸಿರೊ ಎಮ್ಮ ರಾಯರ

ಭಜಿಸಿರೊ ಎಮ್ಮ ರಾಯರ ಪೂಜಿಸಿ ಗುರುರಾಯರ
ತುಂಗಾತೀರದ ಮಂತ್ರಾಲಯದಿ ನಿಂತು ಸುಜನರ ಕಾಯ್ವರ

ಭುವನಗಿರಿಯ ರವಿಯೊ ಇವರು ಭವದ ಕತ್ತಲ ಕಳೆವರು
ಕಲಿಯೊಳ್ ನರರ ಕೋಟಿಜನುಮದ ಪಾಪಕರ್ಮವ ತೊಳೆವರು
ಕಶ್ಯಪನ ಕಂದನವನ ಪುಣ್ಯರೂಪರೊ ರಾಯರು
ನಂಬಿ ಗುರುವೇ ನೀವೇ ಎನಲು ಸಕಲಮಂಗಳ ತರುವರು (೧)

ಯತಿಗಳಲಿ ಸುಯತಿಯಿವರು ಸನ್ಮತಿಯನು ಈವರು
ಗತಿಹೀನಗೆ ಸುಗತಿಯಿವರು ಕಲಿಯುಗದ ದೇವರು
ಶ್ರೀನಿವಾಸ ವಿಠಲನೊಲಿದ ರಾಘವೇಂದ್ರರಾಯರು
ಕರುಣಾನಿಧಿಯೆ ಕಾಯೋ ಎನಲು ಬಂದು ಎಮ್ಮೊಳು ನಿಲ್ವರು (೨)

ಭಜಿಸಿರೊ ಎಮ್ಮ ರಾಯರ ಪೂಜಿಸಿ ಗುರುರಾಯರ
ತುಂಗಾತೀರದ ಮಂತ್ರಾಲಯದಿ ನಿಂತು ಸುಜನರ ಕಾಯ್ವರ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೯೯೦೧೯ ೧೮೬೬೬ / ೨೨.೦೮.೨೦೧೩

Thursday, August 15, 2013

Sri Krishnana Nooraru Geethegalu - 347

ಕಾಯೆ ಜಗದಂಬೆ

ಶುಭವರದೆ ಶಾರದೆ ವಂದೆ
ಬೇಡುವೆನು ತಾಯೆ ಸಲಹೆನ್ನ ಮುಂದೆ

ಮಂಗಳವದನೆ ಹಂಸಗಮನೆ
ಸ್ಥಿರಮಾಂಗಲ್ಯೆ ನೀ ಕುಂಕುಮಚಂದನೆ
ಕೂಡಲಿ ನಿಲುವಾಂಬೆ ಈ ದೀನನ ಅಂಬೆ
ಕಲಿಯೊಳು ಸುಜನರ ಬಿಡದೇ ಕಾಯೆಂಬೆ (೧)

ಭವದಂಧವ ಕಳೆಯೆ ಸುರವಂದಿತೆ ಪೊರೆಯೆ
ಬ್ರಹ್ಮನ ಸತಿ ವಾಣಿ ಜಯೆವಿಜಯೆ
ಕೋಟೆಬೆಟ್ಟದ ವಾಸ ಶ್ರೀನಿವಾಸ ವಿಠಲ
ಚರಣದೀ ದಾಸನ ಕಾಯೆ ನೀ ಮಾಯೆ (೨)

ಶುಭವರದೆ ಶಾರದೆ ವಂದೆ
ಬೇಡುವೆನು ತಾಯೆ ಸಲಹೆನ್ನ ಮುಂದೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೮.೨೦೧೩

Wednesday, August 7, 2013

Shri Krishnana Nooraru Geethegalu - 346

ಕಂಡೆನಾ ಕೃಷ್ಣನ

ಕಂಡೆನಾ ಕೃಷ್ಣನ ಕಂಡೆನಾ ಕೃಷ್ಣನ (ಪ)

ಕಂಡೆನಾ ಕೃಷ್ಣನ ದೇವಕಿಯ ಕಂದನ
ಜಗದೋದ್ಧಾರ ಶ್ರೀ ತಂದೆ ಗೋವಿಂದನ (ಅ ಪ)

ಜಗದಾದಿ ವಂದ್ಯನ ದೇವ ವಾಸುದೇವನ
ಯದುಕುಲೋತ್ತಮನೆಮ್ಮ ನಂದನಾನಂದನ (೧)

ಮಾವಕಂಸನ ಕೊಂದನ ಉರಗವೇರಿ ನಿಂದನ
ಭವದ ಭಯವ ಕಳೆವಯೆಮ್ಮ ಬಾಲಗೋಪಾಲನ (೨)

ತ್ರೇತೆಯಾ ರಾಮನ ಗೋಕುಲದ ಶ್ಯಾಮನ
ಧರೆಯೊಳಗೆ ಸುಜನಗೊಲಿದ ಶ್ರೀನಿವಾಸ ವಿಠಲನ (೩)

ಕಂಡೆನಾ ಕೃಷ್ಣನ ಕಂಡೆನಾ ಕೃಷ್ಣನ (ಪ)

ಕಂಡೆನಾ ಕೃಷ್ಣನ ದೇವಕಿಯ ಕಂದನ
ಜಗದೋದ್ಧಾರ ಶ್ರೀ ತಂದೆ ಗೋವಿಂದನ (ಅ ಪ)

(ಇಂದು ಕನಕಪುರ ರಸ್ತೆಯಲ್ಲಿನ ಹಾಗೂ ರಾಜಾಜಿನಗರದ ಇಸ್ಕಾನಿನಲ್ಲಿ ಶ್ರೀಕೃಷ್ಣ ದರ್ಶನದ ನಂತರ ಮೂಡಿದ್ದು)

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೮.೨೦೧೩

Tuesday, July 30, 2013

Shri Krishnana Nooraru Geethegalu - 345

ವಂದೇ ಸರಸ್ವತಿ

ಜ್ಞಾನದಾಯಿನಿ ವಂದೇ ಸರಸ್ವತಿ
ಶಂಕರರ ಶ್ರೀಮಾತೆ ಬೊಮ್ಮನೊಡತಿ

ಕೂಡಲಿ ತೀರತಟೇ ಮೂಲವಾಸಿನಿ ಮಾತೆ
ಸಸ್ಯಶ್ಯಾಮಲೆ ಶುದ್ಧೆ ಸಕಲಶುಭದಾತೆ
ಶ್ವೇತಪದ್ಮಾಸ್ಥಿತೆಯೆ ಶ್ರೀಚಕ್ರಧಾರಿಣಿ
ಪಾವನಿಯೆ ಶಾರದೆಯೆ ತ್ರೈಲೋಕಕರುಣಿ (೧)

ಶಿವನನುಜೆಯು ನೀನು ಸ್ಥಿರಮಾಂಗಲ್ಯೆ ನೀ
ಮೂಢಮತಿ ನಾ ನಿನ್ನ ಒಡಲ ಕುಡಿ ತಾಯೆ
ಶ್ರೀನಿವಾಸ ವಿಠಲನ ಚರಣದೀ ದಾಸನ
ಅಕ್ಕರದ ಅಕ್ಕರೆಯ ನೀನಿತ್ತು ಕಾಯೆ (೨)

ಜ್ಞಾನದಾಯಿನಿ ವಂದೇ ಸರಸ್ವತಿ
ಶಂಕರರ ಶ್ರೀಮಾತೆ ಬೊಮ್ಮನೊಡತಿ

(ಕೂಡಲಿಯ ಶ್ರೀಶಾರದಾ ಮಾತೆಯ ದಿವ್ಯದರ್ಶನವನ್ನು ಇಂದು ದೂರದರ್ಶನದಲ್ಲಿ ಪಡೆದು)

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೭.೨೦೧೩

Saturday, July 20, 2013

Shri Krishnana Nooraru Geethegalu - 344

ದಾಸರ ಕೂಸಿದು

ದಾಸರ ಕೂಸಿದು ಹಸಿವೆಂದಳುತಿದೆ ಹರಿ ನಿನ್ನ ತೋಳೊಳು ಮುದ್ದಾಡಿಸೊ
ಮಾತೆ ಮಾಲಕುಮಿಯ ಮಡಿಲ ತೊಟ್ಟಿಲೊಳು ನಿನ್ನ ನಾಮಾಮೃತದ ಸುಧೆಯುಣಿಸೊ

ಲೆಕ್ಕವಿಟ್ಟವರಾರೊ ಅಣುರೇಣುತೃಣದೇವ ನೀನಿತ್ತ ಅಗುಳಗುಳಿನಮೃತವನು
ಎನಿತು ಜನುಮಗಳಲ್ಲಿ ಅದೆನಿತು ಸುಜನಂಗೆ ನೀನಿತ್ತ ಸಿರಿಚರಣ ಮುಕುತಿಯದನು (೧)

ಕಂಭದೊಳು ಮೂಡಿದನೆ ಕಶ್ಯಪನ ಸೀಳಿದನೆ ಕಂದನನು ಕರುಣೆಯೊಲು ಪೊರೆದವನೆ
ಗಿರಿಯ ಶಿರದೊಳು ನೀನೆ ಕಡಲತಳದೊಳು ನೀನೆ ಅಣುಜೀವಕಾಶ್ರಯವ ಬರೆದವನೆ (೨)

ಎನ್ನಾತ್ಮ ವಾಮನನೊ ಒಳಬಕುತಿ ವಿಕ್ರಮನೊ ದುರುಬಲಿ ತುಳಿದು ನೀ ಆವರಿಸೊ
ಉದರದಸಿವದು ಕೊಳೆಯೊ ಆತ್ಮದಸಿವನು ಕಳೆಯೊ ಶ್ರೀನಿವಾಸ ವಿಠಲ ನೀ ಕನಿಕರಿಸೊ (೩)

ದಾಸರ ಕೂಸಿದು ಹಸಿವೆಂದಳುತಿದೆ ಹರಿ ನಿನ್ನ ತೋಳೊಳು ಮುದ್ದಾಡಿಸೊ
ಮಾತೆ ಮಾಲಕುಮಿಯ ಮಡಿಲ ತೊಟ್ಟಿಲೊಳು ನಿನ್ನ ನಾಮಾಮೃತದ ಸುಧೆಯುಣಿಸೊ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೧.೦೭.೨೦೧೩

Tuesday, July 9, 2013

Shri Krishnana Nooraru Geethegalu - 343

ಎಂದಿಗಾದರೂ ಒಲಿಯೊ

ಎಂದಿಗಾದರೂ ಒಲಿಯೊ ಇಂದಿರೆ ರಮಣ ನೀ
ಇಂದು ಮುಂದೆಂದೆಂದು ನಂಬಿಹೆನೊ ನಾ ನಿನ್ನ

ಕ್ಷಣದ ಜೀವವೊ ನಾನು ಅಣುಕ್ಷಣವು ಹರಿಯೆನುವೆ
ಅಣುರೇಣುತೃಣ ಕಾವ ದೇವ ದೇವ
ಎನಿತು ಜನುಮದಿ ಕರೆಯೊ ನಿನ್ನೊಡನೆ ನಾ ಬರುವೆ
ದಿವ್ಯಚರಣವ ಸ್ಮರಿಸೆ ಜಗವ ಕಾವ (೧)

ಅಜಮಿಳನು ಹರಿಯೆನಲು ಆ ಕ್ಷಣದಿ ಕಂಡವನೆ
ಪಾಮರನ ದೀನನುಡಿ ನೀ ಕೇಳೆಯಾ
ರಾಮರಾಮಾ ಎನಲು ಆ ಶಬರಿಗೊಲಿದವನೆ
ನಾ ಕರೆಯೆ ಶ್ರೀಹರಿಯೆ ಬರದಿರುವೆಯಾ (೨)

ಕಲಿಯೊಳಗೆ ಜಪಮರೆತು ಭವದ ತಪನೆಯೊಳಿರುವೆ
ಕರೆತಂದವ ನೀನು ಕ್ಷಮಿಸು ಹರಿಯೆ
ಜಗದ ಸೂತ್ರಕ ನೀನೊ ಶ್ರೀನಿವಾಸ ವಿಠಲಯ್ಯ
ಎನ್ನ ತೊರೆದಿರುವುದು ನಿನಗೆ ಸರಿಯೆ (೩)

ಎಂದಿಗಾದರೂ ಒಲಿಯೊ ಇಂದಿರೆ ರಮಣ ನೀ
ಇಂದು ಮುಂದೆಂದೆಂದು ನಂಬಿಹೆನೊ ನಾ ನಿನ್ನ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೦೭.೨೦೧೩

Sunday, June 30, 2013

Shri Krishnana Nooraru Geethegalu - 342

ತಪ್ಪುಗಳೆಣಿಸದಿರೊ

ತಪ್ಪುಗಳೆಣಿಸದಿರೊ ಹರಿ ಎನ್ನ ತಪ್ಪುಗಳೆಣಿಸದಿರೊ
ತಪ್ಪುಗಳೆಲ್ಲವ ಮನ್ನಿಸೊ ನಾ ನಿನ್ನ ದಾಸರ ಚರಣದ ಕೂಸು ಕಂಡಯ್ಯಾ

ಅಸುರನು ಅಂಬುಧಿಯೊಳ್ ಅವನಿಯ ಅಡಗಿಸೆ
ತರಿದು ತಕ್ಷಣದಿ ಅವಳ ರಕ್ಷಿಸಿದ
ವೈಶಂಪಾಯನದಿ ಕುರುಜನು ಅವಿತಿರಲು
ಧರ್ಮದ ಗದೆಯಾಗಿ ತೊಡೆಯ ಮುರಿದವನೆ (೧)

ಮಿಥ್ಯದ ಬಿಂಬದೊಳ ಸತ್ಯದ ಇಂಬು ನೀನೊ
ಜಗಮಿಥ್ಯವನಳಿದು ಸತ್ಯವ ಎಮಗಿರಿಸೊ
ಕೋಟೆಬೆಟ್ಟದ ವಾಸ ಶ್ರೀನಿವಾಸ ವಿಠಲಯ್ಯ
ಕಲಿಯೊಳು ಸುಜನನ ನಿಜದೊಳು ಗೆಲಿಸೊ (೨)

ತಪ್ಪುಗಳೆಣಿಸದಿರೊ ಹರಿ ಎನ್ನ ತಪ್ಪುಗಳೆಣಿಸದಿರೊ
ತಪ್ಪುಗಳೆಲ್ಲವ ಮನ್ನಿಸೊ ನಾ ನಿನ್ನ ದಾಸರ ಚರಣದ ಕೂಸು ಕಂಡಯ್ಯಾ

(ಕೋಟೆಬೆಟ್ಟ: ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿನ ಕೋಟೆಬೆಟ್ಟದ ಕಂಭದ ನರಸಿಂಹಸ್ವಾಮಿ, ನನ್ನ ಪೂರ್ವಜರ ಕಾಲದಿಂದಲೂ ನಾವು ಪೂಜಿಸುತ್ತಿರುವ ದೈವ)

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೬.೨೦೧೩

Saturday, June 15, 2013

Shri Krishnana Nooraru Geethegalu - 341

ಮತಿಯಿರಿಸೊ

ಮತಿಯಿರಿಸೊ ಎಮ್ಮ ಯತಿಗಳು ಪೂಜಿಪ
ಶ್ರೀಪತಿ ಹರಿಯೊಳು ನರಮನುಜ

ನಂಬಲು ಶ್ರೀಚರಣ ನಿಜವಯ್ಯ ದುರ್ಹರಣ
ಇಹಪರದೊಳು ಅವನೆ ಸುಖಕಾರಣ
ಬಿಂದುವು ಅವ ನಮಿಸೊ ಸಿಂಧುವು ಅವ ನಮಿಸೊ
ಎಲ್ಲವೂ ಹರಿಯೆಂದು ಪರಿಭಾವಿಸೊ (೧)

ಶ್ರೀಹರಿ ಧ್ಯಾನವೆ ಜೀವಸಾಧನೆ ಕಾಣೊ
ಜನ್ಮಜನ್ಮಗಳಲ್ಲಿ ಅರಿ ಮನುಜ
ಶ್ರೀನಿವಾಸ ವಿಠಲನ್ನ ಬಿಡದೆ ನೀ ಸ್ಮರಿಸಲು
ಇಹದೊಳೆ ಮುಕುತಿಯ ಸಿರಿಕಣಜ (೨)

ಮತಿಯಿರಿಸೊ ಎಮ್ಮ ಯತಿಗಳು ಪೂಜಿಪ
ಶ್ರೀಪತಿ ಹರಿಯೊಳು ನರಮನುಜ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೪.೦೬.೨೦೧೩

Monday, June 10, 2013

Shri Krishnana Nooraru Geethegalu - 340

ರಾಮನೆನೆ ಸುಖವು

ರಾಮನೆನೆ ಸುಖವು ಶ್ರೀರಾಮನೆನೆ ಸುಖವು
ರಾಮ ಶ್ರೀರಾಮನೆನೆ ಸುಖದ ಸುಖವು

ರಘುವಂಶ ಕುಲತಿಲಕ ರಾಮನೆನೆ ಸುಖವು
ಕೌಸಲ್ಯೆ ದಶರಥಸುತನೆನೆ ಸುಖವು
ಭರತ ಶತ್ರುಘ್ನಂಗೆ ಸೋದರನೆನೆ ಸುಖವು
ಅಯೋಧ್ಯೆ ದೇವನೆನೆ ಸುಖದ ಸುಖವು (೧)

ಅಕ್ಷಯ ಗುಣಧಾಮ ರಾಮನೆನೆ ಸುಖವು
ಜಗಪ್ರೇಮ ಕ್ಷೇಮ ಶ್ರೀರಾಮನೆನೆ ಸುಖವು
ಧರೆಯ ದುರಿತವನಳಿವ ಶ್ರೀನಿವಾಸ ವಿಠಲನ್ನ
ಮಾತೆಸೀತೆ ರಾಮನೆನೆ ಸುಖದ ಸುಖವು (೨)

ರಾಮನೆನೆ ಸುಖವು ಶ್ರೀರಾಮನೆನೆ ಸುಖವು
ರಾಮ ಶ್ರೀರಾಮನೆನೆ ಸುಖದ ಸುಖವು

Tuesday, June 4, 2013

ಇವಳ ಎರಡು ಹನಿಗಳು

ಅವಳ ಹನಿಪ್ರೀತಿಗೆ ಬೊಗಸೆಯೊಡ್ಡಿದೆ
ಸುರಿದು ಜೇನಮಳೆಯಾದಳು

ಗೊತ್ತಿತ್ತು, ಅವಳು ನಿಲ್ಲುವಳಲ್ಲವೆಂದು
ನದಿಯಾಗಿ ಸರಿದು ಕಡಲ ಸೇರಿದಳು

ಕಾಯುತ್ತಿದ್ದೇನೆ ಬೇಗೆಯೆದೆಯ ತೆರೆದಿಟ್ಟು

ಮತ್ತವಳು ಮೋಡವಾಗುವವರೆಗೆ
ಮೋಡ ಮಳೆಯಾಗುವ ಮಾಯೆಗೆ

***

ಹೆಬ್ಬಂಡೆಯಂಥ ಇವಳು
ಪ್ರೀತಿಗೆ ಕರಗಲೊಲ್ಲಳು
ನದಿಯಾಗಿ ನಾನಿವಳ ನಡು ಬಳಸಿ
ಹರಿಯುತ್ತಲೇ ಇದ್ದೇನೆ
ಕಲ್ಲು ಮೆದುವಾದೀತೆಂಬ ಆಸೆಯಲಿ

Monday, June 3, 2013

ನನ್ನವಳು

ಹನಿಯುತ್ತಾಳೆ ನೆನಪುಗಳ ಮಳೆಯಾಗಿ
ದೂರವಿದ್ದರೂ ನನ್ನವಳು

ಚಳಿಗಾಲದಲಿ ಅಗ್ನಿ ಅಗ್ಗಷ್ಠಿಕೆ
ಅಪ್ಪಿಕೊಂಡರೆ ಶೃಂಗಾರ ಬೆಚ್ಚಗೆ

ವಸಂತದಲಿ ತುಂಬು ಹಸಿರು ಮರ
ದಂಥವಳ ಮಡಿಲಲಿ ನಗುವ ಹೂ
ನನ್ನದೇ ಪ್ರತಿಬಿಂಬ

ಒಂದು ಮಳೆಗಾಲದ ರಾತ್ರಿ

ಎದೆ ನಡುಗಿಸಿದ ಗುಡುಗಿ
ಗೆ ಅಪ್ಪಿಕೊಂಡೆ ಪಕ್ಕ
ಮಲಗಿದ್ದ ನನ್ನವನ

ಬಿಸಿ ಸ್ಪರ್ಶಕ್ಕೆ ಎಚ್ಚರ
ಗೊಂಡವನ ಕಂಗಳಲಿ
ಪಳಕ್ಕನೆ ಆಸೆ ಮಿಂಚು

ನಾ ನಡುರಾತ್ರಿಯ ಬೇಸಿಗೆ
ಅವನು ಕೆನೆಗಟ್ಟಿದ ಮುಗಿಲು

ನಡುವೆ ಪ್ರೀತಿ ತಂಗಾಳಿ
ಮಳೆಯಾದ ನಾ ಇಳೆಯಾದೆ

ಭೋರ್ಗರೆದ ಇಳಿದು ಜಾರಿನಲಿ
ಏರಿ ಎದೆಶಿಖರಗಳಲಿ

ಅವನೊಳು ನಾನೋ
ನನ್ನೊಳು ಅವನೋ

ಅವನ ಹರಿತಕೆ ತೊಡೆ ನಡು
ವ ಕತ್ತಲಲಿ ಚಂದ್ರೋದಯ
ದನಾವರಣ

ಇದು
ಒಂದು ಮಳೆಯ ರಾತ್ರಿಯಲಿ
ನನ್ನೆದೆ ಹಾಳೆಯಲಿ ಅವ
ಬರೆದ ಜೀವ ಕವನ

Thursday, May 23, 2013

Shri Krishnana Nooraru Geethegalu - 339

ಶ್ರೀನಿವಾಸ ಸುಖ

ವಸುಧೆಯೊಳಾ ವಾಸುದೇವನ ಭಜಿಪ
ನರನಿಗೆ ಇಹದೊಳೆ ಸಕಲ ಸುಖ

ಗೋವಿಂದ ಹರಿ ಗೋವಿಂದ ರಘುಕುಲತಿಲಕ ಶ್ರೀಗೋವಿಂದ
ಗೋವಿಂದ ಹರಿ ಗೋವಿಂದ ಶ್ರೀರಾಮಚಂದ್ರ ಶ್ರೀಗೋವಿಂದ

ಪಂಚಭೂತದಿ ರಚಿಸಿ ಉಸಿರ ಒಳಗಿಟ್ಟಾ
ದೇವನ ಸ್ಮರಣೆಯೇ ಸರ್ವ ಸುಖ

ಗೋವಿಂದ ಹರಿ ಗೋವಿಂದ ಗೋಕುಲವಾಸ ಶ್ರೀಗೋವಿಂದ
ಗೋವಿಂದ ಹರಿ ಗೋವಿಂದ ಕೇಶವ ಕೃಷ್ಣ ಶ್ರೀಗೋವಿಂದ

ಅವನೆಂಬೊ ಕಡಲೊಳು ನೀನೆಂಬೊ ಗುರಿಹುಡುಕೊ
ಶ್ರೀನಿವಾಸ ವಿಠಲನೆ ಜಗದ ಸುಖ

ಗೋವಿಂದ ಹರಿ ಗೋವಿಂದ ತಿರುಮಲವಾಸ ಗೋವಿಂದ
ಗೋವಿಂದ ಹರಿ ಗೋವಿಂದ ಶ್ರೀಶ್ರೀನಿವಾಸ ಗೋವಿಂದ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೦೫.೨೦೧೩

Tuesday, May 21, 2013

ಜೀವ್ನಾ ಅಂದ್ರೆ

ಜೀವ್ನಾ ಅಂದ್ರೆ ಗೊತ್ತಿಲ್ದಿದ್ರೆ
ತುಂಬ್ತುಂಬಾನೆ ರಿಸ್ಕಿ

ಸೋಡಾ ನೀರು ಹದ್ವಾಗಿದ್ರೆ
ರುಚಿಯಾಗಿರುತ್ತೆ ವಿಸ್ಕಿ

ನಂ ಕಾಲ್ಮೇಲೆ ನಾವಿದ್ರೂನು
ತಗೋಳಿ ಕಂಡೋರ್ ಟಿಪ್ಸು

ಉಪ್ಪಿನ್ಕಾಯಿ ನಾಲ್ಗೆಗ್ರುಚಿ
ಇದ್ರೂ ಗೋಡಂಬಿ ಚಿಪ್ಸು

ಅಚ್ಚರಿ ಅಲ್ವೆ ವಟ್ಟೇಗ್
ಕುಡುದ್ರೆ ತಲೆ ತಿರ್ಗುತ್ತೆ ಗಿರಿಗಿರ

ಮೆದ್ಳು ಮೆದುವು ನಾಲ್ಗೆ ಹಗುರ
ಏನ್ ಮಾಯೆನೊ ಹರಿ ಹರ

ಹೆಂಡ್ತಿಮಕ್ಳು ಮನೆಮಠ
ಮರ್ತೋಯ್ತದೆ ಒಂದ್ ಕ್ಷಣ

ಇಳ್ದ ಮ್ಯಾಲೆ ಕುಡೀದೆ ಇದ್ರೆ
ರಾಮುನ್ ಮೈಯ್ಯಾಗ್ ರಾವ್ಣ..!

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೦೯.೨೦೧೨.

ಚಿಗುರು ತಾಯಿ ಹಣ್ಣೆಲೆ ಮತ್ತೆ ಮತ್ತೆ

ಆಲಿಸು ಕಿವಿಯಿಟ್ಟು ಬುವಿಯೆದೆಗೆ
ಸವರಿ ಮೃದುವಾಗಿ ಮೊದಲ ಬಸಿರ
ಒಳ ಮಿಡುಕುತಿಹ ಬೀಜ ಭ್ರೂಣ
ದೊಳ ಜೀವ ಕಣ್ಣ
ರೆಪ್ಪೆ ತೆರೆಯುತಿಹ ಸದ್ದು

ಕೈಯೆತ್ತಿ ಪ್ರಾರ್ಥಿಸುತಿದೆ ತಾಯಿಮರ
ನೋವಿರದ ಹೆರಿಗೆಗೆ
ತನ್ನೊಡಲಿಂದುದುರಿ ತಾಯಾದ
ಬೀಜದ

ಬುಡದಲಿ ಗೊಬ್ಬರವಾಗುತಿಹ ಹಣ್ಣೆಲೆ
ಗೆ ವಂಶವುದ್ಧಾರದ ಆಸೆ ಅಸಂಖ್ಯ
ಎದೆಬಯಕೆ ಕಣ್ಮುಚ್ಚುವ ಮೊದಲು
ಕಾಣಲು ಅಂಗಳದೊಳಾಡುವ ಚಿಗುರ
ಸಂಭ್ರಮ

ಮರುಕವಿರದ ಜೀವನಚಕ್ರದುರುಳಿನ ನಿಯತಿ
ಚಿಗುರಿನ ಸಡಗರವ ಕರುಣಿಸಿದೆ ಹಣ್ಣೆಲೆಗೆ
ಎಂಥಾ ಅದ್ಭುತದಚ್ಚರಿ ಸೃಷ್ಟಿ
ಚಿಗುರು ತಾಯಿ ಹಣ್ಣೆಲೆ ಮತ್ತೆ ಮತ್ತೆ

ಪಾರಿಜಾತದ ಹೂ

ತಡವಾಯಿತೇಕೊ ಎನ್ನ
ಚೆಲುವ ಗೊಲ್ಲ
ರಾಧೆ ಮಾತಿಗೆ ಕೃಷ್ಣನವನು
ಬರಿದೇ ನಗುವ ನಲ್ಲ

ಸನಿಹವಿದ್ದರೂ ರಾಧೆಯ
ವಳಿಗೆ ತೀರದಾವುದೊ ನೋವು
ಗಂಧವಾಡಿದೆ ಅವನ ಮೈಯ್ಯೊಳು
ಪಾರಿಜಾತದ ಹೂವು

ಒಂದು ಹನಿ

ಒಂದು ಹನಿ

ಅವಳ ನೆನಪೆಂದರೆ ನನಗೆ
ಖಾಲಿ ಹೃದಯ
ಮತ್ತು
ಒಂದೆರಡು ಕಣ್ಣ ಹನಿ...!

ನೀನಿರದ ಪ್ರೀತಿಯದು

ಶ್ರಾವಣದ ಸಂಜೆಯೊಳು
ನಿನ್ನ ನೆನಪಿನ ಮಳೆಯು
ಧೋ ಎಂದು ಎನ್ನೆದೆಗೆ
ಸುರಿಯುತಿಹುದು...

ನೀನಿರದ ಪ್ರೀತಿಯದು
ನೋವಿನರಮನೆ ಗೆಳತಿ
ಕಣ್ಣೀರು ಮಧುಪಾತ್ರೆ
ಸೇರುತಿಹುದು...!

ಒಂದು ಹನಿ

ಈಚೀಚೆಗೆ ಈ
ಶ್ರಾವಣದ ಮಳೆಯೇ ಹೀಗೆ

ಶಾಲಾ ಶುಲ್ಕದ ಎರಡನೆ ಕಂತು
ಕಟ್ಟಲು ಸಮಯಕ್ಕೆ ಬಾರದ
ವೇತನ ಹೆಚ್ಚಳದ ಬಾಕಿಯ ಹಾಗೆ...!!

ಒಂದು ಹನಿ

ಅಧರದೊಳಗೆ ಅಧರ
ಬೆಸೆದಿರೆ ರಾಧೆ-ಮಾಧವ
ವೃಂದಾವನದೊಳು ಮೌನ

ಮಧುರಕ್ಷಣವನು ಕಂಡು ಕೋಗಿಲೆ
ಹಾಡ ಮರೆತಿದೆ ಗಾನ..!

ಒಂದು ಹನಿ

ದಾಹ ರಾಧೆ ಎಂದ ಕೃಷ್ಣ
ಸಿಹಿಮಜ್ಜಿಗೆ ಬಟ್ಟಲ ತಂದಿಟ್ಟಳು

ನಗುವ ಕೃಷ್ಣನ ತುಟಿಗಳಲ್ಲಿನ
ಪ್ರೇಮದಾಹವ ಮರೆತಳು...!

ಒಂದು ಹನಿ

ಕೃಷ್ಣನಿಗೆ ರಾಧೆಯೊಬ್ಬಳೇ
ವೃಂದಾವನದೊಳು

ಚಂದ್ರನಿಗೋ ಒಳಗೊಳಗೆ ಖುಷಿ
ತನ್ನ ಸುತ್ತ ಎಷ್ಟೊಂದು ತಾರೆಯರು...!

ಒಂದು ಹನಿ

ನಿನಗೆ ಕೈಕೊಟ್ಟವಳ ಕಥೆ ಹೇಳಯ್ಯ
ಎಂದೆ
ಸೂರ್ಯ ಧಗಧಗಿಸಿದ...
ಬಾನೇ ಕಣ್ಣೀರಾಗಿ
ಬುವಿಗೆ ಸುರಿದ...!

ಒಂದು ಹನಿ

ಭಗ್ನಪ್ರೇಮಿಯೊಬ್ಬನ ಹೃದಯ
ಇಣುಕಿ ನೋಡಿದೆ
ಕೈಕೊಟ್ಟ ಹುಡುಗಿ ಇನ್ನೊಬ್ಬನ
ಜೊತೆ ಸಲ್ಲಾಪದಲ್ಲಿದ್ದಳು...!

ಒಂದು ಹನಿ

ಅವಳು ನಕ್ಕಳು
ನಾನು ನಕ್ಕೆ

ನಮ್ಮ ಮದುವೆಯಾಯ್ತು

ಅವಳು ಈಗಲೂ ನಗುತ್ತಲೇ ಇದ್ದಾಳೆ
ನಾನು ಮತ್ತೊಮ್ಮೆ ನಗಬಾರದೆಂದು ನಿರ್ಧರಿಸಿದ್ದೇನೆ...!

ಒಂದು ಹನಿ

ಒಂದು ಹನಿ

ಪ್ರೇಮಕವಿ ಹೇಳಿದ:
ಹರೆಯದುಡುಗಿಯರೆ ಹುಡುಗರ
ಪ್ರೇಮಾಪಘಾತಕ್ಕೆ ಕಾರಣ..

ಅದಕ್ಕೇ ಇರಬಹುದು
ಒಮ್ಮೊಮ್ಮೆ ತುಂಬಿಹೋಗಿರುತ್ತೆ
ಗಡ್ಡದುಡುಗರ ವಿರಹಗೀತೆಗಳಿಂದ
’ಕನ್ನಡ ಬ್ಲಾಗ್’ ನ ಆವರಣ.

ಖಾಲಿ ಮಧುಪ್ರಾತ್ರೆ

ಗೊತ್ತು ಗೆಳತಿ,
ಈಗ ನಡುರಾತ್ರಿ ಸರಹೊತ್ತು
ಚಂದ್ರ ತಾರೆಯರಿಗೂ ಜೊಂಪು ತೂಕಡಿಕೆ
ನಿನ್ನರಮನೆಯ ಅಂತಪುರದೊಳೀಗ
ರಂಗೇರುತಿದೆ ಮತ್ತು ಮಿಥುನ ಮದನಕೇಕೆ...

ನಾನಿಲ್ಲಿ ನಿನ್ನರಮನೆಯ ಸನಿಹದ
ಪಾಳುಗೋಡೆಗೊರಗಿದ ಚಿತ್ರ
ಖಾಲಿ ಮಧುಪಾತ್ರೆಯೊಡನೆ...

ನಿದಿರೆಯೊಡನೆ ಯುದ್ಧ ಹೂಡಿ
ನಿನ್ನ ಕಣ್ಣಂಚಿನ ಒಂದೇ ಕೊನೆನೋಟ
ದ ನಿರೀಕ್ಷೆಯಲ್ಲಿದ್ದೇನೆ...

ನಕ್ಷತ್ರದ ಹುಡುಗಿ

ಕನಸು ಕಂಗಳ ಹುಡುಗಿ ನೀನು
ಆಸೆ ಆಗಸ ವಿಸ್ತಾರಿ...

ಚಂದ್ರನೊಡನೆ ನಿನ್ನ ಪ್ರೇಮವಿದೆ
ಎಂದಿದ್ದೇನೊ ಸರಿ
ಎನ್ನನಗಲಿ ಅವನ ಸನಿಹ ನಕ್ಷತ್ರ
ವಾಗಿ ಬಿಡುವುದೇ ಈ ಪರಿ...!!

ನಿರೀಕ್ಷೆ

ನಗುವ ಚಂದ್ರನ ಸನಿಹ ನಕ್ಷತ್ರವಾದವಳೆ
ಎನ್ನೆದೆಯ ಕಡಲ ಮೊರೆತ ಕೇಳದೇನೆ..?

ಕೈಲಿಡಿದ ಮಧುಪಾತ್ರೆಯೊಳು ನಿನ್ನ ನೆನಪಿನ ಬಿಂಬ
ಬರುವೆಯೆಂಬುದೇ ನಿರೀಕ್ಷೆ ಎನ್ನ ಕಣ್ಣೀರಿನ ತುಂಬ...

ಹರಿದೆಸೆದ ಸಂಜೆಚಿತ್ರ

ವ್ಯಾಪಾರ ಮುಗಿದ ಸಂತೆ
ಈ ಖಾಲಿ ಸಂಜೆ

ಪಡುವಣದಲಿ ಸೂರ್ಯನ ಹೆಣ
ಕೊಲೆಯೆಂಬ ಗುಸುಗುಸು

ಹಕ್ಕಿಪಕ್ಕಿಗೂ ಗಡಿಬಿಡಿ
ಗೂಡು ಸೇರುತ್ತಿವೆ
ಮರಿಮಕ್ಕಳ ಆತಂಕ

ಪುಕ್ಕಲು ಚಂದ್ರನೂ ಇತ್ತ ಸುಳಿದಿಲ್ಲ
ತಾರೆಗಳು ಕೂಡಾ

ಯಮುನೆಗೋ ಗಾಬರಿ
ಸುದ್ದಿ ಮುಟ್ಟಿಸೆ ದೌಡು
ಯಾರಿಗೋ ಗೊತ್ತಿಲ್ಲ

ಯಾವುದೀ ಕಾವ್ಯಸೂತ್ರ
ಬರೆದು ಹರಿದೆಸೆದ ಸಂಜೆಚಿತ್ರ

ನವಿಲುಗರಿ

ಸುಳ್ಳು ಮೊರೆ

’ಎಮ್ಮ ವಸ್ತ್ರಗಳ ಕೊಡೊ ಕೃಷ್ಣ’
ಚೋರ ಗೊಲ್ಲಗೆ ಕೊಳದೊಳಗವಿತ
ಬೆತ್ತಲೆಗೋಪಿಕೆಯರ ಸುಳ್ಳು ಮೊರೆ

’ಕೊಡದಿರೊ, ಹೀಗೇ ಸನಿಹದೊಳಿರೊ’
ಎಮ್ಮ ಹೃದಯದ ದೊರೆ
ಎನುವುದವರ ಮನದಾಳದ ಕರೆ

ನವಿಲುಗರಿ

ಹುಸಿಯನಾಡದಿರೆ ರಾಧೆ
ರಾತ್ರಿಯೆಲ್ಲ ಅವ ಕನಸಿನಲಿ
ಕಾಡಿದನೆಂದು
ಕಾರಣ
ನಿದಿರೆಯಿರದೆ ನಯನ
ಮತ್ತು ಗಲ್ಲ ಕೆಂಪುಕೆಂಪೆಂದು

ಉಯ್ಯಾಲೆಯೊಳಗವ
ಮರೆತುಹೋದ ನವಿಲುಗರಿ
ಖಾಲಿ ಮೊಸರಗಡಿಗೆ
ನಸುನಗುತಿವೆ...

ಸಂಭ್ರಮ

ಸಂಜೆಯಲೇ ನಿನ್ನ ಕಂಗಳು
ಚಂದ್ರ ತಾರೆಯರ ಹುಡುಕು
ವಾಗಲೆ ಅಂದುಕೊಂಡೆ
ಇಂದು ವೃಂದಾವನದಲಿ
ವೇಣು-ವೀಣೆ ಜುಗಲ್ಬಂಧಿ
ಅವನ ತೋಳೊಳು ನೀನು
ನಿನ್ನೊಳು ಅವನು

ನಾಚಿದಳು

ಹರಿವ ಯಮುನೆ
ಯ ಕೇಳಿದೆ
ಏನಿಂದು ಇನಿತು ಸಡಗರ
ನಾಚಿದಳು ಮತ್ತು
ಉತ್ತರವೇಳದೆ
ದುಡುದುಡನೆ ಓಡಿದಳು
ವೃಂದಾವನದೊಳು
ಸಂಜೆಯಾಗುತ್ತಿತ್ತು

ಪಾಂಚಾಲಿ ಸ್ವಗತ

ಒಪ್ಪುತ್ತೇನೆ ಧರ್ಮಜ
ಇದ್ದಿರಬಹುದು ನಂಬುಗೆ ನಿನಗೆ
ಕೃಷ್ಣ ಕಾವನೆಂಬ ಸ್ಥೈರ್ಯ
ಪಾರ್ಥನ ಗುರಿ ತಪ್ಪದಮೋಘ ಬಿಲ್ಲು
ಭೀಮನ ತೋಳ್ತೊಡೆ ಬಲ
ಹಣಿದು ಕೌರವ ಕುಲ ಕೇಕೆ
ಪಗಡೆಯಾಟ ಗೆಲುವೆನೆಂಬ

ಹೇಳು, ಅದಾವ ಮಾಯೆಯ ಮಂಕು
ಗಂಡೆಂಬ ವಿಷದಹಂ ತುಂಬಿತ್ತು
ಜೂಜಿಗೊಪ್ಪುವ ಮುನ್ನ
’ಹೆಣ್ಣೇ ಪಣವಾಗುವೆಯಾ?’
ಮಾತಿಗಾದರೂ ಕೇಳಬಹುದಿತ್ತು

ಹನಿಗಳು

ಹನಿಗಳು
ತಲೆಬಾಗಿಲೊಳು
ತೋರಣ
ಹೋಳಿಗೆಯೊಳು
ಸಿಹಿ ಹೂರಣ
ಗೌರಿಗೆ ಮಗಳು
ಮನೆಗೆ ಬರುವ
ಕಾರಣ

-೨-

ಗಣಪತಿ
ಬರುವ ಹಾದಿಯಲಿ
ನಾರದರು ಸಿಕ್ಕಿದ್ದರು
ಬೆಂಗಳೂರ ಕಡೆ
ಕುಡಿವ ನೀರಿನ ಸಮಸ್ಯೆ
ಒಂದೆರಡು ಬಾಟಲ್
ಗಂಗಾಜಲ ಕ್ಯಾರಿ
ಮಾಡು ಅಂದರು

-೩-

ಚೌತಿಚಂದ್ರನ ಎದ್ಯಾಗೊಂದೆ ಕೊರ್ಗು
ಬೆಳದಿಂಗ್ಳ ಪೆನ್ನಾಗ್ ಕವಿತೆ ಬರ್ಯೊ
ಕವ್ಗೋಳು ಕೂಡಾ
ನೋಡ್ತಾಯಿಲ್ಲಾಂತ ತನ್ಕಡೆ ತಿರ್ಗು

-೪-

ಗಂಡಸಿಗ್ಯಾಕ್ರಪ್ಪ
ಗೌರಿ ದು:ಖ
ನಾಳೆ ಹೋದ್ರೆ
ಅತ್ತೆ ಮನೇಲಿ
ಭೂರಿ ಭೋಜನ
ಗಣೇಶ ಸುಖ

ಕಿರುತೊರೆ

ಮೂಲವೆಂಬೊ ತಾಯಮಡಿಲ ಜಿಗಿದು
ಅಂಬೆಗಾಲಲ್ಲರಿದು ಜುಳುಜುಳು ಕವಿತೆ
ಅಣುಅಣು ನೀರಾಗುವ ಮಾಯೆ
ಕಿರುತೊರೆಯ ಜೀವದೊರತೆ

ಸುಲಭವಲ್ಲ ಪಯಣ ಮುಂದೆ
ಬಂಡೆಗಲ್ಲಿಗೆ ಮೈ ತರಚಿ ಪೊದರುಗಳಲಿ ಕೈಕಾಲು
ಪರಚಿ ಜಾರು ಜವುಗು ಮಣ್ಣು ಜಿಗಣೆ
ಕಾರಣವಿರದೆ ಕೂಗುವ ಜೀರುಂಡೆ ಸುಂಯ್ಯೆನುವ
ಸೊಳ್ಳೆ ಬೇಡದ ಗಾನ ಜೀವನ

ನಡೆಯಲೇ ಬೇಕು ಇನ್ನು ತೊರೆ
ತೊರೆದಾಗಿದೆ ತಾಯತೊಡೆ
ಆವುದೋ ಊರ ತಿರುವಲಿ ಸೊಂಟ ಬಳುಕಿ
ಬೃಹತ್ ಬಂಡೆಯ ತಲೆಯಿಂದ ಧುಮುಕಿ
ಹರಿದರಿದು ತಿಳಿಯಾಗಿ ನದಿಯಾಗಿ
ಬಣ್ಣದ ಮೀನು, ಸೀಗಡಿ ಮತ್ತು ಕಲ್ಲುಏಡಿಗೂ ತಾಯಾಗಿ
ಜೀವಜೀವದ ದಾಹವಾರಿಸೊ ಗಂಗೆ
ಕೆಲವೊಮ್ಮೆ ಪ್ರೇಮಿಗಳ ಪಾದಕೆ ತಂಪು
ಅವಕಾಶವಿದ್ದಂತೆ ಆಕಾರ ಅದಲುಬದಲು
ತೆಳ್ಳನೆಯ ಸ್ಫಟಿಕದಂತೆ ಒಮ್ಮೆಮ್ಮೆ
ವಜ್ರದಂತೆ ಗಡಸು
ಮರದ ನೆರಳಿದ್ದರೂ ದಂಡೆಯಲಿ
ವಿಶ್ರಮಿಸದಂತೆ
ಕೃಶವಾಗಿ ಸುಡುಬೇಸಿಗೆಗೆ ಮತ್ತೆ
ಮುಖವೊಡ್ಡಿ ಮಳೆಗೆ ಖುಷಿಯಾಗಿ

ನಾನೆಂಬೊ ಪದಕಳೆದು
ಕಡಲ ಗರ್ಭದೊಳ ನಡೆದು
ತೊರೆಯೀಗ ಪರಿಪೂರ್ಣ ಮತ್ತು
ಸ್ಪಷ್ಟ ಹರಿವುದರ ಕಾರಣ

(ಶ್ರೀಪುರುಷೋತ್ತಮ ಬಿಳಿಮಲೆಯವರ ’ಬಂಟಮಲೆಯ ಕಿರುತೊರೆ’ ಓದಿ...)

ಒಂಟಿಮರ..ಬುದ್ಧ ಮತ್ತು ನಾವು

ವಿಶಾಲದೊಳಗೊಂದು ಒಂಟಿ ಮರ
ಬಯಲು ಆಲಯವೆರಡು ತನ್ನೊಳಗೆ ಎನುವಂತೆ

ಹಠಯೋಗಿ ಅನ್ನಿಸೊಲ್ಲ ಕಾರಣ ಮರ
ಮಧ್ಯಾಹ್ನದ ಬಿಡುವಿನಲ್ಲಿ ಧ್ಯಾನಿಸುತ್ತೆ
ಸಂಭ್ರಮಿಸುತ್ತೆ ಕೊಳಲ ಹುಡುಗನ ತುಂಟಾಟಕೆ
ಮತ್ತು ಮಿಡಿಯುತ್ತೆ ಋತುಚಕ್ರದಾಟಕ್ಕೂ...

ಮತ್ತದರಡಿಯಲ್ಲಿ ಆರೋ ನಡೆದುಹೋದ ಪಾದದೆಳೆ
ಶುದ್ಧನಾದ ಬುದ್ಧನವೇ.. ಮರ ಮೌನ ಮತ್ತು ನೆರಳು
ದೂರದಲ್ಲಿ ಕಿತ್ತ ಸಂಕೋಲೆಗೆ ಯಶೋಧರೆಯ ಅಳು

ಸಂಜೆ ಮರದೆದೆಗೆ ಹಿಂತಿರುಗೆ ಹಕ್ಕಿ-ಪಕ್ಕಿ ಮಿಲನ
ಮಾತುಕತೆ ಮಿಥುನ ಮರಿ ಚಿಗುರಿ ಯಾ ಗರಿಯುದುರಿ

ಧ್ಯಾನದಿಂದೆದ್ದು ಮರ ಕಣ್ಣರಳಿಸುತ್ತೆ
ಸಂಜೆ ಸೂರ್ಯನ ಬಣ್ಣಕ್ಕೆ ಮೈಮರೆಯುತ್ತೆ
ಎದೆಗೂಡಿನೊಳಗೆ ಎಷ್ಟೊಂದು ಜೀವಕ್ಕೆ ತಾಯಿಯಾಗುತ್ತೆ
ತನ್ನೊಳಗೆ ತಾನೇ ಅಚ್ಚರಿಯಂಬಂತೆ...

ಮರಕ್ಕೀಗ ಜ್ಞಾನೋದಯ

ಯಾರೋ ಅದರೆಡೆಗೆ ಬರುತ್ತಿರುವಂತೆ
ಬುದ್ಧನೇ...ಇರಬಹುದು ಮರ ಜೀವನ್ಮುಖಿ
ಯಶೋಧರೆ ಶಾಪವಳಿದು ಸುಖಿ...!

Shri Krishna Vachangalu

ನಾಲಗೆಯೊಳನ್ಯವದು ಕುಣಿದಾಡೆ ಕರ್ಣವವು ಕೃಷ್ಣನಿಗೆ ಕಿವುಡಾಗೆ
ನಾಸಿಕವು ಪುಣ್ಯಗಂಧನ ಸೇವಿಸದೆ ಪೋಗೆ ಕಂಗಳವು ಕಣಕಣದೊಳವನ
ಕಾಣದೆ ಕುರುಡಾಗೆ ದೇಹವದು ಆತ್ಮವಿಲ್ಲದ ಗುಡಿಯಾಗೆ ಅಂದಿಗಲ್ಲಿ
ಧರ್ಮವದಳಿದಧರ್ಮದ ರವರವ ಪ್ರಳಯ ನೋಡೆಂದ ಶ್ರೀನಿವಾಸ ವಿಠಲ (021)

ಚಿತ್ತ ಅವನೊಳಗಿಟ್ಟು ಬಿತ್ತು ಬಕುತಿಯ ಬೀಜ
ಬಾಳ ಬೇವಕಹಿಯನು ಕಳೆದು ಮಾವಸಿಹಿಯದನೀವ
ಎನ್ನಾಣೆ ಎನ್ನ ಹರಿದಾಸರಾಣೆ ಶ್ರೀನಿವಾಸ ವಿಠಲ (022)

ಹಸಿವೆಂದು ಬಂದವಗೆ ಅಗುಳ ಮುರಿದುಣಿಸು
ಬಾಯಾರಿದವನ ಬೊಗಸೆ ನೀರಲಿ ತಣಿಸು
ನೋವುಂಡ ನರನವನ ಕಣ್ಣೀರನಳಿಸು
ಜಗಕೆ ನೀನಿಕ್ಕಿದೊಡೆ ನಿನ್ಹನ್ನೆರಡು
ತಲೆಮಾರ ಜಗಕಾವುದು ಶ್ರೀನಿವಾಸ ವಿಠಲ (023)

ಜಗವುಣ್ಣುವನ್ನವನು ಕುಡಿಕೆಯೊಳಡಗಿಸುವನ
ನಡುರಾತ್ರಿಯೊಳೆದ್ದು ಧನವದನು ಎಣಿಸುವನ
ಕುಡಿನೀರಬಾವಿಗೆ ಬೇಲಿಯನು ಕಟ್ಟುವನ
ಹರಿಪಾದವದೂ ಕಾಯದೆಂದ ಶ್ರೀನಿವಾಸ ವಿಠಲ (024)

ಆತ್ಮದೊಳು ನೀನಿರದವನ ಮನೆಯ ಅನ್ನವದು ವಿಷವಯ್ಯ
ನಿನ್ನಿರುವ ಅರಿಯದಂತಾಡುವನ ಮನವೇ ವಿಷವಯ್ಯ
ನೀ ಕೊಡುವ ಮುಕುತಿಯಲ್ಲದೆ ಭವವೇ ಭವಿತವ್ಯ
ವೆನುವನ ನೀನಲ್ಲದೆ ಮತ್ಯಾರು ಕಾವರೊ ಶ್ರೀನಿವಾಸ ವಿಠಲ (025)

ಜಾನಕಿಯ ರೂಪದೊಳು ರಾವಣನ ಕೇಡ ಕಂಡೆಯಾ
ಪಾಂಚಾಲಿ ಕುರುಳಿನೊಳು ಕುರುಜರ ಕೇಡ ಕಂಡೆಯಾ
ಕೃಷ್ಣನ ಕೊಲುವೆನೆಂದ ಕಂಸನ ಕೇಡ ಕಂಡೆಯಾ
ಆರನು ಗೆದ್ದು ಹರಿ ನೀನೇ ಎನುವನ ಅನುಗಾಲ
ಕಾವನೆಮ್ಮ ಶ್ರೀನಿವಾಸ ವಿಠಲ (026)

Shri Krishna Vachanagalu

ತೆಂಗಿನ ತಲೆಯೊಡೆದು ಬಾಳೆತುದಿಯನು ಚಿವುಟಿ ಕಪ್ಪುರ
ಗಿರಿಯುರಿದು ಧಗಧಗ ಧೂಪಹೊಗೆ ಮನವದು ಮುಗಿಯ
ದಿದ್ದೊಡೆ ಹರಿಗೆ ಫಲವೇನೆಂದ ಶ್ರೀನಿವಾಸ ವಿಠಲ (011)

ಮತಿಯ ಮಸುಕಿದೀ ನಿಶೆಯ ಬಡಿದಟ್ಟು ದಿಸೆದಿಸೆಯೊಳು
ಹೊಸ ಅರಿವಿನುಶೆ ಹರಿಬಿಟ್ಟು ಸಹಜದೀ ಕತ್ತಲಮಾಯೆ
ಗೆ ನಂಬುಗೆಯ ಹಣತೆ ಹಚ್ಚಿಟ್ಟೆಂದನೆಮ್ಮ ಶ್ರೀನಿವಾಸ ವಿಠಲ (012)

ಸಂಭವವು ಅಸುರನಬ್ಬರವವನಿಯೊಳು ಸುರತನವದು
ಸುಮ್ಮನಿರೆ ಮತ್ತಾರರಾರ್ಭಟದಾ ಬಲಿಕೇಕೆ ನಿನ್ನೊಳು
ನಂಬಿದೊಡೆ ಕಾವನವ ದಶದೊಳೆಂದ ಶ್ರೀನಿವಾಸ ವಿಠಲ (013)

ಪಕಳೆಗಳರಳಿಸುವವು ಮೊಗ್ಗು ಹಾಡುವವು ಹಕ್ಕಿ ಕೊರಳ
ಕೊಳಲುಲಿದು ತಮ್ಮಾತ್ಮದಾನಂದಕೆ ನೋಡ್ವರ ಕೇಳ್ವರ
ಮನೋಲ್ಲಾಸಪಡುವಚ್ಚರಿಗೆ ಬೆರಗಾದ ಶ್ರೀನಿವಾಸ ವಿಠಲ (014)

ಕೂಸ ಬಸಿರಿನೊಳಗೊಂದು ಕೂಸುದುಸುವಚ್ಚರಿ
ಆಡದ ಬಾಯೊಳಗದುವು ಅಬ್ಬರಿಸಿದಾಕ್ಷಣದಿ
ಕೂಸದರಕೂಸಿನವಸಾನವೆಂದ ಶ್ರೀನಿವಾಸ ವಿಠಲ (015)

ಇಳಿ ಮೊದಲು ನಿನ್ನಾಳಕೆ ಅದರಾಳಕೆ ಅತಳ ಸುತಳ ಪಾತಳಕೆ
ಕದಡು ಹಾಲಾಹಲ ಮುರಿದದರೊಳಗಾರರಸುರರ ಕೋಲಾಹಲ
ನಿಶ್ಚಯವು ಜಯವೆಂದು ನಿನಗಮೃತಬಿಂದು ಶ್ರೀನಿವಾಸ ವಿಠಲ (016)

ಬೇವಸವೇಕೆ ಅಸುವಿಗೆ ವ್ಯಸನವೇಕೆ ವಸುವಿಗೆ ಮಣ್ಣಾಗುವ ಕಸು
ವಿಗೆ ಶತಕೋಟಿಶಿರಗಳಾಳ್ದ ಅವನಿಗೆ ಉತ್ತಮರುಸಿರದಳಿದರೂ
ಯುಗಯುಗದಲಿ ಪುಣ್ಯದೆಸರುಳಿವುದೆಂದ ಶ್ರೀನಿವಾಸ ವಿಠಲ (017)

ಅಷ್ಟದಿಕ್ಕುಗಳಿರ್ಪ ಅವನಿಯನೊಲ್ಲೆನು ಐರಾವತ ಕುಮುದಾಂಜನಾದಿ ಅಷ್ಟದಿಗ್ಗಜಗಳ
ಅಷ್ಟಭೋಗಗಳೆಂಬೊ ನಿಧಿ ನಿಕ್ಷೇಪ ಮತ್ತಲವನು ಒಲ್ಲೆನಯ್ಯ ಅಷ್ಟೈಶ್ವರ್ಯ ಮಂಗಲವ
ಎನ್ನೊಳಡಗಿದ ಅಷ್ಟಮದಗಳ ನೀ ಮುರಿದೊಡೆ ಮತ್ತೆಲ್ಲವುಗಳ ದೊರೆ ನಾನು ಶ್ರೀನಿವಾಸ ವಿಠಲ (018)

ಛಲದೊಳು ಕುರುಜನಾಗು ಬಲದೊಳು ಮಧ್ವ ಪೂರ್ವಾವತಾರಿ
ನಯದೊಳು ದ್ವಾರಕಾಧೀಶನಾಗು ಎಲ್ಲಕು ಮೊದಲು ಕೊಡು
ವಿಕೆಯಲಿ ಕುಂತಿಯ ಹಿರಿಬಸಿರು ನೀನಾಗೆಂದ ಶ್ರೀನಿವಾಸ ವಿಠಲ (019)

ರುಚಿಬಾಳೆ ಉಂಡಂತಿರಲಿ ನೀ ಬರೆದಿದ್ದೊದುಗನಿಗೆ ಕುಡಿದಂತೆ
ಸವಿಕಾವೇರಿಯನು ಅಲ್ಲದ ಬರಹವದು ತೊಳೆಬಿಡಿಸದ್ಹಲಸ
ನೆಂಟರ ಗಂಟಲೊಳಿಸಿದಂತೆಂದನೆಮ್ಮ ಶ್ರೀನಿವಾಸ ವಿಠಲ (020)

Shri Krishna Vachanagalu

ತಿರಿದುಂಬುವುದಕ್ಕಿಂತ ಹಂಗಿರದ ಹಸಿವೇ ಲೇಸು
ಇಕ್ಕುವನ ಮನಹಸ್ತವವು ಅಶುದ್ಧವೆನುವೊಡೆ
ಅಮೃತವು ಪಾಷಾಣವೆಂದನೆಮ್ಮ ಶ್ರೀನಿವಾಸ ವಿಠಲ (001)

ಮತಿಯದು ಮೌನಕೆ ಶರಣಾದೊಡೆ ಅರೆಮತಿಯ
ದಬ್ಬರಿಸುವುದನರ್ಥಕೆ ಮೊದಲಕ್ಷರನೆ ನೀಡು ಆ
ಮೂಢಮತಿಗೆ ಸುಮತಿಯನೆಂದ ಶ್ರೀನಿವಾಸ ವಿಠಲ (002)


ಕಿವುಡಾಗಿ ಕರತಾಡನಕೆ ಕಾಯದೆ ಬೆನ್ನತಟ್ಟಲವರಿವರ
ರವಿಶಶಿಯಂದದೊಳು ದಣಿವರಿಯದೆ ದುಡಿವನ ಮಾನ
ಸಮ್ಮಾನಗಳು ಬೆನ್ನಟ್ಟಿ ಬಹವೆಂದ ಶ್ರೀನಿವಾಸ ವಿಠಲ (003)


ಹರಿವುದು ನದಿ ಕಡಲೆಡೆಗೆ ಅರಿತೂ ತನ್ನಂತ್ಯವದೆಂದು
ನಡುವೆ ನೀಗಿಸಿಯೆಷ್ಟೊ ಜೀವದಾಹ ಮನೆ ಮಣ್ಣು ಮೋಹ
ದ ಮನುಜ ನೀನೊಂದು ಕ್ಷಣ ನದಿಯಾಗೆಂದ ಶ್ರೀನಿವಾಸ ವಿಠಲ (004)

ತಾಳಿ ಬಾಳಲು ಬೇಕು ತಾಳಿಗೆ ತಲೆ ಬಾಗಿದೋಳು
ಬಲಗಾಲಿಟ್ಟಲ್ಲಿ ಸೊಸೆ ತಾ ಮಗಳಾಗಿ ಆ ತವರ
ಮರೆವಂತೆ ಇದೇ ಅದೆನುವಂತೆ ಶ್ರೀನಿವಾಸ ವಿಠಲ (005)

ಸಹನೆಯವಶ್ಯವು ಬದುಕ ಬೇಸಿಗೆಯಲಿ ನೆರಳೂ ವಿರಳ
ಬಯಲಹಾದಿಯಲಿ ಹೆಜ್ಜೆಯಾದೊಡೆ ತಾಳ್ಮೆ ನದಿತೊಡೆ
ಯ ಹಸಿರಿನೆದೆಯಲಿ ಹಕ್ಕಿಹಾಡೆಂದ ಶ್ರೀನಿವಾಸ ವಿಠಲ (006)

ನಿದ್ದೆಗೊಡದು ಕುಡಿಕೆಯೊಳಿಟ್ಟ ಹೊನ್ನು ಗುಡ್ಡೆಗಟ್ಟಿ
ದ ಧಾನ್ಯ ಹುಳುಹುಪ್ಪಟೆಯುದರಕೆ ದುರಾಸೆ ದೂರ
ದೊಳಿಟ್ಟು ದಾನಕ್ಕೆ ಕೈಯಾಗೆಂದ ಶ್ರೀನಿವಾಸ ವಿಠಲ (007)


ತೂಕವಿರದ ಮಾತು ತುಪ್ಪದ ಕುಡಿಕೆಯ ತೂತು ಕೇಳ್ವ
ಮಾನವಂತರಿಗದುವೆ ಹಗುರ ಅಪಹಾಸ್ಯ ಪದಾರ್ಥ
ನುಡಿನುಡಿ ಬಿಡಿಬಿಡಿ ಹಾಡಿನಂತಿರಲೆಂದ ಶ್ರೀನಿವಾಸ ವಿಠಲ (008)


ನೊಸಲಪಟ್ಟೆಯ ಮೆಚ್ಚ ಉಟ್ಟ ದಟ್ಟಿಯ ಮೆಚ್ಚ
ಒಳಸ್ವಚ್ಛವಿರದಶುದ್ಧನ ಅವ ಶತಸಿದ್ಧ ಮೆಚ್ಚ
ಅಂಗ ಮೀರಿ ಆತ್ಮಸಂಗದಿ ತೋರ್ವ ಶ್ರೀನಿವಾಸ ವಿಠಲ (009)

ಕಣ್ಣು ಕಂಡುದ್ದಕ್ಕೆಲ್ಲ ಮನವ ಜಾರಿಸಬೇಡ
ಮೈಯ್ಯ ಜೊಲ್ಲಿಗೆ ಮಾನ ಮರೆಯಲು ಬೇಡ
ಕುರುಳು ಕುರುಜನುರುಳಾಯ್ತೆಂದ ಶ್ರೀನಿವಾಸ ವಿಠಲ (010)









Sunday, April 7, 2013

Shri Krishnana Nooraru Geethegalu - 339

ಕಂದನ ಕಂಡಿರಾ

ಕಂದನ ಕಂಡಿರಾ ಶ್ರೀಕೃಷ್ಣನ ಕಂಡಿರಾ
ಗೆಜ್ಜೆ ಕಾಲ್ಗಳ ಗೋಕುಲದೊಡೆಯ ಶ್ರೀಗೋವಿಂದನ ಕಂಡಿರಾ

ಕಮಲ ನಯನನ ಕಸ್ತೂರಿ ತಿಲಕನ
ರಂಗಿನ ಗಲ್ಲದ ಚೆಂದದ ತುಟಿಯೊಳು ಮೆಲ್ಲನೆ ನಗುವನ

ಗರಿಯ ಮುಡಿದನ ಮುರನ ಹರಿದನ
ಪೂತನೆಯ ವಿಷಮೊಲೆಯನುಂಡು ಮಾತೆ ಎಂದವನ

ಪಾಮರ ಸ್ನೇಹನ ರಾಧೆಯ ಪ್ರೇಮನ
ನರನ ಭವವನಳಿದು ಶುಭವ ಕೊಡುವನುಭವನ

ತ್ರೇತೆಯ ರಾಮನ ದ್ವಾಪರ ಶ್ಯಾಮನ
ರಾಯರೂಪದಿ ಧರೆಯ ಕಾಯ್ವ ಶ್ರೀನಿವಾಸ ವಿಠಲ

ಕಂದನ ಕಂಡಿರಾ ಶ್ರೀಕೃಷ್ಣನ ಕಂಡಿರಾ
ಗೆಜ್ಜೆ ಕಾಲ್ಗಳ ಗೋಕುಲದೊಡೆಯ ಶ್ರೀಗೋವಿಂದನ ಕಂಡಿರಾ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೪.೨೦೧೩

Saturday, April 6, 2013

Shri Krishnana Nooraru Geethegalu - 338

ಮೋಹಿ ಎನ್ನದಿರೊ ಶ್ರೀಹರಿಯೆನ್ನ

ಮೋಹಿ ಎನ್ನದಿರೊ ಶ್ರೀಹರಿಯೆನ್ನ ವ್ಯಾಮೋಹಿ ಎನ್ನದಿರೊ
ನಿನ್ನ ಶ್ರೀಚರಣದಾ ಸೇವೆ ಬೇಡುವೀ ನರನ

ಚಿನ್ನವ ಕೇಳೆನೊ ರನ್ನವ ಕೇಳೆನೊ
ಸಕಲ ಸುಖಭೋಗ ಆಯುಷ್ಯವ
ಕೇಡನೆ ಉಂಡುಟ್ಟ ಕುರುಸುತರಂದದೊಳು
ಚರವದು ಸ್ಥಿರವೆನುವ ಅತಿಸ್ವಾರ್ಥವ (೧)

ಅರಸು ತಾವೆಂದು ಅರೆಕ್ಷಣವಿರಲಿಲ್ಲ
ಕಾಸಿನ ಕಿರೀಟ ಮಣ್ಣಾದೊ
ಮೂಜಗ ತಮದೆಂದು ಮೂರುಕ್ಷಣವಿರಲಿಲ್ಲ
ಮುನ್ನೂರು ಶತಕೋಟಿ ಶಿರವಳಿದೊ (೨)

ನಾನು ನಾನೆಂಬುದೆಲ್ಲ ನಿನ್ನ ನಾಮದ ಧೂಳು
ನಾನು ನಾನೆಂಬುವನ ನಾಮವಳಿಯಿತು ನೋಡು
ಧರೆಯೊಳು ನೀ ದೊರೆಯೊ ಶ್ರೀನಿವಾಸ ವಿಠಲಯ್ಯ
ನಿನ್ನ ಶ್ರೀಚರಣದೊಳು ಎನಗೆ ನೆರಳನು ನೀಡು (೩)

ಮೋಹಿ ಎನ್ನದಿರೊ ಶ್ರೀಹರಿಯೆನ್ನ ವ್ಯಾಮೋಹಿ ಎನ್ನದಿರೊ
ನಿನ್ನ ಶ್ರೀಚರಣದಾ ಸೇವೆ ಬೇಡುವೀ ನರನ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೦೪.೨೦೧೩

Sunday, March 17, 2013

Shri Krishnana Nooraru Geethegalu - 337

ಹರಿಯ ತೋರಿಸೊ

ಹರಿಯ ತೋರಿಸೊ ಹನುಮ ಹರಿಯ ತೋರಿಸೊ
ಹರಿಯ ತೋರಿಸೆನ್ನ ಮುಕುತಿಯ ಗುರಿಯ ತೋರಿಸೊ

ಉತ್ತಮೋತ್ತಮ ರಾಮ ತ್ರೇತೆಯೋತ್ತಮನ
ರಘುವಂಶತಿಲಕ ಶ್ರೀಪುರುಷೋತ್ತಮನ
ಜಾನಕಿ ಪ್ರಾಣ ನಿನ್ನ ಶ್ರೀಚರಣ ದೇವನ
ಧರೆಯೊಳಗೆ ಧರ್ಮವನು ಕಾವನ ಶ್ರೀರಾಮನ (೧)

ಹರಿಯೆನಲಾ ಅಜಮಿಳನು ಅರೆಚಣದಿ ಮೂಡಿದನ
ನಾರಾಯಣ ಎನಲು ಕಂಬವನೆ ಸೀಳಿದನ
ಕೃಷ್ಣ ಕಾಯೋ ಎನಲು ಮಾನವಸ್ತ್ರವಾದವನ
ಧರ್ಮದಾ ಐವರಿಗೆ ನೀತಿಶಸ್ತ್ರವಾದವನ (೨)

ಕಲಿಯೊಳಗೆ ರಾಯರಾಯ ರೂಪದಿಂ ಪೊರೆವವನ
ಹಲಜನುಮದ ಕರುಮ ಕಶ್ಮಲವ ತೊಳೆವವನ
ಶುದ್ಧಾತ್ಮ ಸಜ್ಜನರಿಗೊಲಿದು ಒಳ ನೆಲೆಸುವನ
ಕಿಂಡುಡುಪಿಯೊಡೆಯ ಶ್ರೀ ಶ್ರೀನಿವಾಸ ವಿಠಲನ (೩)

ಹರಿಯ ತೋರಿಸೊ ಹನುಮ ಹರಿಯ ತೋರಿಸೊ
ಹರಿಯ ತೋರಿಸೆನ್ನ ಮುಕುತಿಯ ಗುರಿಯ ತೋರಿಸೊ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೩.೨೦೧೩

Tuesday, February 19, 2013

Shri Krishnana Nooraru Geethegalu - 336

ಮಧುರ ನುಡಿಸೊ ಮನದ ಮುರಳಿ

ಮಧುರ ನುಡಿಸೊ ಮನದ ಮುರಳಿ ಎನ್ನ ಮೋಹನ
ಕ್ಲೇಶ ಕಳೆದು ವಿಶೇಷವಾಗಿಸೀ ನರನ ಜೀವನ

ಬದುಕೆಂಬೀ ಮಾಯಾಮೃಗವ ಕಣ್ಣಮುಂದೆಯೆ ಬಿಟ್ಟಿಹೆ
ಬೇಟೆಯಾಡೆ ಆರು ಬಣ್ಣದ ವಿಷಬಾಣವ ಕೊಟ್ಟಿಹೆ
ಮಣ್ಣುಹೊನ್ನು ಎಮ್ಮದಲ್ಲವೊ ಎಮ್ಮದೆನ್ನುವ ಮಾಯೆಯ
ಎಮ್ಮೊಳಿಟ್ಟು ಆಟಕಟ್ಟಿದ ಕೃಷ್ಣ ಎಮ್ಮನು ಕಾಯ್ವೆಯಾ (೧)

ಮಾತೆಯೆಂದಾ ಪೂತನೆಯೊಳು ವಿಷಪಾನವನಿಟ್ಟನೆ
ದಾನಪದದಾ ಸೂರ್ಯಪುತ್ರನ ಕೈಯ್ಯ ಕಟ್ಟಿಬಿಟ್ಟನೆ
ಧರ್ಮಾಧರ್ಮದ ಅಂಬುಧಿಯೊಳು ನಿಜದ ಸತ್ಯಸುಧೆಯನು
ಮಥಿಸಿ ಸುಜನಗೆ ಸವಿಯೆ ನೀಡುವ ಶ್ರೀನಿವಾಸ ವಿಠಲನೆ (೨)

ಮಧುರ ನುಡಿಸೊ ಮನದ ಮುರಳಿ ಎನ್ನ ಮೋಹನ
ಕ್ಲೇಶ ಕಳೆದು ವಿಶೇಷವಾಗಿಸೀ ನರನ ಜೀವನ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೨.೨೦೧೩

Tuesday, February 12, 2013

Shri Krishnana Nooraru Geethegalu - 335

ಶ್ರೀರಾಮ ವಂದೆ

ರಾಮ ವಂದೆ ಶ್ರೀರಾಮ ವಂದೆ
ಅಗಣಿತಾಕ್ಷಯ ಸುಗುಣಧಾಮ ವಂದೆ

ರಘುಕುಲ ಸಿರಿಸೋಮ ಶ್ರೀರಾಮ ವಂದೆ
ರಾಜೀವಲೋಚನ ಜಯರಾಮ ವಂದೆ
ದಶರಥ ಕೌಸಲ್ಯೆ ಪ್ರಿಯರಾಮ ವಂದೆ
ಭವಕಾಮಹರ ರಾಮ ನಿಷ್ಕಾಮ ತಂದೆ (೧)

ಜಯಜಯರಾಮ ವಂದೆ ಜಾನಕಿಪ್ರಾಣ ವಂದೆ
ದಶಶಿರಹರ ರಾಮ ಜಟಾಯುದೇವ ವಂದೆ
ಹನುಮನ ಪಾಲ ವಂದೆ ಮುನಿಜನಲೋಲ ವಂದೆ
ದಶದೊಳು ಧರೆಕಾವ ಶ್ರೀನಿವಾಸ ವಿಠಲ ತಂದೆ (೨)

ರಾಮ ವಂದೆ ಶ್ರೀರಾಮ ವಂದೆ
ಅಗಣಿತಾಕ್ಷಯ ಸುಗುಣಧಾಮ ವಂದೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೩.೦೨.೨೦೧೩

Friday, February 8, 2013

Shri Krishnana Nooraru Geethegalu - 334

ನೀವು ಕಂಡಿರೆ

ಇಂದುವದನ ಕಮಲನಯನ ಚೆಲ್ವನ ಕಂಡಿರೆ ನೀವು
ಯದುನಂದನ ದೇವಕಿಕಂದನ ಕೃಷ್ಣನ ಕಂಡಿರೆ

ಚೆಂದ ಚಂದನ ತಿಲಕವಿಟ್ಟನ ಪುಟ್ಟನ ಕಂಡಿರೆ
ಕದ್ದು ಬೆಣ್ಣೆಯ ಮೆದ್ದು ಒಪ್ಪದ ತುಂಟನ ಕಂಡಿರೆ
ಜಗದ ಕತ್ತಲ ಹೆಡೆಯ ಮೆಟ್ಟಿದ ದಿಟ್ಟನ ಕಂಡಿರೆ
ಜರಾಸಂಧನ ಅಹಂ ಅದನು ತರಿದಿಟ್ಟನ ಕಂಡಿರೆ (೧)

ರಾಧೆಯ ಲೋಲನ ಜಗದಿಕ್ಪಾಲನ ನೀವು ಕಂಡಿರೆ
ಗೋವ್ಗಳ ಕಾಯುತ ಗಾನವಗೈಯ್ಯುವ ಗೊಲ್ಲನ ಕಂಡಿರೆ
ಭವಗೋವರ್ಧನ ಬೆರಳೊಳಗೆತ್ತಿದ ಭವ್ಯನ ಕಂಡಿರೆ
ಇಂದಿರಾಪತಿಯೆಮ್ಮ ಶ್ರೀನಿವಾಸ ವಿಠಲನ ನೀವು ಕಂಡಿರೆ

ಇಂದುವದನ ಕಮಲನಯನ ಚೆಲ್ವನ ಕಂಡಿರೆ ನೀವು
ಯದುನಂದನ ದೇವಕಿಕಂದನ ಕೃಷ್ಣನ ಕಂಡಿರೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೨.೨೦೧೩

Friday, January 18, 2013

Shri Krishnana Nooraru Geethegalu - 333

ಭವದ ಕಡಲ ದಾಟಿಸೊ

ಭವದ ಕಡಲ ದಾಟಿಸೊ ಅಭವ ಕೃಷ್ಣ
ಹರಿಯ ನೆನೆಯದೀ ನರನ ಮುರಾರಿಯೆ

ಎನ್ನ ಕಂಗಳ ಕೊಳೆ ತೊಳೆಯೊ ಕೃಷ್ಣ
ಕರ್ಣಗಳಲಿ ಶುದ್ಧ ಕೊಳಲುಲಿಯೊ
ಚರಣಕೆ ಮುಗಿಯುವೆ ಎನಗೊಲಿಯೊ ಕೃಷ್ಣ
ಅನ್ಯಗಳಳಿದು ನೀ ಎನ್ನೊಳ ನಲಿಯೊ (೧)

ಯಾರಿಲ್ಲವೆನಗೆ ನೀ ದೊರೆಯೊ ಕೃಷ್ಣ
ದುರಿತವ ಕಳೆ ದೇವ ಇದು ಮೊರೆಯೊ
ಬಿಂದುಬಿಂದುಗಳಲ್ಲಿ ಆನಂದ ರೂಪನೆ
ಶ್ರೀನಿವಾಸ ವಿಠಲನೆ ಜಗ ಪೊರೆಯೊ (೨)

ಭವದ ಕಡಲ ದಾಟಿಸೊ ಅಭವ ಕೃಷ್ಣ
ಹರಿಯ ನೆನೆಯದೀ ನರನ ಮುರಾರಿಯೆ

ರಚನೆ: ಎನ್ಕೆ, ಭದ್ರಾವತಿ / ೧೮.೦೧.೨೦೧೩

Friday, January 11, 2013

Shri Krishnana Nooraru Geethegalu - 332

ಎನ್ಯಾಕೊ ಮರೆತುಬಿಟ್ಟೆ

ಯಾಕೊ ನರಜನ್ಮ ಕೊಟ್ಟೆ ಭವದೊಳು ಬದುಕ ಬಿಟ್ಟೆ
ಹುಟ್ಟಿಸಿದ ಹರಿ ನೀನು ಎನ್ಯಾಕೊ ಮರೆತುಬಿಟ್ಟೆ

ಬೇಡಲಿಲ್ಲವೊ ನಾನು ಕೊಡುಯೆಂದು ಜನುಮವ
ಕರುಮವ ಕಳೆಯೆಂದು ಕರೆತಂದವ ನೀನೊ
ಕರೆದವ ಪೊರೆವುದು ತಾಯಿಯಂದದಿ ನಿಜವು
ಶ್ರೀನಿವಾಸ ವಿಠಲಯ್ಯ ಸಲಹೆನ್ನ ತಂದೆ

ಯಾಕೊ ನರಜನ್ಮ ಕೊಟ್ಟೆ ಭವದೊಳು ಬದುಕ ಬಿಟ್ಟೆ
ಹುಟ್ಟಿಸಿದ ಹರಿ ನೀನು ಎನ್ಯಾಕೊ ಮರೆತುಬಿಟ್ಟೆ

ರಚನೆ: ಎನ್ಕೆ, ಭದ್ರಾವತಿ / ೧೨.೦೧.೨೦೧೩

Wednesday, January 9, 2013

Shri Krishnana Nooraru Geethegalu - 331

ನೀನಿರದೆ ನಾನೇನೊ

ನೀನಿರದೆ ನಾನೇನೊ ಒಲವಿನೊಡಯನೆ ಕೃಷ್ಣ
ನೀನಿರದೆ ಈ ಹೃದಯ ಬರಿದು ಬರಿದೊ

ಕಂಗಳಲಿ ಕಾತರದ ಚಿಗರೆಗಳು ಓಡುತಿವೆ
ಎನ್ನೆದೆಯ ಬನದೊಳಗೆ ಅತ್ತಿತ್ತ ಸುತ್ತ
ಒಳಗೊಳಗೆ ನೋಯುತಿವೆ ಬರುವನಿರೆ ಎನುತಲಿವೆ
ಕಾಯಿಸದಿರೊ ದೊರೆಯೆ ನಿನ್ನೊಳಗೆ ಚಿತ್ತ (೧)

ನಾನು ಬಿದರಿನ ಕೊಳಲೊ ನೀನೆನ್ನ ಒಳಉಸಿರು
ಕೊರಡೆನ್ನ ಕೊನರಿಸೊ ಹೇ ಜೀವರಾಗ
ಒಲುಮೆ ಸರಿಗಮ ನುಡಿಸೊ ಶ್ರೀನಿವಾಸ ವಿಠಲನೆ
ಒಂಟಿತನ ಸುಡುತಲಿದೆ ಬಾರೊ ನೀ ಬೇಗ (೨)

ನೀನಿರದೆ ನಾನೇನೊ ಒಲವಿನೊಡಯನೆ ಕೃಷ್ಣ
ನೀನಿರದೆ ಈ ಹೃದಯ ಬರಿದು ಬರಿದೊ

ರಚನೆ: ಎನ್ಕೆ, ಭದ್ರಾವತಿ / ೧೦.೦೧.೨೦೧೩

Tuesday, January 8, 2013

Shri Krishnana Nooraru Geethegalu - 330

ಕುಣಿದು ಬಾರೊ

ಕುಣಿದು ಬಾರೊ ರಂಗ ನೀನು ನಲಿದು ಬಾರೊ
ಪುಟ್ಟಕಾಲ್ಗಳ ಗೆಜ್ಜೆನಾದದಿಂ ತುಂಬಿಸೆನ್ನೊಳು ಕರ್ಣಾನಂದವ

ಬಾರೊ ಬಾರೊ ಬೃಂದಾವನದ ಚೆಲುವ ಕೃಷ್ಣನೆ ಬಾರೊ
ಅಂದಗಾರನೆ ನಂದಗೋಪನ ಕಂದ ಗೋವಿಂದ ಬಾರೊ
ಹೆಡೆಯ ಮೆಟ್ಟಿದ ದಿಟ್ಟ ಪುಟ್ಟನೆ ಮುದ್ದುಮುಕುಂದನೆ ಬಾರೊ
ದೇವದೇವನೆ ದೈತ್ಯಸಂಹಾರನೆ ಶ್ರೀವಾಸುದೇವನೆ ಬಾರೊ (೧)

ಹಾಲಹಲವ ಉಂಡು ಗೆದ್ದನೆ ನೊರೆಹಾಲನೀವೆ ಬಾರೊ
ಭವದ ಕೆಸರ ಕಳೆವ ಸಿದ್ಧನೆ ಸಿಹಿಮೊಸರನೀವೆ ಬಾರೊ
ನವನೀತವ ಕದಿವ ಚೋರನೆ ಎನ್ನೊಲವ ಕೊಡುವೆ ಬಾರೊ
ಜಗವ ಪೊರೆವ ಶ್ರೀನಿವಾಸ ವಿಠಲನೆ ಕರವ ಮುಗಿವೆ ಬಾರೊ (೨)

ಕುಣಿದು ಬಾರೊ ರಂಗ ನೀನು ನಲಿದು ಬಾರೊ
ಪುಟ್ಟಕಾಲ್ಗಳ ಗೆಜ್ಜೆನಾದದಿಂ ತುಂಬಿಸೆನ್ನೊಳು ಕರ್ಣಾನಂದವ

ರಚನೆ: ಎನ್ಕೆ, ಭದ್ರಾವತಿ / ೦೯.೦೧.೨೦೧೩

Sunday, January 6, 2013

Shri Krishnana Nooraru Geethegalu - 329

ಸಾರ್ಥಕ

ಬೃಂದಾವನದೊಳು ಚೆಂದದ ಹೂವ್ವನಾಯ್ದು ಅಂದದ ಮಾಲೆ ಕಟ್ಟೆ ಪ್ರಾಣಸಖಿ
ಮಿಲನಕೆ ಬರುವನೆ ಮಾಧವ ಸಂಜೆಗೆ ಅರ್ಪಿಸಿ ನಲಿಯುವೆ ಇಂದುಮುಖಿ

ಮಲ್ಲಿಗೆ ಹೂವದು ಮೆಲ್ಲನೆ ನಗುತಿದೆ ಜಾಜಿಯು ತಬ್ಬಿದೆ ಚಪ್ಪರವ
ಸೇವಂತಿಗೆ ತಾ ಸಡಗರ ಪಡುತಿದೆ ಸಂಪಿಗೆ ಕಾದಿದೆ ಕೊಳಲಿಂಪಿಗೆ (೧)

ಎನ್ನೆದೆ ಬನದಲಿ ವಿರಹದ ಮೊಗ್ಗದು ಅರಳಿ ತಾ ಚೆಲ್ಲಿದೆ ಆಸೆಗಂಧವ
ಕೇದಗೆ ತಾನು ಕೆರಳಿಸಿ ಬಯಕೆಯ ಸೇರು ನೀ ಎನ್ನುತ ಪುಣ್ಯಗಂಧನ (೨)

ಕೃಷ್ಣನ ತೋಟದ ಹೂಗಳೆ ನಾವೆಲ್ಲ ಅವನೊಲುಮೆಯೊಳರಳಿ ನಿಂತಿಹೆವು
ಶ್ರೀನಿವಾಸ ವಿಠಲನ ಸನಿಹವ ಸೇರಲು ಎಮ್ಮಯ ಜೀವನ ಸಾರ್ಥಕವು (೩)

ಬೃಂದಾವನದೊಳು ಚೆಂದದ ಹೂವ್ವನಾಯ್ದು ಅಂದದ ಮಾಲೆ ಕಟ್ಟೆ ಪ್ರಾಣಸಖಿ
ಮಿಲನಕೆ ಬರುವನೆ ಮಾಧವ ಸಂಜೆಗೆ ಅರ್ಪಿಸಿ ನಲಿಯುವೆ ಇಂದುಮುಖಿ

ರಚನೆ: ಎನ್ಕೆ, ಭದ್ರಾವತಿ / ೦೬.೦೧.೨೦೧೩

Friday, January 4, 2013

Shri Krishnana Nooraru Geethegalu - 328

ಹೇಳೆ ಸಖಿ ಬಂದನೆ

ಸಂಜೆ ಬರುವೆನೆಂದನೆ ಒಲುಮೆ ತರುವೆನೆಂದನೆ
ಎನ್ನ ಜೀವದ ಜೀವ ಕೃಷ್ಣನು ಹೇಳೆ ಸಖಿ ಬಂದನೆ

ಹರಿವ ಯಮುನೆಯ ಕೇಳಿದೆ ಅದೇಕೊ ಮೌನವ ತಾಳಿದೆ
ಹಾಡೊ ಕೋಗಿಲೆ ಕೊರಳಿನೊಳಗೆ ಗಾನ ಧ್ಯಾನವಗೈದಿದೆ

ಎನ್ನ ಪ್ರಾಣದ ಜೀವದುಸಿರದು ಮುರಳಿನಾದವ ಹರಸಿದೆ
ಒಂಟಿ ಅಲೆದಿಹ ಎನ್ನ ಹೃದಯದಿ ವಿರಹ ತಾನು ಸುಡುತಿದೆ

ನಾನು ಬುವಿಯು ಅವನು ಮುಗಿಲು ಸುರಿವ ಒಲುಮೆಯ ದಾಹವೆ
ಶ್ರೀನಿವಾಸ ವಿಠಲನವನೊಳು ಈ ರಾಧೆಯ ಮೋಹವೆ

ಸಂಜೆ ಬರುವೆನೆಂದನೆ ಒಲುಮೆ ತರುವೆನೆಂದನೆ
ಎನ್ನ ಜೀವದ ಜೀವ ಕೃಷ್ಣನು ಹೇಳೆ ಸಖಿ ಬಂದನೆ

ರಚನೆ: ಎನ್ಕೆ, ಭದ್ರಾವತಿ / ೦೪.೦೧.೨೦೧೩

Wednesday, January 2, 2013

Shri Krishnana Nooraru Geethegalu - 327

ಎನ್ನ ಕೃಷ್ಣ

ಮೂಡಣದಿ ಮೂಡಿಬಹ ರವಿಯಾತ್ಮದೊಳಗಿನ ಪ್ರಭೆಯ ಕಿರಣವು ನೀನು ಎನ್ನ ಕೃಷ್ಣ
ಜಗವ ಮಸುಕಿದಾ ಗಾಢಾಂಧ ನಿಶೆಯದನು ತೊಳೆವ ಬೆಳಕಿನ ಜಲವು ಎನ್ನ ಕೃಷ್ಣ

ಚಿಗುರಿದ ಗಿಡಮರದ ಕೊಂಬೆರೆಂಬೆಗಳಲ್ಲಿ ನಗುವ ಹೂವಿನ ಕೊಡೆಯು ಎನ್ನ ಕೃಷ್ಣ
ಮರಿಗೆ ಗುಟುಕೀಯುತಿಹ ತಾಯಿಹಕ್ಕಿಯ ಕೊರಳ ತೃಪ್ತಿಗಾನವು ನೀನು ಎನ್ನ ಕೃಷ್ಣ

ಹರಿವ ಜುಳುಜುಳು ನದಿಯ ಮಡಿಲಿನೊಳಗಾಡುವ ಪುಟ್ಟಮೀನಿನ ಹೆಜ್ಜೆ ಎನ್ನ ಕೃಷ್ಣ
ಕಂದ ನೀ ಬಾಯೆನುತ ನದಿಯ ಅಪ್ಪುವ ಕಡಲ ಮಾತೆಮಮತೆಯು ನೀನು ಎನ್ನ ಕೃಷ್ಣ

ಸಂಜೆ ಮನೆಯೊಸ್ತಿಲಲಿ ನಗುವ ಮಾವಿನ ತಳಿರು ಚೆಂದದ ರಂಗೋಲಿ ಎನ್ನ ಕೃಷ್ಣ
ಚಿತ್ರದ ಗಡಿಗೆಯೊಳು ನೊರೆಹಾಲ ಮಳೆಗರೆದ ಗೋವಿನ ಧನ್ಯತೆಯು ಎನ್ನ ಕೃಷ್ಣ

ಶೃಂಗಾರಕೋಣೆಯಲಿ ನಗುವ ಪ್ರಣತಿಯ ದಿವ್ಯ ಒಲುಮೆಯ ದೀಪ್ತಿಯು ಎನ್ನ ಕೃಷ್ಣ
ತೂಗುಮಂಚದಿ ತಾನು ಒಂಟಿಯೆಂಬ್ಬೇಸರದಿ ಕಾವ ವೀಣೆಯ ವಿರಹ ಎನ್ನ ಕೃಷ್ಣ

ಗೋಧೂಳಿ ಕಾಲದಲಿ ಗೋಕುಲದ ಹಾದಿಯಲಿ ಮೂಡುವ ಶ್ರೀಹೆಜ್ಜೆ ಎನ್ನ ಕೃಷ್ಣ
ಬರುವನೊ ಬಾರನೊ ಎನುತ ಯಮುನೆಯ ದಡದಿ ನಡೆವವಳ ಕಾಲ್ಗೆಜ್ಜೆ ಎನ್ನ ಕೃಷ್ಣ

ರಚನೆ: ಎನ್ಕೆ, ಭದ್ರಾವತಿ / ೦೨.೦೧.೨೦೧೩