Wednesday, February 1, 2012

Shri Krishnana Nooraru Geethegalu - 204

ಕೃಷ್ಣ ಹೃದಯೆ

ಏನೊ ಸಡಗರ ಇವಳಿಗೆ ಚೆಲುವೆ ಕೃಷ್ಣ ಹೃದಯೆಗೆ
ಮುದ್ದು ಶ್ಯಾಮನ ತೋಳ ಬಳಸಿ ನಾಚಿ ನಿಂತಿಹ ರಾಧೆಗೆ

ಚಿಗರೆ ಚಿತ್ತವು ನಯನದಂಗಳ ನಡುಗುವಧರವು ವದನ ಸುಂದರ
ಹೊಳೆವ ನತ್ತೊಳು ನಗುವ ಚಂದಿರ ರಂಗುಗಲ್ಲದಿ ಸುರಿದು ತಿಂಗಳ (೧)

ಎದೆಯ ಗುಡಿಯೊಳು ಬಯಕೆ ಢವಢವ ವಿರಹ ಯಮುನೆಯ ಮೊರೆತವು
ತೂಗುಮಂಚದಿ ಶೃಂಗಾರ ವೀಣೆಗೆ ಮುರಳಿ ಗಾನದ ಸೆಳೆತವು (೨)

ಎಲ್ಲೋ ಇರಲು ಇವಳ ಮೋಹನ ಎಲ್ಲ ಹೇಳುವ ಕಾತುರ
ಸನಿಹ ಬರಲು ಮೌನ ಕಣಿವೆಯು ಒಲವ ಮಿಲನದ ಆತುರ (೩)

ಎಲ್ಲ ಬಲ್ಲನು ಜಗದ ನಲ್ಲನು ಬರಿದೇ ನಗುವನು ಕೃಷ್ಣನು
ಶ್ರೀನಿವಾಸ ವಿಠಲ ಗೊಲ್ಲನು ರಾಧೆ ಪ್ರಣಯಕೆ ಒಲಿವನು (೪)

ಏನೊ ಸಡಗರ ಇವಳಿಗೆ ಚೆಲುವೆ ಕೃಷ್ಣ ಹೃದಯೆಗೆ
ಮುದ್ದು ಶ್ಯಾಮನ ತೋಳ ಬಳಸಿ ನಾಚಿ ನಿಂತಿಹ ರಾಧೆಗೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೧.೨೦೧೨


No comments:

Post a Comment