Friday, May 11, 2012

Shri Krishnana Nooraru Geethegalu - 233

ನಿನ್ನ ಶ್ರೀಚರಣದೊಳು

ನಿನ್ನ ಶ್ರೀಚರಣದೊಳು ಮುಗಿದು ನಿಂತಿಹೆ ಪ್ರಭುವೆ
ತೋರಯ್ಯ ಶ್ರೀಪಾದನ ಯತಿರಾಯ
ತೋರಯ್ಯ ಮಹನೀಯನ ಗುರುರಾಯ

ವಾಯುಸುತ ಬಕುತಿಯಿಂ ಪ್ರೇರಿತನ ಸ್ಥಾಪಿತನ
ಜಗಮಾನ್ಯ ಬಹುಮಾನ್ಯ ಶ್ರೀರಾಮನ
ದಶಶಿರನ ದುರಿತವನು ದಹಿಸಿ ತಾ ಧರೆಯೊಳಗೆ
ಧರ್ಮದುನ್ನತಿ ಮೆರೆದ ಶ್ರೀತ್ರೇತನ (೧)

ತೋರಯ್ಯ ಶ್ರೀಪಾದನ ಯತಿರಾಯ
ತೋರಯ್ಯ ಮಹನೀಯನ ಗುರುರಾಯ

ಮಥುರೆಮಾವನ ಸೀಳಿ ದ್ವಾಪರದಿ ಜಯಕೇಳಿ
ಧರ್ಮದೈವರ ಪೊರೆದ ಶ್ರೀಕೃಷ್ಣನ
ಕುರುಸುತರ ಎದೆಯೇರಿ ರಣದೊಳಗೆ ಜಯಭೇರಿ
ಶರಣ ಸುಜನರ ಕಾಯ್ದ ಶ್ರೀದೇವನ (೨)

ತೋರಯ್ಯ ಶ್ರೀಪಾದನ ಯತಿರಾಯ
ತೋರಯ್ಯ ಮಹನೀಯನ ಗುರುರಾಯ

ನಿನ್ನ ಗಾನದ ಸುಧೆಗೆ ತುಂಗೆತೀರದೊಳಾಡ್ವ
ರಾಯರಾಯರ ರಾಯ ಶ್ರೀಪಾದನ
ವೈಕುಂಠಪುರದೊಳಗೆ ಸಿರಿಲಕುಮಿಯೊಡನಾಡ್ವ
ಶ್ರೀನಿವಾಸ ವಿಠಲ ಶ್ರೀಕಲಿವರದನ (೩)

ತೋರಯ್ಯ ಶ್ರೀಪಾದನ ಯತಿರಾಯ
ತೋರಯ್ಯ ಮಹನೀಯನ ಗುರುರಾಯ

ನಿನ್ನ ಶ್ರೀಚರಣದೊಳು ಮುಗಿದು ನಿಂತಿಹೆ ಪ್ರಭುವೆ
ತೋರಯ್ಯ ಶ್ರೀಪಾದನ ಯತಿರಾಯ
ತೋರಯ್ಯ ಮಹನೀಯನ ಗುರುರಾಯ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೫.೨೦೧೨

No comments:

Post a Comment