Tuesday, May 21, 2013

Shri Krishna Vachangalu

ನಾಲಗೆಯೊಳನ್ಯವದು ಕುಣಿದಾಡೆ ಕರ್ಣವವು ಕೃಷ್ಣನಿಗೆ ಕಿವುಡಾಗೆ
ನಾಸಿಕವು ಪುಣ್ಯಗಂಧನ ಸೇವಿಸದೆ ಪೋಗೆ ಕಂಗಳವು ಕಣಕಣದೊಳವನ
ಕಾಣದೆ ಕುರುಡಾಗೆ ದೇಹವದು ಆತ್ಮವಿಲ್ಲದ ಗುಡಿಯಾಗೆ ಅಂದಿಗಲ್ಲಿ
ಧರ್ಮವದಳಿದಧರ್ಮದ ರವರವ ಪ್ರಳಯ ನೋಡೆಂದ ಶ್ರೀನಿವಾಸ ವಿಠಲ (021)

ಚಿತ್ತ ಅವನೊಳಗಿಟ್ಟು ಬಿತ್ತು ಬಕುತಿಯ ಬೀಜ
ಬಾಳ ಬೇವಕಹಿಯನು ಕಳೆದು ಮಾವಸಿಹಿಯದನೀವ
ಎನ್ನಾಣೆ ಎನ್ನ ಹರಿದಾಸರಾಣೆ ಶ್ರೀನಿವಾಸ ವಿಠಲ (022)

ಹಸಿವೆಂದು ಬಂದವಗೆ ಅಗುಳ ಮುರಿದುಣಿಸು
ಬಾಯಾರಿದವನ ಬೊಗಸೆ ನೀರಲಿ ತಣಿಸು
ನೋವುಂಡ ನರನವನ ಕಣ್ಣೀರನಳಿಸು
ಜಗಕೆ ನೀನಿಕ್ಕಿದೊಡೆ ನಿನ್ಹನ್ನೆರಡು
ತಲೆಮಾರ ಜಗಕಾವುದು ಶ್ರೀನಿವಾಸ ವಿಠಲ (023)

ಜಗವುಣ್ಣುವನ್ನವನು ಕುಡಿಕೆಯೊಳಡಗಿಸುವನ
ನಡುರಾತ್ರಿಯೊಳೆದ್ದು ಧನವದನು ಎಣಿಸುವನ
ಕುಡಿನೀರಬಾವಿಗೆ ಬೇಲಿಯನು ಕಟ್ಟುವನ
ಹರಿಪಾದವದೂ ಕಾಯದೆಂದ ಶ್ರೀನಿವಾಸ ವಿಠಲ (024)

ಆತ್ಮದೊಳು ನೀನಿರದವನ ಮನೆಯ ಅನ್ನವದು ವಿಷವಯ್ಯ
ನಿನ್ನಿರುವ ಅರಿಯದಂತಾಡುವನ ಮನವೇ ವಿಷವಯ್ಯ
ನೀ ಕೊಡುವ ಮುಕುತಿಯಲ್ಲದೆ ಭವವೇ ಭವಿತವ್ಯ
ವೆನುವನ ನೀನಲ್ಲದೆ ಮತ್ಯಾರು ಕಾವರೊ ಶ್ರೀನಿವಾಸ ವಿಠಲ (025)

ಜಾನಕಿಯ ರೂಪದೊಳು ರಾವಣನ ಕೇಡ ಕಂಡೆಯಾ
ಪಾಂಚಾಲಿ ಕುರುಳಿನೊಳು ಕುರುಜರ ಕೇಡ ಕಂಡೆಯಾ
ಕೃಷ್ಣನ ಕೊಲುವೆನೆಂದ ಕಂಸನ ಕೇಡ ಕಂಡೆಯಾ
ಆರನು ಗೆದ್ದು ಹರಿ ನೀನೇ ಎನುವನ ಅನುಗಾಲ
ಕಾವನೆಮ್ಮ ಶ್ರೀನಿವಾಸ ವಿಠಲ (026)

No comments:

Post a Comment