Tuesday, May 21, 2013

Shri Krishna Vachanagalu

ತಿರಿದುಂಬುವುದಕ್ಕಿಂತ ಹಂಗಿರದ ಹಸಿವೇ ಲೇಸು
ಇಕ್ಕುವನ ಮನಹಸ್ತವವು ಅಶುದ್ಧವೆನುವೊಡೆ
ಅಮೃತವು ಪಾಷಾಣವೆಂದನೆಮ್ಮ ಶ್ರೀನಿವಾಸ ವಿಠಲ (001)

ಮತಿಯದು ಮೌನಕೆ ಶರಣಾದೊಡೆ ಅರೆಮತಿಯ
ದಬ್ಬರಿಸುವುದನರ್ಥಕೆ ಮೊದಲಕ್ಷರನೆ ನೀಡು ಆ
ಮೂಢಮತಿಗೆ ಸುಮತಿಯನೆಂದ ಶ್ರೀನಿವಾಸ ವಿಠಲ (002)


ಕಿವುಡಾಗಿ ಕರತಾಡನಕೆ ಕಾಯದೆ ಬೆನ್ನತಟ್ಟಲವರಿವರ
ರವಿಶಶಿಯಂದದೊಳು ದಣಿವರಿಯದೆ ದುಡಿವನ ಮಾನ
ಸಮ್ಮಾನಗಳು ಬೆನ್ನಟ್ಟಿ ಬಹವೆಂದ ಶ್ರೀನಿವಾಸ ವಿಠಲ (003)


ಹರಿವುದು ನದಿ ಕಡಲೆಡೆಗೆ ಅರಿತೂ ತನ್ನಂತ್ಯವದೆಂದು
ನಡುವೆ ನೀಗಿಸಿಯೆಷ್ಟೊ ಜೀವದಾಹ ಮನೆ ಮಣ್ಣು ಮೋಹ
ದ ಮನುಜ ನೀನೊಂದು ಕ್ಷಣ ನದಿಯಾಗೆಂದ ಶ್ರೀನಿವಾಸ ವಿಠಲ (004)

ತಾಳಿ ಬಾಳಲು ಬೇಕು ತಾಳಿಗೆ ತಲೆ ಬಾಗಿದೋಳು
ಬಲಗಾಲಿಟ್ಟಲ್ಲಿ ಸೊಸೆ ತಾ ಮಗಳಾಗಿ ಆ ತವರ
ಮರೆವಂತೆ ಇದೇ ಅದೆನುವಂತೆ ಶ್ರೀನಿವಾಸ ವಿಠಲ (005)

ಸಹನೆಯವಶ್ಯವು ಬದುಕ ಬೇಸಿಗೆಯಲಿ ನೆರಳೂ ವಿರಳ
ಬಯಲಹಾದಿಯಲಿ ಹೆಜ್ಜೆಯಾದೊಡೆ ತಾಳ್ಮೆ ನದಿತೊಡೆ
ಯ ಹಸಿರಿನೆದೆಯಲಿ ಹಕ್ಕಿಹಾಡೆಂದ ಶ್ರೀನಿವಾಸ ವಿಠಲ (006)

ನಿದ್ದೆಗೊಡದು ಕುಡಿಕೆಯೊಳಿಟ್ಟ ಹೊನ್ನು ಗುಡ್ಡೆಗಟ್ಟಿ
ದ ಧಾನ್ಯ ಹುಳುಹುಪ್ಪಟೆಯುದರಕೆ ದುರಾಸೆ ದೂರ
ದೊಳಿಟ್ಟು ದಾನಕ್ಕೆ ಕೈಯಾಗೆಂದ ಶ್ರೀನಿವಾಸ ವಿಠಲ (007)


ತೂಕವಿರದ ಮಾತು ತುಪ್ಪದ ಕುಡಿಕೆಯ ತೂತು ಕೇಳ್ವ
ಮಾನವಂತರಿಗದುವೆ ಹಗುರ ಅಪಹಾಸ್ಯ ಪದಾರ್ಥ
ನುಡಿನುಡಿ ಬಿಡಿಬಿಡಿ ಹಾಡಿನಂತಿರಲೆಂದ ಶ್ರೀನಿವಾಸ ವಿಠಲ (008)


ನೊಸಲಪಟ್ಟೆಯ ಮೆಚ್ಚ ಉಟ್ಟ ದಟ್ಟಿಯ ಮೆಚ್ಚ
ಒಳಸ್ವಚ್ಛವಿರದಶುದ್ಧನ ಅವ ಶತಸಿದ್ಧ ಮೆಚ್ಚ
ಅಂಗ ಮೀರಿ ಆತ್ಮಸಂಗದಿ ತೋರ್ವ ಶ್ರೀನಿವಾಸ ವಿಠಲ (009)

ಕಣ್ಣು ಕಂಡುದ್ದಕ್ಕೆಲ್ಲ ಮನವ ಜಾರಿಸಬೇಡ
ಮೈಯ್ಯ ಜೊಲ್ಲಿಗೆ ಮಾನ ಮರೆಯಲು ಬೇಡ
ಕುರುಳು ಕುರುಜನುರುಳಾಯ್ತೆಂದ ಶ್ರೀನಿವಾಸ ವಿಠಲ (010)









No comments:

Post a Comment