Saturday, December 10, 2011

Shri Krishnana Nooraru Geethegalu - 190

ನಿಗಮಗೋಚರ ಕೃಷ್ಣ

ನಿಗಮಗೋಚರ ಕೃಷ್ಣ ಧರಣಿ ಪಾಲ
ಸುಖದಿ ಸಲಹೊ ಎಮ್ಮ ರಾಧೆಲೋಲ

ನಿಜರೂಪ ನಿಷ್ಕಾಮ ನಿಯತಿ ಸೂತ್ರಕ ಕೃಷ್ಣ
ನಿನ್ನೊಡಲ ನೆಪಜೀವದಣುವು ನಾವಯ್ಯ
ಬುವಿ ಬಸಿರು ಹಸಿರುಸಿರ ಹನಿಯು ಅನ್ನವದಾಗಿ
ಎಮ್ಮೊಡಲ ಕಣಕಣದಿ ನೀನೆ ನೆಲೆಸಯ್ಯ (೧)

ಗುಣವಂತ ನಯವಂತ ಛಲವಂತನೆ ಕೃಷ್ಣ
ನಿನ್ನ ನೆರಳಿನಾ ನೆರಳ ಆಶ್ರಿತರು ನಾವಯ್ಯ
ಶಿಕ್ಷಿಸೆಮ್ಮಯ ದುರಿತ ಕುರುಜನರ ತರಿದಂತೆ
ಹಗಲೆಡೆಗೆ ಅಂಧರಥ ನೀನೆ ನಡೆಸಯ್ಯ (೨)

ಆದಿದೇವನು ನೀನು ಅಣುರೇಣುತೃಣ ಕೃಷ್ಣ
ನಿನ್ನ ಉಸಿರಿಗೆ ಕಾದ ಮುರಳಿ ನಾವಯ್ಯ
ಯಮುನೆತೀರದ ಚೆಲುವ ಶ್ರೀನಿವಾಸ ವಿಠಲಯ್ಯ
ಮನಶುದ್ಧಬುದ್ಧಿಯೊಳು ಎಮ್ಮ ಸಲಹಯ್ಯ (೩)

ನಿಗಮಗೋಚರ ಕೃಷ್ಣ ಧರಣಿ ಪಾಲ
ಸುಖದಿ ಸಲಹೊ ಎಮ್ಮ ರಾಧೆಲೋಲ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೧೨.೨೦೧೧

No comments:

Post a Comment