Sunday, March 4, 2012

Shri Krishnana Nooraru Geethegalu - 212

ಕೃಷ್ಣನಿರದೆ ರಾಧೆಯಿಲ್ಲ

ಕೃಷ್ಣನಿರದೆ ರಾಧೆಯಿಲ್ಲ ರಾಧೆಗೋ ಇವನೆ ನಲ್ಲ
ಗೋಕುಲದ ಗೋಪಾಲ ಗೊಲ್ಲ ಇರದೆ ರಾಧೆ ಜಗವೆ ಇಲ್ಲ

ನಯನವವಳು ನೋಟವಿವನು ಹೃದಯವವಳ ಬಡಿತವು
ಕರ್ಣಗಳಿಗೆ ವೇಣುಯಿವನು ರಾಧೆ ಜೀವಮಿಡಿತವು
ರಾಧೆ ಮೈಯ್ಯ ಕಣಕಣದೊಳು ಮುರಳಿಯವನ ಮೋಹವು
ಅವನಿಲ್ಲದೆ ರಾಧೆಯವಳು ಆತ್ಮವಿರದ ದೇಹವು (೧)

ಬರುವೆನೆಂದು ಪೇಳಿದವನು ಬರದಿದ್ದೊಡೆ ನೋವಳು
ಸಂಜೆಯಲಿ ಸಿಂಗಾರದೊಡತಿ ತೂಗುಮಂಚದಿ ಕಾವಳು
ಬಯಕೆ ಬಾಗಿಲ ಹೊಸ್ತಿಲಲ್ಲಿ ಒಲುಮೆ ತೋರಣ ಬಿಗಿವಳು
ಪ್ರಣತಿಯೊಡಲಿನ ದೀಪ್ತಿಯಂದದಿ ಕಾತರಿಸುವ ಕಂಗಳು (೨)

ಮೂಲೋಕದಿ ಚೆಲುವನವನು ತಡವಾದರು ಬರುವನು
ಗಲ್ಲ ರಮಿಸಿ ರಾಜಕಾರಣ ತಡವಾಯಿತು ಎನುವನು
ಶ್ರೀನಿವಾಸ ವಿಠಲನವನು ರಾಧೆ ವಿರಹವ ಬಲ್ಲನು
ತೋಳಬಳಸಿ ಪ್ರೇಮವುಣಿಸಿ ಅವಳ ಗೆಲುವ ಜಾಣನು (೩)

ಕೃಷ್ಣನಿರದೆ ರಾಧೆಯಿಲ್ಲ ರಾಧೆಗೋ ಇವನೆ ನಲ್ಲ
ಗೋಕುಲದ ಗೋಪಾಲ ಗೊಲ್ಲ ಇರದೆ ರಾಧೆ ಜಗವೆ ಇಲ್ಲ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೩.೨೦೧೨

No comments:

Post a Comment