Thursday, October 11, 2012

Shri Krishnana Nooraru Geethegalu -305

ಎನ್ನ ಕೃಷ್ಣ

ದಿನಕರನ ಉದಯದೊಳು ಮೂಡಿಬಹ ಕಿರಣದೊಳು
ನಿನ್ನ ನಗುವನೆ ಕಾಣ್ವೆ ಎನ್ನ ಕೃಷ್ಣ

ಹೇ ದಿವ್ಯ ಕಿರಣನೆ ಜಗಜೀವ ಕಾರಣನೆ
ಎನ್ನಾತ್ಮದೊಳು ನೆಲಸೊ ಉಷೆಯ ಹರಸೊ
ಭವದಿ ತಮವನು ಅಳಿಸೊ ಉತ್ತಮನ ಒಳಗುಳಿಸೊ
ಮೂಜಗದ ಸೂತ್ರಕನೆ ಎನ್ನ ಕೃಷ್ಣ (೧)

ಜಗವು ನಿನ್ನದು ಹರಿಯೆ ಈ ಜೀವ ಸೋಜಿಗವು
ನೋಯಿಸದೆ ಕಾಯುವುದು ಎನ್ನ ದೊರೆಯೆ
ಏಳುಬೆಟ್ಟದ ಒಡೆಯ ಶ್ರೀನಿವಾಸ ವಿಠಲಯ್ಯ
ಬೇಡಿದೊಳು ಬಂದೊದಗೊ ಜಗವ ಪೊರೆಯೆ (೨)

ದಿನಕರನ ಉದಯದೊಳು ಮೂಡಿಬಹ ಕಿರಣದೊಳು
ನಿನ್ನ ನಗುವನೆ ಕಾಣ್ವೆ ಎನ್ನ ಕೃಷ್ಣ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೧೦.೨೦೧೨

No comments:

Post a Comment