Friday, October 19, 2012

Shri Krishnana Nooraru Geethegalu - 311

ನಡೆಯೆ ಬೇಗ ಬೃಂದಾವನಕೆ

ಏಕೆ ಮೌನ ಹೇಳೆ ರಾಧೆ ಅದ್ಯಾರ ಧ್ಯಾನವೆ
ಹಾಲಗಡಿಗೆ ಹೊತ್ತು ಹೀಗೆ ಎತ್ತ ಪಯಣವೆ

ಕರೆದನೇನೆ ಕೊಳಲಹುಡುಗ ಸರಸವಾಡೆ ಗಿರಿಯಲಿ
ಸನಿಹ ಸೆಳೆದು ಒಲುಮೆಮಾತಿಗೆ ಹರಿವ ಯಮುನೆದಡದಲಿ (೧)

ಕಾಡಮಲ್ಲಿಗೆ ದಂಡೆಯಿಡಿದು ಕಾದು ವಿರಹದ ಎದೆಯಲಿ
ಬಾರೆ ಮುಡಿಸುವೆ ಎಂದನೇನೆ ಬಯಕೆ ಚೆಲ್ಲುತ ಕಣ್ಣಲಿ (೨)

ನಂದಗೋಪನ ಕಂದನವನೆ ಗೋಕುಲದೊಳು ಚೆಲುವನು
ಮುರಳಿಯುಲಿದು ಮುಗುದೆ ಮನವನು ಬೆಣ್ಣೆಯಂದದಿ ಕದಿವನು (೩)

ನಡೆಯೆ ಬೇಗ ಬೃಂದಾವನಕೆ ಸಂಜೆ ಕೃಷ್ಣನು ಬರುವನು
ಶ್ರೀನಿವಾಸ ವಿಠಲ ನಿನ್ನಯ ಅಧರದಮೃತ ಸವಿವನು (೪)

ಏಕೆ ಮೌನ ಹೇಳೆ ರಾಧೆ ಅದ್ಯಾರ ಧ್ಯಾನವೆ
ಹಾಲಗಡಿಗೆ ಹೊತ್ತು ಹೀಗೆ ಎತ್ತ ಪಯಣವೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೧೦.೨೦೧೨

1 comment:

  1. ಒಂದು ಸಚಿತ್ರ ಕಾವ್ಯ ಸೃಷ್ಟಿ.

    ReplyDelete