Monday, April 30, 2012

Shri Krishnana Nooraru Geethegalu - 230

ಕರ ಮುಗಿವೆನೊ

ಕರ ಮುಗಿವೆನೊ ಜೀಯ ರಾಘವೇಂದ್ರ ರಾಯ
ತಪ್ಪುನೆಪ್ಪು ಎನ್ನವೊಪ್ಪಿ ಕರುಣೆ ತೋರಿಸಯ್ಯ

ತುಂಗಾತೀರದ ಯತಿಯೆ ಸನ್ಮಂಗಳ ನಿಧಿಯೆ
ಪ್ರಹ್ಲಾದ ದಿವ್ಯರೂಪ ಅಮಿತ ಪುಣ್ಯಗಣಿಯೆ
ಮಂದಮತಿ ನಾ ಗತಿಯನರಿಯೆನೊ ಸುಗತಿ ತೋರೊ ಹರಿಯೆ
ಸಕಲ ಸುಗುಣ ಸಂಪನ್ನ ರಾಘವೇಂದ್ರ ದೊರೆಯೆ (೧)

ಭುವನಗಿರಿಯ ಭಾಗ್ಯವೆಮ್ಮ ವೇಂಕಟಾದಿ ನಾಮವೆ
ಗುರುಸುಧೀಂದ್ರ ಶಿಷ್ಯೋತ್ತಮ ದ್ವೈತಧರ್ಮ ದೀಪವೆ
ಸಕಲಭಾಷ್ಯರಾಯ ಗುರುವೆ ನ್ಯಾಯಸುಧಾಮೂರ್ತಿಯೆ
ಸಮ್ಮತದೊಳು ಸಲಹೆಮ್ಮನು ವ್ಯಾಸತೀರ್ಥರೂಪನೆ (೨)

ಶಾರದಾ ಸುಪುತ್ರನೆ ನ್ಯಾಯಪರಿಮಳಸೂತ್ರನೆ
ಕಲಿಯೊಳಗೆ ನರರ ಕಾಯೊ ರಾಯರಾಯರ ರಾಯನೆ
ನವನೀತಚೋರನೆಮ್ಮ ಶ್ರೀನಿವಾಸ ವಿಠಲರಾಯ
ಪುಣ್ಯಚರಣವ ಬಿಡದೆ ಪೂಜಿಪ ಕಶ್ಯಪನ ಕಂದನೆ (೩)

ಕರ ಮುಗಿವೆನೊ ಜೀಯ ರಾಘವೇಂದ್ರ ರಾಯ
ತಪ್ಪುನೆಪ್ಪು ಎನ್ನವೊಪ್ಪಿ ಕರುಣೆ ತೋರಿಸಯ್ಯ
       
 ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೪.೨೦೧೨

No comments:

Post a Comment