Wednesday, July 4, 2012

Shri Krishnana Nooraru Geethegalu - 244

ನಂಬಲು ಕೆಡುಕಿಲ್ಲವೊ

ನಂಬಲು ಕೆಡುಕಿಲ್ಲವೊ ಶ್ರೀರಾಮನ
ನಂಬದೆ ಬದುಕಿಲ್ಲವೊ ಶ್ರೀಶ್ಯಾಮನ (ಪಲ್ಲವಿ)

ನಂಬದೆ ನಂಬಿದೆನೆನುವ ನರಜನುಮವು
ಬವಣೆಯ ಬಣವೆಯೊ ನರಮನುಜ (ಅನುಪಲ್ಲವಿ)

ಧನ್ಯನಾದನೊ ಹನುಮ ದಿವ್ಯಚರಣವ ನಂಬಿ
ದರುಶನ ಮಾತ್ರದೊಳಾ ಶಬರಿ
ನಂಬದೆ ಉಳಿದಸುರ ಧರೆಯೊಳಗಳಿದನೊ
ಶರಣರ ಪೊರೆವನೊ ಶ್ರೀಹರಿ (೧)

ಮಾತೆ ಯಶೋದೆಯ ಮಡಿಲೊಳಗಾಡುತ
ಗೋಕುಲ ಸಲಹಿದ ಗೋವಿಂದ
ಹಿಂಸಕ ಕಂಸನ ಧ್ವಂಸವಗೈದನೊ
ದ್ವಾರಕಾಧೀಶ ಶ್ರೀಅರವಿಂದ (೨)

ಕೃತದಿಂ ಕಲಿವರೆಗು ಆರರ ನಿಶೆ ಕಳೆದು
ಕಾಯುತಲಿರುವನೊ ಶ್ರೀಲೋಲ
ನಂಬಿದ ಸುಜನರ ಸುಖದೊಳು ಪಾಲಿಸುತ
ಮಂಗಳವೀವನೊ ಶ್ರೀನಿವಾಸ ವಿಠಲ (೩)

ನಂಬಲು ಕೆಡುಕಿಲ್ಲವೊ ಶ್ರೀರಾಮನ
ನಂಬದೆ ಬದುಕಿಲ್ಲವೊ ಶ್ರೀಶ್ಯಾಮನ (ಪಲ್ಲವಿ)

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೭.೨೦೧೨

No comments:

Post a Comment