Wednesday, July 4, 2012

Shri Krishnana Nooraru Geethegalu - 243

ಸುಮಧುರ ಮುರಳಿಗಾನ

ಮಧುರ ಸುಮಧುರ ಮುರಳಿಗಾನವು ಕರ್ಣಾನಂದವ ತರುತಲಿದೆ
ರಾಧೆಯೊಲವಿನ ಬೃಂದಾವನದೊಳು ಗೋಕುಲಕೃಷ್ಣನ ನಾದವಿದೆ

ಜುಳುಜುಳು ಜುಳುಜುಳು ಕಿರುಗೆಜ್ಜೆ ಕಾಲ್ಗಳ ಯಮುನೆಯು ನಲುಮೆಯಿಂದೋಡುತಿದೆ
ತೀರದ ಹಸುರಿನ ಚಿಗುರಿನ ಎದೆಯೊಳು ನವಪುಷ್ಪಾಂಕುರವಾಗುತಿದೆ
ಮಾಮರದೆದೆಯಲಿ ಕೋಕಿಲ ತಾನು ನವರಸಗಾನವ ಬರೆಯುತಿದೆ
ರಂಗಿನ ಬಾನೊಳು ಚುಕ್ಕಿಯ ಸಿಂಗಾರ ತಿಂಗಳು ಚೆಂದದಿ ನಗುತಲಿದೆ (೧)

ಚಿನ್ನದ ಚಿತ್ರದ ಉಯ್ಯಾಲೆಯು ತಾ ರಾಧೆ-ಮಾಧವರ ಕರೆಯುತಿದೆ
ಶೃಂಗಾರ ನುಡಿಸೊ ವಿರಹದ ವೀಣೆಯು ಒಂಟಿಯೆಂದೊಳಗೇ ನೋಯುತಿದೆ
ಮೋಹನನಿಲ್ಲದ ರಾಧೆಯ ಲೋಕದಿ ಪ್ರೇಮಕೆ ಅರ್ಥವೇ ಶೂನ್ಯವಿದೆ
ರಾಧೆಯ ಜೀವನ ಶ್ರೀನಿವಾಸ ವಿಠಲನ ಬೃಂದಾವನವದು ಕಾಯುತಿದೆ (೨)

ಮಧುರ ಸುಮಧುರ ಮುರಳಿಗಾನವು ಕರ್ಣಾನಂದವ ತರುತಲಿದೆ
ರಾಧೆಯೊಲವಿನ ಬೃಂದಾವನದೊಳು ಗೋಕುಲಕೃಷ್ಣನ ನಾದವಿದೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೭.೨೦೧೨

No comments:

Post a Comment