Friday, July 20, 2012

Shri Krishnana Nooraru Geethegalu - 251

ಯಾವಾಗಲೂ ಹೀಗೇ ಅವನು

ಯಾವಾಗಲೂ ಹೀಗೇ ಅವನು ಎನ್ನ ಪ್ರಾಣ ಶ್ಯಾಮನು
ಇಗೋ ಬಂದೆ ಎನುತ ಬರದೆ ಬೇಸರವನು ತರುವನು

ತಲೆಬಾಗಿಲ ಮಾವು ತೋರಣ ಶ್ಯಾಮನೆಲ್ಲಿ ಎನುತಿದೆ
ಅಂಗಳದ ರಂಗವಲ್ಲಿ ಬರುವನೆನೇ ಕೇಳಿದೆ
ಹೊಸ್ತಿಲೊಳು ಬೆಳಗೊ ಪ್ರಣತಿ ಹಾದಿಬೆಳಕ ಚೆಲ್ಲಿವೆ
ಪಾದತೊಳೆಯೆ ನೀರತಂಬಿಗೆ ಶ್ಯಾಮನವನ ಕಾದಿದೆ (೧)

ತೂಗಲೇನೆ ಎನುವ ಮಂಚಕೆ ಶ್ಯಾಮನಿಲ್ಲ ಎನ್ನಲೇ
ನುಡಿಯಲೇನೆ ಎನುವ ವೀಣೆಗೆ ಮೌನಧರಿಸು ಎನ್ನಲೇ
ಗೋಡೆಯೊಳಗಿನ ಮಿಲನಚಿತ್ರಕೆ ನಾನು ಒಂಟಿ ಎನ್ನಲೇ
ವಿರಹದೆದೆಯ ಭೋರ್ಗರೆತವ ಕೊಂಚ ತಾಳು ಎನ್ನಲೇ (೨)

ಶೃಂಗಾರದ ಶಯನಗೃಹದಿ ಗಂಧಚಂದನ ಘಮಘಮ
ಬಿಸಿಹಾಲಿನ ತಂಬಿಗೆಯೊಳು ಸಿಹಿಸಕ್ಕರೆ ಸಂಗಮ
ಮಿಲನ ಸುಖಕೆ ಅವನೇ ಇಲ್ಲ ಶ್ರೀನಿವಾಸ ವಿಠಲ
ಎನ್ನಂತೆಯೆ ಕಾಯುತಿಹುದು ಅವನ ಪ್ರೀತಿಗೋಕುಲ (೩)

ಯಾವಾಗಲೂ ಹೀಗೇ ಅವನು ಎನ್ನ ಪ್ರಾಣ ಶ್ಯಾಮನು
ಇಗೋ ಬಂದೆ ಎನುತ ಬರದೆ ಬೇಸರವನು ತರುವನು

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೭.೨೦೧೨

No comments:

Post a Comment