Wednesday, July 25, 2012

Shri Krishnana Nooraru Geethegalu - 254

ಶ್ರಾವಣದ ಇಳಿಸಂಜೆ

ಶ್ರಾವಣದ ಇಳಿಸಂಜೆ ಸುರಿವ ಮಳೆ ಚಳಿ ಗಾಳಿ
ಬೇಡುತಿದೆ ಮೈಮನವು ಶ್ಯಾಮನೊಲುಮೆ

ಎನ್ನೆದೆಯ ಬನದೊಳಗೆ ಆಸೆ ತರುಲತೆ ಚಿಗುರು
ಶ್ಯಾಮನೆದೆಯನು ತಬ್ಬೆ ತವಕಿಸುತಿದೆ
ಒಳವುರಿವ ವಿರಹಾಗ್ನಿ ನಾಚಿಕೆಯ ಗೆರೆ ಮೀರಿ
ತಣಿಸೊ ಶ್ಯಾಮ ಎನುತ ಧಗಧಗಿಸಿದೆ (೧)

ಎನ್ನೆದೆಯ ಬಾನಿನೊಳು ಗಾಳಿಮಳೆ ಹೊಯ್ದಾಟ
ನೀನಿರದೆ ನಾ ಒಂಟಿ ನೋವ ಕವಿತೆ
ಕತ್ತಲೊಳು ನಾನಿಹೆನು ಒಲುಮೆ ಬೆಳಕನು ತಾರೊ
ಶ್ರೀನಿವಾಸ ವಿಠಲ ನೀ ಜೀವ ಹಣತೆ (೨)

ಶ್ರಾವಣದ ಇಳಿಸಂಜೆ ಸುರಿವ ಮಳೆ ಚಳಿ ಗಾಳಿ
ಬೇಡುತಿದೆ ಮೈಮನವು ಶ್ಯಾಮನೊಲುಮೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೦೭.೨೦೧೨

No comments:

Post a Comment