Thursday, September 20, 2012

Shri Krishnana Kaavya - 002

ಕಿರುತೊರೆ

ಮೂಲವೆಂಬೊ ತಾಯಮಡಿಲ ಜಿಗಿದು
ಅಂಬೆಗಾಲಲ್ಲರಿದು ಜುಳುಜುಳು ಕವಿತೆ
ಅಣುಅಣು ನೀರಾಗುವ ಮಾಯೆ
ಕಿರುತೊರೆಯ ಜೀವದೊರತೆ

ಸುಲಭವಲ್ಲ ಪಯಣ ಮುಂದೆ
ಬಂಡೆಗಲ್ಲಿಗೆ ಮೈ ತರಚಿ ಪೊದರುಗಳಲಿ ಕೈಕಾಲು
ಪರಚಿ ಜಾರು ಜವುಗು ಮಣ್ಣು ಜಿಗಣೆ
ಕಾರಣವಿರದೆ ಕೂಗುವ ಜೀರುಂಡೆ ಸುಂಯ್ಯೆನುವ
ಸೊಳ್ಳೆ ಬೇಡದ ಗಾನ ಜೀವನ

ನಡೆಯಲೇ ಬೇಕು ಇನ್ನು ತೊರೆ
ತೊರೆದಾಗಿದೆ ತಾಯತೊಡೆ
ಆವುದೋ ಊರ ತಿರುವಲಿ ಸೊಂಟ ಬಳುಕಿ
ಬೃಹತ್ ಬಂಡೆಯ ತಲೆಯಿಂದ ಧುಮುಕಿ
ಹರಿದರಿದು ತಿಳಿಯಾಗಿ ನದಿಯಾಗಿ
ಬಣ್ಣದ ಮೀನು, ಸೀಗಡಿ ಮತ್ತು ಕಲ್ಲುಏಡಿಗೂ ತಾಯಾಗಿ
ಜೀವಜೀವದ ದಾಹವಾರಿಸೊ ಗಂಗೆ
ಕೆಲವೊಮ್ಮೆ ಪ್ರೇಮಿಗಳ ಪಾದಕೆ ತಂಪು
ಅವಕಾಶವಿದ್ದಂತೆ ಆಕಾರ ಅದಲುಬದಲು
ತೆಳ್ಳನೆಯ ಸ್ಫಟಿಕದಂತೆ ಒಮ್ಮೆಮ್ಮೆ
ವಜ್ರದಂತೆ ಗಡಸು
ಮರದ ನೆರಳಿದ್ದರೂ ದಂಡೆಯಲಿ
ವಿಶ್ರಮಿಸದಂತೆ
ಕೃಶವಾಗಿ ಸುಡುಬೇಸಿಗೆಗೆ ಮತ್ತೆ
ಮುಖವೊಡ್ಡಿ ಮಳೆಗೆ ಖುಷಿಯಾಗಿ

ನಾನೆಂಬೊ ಪದಕಳೆದು
ಕಡಲ ಗರ್ಭದೊಳ ನಡೆದು
ತೊರೆಯೀಗ ಪರಿಪೂರ್ಣ ಮತ್ತು
ಸ್ಪಷ್ಟ ಹರಿವುದರ ಕಾರಣ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೯.೨೦೧೨

(ಶ್ರೀಪುರುಷೋತ್ತಮ ಬಿಳಿಮಲೆಯವರ ’ಬಂಟಮಲೆಯ ಕಿರುತೊರೆ’ ಓದಿ...)

No comments:

Post a Comment