Friday, September 7, 2012

Shri Krishnana Nooraru Geethegalu - 284

ಸಂಜೆಯಾಗಿದೆ ಗೆಳತಿ

ಸಂಜೆಯಾಗಿದೆ ಗೆಳತಿ ಬರಲ್ಲಿಲ್ಲ ಅವನಿನ್ನು
ನೆನಪುಗಳ ಜಾತ್ರೆಯಲಿ ನಾನು ಒಂಟಿ

ಎನ್ನ ನಯನಗಳಲ್ಲಿ ಬಯಕೆ ತಾರೆಗಳರಳಿ
ಕಾತರದ ದೀಪಗಳ ಮೆರವಣಿಗೆಯು
ಬೇಸರದೆ ಸುಡುವೆನ್ನ ಆಸೆಯ ಹಾಳೆಯೊಳು
ಸನಿಹ ಬಾರೋ ಎನುವ ಬರವಣಿಗೆಯು (೧)

ಬೇಗ ಬರುವೆನೆ ಎಂದ ಮಧುರತೆಯ ಪಿಸುಮಾತು
ಎನ್ನ ಹೃದಯದ ಕದವ ತೆರೆಯುತಿಹುದು
ಬಿಗಿದಪ್ಪಿ ಮುದ್ದಿಟ್ಟ ಅವನ ಅಧರದ ಬಿಸಿಯು
ಎನ್ನೊಳಗೆ ದಾಹಾಗ್ನಿ ಮೊರೆಯುತಿಹುದು (೨)

ಗೋಕುಲದೆ ಗೋಧೂಳಿ ತರುತಲಿದೆ ತಂಗಾಳಿ
ಅವನ ಬರುವನು ಮುರಳಿ ಉಲಿಯುತಿಹುದು
ಶ್ರೀನಿವಾಸ ವಿಠಲನವ ಬಂದೇ ಬರುವನು ತಾಳೆ
ಎನ್ನೊಳಗಿನಾ ವೀಣೆ ನುಡಿಯುತಿಹುದು (೩)

ಸಂಜೆಯಾಗಿದೆ ಗೆಳತಿ ಬರಲ್ಲಿಲ್ಲ ಅವನಿನ್ನು
ನೆನಪುಗಳ ಜಾತ್ರೆಯಲಿ ನಾನು ಒಂಟಿ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೯.೨೦೧೨

No comments:

Post a Comment