Friday, August 17, 2012

Shri Krishna Kavya - 001

ಒಂಟಿಮರ..ಬುದ್ಧ ಮತ್ತು ನಾವು

ವಿಶಾಲದೊಳಗೊಂದು ಒಂಟಿ ಮರ
ಬಯಲು ಆಲಯವೆರಡು ತನ್ನೊಳಗೆ ಎನುವಂತೆ

ಹಠಯೋಗಿ ಅನ್ನಿಸೊಲ್ಲ ಕಾರಣ ಮರ
ಮಧ್ಯಾಹ್ನದ ಬಿಡುವಿನಲ್ಲಿ ಧ್ಯಾನಿಸುತ್ತೆ
ಸಂಭ್ರಮಿಸುತ್ತೆ ಕೊಳಲ ಹುಡುಗನ ತುಂಟಾಟಕೆ
ಮತ್ತು ಮಿಡಿಯುತ್ತೆ ಋತುಚಕ್ರದಾಟಕ್ಕೂ...

ಮತ್ತದರಡಿಯಲ್ಲಿ ಆರೋ ನಡೆದುಹೋದ ಪಾದದೆಳೆ
ಶುದ್ಧನಾದ ಬುದ್ಧನವೇ.. ಮರ ಮೌನ ಮತ್ತು ನೆರಳು
ದೂರದಲ್ಲಿ ಕಿತ್ತ ಸಂಕೋಲೆಗೆ ಯಶೋಧರೆಯ ಅಳು

ಸಂಜೆ ಮರದೆದೆಗೆ ಹಿಂತಿರುಗೆ ಹಕ್ಕಿ-ಪಕ್ಕಿ ಮಿಲನ
ಮಾತುಕತೆ ಮಿಥುನ ಮರಿ ಚಿಗುರಿ ಯಾ ಗರಿಯುದುರಿ

ಧ್ಯಾನದಿಂದೆದ್ದು ಮರ ಕಣ್ಣರಳಿಸುತ್ತೆ
ಸಂಜೆ ಸೂರ್ಯನ ಬಣ್ಣಕ್ಕೆ ಮೈಮರೆಯುತ್ತೆ
ಎದೆಗೂಡಿನೊಳಗೆ ಎಷ್ಟೊಂದು ಜೀವಕ್ಕೆ ತಾಯಿಯಾಗುತ್ತೆ
ತನ್ನೊಳಗೆ ತಾನೇ ಅಚ್ಚರಿಯಂಬಂತೆ...

ಮರಕ್ಕೀಗ ಜ್ಞಾನೋದಯ

ಯಾರೋ ಅದರೆಡೆಗೆ ಬರುತ್ತಿರುವಂತೆ
ಬುದ್ಧನೇ...ಇರಬಹುದು ಮರ ಜೀವನ್ಮುಖಿ
ಯಶೋಧರೆ ಶಾಪವಳಿದು ಸುಖಿ...!

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೮.೨೦೧೨

No comments:

Post a Comment