Sunday, August 26, 2012

Shri Krishnana Nooraru Geethegalu - 278

ಓ ಜೀವ ಮನದನ್ನೆ

ಮೌನ ಮುರಿಯೆ ಗೆಳತಿ ಓ ಜೀವ ಮನದನ್ನೆ
ಇರಿದೆನ್ನ ಕೊಲುತಿಹುದೆ ಕಣ್ಣೀರ ಕೆನ್ನೆ

ಸುಡುವ ಬೇಸಿಗೆ ಧಗೆಗೆ ಯುಮುನೆ ಸೊರಗಿದಳೆಂದು
ಕೊರಗುವವೆ ಇಬ್ಬದಿಯ ಅವಳ ತೀರ
ಮುಂಗಾರು ಮಳೆ ಸುರಿದು ಅವಳೊಳ್ಯವ್ವನವರಳೆ
ಸುಖದ ಸಂಭ್ರಮವವಕೆ ಕಳೆದು ಎದೆಭಾರ (೧)

ನಡುಗುವ ಚಳಿಗಾಲ ಎಲೆಯುದುರೆ ಮಾಮರದಿ
ಕೋಗಿಲೆಯು ಮಾಮರವ ಮರೆವುದೇನೆ
ಚೈತ್ರದೊಳು ಚಿಗುರೊಡೆದ ತಳಿರಿಗೆ ತಾಯಾದ
ಮಾಮರವು ಕೋಗಿಲೆಯ ಕರೆಯದೇನೆ (೨)

ತಡವೆಂಬ ಕಾರಣಕೆ ಹುಸಿಗೋಪ ನೀ ತೋರೆ
ಪ್ರಾಣರಾಧೆಯೆ ನಿನ್ನ ಬಿಡುವೆನೇನೆ
ಹುಸಿಮುನಿಸ ಮೌನವದ ಮರೆತು ಮಾತಾಡೆ
ಶ್ರೀನಿವಾಸ ವಿಠಲನ ತೊರೆವೆಯೇನೆ (೩)

ಮೌನ ಮುರಿಯೆ ಗೆಳತಿ ಓ ಜೀವ ಮನದನ್ನೆ
ಇರಿದೆನ್ನ ಕೊಲುತಿಹುದೆ ಕಣ್ಣೀರ ಕೆನ್ನೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೮.೨೦೧೨

No comments:

Post a Comment