Friday, August 3, 2012

Shri Krishnana Nooraru Geethegalu - 261

ದರ್ಪಣದ ಬಿಂಬದೊಳು

ದರ್ಪಣದ ಬಿಂಬದೊಳು ಎಮ್ಮ ಚೆಲುವೆ ರಾಧೆ
ತನ್ನ ಚೆಲುವಿಗೆ ತಾನೆ ನಾಚುತಿಹಳು

ಶ್ಯಾಮನನು ಕಾತರಿಸೊ ಚಿಗರೆ ಕಣ್ಣಂಚಿಗೆ
ಕಸ್ತೂರಿ ಕಾಡಿಗೆಯ ತೀಡುತಿಹಳು

ಮೋಹನನ ಅಧರಕ್ಕೆ ತುಡಿವ ತುಟಿ ಗಲ್ಲಕ್ಕೆ
ಪಡುವಣದ ರವಿರಂಗ ಬಳಿಯುತಿಹಳು

ಮುಂಗುರುಳು ನರ್ತಿಸೊ ನೊಸಲ ನಡುವೊಳು
ಸಿಂಧೂರ ಚಂದಿರನ ಧರಿಸುತಿಹಳು

ಬಿಗಿವ ಎದೆ ಹಿಡಿನಡುವ ಸೆಳೆವ ಮೈಮಾಟಕೆ
ಆ ರಾಧೆ ತಂತಾನೆ ಬೀಗುತಿಹಳು

ಮನದಾಸೆ ತಡೆಮೀರಿ ಹರಿವ ವಿರಹದ ನದಿಗೆ
ಬರುವನವ ತಾಳೆಂದು ಹೇಳುತಿಹಳು

ಅರ್ಪಿಸುವೆ ನಿನಗೆನ್ನ ಶ್ರೀನಿವಾಸ ವಿಠಲನೆ
ಎನುತ ವೃಂದಾವನದಿ ಕಾಯುತಿಹಳು

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೭.೨೦೧೨

No comments:

Post a Comment