Wednesday, August 22, 2012

Shri Krishnana Nooraru Geethegalu - 274

ಮಳೆಯಾಗಿ ಬಾರೊ ಎನ್ನ

ಮಳೆಯಾಗಿ ಬಾರೊ ಎನ್ನ ಸುಡುವ ವಿರಹದೆದೆಗೆ
ಕಾಯುತಿಹೆನು ಕಡಲಿನಂದದಿ ನಿನ್ನೊಲವಿನ ಸುಧೆಗೆ

ಎದೆಹೊಲವಿದು ಬಾಯಾರಿದೆ ಮೋಹ ನಿನ್ನೊಳು ಎನುತಿದೆ
ವರ್ಷದೊಳಗಿನ ಹರ್ಷರೂಪನೆ ಬಾರೊ ಕೃಷ್ಣನೆ ಕರೆದಿದೆ
ಎನ್ನ ನಯನದ ಕನಸ ಬಿಲ್ಲಿಗೆ ಸಪ್ತವರ್ಣವ ಬಳಿವನೆ
ಜೀವಬುವಿಯೊಳ ಮೊಗ್ಗನರಳಿಸೊ ನಲುಮೆಚಿತ್ರವ ಬರೆವನೆ (೧)

ನಿನ್ನ ಮುರಳಿಯ ರಾಗದೊಳು ಯಮುನೆಯಂದದಿ ವೇಗದೊಳು
ಗೋಪಮಿತ್ರರ ಕಣ್ಣ ಮರೆಸಿ ಬೃಂದಾವನದ ಹಾದಿಯೊಳು
ಸುರಿದುಬಾರೊ ಮೊರೆದುಬಾರೊ ಶ್ರೀನಿವಾಸ ವಿಠಲ ಬಾರೊ
ಕೊನೆಯಿರದ ಒಲುಮೆಮೋಡವ ಎನ್ನೊಡಲಿಗೆ ಹೊತ್ತು ತಾರೊ (೨)

ಮಳೆಯಾಗಿ ಬಾರೊ ಎನ್ನ ಸುಡುವ ವಿರಹದೆದೆಗೆ
ಕಾಯುತಿಹೆನು ಕಡಲಿನಂದದಿ ನಿನ್ನೊಲವಿನ ಸುಧೆಗೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೦೮.೨೦೧೨

No comments:

Post a Comment