Friday, August 24, 2012

Shri Krishnana Nooraru Geethegalu - 276

ಗೋವುಗಳೆ ಗೋಕುಲಕೆ

ನಡೆಯಿರಿ ಸಾಕಿನ್ನು ಗೋವುಗಳೆ ಗೋಕುಲಕೆ
ಎನ್ನ ಜೀವದ ಒಡತಿ ಕಾಯುತಿಹಳು

ಚೆಲುವಿನ ಖನಿಯವಳು ರತಿಯನೇ ಮೀರುವಳು
ಮೈಮನವು ಚಿಗರೆಯ ಜೀವಸುಧೆಯು
ವಿರಹದೊಳು ಬೇಯುವಳು ಯಮುನೆಯ ತೀರದೊಳು
ತಡವಾಗೆ ನೋಯುವಳು ಆ ರಾಧೆಯು (೧)

ನೊರೆಹಾಲ ಸಿಹಿಯವಳು ಕೆನೆಮೊಸರಿನಂಥವಳು
ನವನೀತದೊಲುಮೆಯನು ಉಣಿಸುವವಳು
ಮಿಲನದೊಳು ದಣಿಯುವಳು ಕೊಳಲುಲಿಗೆ ತಣಿಯುವಳು
ಎನ್ನ ಜೀವದ ಗೆಳತಿ ರಾಧೆಯವಳು (೨)

ಹಾರುತಿಹ ಹಕ್ಕಿಗಳೆ ಬೀಸಿ ಬಹ ತಂಗಾಳಿ
ಸುದ್ದಿ ತಿಳಿಸಿರೆ ಕೃಷ್ಣ ಬರುತಿಹನು ಎಂದು
ನಾನವಳ ಪ್ರಾಣಸಖ ಶ್ರೀನಿವಾಸ ವಿಠಲನೆ
ಎನ್ನೊಲುಮೆ ರಾಧೆಯನು ಮರೆಯೆನೆಂದು (೩)

ನಡೆಯಿರಿ ಸಾಕಿನ್ನು ಗೋವುಗಳೆ ಗೋಕುಲಕೆ
ಎನ್ನ ಜೀವದ ಒಡತಿ ಕಾಯುತಿಹಳು

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೦೮.೨೦೧೨

No comments:

Post a Comment