Thursday, August 9, 2012

Shri Krishnana Nooraru Geethegalu - 267

ಕಾಡದಿರೊ ಹೀಗೆನ್ನ

ಕಾಡದಿರೊ ಹೀಗೆನ್ನ ಕಮಲನಯನನೆ ಕೃಷ್ಣ
ಕಾಯುತಿಹೆ ನಾ ನಿನ್ನ ಬೃಂದಾವನದಿ

ಕಾನನದ ನಡುವಿನೊಳು ಹರಿವ ತೊರೆ ತೀರದೊಳು
ಮುರಳಿಯುಲಿಯುತ ಎನ್ನ ಮರೆತೆಯೆನೊ
ಗೋವುಗಳ ಗಮನಿಸುತ ಗೋಪಜನ ಸಂಗದೊಳು
ಎನ್ನ ಹೃದಯದ ಮೊರೆಯು ಕೇಳದೆನೊ (೧)

ಮುಡಿಯೊಳಗೆ ಮಲ್ಲಿಗೆಯು ಅರಳಿ ಘಮಘಮ ಸುಖವು
ಈ ರಾಧೆ ನಿನಗಾಗಿ ಬಲ್ಲೆಯೆನೊ
ವನಮಾಲೆ ಧರಿಸಿದಾ ಸಂಭ್ರಮದ ಸಡಗರದಿ
ಎನ್ನ ತುಳಸಿಮಾಲೆ ಒಲ್ಲೆಯೆನೊ (೨)

ನೆರೆಹೊರೆಯೊಳೆನ್ನವರು ಗೋಕುಲದಿ ನಗುತಿಹರೊ
ನಿನಗೆಲ್ಲೊ ಭ್ರಾಂತು ಅವ ಬಾರನೆಂದು
ಹುಸಿಯಾಗಲವರ ನುಡಿ ಶ್ರೀನಿವಾಸ ವಿಠಲಯ್ಯ
ತೋರೊ ಜಗಕೆ ಎಮದು ನಿಜಪ್ರೇಮವೆಂದು (೩)

ಕಾಡದಿರೊ ಹೀಗೆನ್ನ ಕಮಲನಯನನೆ ಕೃಷ್ಣ
ಕಾಯುತಿಹೆ ನಾ ನಿನ್ನ ಬೃಂದಾವನದಿ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೦೮.೨೦೧೨

No comments:

Post a Comment