Wednesday, August 29, 2012

Shri Krishnana Nooraru Geethegalu - 280

ಯಾವುದೀ ಹೊಸರಾಗ

ಯಾವುದೀ ಹೊಸರಾಗ ಸೆಳೆಯುತಿದೆ ಹೀಗೆನ್ನ
ಬೃಂದಾವನದೆದೆಗೆ ಹೇಳೆ ಗೆಳತಿ

ಎನ್ನ ವಿರಹದ ಎದೆಯ ಕದವ ಮೆಲ್ಲನೆ ತೆರೆದು
ಬಯಕೆ ಗಾನದ ಪದವ ಬರೆಯುತಿಹುದು
ಎನ್ನಾಸೆ ಹಸಿರಿನೊಳು ಕನಸ ಮಲ್ಲಿಗೆ ಹರಡಿ
ಒಲುಮೆ ಘಮಘಮವನ್ನು ಚೆಲ್ಲುತಿಹುದು (೧)

ನಿಲ್ಲಗೊಡದೆ ಗೆಳತಿ ಕೂರಬಿಡದೇ ಎನ್ನ
ಮೈಮನವ ತನ್ನೆಡೆಗೆ ಸೆಳೆಯುತಿಹುದು
ಎನಿತೆನಿತೊ ಜನುಮಗಳ ಪ್ರೇಮವೆಮ್ಮದು ಎನುತ
ಮಧುರ ನೆನಪಿನ ಪುಟವ ತೆರೆಯುತಿಹುದು (೨)

ಎನ್ನೊಲವಿನರಮನೆಯ ಮಾತಿನರಗಿಳಿಯು
ಮುದ್ದುಕೃಷ್ಣನ ಕಥೆಯ ಪೇಳುತಿಹುದು
ಶ್ರೀನಿವಾಸ ವಿಠಲನೆ ಆ ನಿನ್ನ ಪ್ರಾಣಸಖ
ಕೊಳಲನೂದುವ ಚೆಲುವನೆನುತಲಿಹುದು (೩)

ಯಾವುದೀ ಹೊಸರಾಗ ಸೆಳೆಯುತಿದೆ ಹೀಗೆನ್ನ
ಬೃಂದಾವನದೆದೆಗೆ ಹೇಳೆ ಗೆಳತಿ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೮.೨೦೧೨

No comments:

Post a Comment