Sunday, May 1, 2011

Shri Krishnana Nooraru Geethegalu - 090

ಭಜಿಸಿರೊ ಶ್ರೀಹರಿಯ

ಭಜಿಸಿರೊ ಶ್ರೀಹರಿಯ ನಮಿಸಿರೊ ನರಹರಿಯ
ನಮ್ಮಮ್ಮ ಸಿರಿಲಕುಮಿ ಸೇವಿಪ ದೊರೆಯ

ಸಪ್ತಗಿರಿಯೆತ್ತರದಿ ಪಂಚಭೂತಾಬ್ಧಿಯೊಳು
ವೈಭವದಿ ವಿರಮಿಸಿಹ ವೈಕುಂಠನ
ಮೂಜಗದಿ ಮುಕ್ಕೋಟಿಜೀವರನು ನೂರ್ಕಾಲ
ಉದರದೊಳುದ್ಧರಿಪ ನಿಜನೆಂಟನ (೧)

ದಿಕ್ಕೆಟ್ಟು ಜೀವನದಿ ಹರಿ ನೀನೆ ಗತಿಯೆನಲು
ಸರಿದಾರಿ ಸರಿಗಮದ ಸಂಗೀತನ
ನಾರಾಯಣನೆನುವ ನರಜನುಮ ನಾಲಗೆಗೆ
ನಾಕ ನವಕೋಟಿ ಸುಖವರದನ (೨)

ಮನಬಾಗಿ ಮದದ ಶಿರಬಾಗಿ ಶರಣೆನಲು
ಅನಿತು ಕರ್ಮಾಂಧದ ಕೊಳೆ ಕಳೆವನ
ಕ್ಷಮಿಸಿ ಕಾಯೊ ಎನಲು ಶ್ರೀನಿವಾಸ ವಿಠಲಯ್ಯ
ಎದೆಯೆಂಬೊ ಗುಡಿಯೊಳು ನೆಲೆನಿಲುವನ (೩)

ಭಜಿಸಿರೊ ಶ್ರೀಹರಿಯ ನಮಿಸಿರೊ ನರಹರಿಯ
ನಮ್ಮಮ್ಮ ಸಿರಿಲಕುಮಿ ಸೇವಿಪ ದೊರೆಯ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೦೫.೨೦೧೧

No comments:

Post a Comment