Monday, May 30, 2011

Shri Krishnana Nooraru Geethegalu - 121

ಶ್ರೀಪಾದಸೇವೆಯೆ

ಅರಸುತನವಿಲ್ಲೆನಗೆ ಆಸ್ಥಾನ ದೊರೆತನವು
ಅಂತಃಪುರ ಮೊದಲಿಲ್ಲ ಅರಸಿ ಸಖಿಬಳಗ
ಮಂತ್ರಿಮಾಗಧರಿಲ್ಲ ಸೆಣೆವ ಸೈನಿಕರಿಲ್ಲ
ಕಪ್ಪಕಾಣಿಕೆಯೊಪ್ಪಿಸುವ ಅಂಗರಾಜರು
ಒಡ್ಡೋಲಗವಿಲ್ಲ ಪರಾಕು ಪರಿಚಾರಕರಿಲ್ಲ
ಗಾಯಕ ನೃತ್ಯಕರಿಲ್ಲ ಮೇಣ್ ನೆಲಜಲದ
ಧಿಕಾರವೆನಗಿಲ್ಲವೊ ಹರಿಯೆ

ವಜ್ರವೈಢೂರ್ಯಗಳಿಲ್ಲ ನವಮುಕುಟ ಮಣಿಮಾಲೆ
ಇಲ್ಲವೊ ವಡವೆವಡ್ಯಾಣನವರತ್ನಾಭರಣ ಕಿರೀಟವು
ಗಜಾಶ್ವದಕ್ಷೋಯಿಣಿಯಿಲ್ಲ ಖಡ್ಗ ಗುರಾಣಿಗಳಿಲ್ಲ
ಕೋಟೆಕೊತ್ತಲವ ವಿಜಯಿಸುವ ಹುರಿಮೀಸೆ ಗುರಿಯಾಳು

ಶ್ರೀಪಾದ ಸೇವೆಯೆ ಅರಸುತನವೆನಗೆ
ಪರಮುಕುತಿ ಆಸ್ಥಾನ ದೊರೆತನವು
ನಿನ್ನ ವೈಕುಂಠವೆ ಅಂತಃಪುರವೆನಗೆ
ಹರಿದಾಸ ಸಖ್ಯವೆ ಅರಸಿ ಸಖಿಬಳಗ
ಮಂತ್ರಿಮಾಗಧರು ಸುಜನ ಸೈನಿಕರು
ಅವರಿಡುವನ್ನವೆ ಕಪ್ಪಕಾಣಿಕೆಯೆನಗೆ
ನಿನ್ನ ಒಗ್ಗೂಡಿ ಪಾಡುವುದೆ ಒಡ್ಡೋಲಗ
ಪರಾಕು ಸೇವೆಯದು ಪರಿಚಾರಿಕ ಧರ್ಮ ಗಾನನಾಟ್ಯವೆಲ್ಲ

ನಿನ್ನ ಶ್ರೀನಾಮವದು ವಜ್ರವೈಢೂರ್ಯವು
ಧರಿಸಿದರಂತರಂಗದಿ ನವಮುಕುಟಮಣಿಮಾಲೆ ವಡವೆವಡ್ಯಾಣ
ಶಿರಬಾಗಿದೊಡೆ ನಿನಗೆ ನವರತ್ನಾಭರಣ ಕಿರೀಟ
ನಿನ್ನ ಶ್ರೀರಕ್ಷೆಯೆ ಗಜಾಶ್ವಸೇನೆ ಖಡ್ಗ ಗುರಾಣಿ
ಕೋಟೆಕೊತ್ತಲವ ಜಯಿಸುವ ಹುರಿಮೀಸೆ ಗುರಿಯಾಳು

ಇಂತಿರ್ಪ ಶ್ರೀನಿವಾಸ ವಿಠಲನ ಅಡಿಯಾಳು ನಾನೆನಲು
ಅದಾವ ಅರಸಗೆ ಕೀಳು ಕಾಯೊ ಮೂಜಗದಯ್ಯ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೫.೨೦೧೧

No comments:

Post a Comment