Wednesday, March 30, 2011

Shri Krishnana Nooraru Geethegalu - 030

ಬಂದ ಗೋವಿಂದ

ಬಂದ ಮನೆಗೆ ಗೋವಿಂದ ಎಮ್ಮ ಮನೆಗೆ ಗೋವಿಂದ
ಮೆಲ್ಲಮೆಲ್ಲನಿರಿಸುತ ಶ್ರೀ ಪಾದಾರವಿಂದ
ಬಹುದಿನದೀ ಪಾಮರನ ಬಿನ್ನಹವ ಮನ್ನಿಸಿ
ಮಂಗಳೆ ಮಾಂಗಲ್ಯೆ ಲಕುಮಿಯ ನಡುಬಳಸಿ

ದೀನರ ದೇವ ಬಂದ ದೈನ್ಯರ ಕಾವ ಬಂದ
ದಾಸದಾಸ ಹೃದಯೇಶ ಧರಣೀಶ ಬಂದ
ತಲೆನೆವರಿ ಮೈದಡವಿ ಕಂದ ಕ್ಷೇಮವೇ ಎಂದ
ಅರೆಪಾವು ನೊರೆಹಾಲು ತನಗರ್ಪಿತವೆಂದ (೧)

ಕುಣಿದು ಕೋಮಲ ಬಂದ ನಲಿದು ಶ್ಯಾಮಲ ಬಂದ
ಸುದಾಮ ಪ್ರಿಯಮಿತ್ರ ಕೃಷ್ಣಯ್ಯ ತಾ ಬಂದ
ರವಿ-ಶಶಿ ನೇತ್ರ ಬಂದ ಉಶೆ-ನಿಶೆ ಸೂತ್ರ ಬಂದ
ಶ್ರೀನಿವಾಸ ವಿಠಲ ಎನ್ನೊಳು ಸಂದ (೨)

ಬಂದ ಮನೆಗೆ ಗೋವಿಂದ ಎಮ್ಮ ಮನೆಗೆ ಗೋವಿಂದ
ಮೆಲ್ಲಮೆಲ್ಲನಿರಿಸುತ ಶ್ರೀ ಪಾದಾರವಿಂದ
ಬಹುದಿನದೀ ಪಾಮರನ ಬಿನ್ನಹವ ಮನ್ನಿಸಿ
ಮಂಗಳೆ ಮಾಂಗಲ್ಯೆ ಲಕುಮಿಯ ನಡುಬಳಸಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೭.೨೦೧೦

No comments:

Post a Comment