Wednesday, March 30, 2011

Shri Krishnana Nooraru Geethegalu - 066

ಏಕೆ ಹೀಗೆ ಕಾಡುತಿರುವೆ

ಏಕೆ ಹೀಗೆ ಏಕೆ ಹೀಗೆ ಕಾಡುತಿರುವೆ ಮೋಹನ
ಸನಿಹವಿರದೆ ನಿದ್ದೆಗೊಡದೆ ಸುಡುತಲಿಹೆ ಮೈಮನ

ಸಂಜೆಯೊಡಲ ತಂಪಿನಿರುಳೊ ಅರಳುತ್ತಿದೆ ಯೌವನ
ಮೌನದೆನ್ನೀ ವೀಣೆ ನುಡಿಸೊ ತುಂಬಿ ಪ್ರೀತಿ ಕಣಕಣ (೧)

ಸುಪ್ತ ಬಯಕೆ ಬಾಯಾರಿವೆ ಕಾಯ್ದು ಪ್ರೇಮ ಸಿಂಚನ
ಉಣಿಸು ಬಾರೊ ಒಲುಮೆ ಸವಿಯ ಸಖನೆ ಗೋಪನಂದನ (೨)

ವಿರಹವಾಗಿದೆ ಮೊರೆವ ಕಡಲು ಕೇಳದೇ ಪ್ರೇಮಪ್ರೇರಣ
ತಣಿಸೊ ಹರಿಸಿ ಮಿಥುನದಮೃತ ಎನ್ನ ಜೀವನ ಪಾವನ (೩)

ಪಾದ ತೊಳೆಯೆ ಹರಿದು ಯಮುನಾ ನಲಿದು ಬೃಂದಾವನ
ತಳಿರು ತೋರಣ ಸಿಹಿಯ ಹೂರಣ ಗಂಧಚಂದನ ಲೇಪನ (೪)

ಭಾಮೆಯವಳು ಕರೆದರೆನ್ನ ಮರೆಯದಿರೊ ಮೋಹನ
ಶ್ರೀನಿವಾಸ ವಿಠಲ ನೀನೆ ರಾಧೆಯೊಲುಮೆ ಚೇತನ (೫)

ಏಕೆ ಹೀಗೆ ಏಕೆ ಹೀಗೆ ಕಾಡುತಿರುವೆ ಮೋಹನ
ಸನಿಹವಿರದೆ ನಿದ್ದೆಗೊಡದೆ ಸುಡುತಲಿಹೆ ಮೈಮನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೩.೨೦೧೧

No comments:

Post a Comment