Wednesday, March 30, 2011

Shri Krishnana Nooraru Geethegalu - 040

ಎದ್ದುಬಾರೋ ಮುದ್ದುರಂಗ

ಎದ್ದು ಬಾರೋ ಮುದ್ದುರಂಗ ಮೊಗವ ತೊಳೆಯುವೆ ನಿನ್ನಾ
ಕಣ್ಗೆ ಕಾಡಿಗೆ ತಿದ್ದಿ ತಿಲಕವ ಚಂದನ ಹಣೆಗಿಡುವೆ ಕೃಷ್ಣ

ಕಟ್ಟಿ ಕೇಶವ ಗಟ್ಟಿಮುಡಿಯೊಳು ಇಟ್ಟು ನವಿಲಿನ ಗರಿಯನು
ತೊಡಿಸಿ ಕೌಸ್ತುಭ ಪದಕಮಾಲೆ ಅಂದ ತುಂಬಿಕೊಳುವೆನು
ಇಟ್ಟು ದೃಷ್ಟಿಯ ಬೊಟ್ಟ ಗಲ್ಲಕೆ ಮುತ್ತುಸಾಸಿರ ಅಧರಕೆ
ಅಪ್ಪಿಕೊಳುವೆನೊ ಹರಿಯೆ ನಿನ್ನ ಮುದ್ದಿಸಿ ಶ್ರೀಪಾದಕೆ(೧)

ಉಂಡೆಬೆಣ್ಣೆ ರುಚಿಯ ಹಾಲು ಕೆನೆಯ ಗಟ್ಟಿಮೊಸರನು
ಸಿಹಿಯೋಳಿಗೆ ಬಿಸಿಯುಗ್ಗಿ ತುಪ್ಪವುಣಲು ಕೊಡುವೆನು
ಕದಿಯದಿರೊ ನೆರೆಯೊಳ್ ಹೈನವ ದೇವ ಬೇಡಿಕೊಳುವೆನು
ಶ್ರೀನಿವಾಸ ವಿಠಲ ನೀನೆ ಸಕಲ ಸಿರಿಯ ದಾತನು (೨)

ಎದ್ದು ಬಾರೋ ಮುದ್ದುರಂಗ ಮೊಗವ ತೊಳೆಯುವೆ ನಿನ್ನಾ
ಕಣ್ಗೆ ಕಾಡಿಗೆ ತಿದ್ದಿ ತಿಲಕವ ಚಂದನ ಹಣೆಗಿಡುವೆ ಕೃಷ್ಣ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೧೦.೨೦೧೦

No comments:

Post a Comment