Wednesday, March 30, 2011

Shri Krishnana Nooraru Geethegalu - 056

ನೆಚ್ಚನೊ ತಿಮ್ಮಪ್ಪ

ಮೆಚ್ಚನೊ ನಮ್ಮಪ್ಪ ನೆಚ್ಚನೊ ತಿಮ್ಮಪ್ಪ
ಇಹದಿ ನಿಜವಿರದೆ ಪರಮುಕುತಿ ಬೇಡುವರ

ತೊಗಲ ಚಪ್ಪರಕೆ ಚೆಂದ ಚಂದನವ ಸವರಿ
ಪಟ್ಟೆಜರಿ ಕಟ್ಟೆಯೊಳು ದೊಂಬರಾಡುವರ
ಗಂಗೆ-ತುಂಗೆಯ ಮಿಂದು ಆತ್ಮದೊಳಶುದ್ಧರ
ಒಳಕೊಳೆಯ ಕಳೆಯದೆ ತಿಳಿಗೊಳವ ತೋರುವರ (೧)

ತಲೆಯಹಂ ನಿಲದೆ ತಳಗಾಗಿ ಬಿದ್ದವರ
ಮನಸು ಮುದ್ರೆಯೊಳಿರದೆ ಮಂತ್ರ ಮರೆತವರ
ಕಪ್ಪು ಕಾಂಚಾಣ ವಜ್ರ ಕಿರೀಟವಿಡುವವರ
ತೆಂಗುಬಾಳೆಯನಿಟ್ಟು ಕರ್ಪೂರ ಸುಡುವವರ (೨)

ಬಾಹ್ಯಬಡಬಡಿಕೆಯದ ಬಡಿದು ಹೊರದೂಡಿ
ಮನದಮನೆ ಮೂಲೆಯದ ಸಿಂಗಾರ ಮಾಡಿ
ಬರುವನೊ ಶ್ರೀನಿವಾಸ ವಿಠಲನು ಓಡೋಡಿ
ಅಂತರಂಗದಿಂದವನ ಕರೆಯೆ ಪದ ಹಾಡಿ (೩)

ಮೆಚ್ಚನೊ ನಮ್ಮಪ್ಪ ನೆಚ್ಚನೊ ತಿಮ್ಮಪ್ಪ
ಇಹದಿ ನಿಜವಿರದೆ ಪರಮುಕುತಿ ಬೇಡುವರ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೨.೨೦೧೧

No comments:

Post a Comment