Wednesday, March 30, 2011

Shri Krishnana Nooraru Geethegalu - 058

ಕರೆದರೆ ಬರುವನೊ

ಕರೆದರೆ ಬರುವನೊ ಕುಣಿದಾಡಿ ನಲಿವನೊ
ಮುದ್ದು ಗೋಪಮ್ಮನ ಕಂದ ಗೋವಿಂದನು

ತುಂಟ ಕಂಗಳ ಪೋರ ಮುಗುದೆಯ ಮನಚೋರ
ವಸುದೇವ-ದೇವಕಿಯ ಆನಂದ ಸುಕುಮಾರ
ಜಗನಿಧಿ ಕಲ್ಯಾಣ ಜಯಪ್ರದ ಶುಭಗುಣ
ನಮ್ಮಮ್ಮ ಸಿರಿಲಕುಮಿ ಹೃದಯದಾ ರಮಣ (೧)

ಶಕಟಾಂತಕ ಧೀರ ಪೂತನೆಯ ಮುಕ್ತಿವರ
ಕಾಲಿಂದಿಯ ಮೆಟ್ಟಿ ಕಟ್ಟಿದವ ದುರುಳರ
ಸುಜನ ಪಾಂಡವ ಪಕ್ಷ ಸುರಕ್ಷ ಚಾಣಾಕ್ಷ
ದಶದೊಳಗೆ ನಳಿನಾಕ್ಷ ಧರೆಕಾಯ್ದ ದಕ್ಷ (೨)

ಇವ ನಮ್ಮ ವಿಠಲ ಮೂಜಗ ಸುಶೀಲ
ಇವ ನಿಮ್ಮ ವಿಠಲ ಜೀವಜಾಲ ಕುಶಲ
ಜಗನೇಮದಧ್ಯಕ್ಷ ಇವನಮ್ಮ ತಿರುಮಲ
ಪಂಢರಾಪುರವಾಸ ಶ್ರೀನಿವಾಸ ವಿಠಲ (೩)

ಕರೆದರೆ ಬರುವನೊ ಕುಣಿದಾಡಿ ನಲಿವನೊ
ಮುದ್ದು ಗೋಪಮ್ಮನ ಕಂದ ಗೋವಿಂದನು

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೨.೨೦೧೧

No comments:

Post a Comment