Wednesday, March 30, 2011

Shri Krishnana Nooraru Geethegalu - 062

ಬಂದಿದ್ದನವ್ವ ಬಂದಿದ್ದ

ಬಂದಿದ್ದನವ್ವ ಬಂದಿದ್ದ ಅವ ಬಂದಿದ್ದಾನವ್ವ ಬಂದಿದ್ದ
ನಸುಕಿನ ನನ್ನ ಸವಿನಿದ್ದಿ ಸಪುನಾಕ ಅವನೇ ಬಂದಿದ್ದ ಶತಸಿದ್ಧ

ಕಂಗಳು ಆಸೆಯ ಬಟ್ಟಲ ಅವ ನಕ್ಕಾರ ಹುಣ್ಣಿಮೆ ತಿಂಗಳ
ಹಣೆತುಂಬಿ ಮುಂಗಾರಿನ ಮುಗಿಲ ಎದೆತುಂಬಿ ಪ್ರೇಮದ ದಿಗಿಲ (೧)

ಕಣ್ಣಂಚೊಳು ಕಾಡಿಗೆ ಚಳಕ ಅವನ ನೊಸಲಾಗ ಚಂದನ ತಿಲಕ
ಮುಡಿಯಾಗಿನ ಬಣ್ಣದ ಗರಿ ನಲಿದಾಡುತಿತ್ತೆ ತಂಗಾಳಿ ಸವರಿ (೨)

ಮಾವನ ಊರೊಳು ಉದಯ ಗೋಕುಲದಿ ನೆಲೆಯಾದ ಹೃದಯ
ಕಾರ್ಕೋಟ ಕಾಲಿಂದಿಯ ಮೆಟ್ಟಿ ಗೋವರ್ಧನವ ಬೆರಳೊಳಗೆತ್ತಿ (೩)

ನೊರೆಹಾಲ ಕುಡಿಯೆ ಕದಿತಾನ ಮೊಸರು ಬೆಣ್ಣೆಯ ಮೆಲುತಾನ
ದುರುಳರ ಪಕ್ಕೆಯ ಮುರಿತಾನ ಸದಾ ಸುಜನರ ಸಂಗದಿ ಇರುತಾನ (೪)

ರಾಧೆ-ಭಾಮೆಯರ ಜತೆಗಾರ ಇವ ಮೂರೂರನಾಳುವ ಹಮ್ಮೀರ
ನಮ್ಮಮ್ಮ ಲಕುಮಿಗು ಸರದಾರ ಶ್ರೀನಿವಾಸ ವಿಠಲ ನಾಮದ ಧೀರ (೫)

ಬಂದಿದ್ದನವ್ವ ಬಂದಿದ್ದ ಅವ ಬಂದಿದ್ದಾನವ್ವ ಬಂದಿದ್ದ
ನಸುಕಿನ ನನ್ನ ಸವಿನಿದ್ದಿ ಸಪುನಾಕ ಅವನೇ ಬಂದಿದ್ದ ಶತಸಿದ್ಧ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೩.೨೦೧೧

No comments:

Post a Comment