Wednesday, March 30, 2011

Shri Krishnana Nooraru Geethegalu - 051

ಕಾಯೋ ಧರೆಯೊಳುತ್ತಮರ 

ಹರಿಯೇ ಶ್ರೀಹರಿಯೇ ಶ್ರೀನಿವಾಸ ದೊರೆಯೇ
ನೆಚ್ಚಿದೀ ಸುಜನರ ನೀ ಮರೆವುದು ಸರಿಯೇ

ಮೀನಾದೆ ಕೃತದಿ ಮನು ಕಮಂಡಲದಿ
ಮಂದರಧರನು ಅಮೃತಾಂಬುಧಿ ಮಥನದಿ
ಬುವಿಗೊಲಿದೆ ರಸಾತಳದಸುರಗೆ ಮುಳುವಾದೆ (೧)

ನರಸಿಂಹನಾದೆ ಕಶ್ಯಪನ ಕರುಳಿಗೆ
ನಾರಾಯಣನಾದೆ ನಂಬಿದವನ ಪುತ್ರಗೆ
ಮೇಲವನ ಮೊಮ್ಮಗನ ಮೆಟ್ಟಿ ವಾಮನನಾದೆ (೨)

ಹಯಗ್ರೀವನಾದೆ ವೇದ ಸಂರಕ್ಷಿಸಿದೆ
ಶ್ರೀರಾಮ-ಶ್ಯಾಮನು ತ್ರೇತೆ-ದ್ವಾಪರದೆ
ಕ್ಷತ್ರಿಯ ಕುಲಹರ ಶ್ರೀಪರಶುರಾಮನಾದೆ (೩)

ಸೃಷ್ಠಿಯೊಳಜೇಯನೆ ಯದುವಂಶ ಕುಲಜನೆ
*ಕೋಟೆಬೆಟ್ಟದವಾಸ ಶ್ರೀನಿವಾಸ ವಿಠಲನೆ
ದಯೆಯಿರಿಸಿ ಕಾಯೋ ಧರೆಯೊಳುತ್ತಮರ (೪)

ಹರಿಯೇ ಶ್ರೀಹರಿಯೇ ಶ್ರೀನಿವಾಸ ದೊರೆಯೇ
ನೆಚ್ಚಿದೀ ಸುಜನರ ನೀ ಮರೆವುದು ಸರಿಯೇ

(*ಕೋಟೆಬೆಟ್ಟ, ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ, ಶ್ರೀ ಕಂಭದ ನರಸಿಂಹದೇವರು ನೆಲೆಯಾದ ಪುಣ್ಯಕ್ಷೇತ್ರ. ಇದೇ ತಾಲೂಕಿನ ಬೆಳ್ಳೂರು ಹೋಬಳಿಯ, ನೆಲ್ಲೀಗೆರೆ ಹತ್ತಿರದ ತೊರೆಮಾವಿನಕೆರೆ ಗ್ರಾಮದವರಾದ ನನ್ನ ಪೂರ್ವಜರಾದಿ ನಡೆದುಕೊಳ್ಳುತ್ತಿರುವ ಕುಲದೈವ ಸ್ಥಳ.)

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೪.೦೧.೨೦೧೧

No comments:

Post a Comment