Wednesday, March 30, 2011

Shri Krishnana Nooraru Geethegalu - 065

ಅಂಕಿತವೇಕೆ ನಾಮಾಂಕಿತ ಬೇಕೆ

ಅಂಕಿತವೇಕೆ ನಾಮಾಂಕಿತ ಬೇಕೆ
ಸಾಸಿರನಾಮದ ಶ್ರೀ ಹರಿಯನು ಭಜಿಸಲು

ದೇಹದೇಗುಲ ಮಾಡಿ ಮನದ ಮಂದಿರದೊಲು
ಆರೆಂಬೊ ಅಸುರರ ಮುರಿದು ಮೂಲೆಯೊಳಿಟ್ಟು
ಬಂದು ನೆಲೆಸೈ ಎನಲು ಶುದ್ಧ ಬಕುತಿಯೊಳು
ಬಾರದಿರುವನೆ ಎಮ್ಮ ಮೂನಾಮದಯ್ಯನು (೧)

ಕರಿಯದು ಹರಿಯೆನಲು ಶಬರಿ ಶ್ರೀರಾಮನೆನಲು
ಕಯಾದು ಕಂದನವ ನಾರಾಯಣನೆನಲು
ಉಡುವಸ್ತ್ರ ದ್ರೌಪದಿಗೆ ಕೃಷ್ಣಯೆಂ ಮೊರೆಯಿಡಲು
ಕಾಯಲಿಲ್ಲವೆ ಎಮ್ಮ ಶ್ರೀಪಾದದಯ್ಯನು (೨)

ಗುಣವಂತ ರಾಮನೆನ್ನಿ ಗೋಕುಲದ ಶ್ಯಾಮನೆನ್ನಿ
ಮೇಲುಕೋಟೆಯ ಚೆಲುವ ಚೆನ್ನಿಗರಾಯನೆನ್ನಿ
ಗೋಪಿಯ ಮಡಿಲೊಳಾಡ್ವ ಮುದ್ದುಕೃಷ್ಣಯ್ಯನೆನ್ನಿ
ಬಿಡದೆ ಪೊರೆವನೊ ಎಮ್ಮ ಶ್ರೀನಿವಾಸ ವಿಠಲನು (೩)

ಅಂಕಿತವೇಕೆ ನಾಮಾಂಕಿತ ಬೇಕೆ
ಸಾಸಿರನಾಮದ ಶ್ರೀ ಹರಿಯನು ಭಜಿಸಲು

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೩.೨೦೧೧

1 comment:

  1. Through this song, author makes it clear that anybody under the sky can pray to GOD in whetever the way he likes - may be thru songs or any other mode. Let narrow minded people stop making fun of the same/create unwanted trouble.

    ReplyDelete